Advertisement

ಕ್ಯಾಂಪಸ್‌ನಲ್ಲಿ ಅರಳಿದ ಕಾವ್ಯಲೋಕ 

07:45 AM Nov 10, 2017 | |

ಆ ದಿನ ನಾವೆಲ್ಲ ಕ್ಲಾಸ್‌ನಲ್ಲಿ ಪಾಠ ಕೇಳ್ತಿದ್ವಿ.ಆಗ ನಮ್ಮ ಕನ್ನಡ ಸರ್‌ ಕ್ಲಾಸಿಗೆ ಬಂದು, “”ನಾಳೆ ನಮ್ಮ ಕಾಲೇಜಿಗೆ ಧಾರವಾಡದ ಸಮುದಾಯ ಹವ್ಯಾಸಿ ಕಲಾವಿದರ ತಂಡದವರು ಬರುತ್ತಾರೆ. ಕಾವ್ಯರಂಗ- ಕನ್ನಡದ ಕಾವ್ಯ-ಕಥನಗಳ ರಂಗಾಭಿವ್ಯಕ್ತಿ ಅನ್ನೋ ಕಾರ್ಯಕ್ರಮವನ್ನು ನಡೆಸಿಕೊಡ್ತಾರೆ. ಕಲಾವಿದರು ಕಾವ್ಯ-ಕಥನಗಳನ್ನು ಹಾಡುತ್ತಾರೆ, ಕೆಲವೊಂದನ್ನು  ಅಭಿನಯಿಸುತ್ತಾರೆ. ಸುಮಾರು ಒಂದೂವರೆ ಗಂಟೆಗಳ ಕಾಲ ನಡೆಯುವ ಈ ಕಾರ್ಯಕ್ರಮ ತುಂಬಾ ಚೆನ್ನಾಗಿರುತ್ತದೆ. ಎಲ್ಲರೂ ಭಾಗವಹಿಸಿ, ತಪ್ಪಿಸ್ಕೋಬೇಡಿ.

Advertisement

ಅಂತ ಹೇಳಿ ಹೋದ್ರು. ಆಮೇಲೆ ನಾವು ಪಾಠ ಕೇಳ್ಳೋದನ್ನ ಮುಂದುವರಿಸಿದೆವು.ಲಂಚ್‌ಬ್ರೇಕ್‌ನಲ್ಲಿ ನಮ್ಮ ಚರ್ಚೆ ಶುರುವಾಯಿತು. “ಹಳೆಗನ್ನಡದ ಕಾವ್ಯ-ಕಥನಗಳನ್ನ ರಂಗದ ಮೇಲೆ ಪ್ರದರ್ಶಿಸಬಹುದು’ ಅಂತ ಒಂದಿಬ್ಬರು ಹೇಳಿದರೆ, “ಅದು ಪ್ರದರ್ಶಿಸುವುದಕ್ಕೂ, ಅರ್ಥ ಮಾಡಿಕೊಳ್ಳುವುದಕ್ಕೂ ಸ್ವಲ್ಪ ಕಷ್ಟ. ಹಾಗಾಗಿ, ಹೊಸಗನ್ನಡದ ಕಾವ್ಯಗಳನ್ನ ಪ್ರದರ್ಶಿಸಬಹುದು’ ಅಂತ ಮತ್ತೂಂದಿಬ್ಬರು ಹೇಳಿದರು. ಹಳೆಗನ್ನಡ-ಹೊಸಗನ್ನಡ ಆದ ಮೇಲೆ ಇನ್ನು ಅದರ ನಡುವೆ ಇರೋ ನಡುಗನ್ನಡನಾ ಮರೆಯೋಕಾಗುತ್ತ? ಅದಕ್ಕೆ ನಾನು ಇರ್ಲಿ ಅಂತ “ನಡುಗನ್ನಡದ ಕಾವ್ಯ-ಕಥನಗಳನ್ನ ರಂಗದ ಮೇಲೆ ತರಬಹುದೇನೋ’ ಅಂತಂದೆ. ಹೀಗೆ ಎಲ್ಲರ ತಲೆಯಲ್ಲೂ ಗೊಂದಲಗಳಿದ್ದವು. ಯಾರಿಗೂ ಆ ಕಾವ್ಯರಂಗದ ಬಗ್ಗೆ ಸರಿಯಾಗಿ ಐಡಿಯಾ ಇರಲಿಲ್ಲ.

ಮರುದಿನ ಎರಡು ಗಂಟೆಗೆ ಸರಿಯಾಗಿ ನಮ್ಮನ್ನು ಅಂದ್ರೆ ಎಲ್ಲ ವಿದ್ಯಾರ್ಥಿಗಳನ್ನು ಹಾಲ್‌ಗೆ ಕರೆದುಕೊಂಡು ಹೋದರು. ವೇದಿಕೆ ಅಗತ್ಯಕ್ಕೆ ತಕ್ಕಂತೆ ಶೃಂಗಾರಗೊಂಡಿತ್ತು. ಕಾರ್ಯಕ್ರಮ ಶುರುವಾಗೋಕೆ ಮುಂಚೆ ಚಿಕ್ಕದಾಗಿ ಒಂದು ಸ್ಟೇಜ್‌ ಪ್ರೋಗ್ರಾಮ್‌ ಇತ್ತು. ಅದಾದ ಮೇಲೆ ನಿಜವಾದ ಕಾರ್ಯಕ್ರಮ ಶುರುವಾಯಿತು.

ಕಲಾವಿದರು ತಮ್ಮ ಪ್ರದರ್ಶನವನ್ನು ಶುರು ಮಾಡಿದ್ದು ದೀಪ ಹಚ್ಚುವ ಮೂಲಕ. ಎಣ್ಣೆ ಬತ್ತಿಯ ದೀಪ ಅಲ್ಲ ಕಾವ್ಯದ ದೀಪ. ಅಂದ್ರೆ ಅವರು ಜಿ. ಎಸ್‌. ಶಿವರುದ್ರಪ್ಪನವರ ಹಣತೆ ಹಚ್ಚುತ್ತೇನೆ ಕವನದ ಸಾಲುಗಳ ಮೂಲಕ ಕಾವ್ಯಮಯವಾಗಿಯೇ ಕಾರ್ಯಕ್ರಮ ಆರಂಭಿಸಿದರು. ನಂತರ ಅವರು ದುರ್ಗಸಿಂಹರ ಪಂಚತಂತ್ರದ ಒಂದು ಕಥೆಯನ್ನ ಮೊದಲಿಗೆ ಅಭಿನಯಿಸಿದ್ರು. First impression is best impression ಎಂಬ ಹಾಗೆ ಅವರ ಅಭಿನಯ, ಅವರ ಶೈಲಿ ಎಲ್ಲರನ್ನು ಅದರÇÉೇ ತಲ್ಲೀನವಾಗಿಸಿತ್ತು. ಆನಂತರ ಅವರು ಕವಿರಾಜಮಾರ್ಗ, ರನ್ನನ ಗದಾಯುದ್ಧ ಹೀಗೆ ಕೆಲವು ಕಾವ್ಯಗಳ ತುಣುಕನ್ನು ಹಾಡಿನೊಂದಿಗೆ ಅಭಿನಯಿಸಿದರು. ಹೀಗೆ ಹಳೆಗನ್ನಡದ ಕಾವ್ಯ- ಕಥನಗಳ ಮೂಲಕ ಪ್ರಾರಂಭವಾದ ಅವರ ಪ್ರದರ್ಶನ ಹನ್ನೆರಡನೆ ಶತಮಾನದ ವಚನ ಸಾಹಿತ್ಯದ ಕಡೆ ತಿರುಗಿತು. ಬಸವಣ್ಣ ಸ್ಥಾಪಿಸಿದ ಅನುಭವ ಮಂಟಪದ ಬಗ್ಗೆ ನಾನು ಕೇಳಿ¨ªೆ, ಓದಿದ್ದೇ ಹೊರತು ಅದು ಹೇಗೆ ನಡೀತಿತ್ತು ಅನ್ನೋದು ಗೊತ್ತಿರಲಿಲ್ಲ. ಅಲ್ಲಮಪ್ರಭು ಅಧ್ಯಕ್ಷತೆಯಲ್ಲಿ ನಡೆಯುತ್ತಿದ್ದ ಅನುಭವ ಮಂಟಪವನ್ನು ನಮ್ಮ ಮುಂದೆ ತೆರೆದಿಟ್ಟರು. ಹೀಗೆ ಶರಣ ಪರಂಪರೆಯನ್ನು, ಶರಣರ ಮೌಲ್ಯಗಳನ್ನು, ಅವರ ಕಾಯಕ ನಿಷ್ಠೆಯನ್ನು ಸಾರುವ ವಚನಗಳನ್ನು ಹಾಡಿ, ಅಭಿನಯಿಸಿದರು.

ಕುವೆಂಪು ಅವರ ಮಹಾಕಾವ್ಯ ಶ್ರೀರಾಮಾಯಣ ದರ್ಶನಂ ಇದರ ರಾವಣನ ಮನಪರಿವರ್ತನೆ ಆಗುವ ಸಂದರ್ಭವನ್ನ ಮನಮುಟ್ಟುವಂತೆ ನಮ್ಮ  ಮುಂದೆ ತೆರೆದಿಟ್ಟರು. “ಕಡಲ ತೀರದ ಭಾರ್ಗವ’ ಶಿವರಾಮ ಕಾರಂತರ ಚೋಮನ ದುಡಿ ಕಾದಂಬರಿಯ ಚೋಮನ ದುಡಿತವನ್ನು, ಇಡೀ ಕಾದಂಬರಿಯ ಸಾರವನ್ನು ನಾಲ್ಕೈದು ನಿಮಿಷದಲ್ಲಿ ಕಣ್ಣಿಗೆ ಕಟ್ಟುವ ಹಾಗೆ ಅಭಿನಯಿಸಿ ತಿಳಿಸಿಕೊಟ್ಟರು. ಸ್ತ್ರೀಸಂವೇದನೆಯ, ಮುಸ್ಲಿಂ ಸಂವೇದನೆಯ ಪ್ರಮುಖ ಕಾವ್ಯ-ಕಥನಗಳನ್ನ ಹಾಡಿ, ಕೆಲವೊಂದನ್ನು ಅಭಿನಯಿಸಿದರು.

Advertisement

ಕೊನೆಯದಾಗಿ, ಬಂಡಾಯ ಸಾಹಿತ್ಯವನ್ನು ಎತ್ತಿಕೊಂಡ ಅವರು ದೇವನೂರ ಮಹಾದೇವರ ಒಡಲಾಳ, ಸಿದ್ದಲಿಂಗಯ್ಯನವರ ಸಾವಿರಾರು ನದಿಗಳು ಮುಂತಾದ ಸಾಹಿತ್ಯ ಕೃತಿಗಳ ಮೂಲಕ ಜಾತಿ, ಅಸಮಾನತೆಗಳನ್ನ ತೆರೆದಿಟ್ಟರು ಅವರು ಕವಿ ಸು. ರಂ. ಎಕ್ಕುಂಡಿಯವರ ಮೂಡಲ ದೀಪ ಕವಿತೆಯೊಂದಿಗೆ ಕಾವ್ಯರಂಗಕ್ಕೆ ಪೂರ್ಣ ವಿರಾಮವಿಟ್ಟರು. ಆಗ ಅವರ ಅಭಿನಯ, ಅವರ ಪ್ರದರ್ಶನವನ್ನು ಮೆಚ್ಚಿ ಎಲ್ಲರು ತಟ್ಟಿದ ಚಪ್ಪಾಳೆ ಚಿಕಾಗೋದ ಚಪ್ಪಾಳೆಯನ್ನ ನೆನಪಿಸಿತು. ಕಾವ್ಯರಂಗ ಕನ್ನಡ ಸಾಹಿತ್ಯ ಲೋಕದ ಕಿರುಚಿತ್ರಣವನ್ನು ನಮ್ಮ ಮುಂದೆ ತೆರೆದಿಟ್ಟಿತು. ಕನ್ನಡ ಸಾಹಿತ್ಯದ ಆಳ ಎಂಥದ್ದು, ಅದು ಎಷ್ಟು ಅದ್ಭುತವಾದದ್ದು ಎಂಬುದನ್ನು ಕಾವ್ಯರಂಗ ನಮಗೆ ತಿಳಿಸಿಕೊಟ್ಟಿತು.

ಕಾರ್ಯಕ್ರಮದ ಹಿಂದಿನ ದಿನದ ಲಂಚ್‌ ಬ್ರೇಕಿನಲ್ಲಿ ಕಾವ್ಯರಂಗ ಹೇಗಿರುತ್ತೆ? ಅಂತ ಚರ್ಚೆ ಮಾಡ್ತಿದ್ದ ನಾವು ಮರುದಿನದ ಲಂಚ್‌ ಬ್ರೇಕ್‌ನಲ್ಲಿ ಕಾವ್ಯರಂಗ ಹೇಗಿತ್ತು? ಅನ್ನೋ ಚರ್ಚೆಲಿ ತೊಡಗಿದೆವು. ನಮ್ಮ  ಮಾತುಗಳನ್ನು ಕೇಳುತ್ತಿದ್ದ, ಅನಿವಾರ್ಯ ಕಾರಣಗಳಿಂದ ಆ ದಿನ  ರಜೆ ಹಾಕಿದ್ದ ನನ್ನ ಗೆಳತಿ “ಒಂದೊಳ್ಳೆ ಕಾರ್ಯಕ್ರಮನಾ ಮಿಸ್‌ ಮಾಡಿಕೊಂಡೆ’ ಅಂತ ಬೇಜಾರುಪಟ್ಟಳು.

– ಸುಶ್ಮಿತಾ ನೇರಳಕಟ್ಟೆ
ಡಾ. ಬಿ.ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜು, ಕುಂದಾಪುರ

Advertisement

Udayavani is now on Telegram. Click here to join our channel and stay updated with the latest news.

Next