ಭುವನೇಶ್ವರ: ಪ್ರಧಾನಿ ನರೇಂದ್ರ ಮೋದಿ ಒಡಿಶಾದಲ್ಲಿ ಆರಕ್ಕೂ ಹೆಚ್ಚು ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿದ್ದು, ಈ ಪೈಕಿ ತಲಚೇರ್ ಮತ್ತು ಝರ್ಸಗುಡಾ ವಿಮಾನ ನಿಲ್ದಾಣದಲ್ಲಿನ ರಸಗೊಬ್ಬರ ತಯಾರಿಕೆ ಘಟಕದ ಉದ್ಘಾಟನೆಗೆ ಮೂರು ವರ್ಷದ ನಂತರ ಪುನಃ ಆಗಮಿಸುತ್ತೇನೆ ಎಂದಿದ್ದಾರೆ. ಇದು 2019ರ ಲೋಕಸಭೆ ಚುನಾವಣೆಯಲ್ಲಿ ಗೆದ್ದೇ ಗೆಲ್ಲುತ್ತೇನೆ ಎಂಬ ಮೋದಿ ವಿಶ್ವಾಸವನ್ನು ಪ್ರತಿಫಲಿಸಿದೆ. ಅಲ್ಲದೆ ಒಡಿಶಾ ಸಿಎಂ ನವೀನ್ ಪಾಟ್ನಾಯಕ್ ವಿರುದ್ಧವೂ ತೀವ್ರ ವಾಗ್ಧಾಳಿ ನಡೆಸಿದ್ದಾರೆ.
ರಸಗೊಬ್ಬರ ಘಟಕ ಸ್ಥಾಪನೆ ನಿರ್ಧಾರವನ್ನು 2000 ನೇ ಇಸ್ವಿಯಲ್ಲೇ ತೆಗೆದುಕೊಳ್ಳಲಾಗಿತ್ತು. ಆದರೆ ಘಟಕದ ಕೆಲಸ ಆರಂಭವೇ ಆಗಿಲ್ಲ. ಯಾವಾಗ ಮುಗಿಸುತ್ತೀರಿ ಎಂದು ಕೇಳಿದ್ದಕ್ಕೆ 3 ವರ್ಷದಲ್ಲಿ ಮುಗಿಸುತ್ತೇವೆ ಎಂದಿದ್ದಾರೆ. ಹೀಗಾಗಿ ನಾನು ಮೂರು ವರ್ಷ ಬಿಟ್ಟು ಇದರ ಉದ್ಘಾಟನೆಗೆ ಆಗಮಿಸುತ್ತೇನೆ ಎಂದಿದ್ದಾರೆ. ಒಡಿಶಾದಲ್ಲಿ ಯಾವುದೇ ಯೂರಿಯಾ ಘಟಕವಿಲ್ಲ. ಈ ಘಟಕವು ಒಡಿಶಾಗೆ ಅಗತ್ಯ ಯೂರಿಯಾವನ್ನು ಪೂರೈಸಲಿದೆ.
ಪಿಸಿ ಸಂಸ್ಕೃತಿ: ಪಾಟ್ನಾಯಕ್ ಸಂಪುಟವು ಪಿಸಿ (ಪರ್ಸಂಟೇಜ್ ಕಮಿಷನ್) ಸಂಸ್ಕೃತಿಗೆ ಕುಖ್ಯಾತಿ ಪಡೆದಿದೆ. ನಿರ್ಧಾರ ತೆಗೆದುಕೊಳ್ಳುವಲ್ಲಿ ವಿಳಂಬ ಮಾಡುವುದು ಈ ಸರ್ಕಾರದ ಗುರುತೇ ಆಗಿಹೋಗಿದೆ ಎಂದು ಮೋದಿ ಕಿಡಿಕಾರಿದ್ದಾರೆ. ಅಲ್ಲದೆ ಆಯುಷ್ಮಾನ್ ಭಾರತ ಆರೋಗ್ಯ ವಿಮೆ ಯೋಜನೆಗೆ ಒಡಿಶಾ ಸರ್ಕಾರ ಸಮ್ಮತಿ ನೀಡಿಲ್ಲ. ಎಲ್ಲರಿಗೂ ಆಯುಷ್ಮಾನ್ನ ಪ್ರಾಮುಖ್ಯತೆ ತಿಳಿದಿದೆ. ಆದರೆ ನವೀನ್ ಬಾಬುಗೆ ಈ ವಿಚಾರ ಅರ್ಥವಾಗಿಲ್ಲ. ಒಡಿಶಾ ಸರ್ಕಾರ ಸಹಕಾರ ನೀಡದಿದ್ದರೆ, ನಾನು ನಿಮ್ಮ ಸೇವೆ ಮಾಡಲಾಗುವುದಿಲ್ಲ ಎಂದು ಮೋದಿ ಹೇಳಿದ್ದಾರೆ.
ಛತ್ತೀಸ್ಗಡದಲ್ಲಿ ಸುಭದ್ರ ಸರ್ಕಾರ: ಛತ್ತೀಸ್ಗಡದ ಜನರು ಬಹುಮತದ ಸರ್ಕಾರವನ್ನು ಆಯ್ಕೆ ಮಾಡುತ್ತಲೇ ಬಂದಿದ್ದಾರೆ. ಹೀಗಾಗಿ ಈ ಬಾರಿಯೂ ಬಹುಮತ ಸರ್ಕಾರವನ್ನೇ ಜನರು ಆರಿಸುತ್ತಾರೆ ಎಂಬ ವಿಶ್ವಾಸವಿದೆ ಎಂದು ಮೋದಿ ಛತ್ತೀಸ್ಗಡದಲ್ಲಿ ನಡೆಸಿದ ರ್ಯಾಲಿಯಲ್ಲಿ ಹೇಳಿದ್ದಾರೆ. ವರ್ಷಾಂತ್ಯದಲ್ಲಿ ಚುನಾವಣೆ ನಡೆಯಲಿದ್ದು, ಜಂಜಿರ್ ಚಂಪಾದಲ್ಲಿ ರ್ಯಾಲಿ ನಡೆಸುವ ಮೂಲಕ ರಾಜ್ಯದಲ್ಲಿ ಚುನಾವಣಾ ಪ್ರಚಾರಕ್ಕೆ ಅವರು ಕಳೆ ನೀಡಿದರು.