Advertisement

ಕಾಶ್ಮೀರದ ಜನತೆ ವಿಷ ಚಕ್ರದಿಂದ ಪಾರು

09:58 AM Aug 16, 2019 | Team Udayavani |

ಜಮ್ಮು ಮತ್ತು ಕಾಶ್ಮೀರಕ್ಕಿದ್ದ ವಿಶೇಷ ಸ್ಥಾನಮಾನ ಹಿಂಪಡೆದಿ ರುವಂಥ ನಿರ್ಧಾರವನ್ನು ಯಾರು ವಿರೋಧಿಸುತ್ತಿದ್ದಾರೋ ಅವರೆಲ್ಲರ ಹೃದಯ ಭಯೋತ್ಪಾದಕರು ಮತ್ತು ಮಾವೋ ವಾದಿಗಳ ಪರ ಮಿಡಿಯುತ್ತಿದೆ. ಹೀಗೆಂದು ಹೇಳಿರುವುದು ಪ್ರಧಾನಿ ನರೇಂದ್ರ ಮೋದಿ. ಎನ್‌ಡಿಎ ಸರಕಾರ ಸತತ ಎರಡನೇ ಬಾರಿಗೆ ಅಧಿಕಾರಕ್ಕೇರಿ 75 ದಿನಗಳನ್ನು ಪೂರೈಸಿದ ಹಿನ್ನೆಲೆಯಲ್ಲಿ ಮೋದಿ ಅವರು ತಮ್ಮ ಸರಕಾರದ ಹಲವು ಸಾಧನೆಗಳ ಕುರಿತು ಐಎಎನ್‌ಎಸ್‌ ಸುದ್ದಿ ಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಮುಕ್ತವಾಗಿ ಮಾತನಾಡಿದ್ದಾರೆ. ಮೋದಿ ಮಾತಿನ ಸಾರಾಂಶ ಇಲ್ಲಿದೆ.

Advertisement

•370ನೇ ವಿಧಿ ರದ್ದುಗೊಳಿಸಿದ ನಿಮ್ಮ ನಿರ್ಧಾರವನ್ನು ಹಲವರು ಸ್ವಾಗತಿಸಿದ್ದಾರೆ, ಕೆಲವರು ವಿರೋಧಿಸಿದ್ದಾರೆ. ಸದ್ಯದ ಪರಿಸ್ಥಿತಿಯಲ್ಲಿ ಆತಂಕವೂ ಇದೆ. ಜಮ್ಮು-ಕಾಶ್ಮೀರದ ಜನರು ನಿಮ್ಮನ್ನು ಬೆಂಬಲಿಸುತ್ತಾರೆ ಎಂದು ಹೇಗೆ ಭಾವಿಸುತ್ತೀರಿ?

ಕಾಶ್ಮೀರ ಕುರಿತ ನಿರ್ಧಾರವನ್ನು ವಿರೋಧಿಸಿದವರು ಪಟ್ಟ ಭದ್ರ ಹಿತಾಸಕ್ತಿಯ ಗುಂಪುಗಳು, ಕುಟುಂಬ ರಾಜಕಾರಣದ ಕುಡಿಗಳು, ಉಗ್ರರ ಕಡೆಗೆ ಒಲವು ಹೊಂದಿರುವವರು ಹಾಗೂ ವಿಪಕ್ಷದ ಕೆಲವು ಸ್ನೇಹಿತರು. ಭಾರತದ ಜನರು ತಮ್ಮ ರಾಜಕೀಯ ಆದ್ಯತೆ ಯಾವುದೇ ಇದ್ದರೂ ಕಾಶ್ಮೀರ ಕುರಿತ ಕ್ರಮಗಳನ್ನು ಬೆಂಬಲಿಸಿದ್ದಾರೆ. ಇದು ದೇಶದ ಕುರಿತ ಸಂಗತಿ, ರಾಜಕೀಯದ್ದಲ್ಲ. ದೇಶದ ಜನರು ಇದನ್ನು ಕಠಿನ ನಿರ್ಧಾರ, ಆದರೆ ಅಗತ್ಯದ ನಿರ್ಧಾರ ಎಂದು ಭಾವಿಸಿದ್ದಾರೆ. ಈ ಹಿಂದೆ ಅಸಾಧ್ಯ ಎಂದು ಭಾವಿಸಿದ್ದು, ಈಗ ವಾಸ್ತವವಾಗಿದೆ. 370ನೇ ಮತ್ತು 35ಎ ವಿಧಿಯು ಜಮ್ಮು-ಕಾಶ್ಮೀರ ಮತ್ತು ಲಡಾಖ್‌ ಅನ್ನು ಹಿಂದುಳಿಯುವಂತೆ ಮಾಡಿದೆ ಎಂದು ಎಲ್ಲರಿಗೂ ಈಗ ಅರಿವಾಗಿದೆ. ಅಲ್ಲಿನ ಜನರನ್ನು ಕಳೆದ ಏಳು ದಶಕಗಳಿಂದಲೂ ಅಭಿವೃದ್ಧಿಯಿಂದ ದೂರವಿಡಲಾಗಿತ್ತು. ಆದಾಯ ಹೆಚ್ಚಳಕ್ಕೆ ಅವಕಾಶವೇ ಇಲ್ಲದ್ದು ದೊಡ್ಡ ತೊಂದರೆಯಾಗಿತ್ತು. ಬಡತನದ ವಿಷ ಚಕ್ರದಲ್ಲಿ ಜನರನ್ನು ಸಿಲುಕಿಸುವುದರ ಬದಲಿಗೆ ನಮ್ಮ ಪ್ರಯತ್ನ ವಿಭಿನ್ನವಾಗಿದೆ. ಜನರಿಗೆ ಆರ್ಥಿಕ ಅವಕಾಶಗಳು ಅಗತ್ಯವಿವೆ.

•ಭಾರತದಲ್ಲಿನ ಸುಧಾರಣೆಗಳ ಲಾಭ ಪಡೆಯುವ ನಿಟ್ಟಿನಲ್ಲಿ ಜಮ್ಮು-ಕಾಶ್ಮೀರದ ಜನರಿಗೆ ಯಾವ ಸಂದೇಶ ನೀಡುತ್ತೀರಿ?

ಹಲವು ವರ್ಷಗಳಿಂದಲೂ ದೌರ್ಜನ್ಯವೇ ಆಡಳಿತ ನಡೆಸಿದೆ. ಈಗ ಅಭಿವೃದ್ಧಿಗೆ ಒಂದು ಅವಕಾಶ ನೀಡೋಣ. ಜಮ್ಮು-ಕಾಶ್ಮೀರ ಮತ್ತು ಲಡಾಖ್‌ನ ನನ್ನ ಸೋದರ, ಸೋದರಿಯರು ಎಂದಿಗೂ ಉತ್ತಮ ಭವಿಷ್ಯವನ್ನು ಎದುರು ನೋಡುತ್ತಿದ್ದರು. ಆದರೆ 370ನೇ ವಿಧಿ ಅವರನ್ನು ಈ ಅವಕಾಶದಿಂದ ವಂಚಿತವಾಗಿಸಿತ್ತು. ಮಹಿಳೆಯರು, ಮಕ್ಕಳು, ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಅನ್ಯಾಯವಾಗಿತ್ತು. ಈಗ ಬಿಪಿಒಗಳು, ಸ್ಟಾರ್ಟಪ್‌ಗ್ಳು, ಆಹಾರ ಸಂಸ್ಕರಣೆ ಮತ್ತು ಪ್ರವಾಸೋದ್ಯಮದವರೆಗೆ ಹಲವು ಉದ್ಯಮಗಳು ಹೂಡಿಕೆ ಮಾಡಬಹುದು ಮತ್ತು ಸ್ಥಳೀಯರಿಗೆ ಉದ್ಯೋಗ ಒದಗಿಸಬಹುದು. ಶಿಕ್ಷಣ ಮತ್ತು ಕೌಶಲ ಅಭಿವೃದ್ಧಿಯೂ ಹೆಚ್ಚಲಿದೆ. ಸ್ಥಳೀಯ ಜನರ ಬೇಡಿಕೆ, ಅವರ ಕನಸು ಮತ್ತು ಮಹತ್ವಾಕಾಂಕ್ಷೆಗೆ ಅನುಗುಣವಾಗಿ ಈ ವಲಯ ಅಭಿವೃದ್ಧಿ ಹೊಂದುತ್ತದೆ ಎಂದು ನಾನು ಭರವಸೆ ನೀಡುತ್ತೇನೆ.

Advertisement

ಜಮ್ಮು-ಕಾಶ್ಮೀರ ಕುರಿತ ನಿರ್ಧಾರವನ್ನು ವಿರೋಧಿಸು ವವರು ಒಂದು ಮೂಲ ಪ್ರಶ್ನೆಗೆ ಉತ್ತರ ನೀಡಬೇಕು. 370ನೇ ಮತ್ತು 35ಎ ಪರಿಚ್ಛೇದವನ್ನು ಯಾಕೆ ಮುಂದುವರಿಸ ಬೇಕು? ಈ ಪ್ರಶ್ನೆಗೆ ಅವರ ಬಳಿ ಉತ್ತರವಿಲ್ಲ. ಇದೇ ವ್ಯಕ್ತಿಗಳು ಜನಸಾಮಾನ್ಯರಿಗೆ ಸಹಾಯಕವಾಗುವ ಎಲ್ಲವನ್ನೂ ವಿರೋಧಿಸುತ್ತಾರೆ. ಜನರಿಗೆ ನೀರು ಕೊಡುವ ಯೋಜನೆ ಇದ್ದರೆ ಅದನ್ನೂ ಅವರು ವಿರೋಧಿಸುತ್ತಾರೆ. ರೈಲ್ವೇ ಹಳಿ ಹಾಕುವುದಿದ್ದರೆ ಅದಕ್ಕೂ ಅವರು ವಿರೋಧ ಮಾಡುತ್ತಾರೆ. ಇಂದು ಜಮ್ಮು, ಕಾಶ್ಮೀರ ಮತ್ತು ಲಡಾಖ್‌ ಜನರ ಜತೆ ದೇಶದ ಪ್ರತಿಯೊಬ್ಬರೂ ಇದ್ದಾರೆ. ಅಭಿವೃದ್ಧಿ ಮತ್ತು ಶಾಂತಿ ನೆಲೆಸುವ ನಿಟ್ಟಿನಲ್ಲಿ ನಮ್ಮ ಜತೆಗೂ ಅವರು ನಿಲ್ಲುತ್ತಾರೆ ಎಂದು ನಾನು ವಿಶ್ವಾಸ ಹೊಂದಿದ್ದೇನೆ.

•ಪ್ರಜಾಪ್ರಭುತ್ವದ ಅಸ್ತಿತ್ವದ ಬಗ್ಗೆ ಆತಂಕ ಕಾಡುತ್ತಿದೆಯೇ? ಕಾಶ್ಮೀರದ ಜನರ ಅಭಿಪ್ರಾಯಗಳನ್ನು ಪರಿಗಣಿಸಲಾಗುತ್ತದೆಯೇ?

ಕಾಶ್ಮೀರ ಎಂದೂ ಸರಿಯಾದ ರೀತಿಯ ಪ್ರಜಾಪ್ರಭುತ್ವವನ್ನೇ ಕಂಡಿಲ್ಲ. ಪಂಚಾಯತ್‌ ಚುನಾವಣೆಯಲ್ಲಿ ಜನರ ಪ್ರತಿಕ್ರಿಯೆ ನೆನಪಿದೆಯೇ? ಜನರು ಭಾರೀ ಸಂಖ್ಯೆಯಲ್ಲಿ ಮತ ಚಲಾವಣೆ ಮಾಡಿದ್ದಾರೆ. ಬೆದರಿಕೆಗೆ ಸೊಪ್ಪು ಹಾಕಲಿಲ್ಲ. 2018ರ ನವೆಂಬರ್‌ ಮತ್ತು ಡಿಸೆಂಬರ್‌ನಲ್ಲಿ 35 ಸಾವಿರ ಪಂಚಾಯತ್‌ ಸದಸ್ಯರನ್ನು ಆಯ್ಕೆ ಮಾಡಲಾಗಿದೆ. ಪಂಚಾಯತ್‌ ಚುನಾವಣೆಯಲ್ಲಿ ಶೇ.74 ರಷ್ಟು ಜನರು ಮತದಾನ ಮಾಡಿದ್ದಾರೆ. ಯಾವ ಹಿಂಸಾಚಾರವೂ ನಡೆಯಲಿಲ್ಲ. ಒಂದು ಹನಿ ರಕ್ತವೂ ಸುರಿಯಲಿಲ್ಲ. ರಾಜಕೀಯ ಪಕ್ಷಗಳಲ್ಲಿ ನಿರಾಸಕ್ತಿ ಇದ್ದಾಗಲೂ ಈ ಸಾಧನೆಯಾಗಿದೆ. ಅಭಿವೃದ್ಧಿ ಮತ್ತು ಮಾನವ ಸಂಪನ್ಮೂಲ ಅಭಿವೃದ್ಧಿಯಲ್ಲಿ ಪಂಚಾಯತ್‌ಗಳೇ ಈಗ ಮುಂಚೂಣಿಯಲ್ಲಿವೆ.

ಕಳೆದ ಹಲವು ವರ್ಷಗಳಿಂದಲೂ ಪಂಚಾಯತ್‌ನ್ನು ಸಶಕ್ತಗೊಳಿಸುವಲ್ಲಿ ಅಧಿಕಾರದಲ್ಲಿದ್ದವರು ಶ್ರಮಿಸಲೇ ಇಲ್ಲ. ಅವರು ಪ್ರಜಾಪ್ರಭುತ್ವದ ಬಗ್ಗೆ ಉದ್ದುದ್ದ ಭಾಷಣ ಮಾಡಿದರೂ, ಅದು ಕಾರ್ಯರೂಪಕ್ಕೆ ಇಳಿಯಲಿಲ್ಲ. 73ನೇ ತಿದ್ದುಪಡಿಯು ಜಮ್ಮು ಕಾಶ್ಮೀರಕ್ಕೆ ಅನ್ವಯವಾಗಲಿಲ್ಲ ಎಂಬುದು ನನಗೆ ಅಚ್ಚರಿ ಮತ್ತು ದುಃಖ ತಂದಿತು. ಈ ಅನ್ಯಾಯವನ್ನು ಹೇಗೆ ಸಹಿಸುವುದು? ಕಳೆದ ಪಂಚಾ ಯತ್‌ ಚುನಾವಣೆಯಲ್ಲಿ 73ನೇ ತಿದ್ದುಪಡಿಯನ್ನು ಜಾರಿಗೊಳಿಸಿದಾಗ ಜನರಿಗೆ ಹೆಚ್ಚು ಅಧಿಕಾರ ಲಭ್ಯವಾಯಿತು. ಈಗ ಬ್ಲಾಕ್‌ ಪಂಚಾಯತ್‌ ಚುನಾವಣೆಯನ್ನೂ ನಡೆಸುವಂತೆ ಗೌರವಯುತ ರಾಜ್ಯಪಾಲರಲ್ಲಿ ನಾನು ವಿನಂತಿ ಮಾಡಿದ್ದೇನೆ.

•ನಿಮ್ಮ ಸರಕಾರ 75 ದಿನಗಳನ್ನು ಪೂರೈಸಿದೆ. ಪ್ರತಿ ಸರಕಾರವೂ 75 ದಿನಗಳನ್ನು ಪೂರೈಸಿ ತನ್ನ ಸಾಧನೆಗಳನ್ನು ಹೇಳಿಕೊಳ್ಳುತ್ತದೆ. ನಿಮ್ಮ ಸರಕಾರ ಹೇಗೆ ವಿಭಿನ್ನ?

ನಮ್ಮ ಸರಕಾರ ಅಧಿಕಾರಕ್ಕೆ ಬಂದ ಕೆಲವೇ ದಿನಗಳಲ್ಲಿ ನಾವು ಕೆಲಸಕ್ಕೆ ಅಭೂತಪೂರ್ವ ವೇಗ ನೀಡಿದ್ದೆವು. ಇದರಿಂದಾಗಿಯೇ ನಮಗೆ ಸ್ಪಷ್ಟ ನೀತಿ, ಸರಿಯಾದ ದಿಕ್ಕಿನಲ್ಲಿ ಸಾಗಲು ಸಾಧ್ಯವಾಯಿತು. 75 ದಿನಗಳಲ್ಲಿ ಬಹಳಷ್ಟು ಸಂಗತಿಗಳು ನಡೆದುಹೋಗಿವೆ. ಮಕ್ಕಳ ಸುರಕ್ಷತೆಯಿಂದ ಚಂದ್ರಯಾನ 2, ಭ್ರಷ್ಟಾಚಾರ ನಿಗ್ರಹದಿಂದ ತ್ರಿವಳಿ ತಲಾಖ್‌ ಮೂಲಕ ಮಹಿಳೆಯರ ರಕ್ಷಣೆ, ಕಾಶ್ಮೀರದಿಂದ ಕಿಸಾನ್‌ ತನಕ ನಾವು ಅಭೂತಪೂರ್ವ ಸಾಧನೆ ಮಾಡಿದ್ದೇವೆ.

•ವೈದ್ಯಕೀಯ ವಲಯದಲ್ಲಿನ ಸುಧಾರಣೆ ಬಗ್ಗೆ ಕೆಲವು ಆಕ್ಷೇಪಗಳಿವೆ. ನೀವು ಮಾಡುವುದಕ್ಕೂ ಮೊದಲು ಸರಿ ಚಿಂತನೆ ನಡೆಸಿದ್ದೀರಾ?

2014ರಲ್ಲಿ ನಾವು ಸರಕಾರ ರಚನೆ ಮಾಡಿದಾಗ, ಆಗಿನ ವೈದ್ಯಕೀಯ ಶಿಕ್ಷಣದ ಬಗ್ಗೆ ತುಂಬಾ ಆಕ್ಷೇಪಗಳಿದ್ದವು. ಭಾರತದಲ್ಲಿ ವೈದ್ಯಕೀಯ ಶಿಕ್ಷಣದ ನಿಗಾ ವಹಿಸುವ ಸಂಸ್ಥೆಗಳು ಭ್ರಷ್ಟಾಚಾರದ ಕೂಪ ಎಂದೇ ಈ ಹಿಂದೆ ಕೋರ್ಟ್‌ಗಳು ಆಕ್ಷೇಪಿಸಿದ್ದವು. ಸಂಸದೀಯ ಸಮಿತಿಯು ಸೂಕ್ಷ್ಮ ಅಧ್ಯಯನ ನಡೆಸಿತು ಮತ್ತು ವೈದ್ಯಕೀಯ ಶಿಕ್ಷಣದ ಬಗ್ಗೆ ಆತಂಕಕಾರಿ ವರದಿ ನೀಡಿತು. ದುರಾಡಳಿತ, ಪಾರದರ್ಶಕತೆ ಕೊರತೆ ಮತ್ತು ಸಮಸ್ಯೆ ಪರಿಹಾರ ಮಾಡದಿರುವಿಕೆ ವಿಚಾರಗಳನ್ನು ಅದು ವರದಿ ಮಾಡಿತು.

•ಹಾಗಾದರೆ ಯಾಕೆ ಮಸೂದೆ ಬಗ್ಗೆ ಅಷ್ಟು ಗದ್ದಲ ಎಬ್ಬಿಸಲಾಗಿದೆ?

ರಾಷ್ಟ್ರೀಯ ವೈದ್ಯಕೀಯ ಆಯೋಗವು ಈಗಿರುವ ಸಮಸ್ಯೆ ಪರಿಹರಿಸುವ ಉದ್ದೇಶ ಹೊಂದಿದೆ. ಭ್ರಷ್ಟಾಚಾರ ನಿಗ್ರಹಿಸಿ ಪಾರದರ್ಶಕತೆಯನ್ನು ಹೆಚ್ಚಿಸಲು ಹಲವು ಸುಧಾರಣೆಗಳನ್ನು ಇದು ಒಳಗೊಂಡಿದೆ. ಬಡತನ ಹಾಗೂ ಅನಾರೋಗ್ಯದ ವಿಷಚಕ್ರದಿಂದ ಬಡವರನ್ನು ಮೇಲೆತ್ತುವುದು ಅತ್ಯಂತ ಮುಖ್ಯ. ಈ ಉದ್ದೇಶವನ್ನೂ ಎನ್‌ಎಂಸಿ ಸಾಧಿಸುತ್ತದೆ. ದೇಶದ ವೈದ್ಯಕೀಯ ಶಿಕ್ಷಣದಲ್ಲಿ ಪಾರದರ್ಶಕತೆ, ಹೊಣೆಗಾರಿಕೆ ಮತ್ತು ಗುಣಮಟ್ಟವನ್ನು ಖಚಿತಪಡಿಸುತ್ತದೆ.

•ಯುವ ದೇಶಕ್ಕೆ ಶಿಕ್ಷಣ ಅತ್ಯಂತ ಪ್ರಮುಖವಾದದ್ದು. ಆದರೆ ನಿಮ್ಮ ಸರಕಾರದಲ್ಲಿ ಶಿಕ್ಷಣದ ವಿಚಾರವೇ ಕೇಳಿಸುತ್ತಿಲ್ಲ. ಸರಕಾರ ಈ ವಿಚಾರದಲ್ಲಿ ಏನು ಮಾಡುತ್ತಿದೆ?

ಶಿಕ್ಷಣ ಕೇವಲ ಪ್ರಮುಖ ಸಂಗತಿಯಷ್ಟೇ ಅಲ್ಲ, ಜನರನ್ನು ಕೇಂದ್ರೀಕರಿಸಿದ ಮತ್ತು ಜನರೇ ಚಾಲಕ ಶಕ್ತಿಯಾಗಿರುವ ಅಭಿವೃದ್ಧಿ ಮಾದರಿಗೆ ಕುಶಲ ಮಾನವ ಸಂಪನ್ಮೂಲವೇ ಪ್ರಮುಖವಾಗಿದ್ದು, ಇದರಲ್ಲಿ ಶಿಕ್ಷಣವೇ ಆದ್ಯತೆಯ ಸಂಗತಿಯಾಗಿದೆ.

ಶಿಕ್ಷಣದ ಗುಣಮಟ್ಟ ಸುಧಾರಣೆ, ಕಲಿಕೆ ಫ‌ಲಿತಾಂಶಗಳ ಸುಧಾರಣೆೆ, ನಾವೀನ್ಯತೆ ಮತ್ತು ವೈಜ್ಞಾನಿಕ ಶೋಧಕ್ಕೆ ಉತ್ತೇಜನ, ಮೂಲಸೌಕರ್ಯ ಸುಧಾರಣೆಗೆ ಹೆಚ್ಚಿನ ಪ್ರಾಮುಖ್ಯ ನೀಡಲಾಗುತ್ತಿದೆ. ಆರ್ಟಿಫಿಶಿಯಲ್ ಇಂಟಲಿಜೆನ್ಸ್‌, ಮಶಿನ್‌ ಲರ್ನಿಂಗ್‌ ಅನ್ನು ಬಳಸಿ ಶಾಲಾ ಶಿಕ್ಷಣ ಸುಧಾರಣೆಗೆ ಪ್ರಯತ್ನಿಸುತ್ತಿದ್ದೇವೆ.

ರಾಷ್ಟ್ರೀಯ ಶೈಕ್ಷಣಿಕ ನೀತಿಯ ಮೊದಲ ಕರಡು ಪ್ರತಿಗೆ ಲಕ್ಷಗಟ್ಟಲೆ ಸಲಹೆಗಳು ಪಂಚಾಯತ್‌ ಮಟ್ಟದಿಂದಲೂ ಬಂದವು. ಈ ಹಿನ್ನೆಲೆ ಯಲ್ಲಿ ಸಮಿತಿಯು ಇನ್ನೊಂದು ಸುತ್ತಿನ ಚಿಂತನೆಯನ್ನು ನಡೆಸಿತು.

•ಭ್ರಷ್ಟಾಚಾರಕ್ಕೆ ಸಂಬಂಧಿಸಿದ ಕೆಲವು ನಿರ್ಧಾರಗಳು ಅಧಿಕಾರಿಗಳ ಮಟ್ಟದಲ್ಲಿ ಆಘಾತ ಉಂಟು ಮಾಡಿದೆ. ಯಾವ ಸಂದೇಶವನ್ನು ನೀಡಲು ನೀವು ಬಯಸಿದ್ದೀರಿ?

ಭಾರತ ಸ್ವತಂತ್ರಗೊಂಡಾಗಿನಿಂದಲೂ ನಮ್ಮನ್ನು ಹಿಂದಕ್ಕೆ ತಳ್ಳುತ್ತಿರುವ ಸಂಗತಿಯೆಂದರೆ ಭ್ರಷ್ಟಾಚಾರ. ಎಲ್ಲರ ಮನಸಲ್ಲೂ ಇರುವ ಪ್ರಶ್ನೆಯೆಂದರೆ ಯಾರು ಈ ಭ್ರಷ್ಟಾಚಾರವನ್ನು ನಿಲ್ಲಿಸಬೇಕು ಮತ್ತು ಎಲ್ಲಿಂದ ನಿಲ್ಲಿಸಬೇಕು ಎಂಬುದು. ಭ್ರಷ್ಟಾಚಾರದ ವಿರುದ್ಧದ ಹೋರಾಟಕ್ಕೆ ಎಂದಿಗೂ ಜನರು, ಮಾಧ್ಯಮ, ಸಂಸ್ಥೆಗಳು ಬೆಂಬಲಿಸಿವೆ.

ಭ್ರಷ್ಟಾಚಾರವನ್ನು ನಿರ್ಮೂಲನೆಗೊಳಿಸಲು ರಾಜಕೀಯ ಪರಿಣಾಮಗಳ ಬಗ್ಗೆ ಯೋಚನೆ ಮಾಡದೆಯೇ ನಾವು ಇದನ್ನು ಮಾಡಲು ನಿರ್ಧರಿಸಿದೆವು. ನಾವು ಯಶಸ್ವಿಯಾಗುತ್ತಿದ್ದೇವೆ ಎಂದು ಫ‌ಲಿತಾಂಶಗಳು ಹೇಳುತ್ತಿವೆ. ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸುತ್ತಿರುವ ಜನರ ಸಂಖ್ಯೆ ಕಳೆದ 5 ವರ್ಷಗಳಲ್ಲಿ ಬಹುತೇಕ ದುಪ್ಪಟ್ಟಾಗಿದೆ. ಈಗಾಗಲೇ ಯಾವುದೇ ಮಾನವ ಹಸ್ತಕ್ಷೇಪವಿಲ್ಲದೆ ಆದಾಯ ತೆರಿಗೆದಾರರ ಬ್ಯಾಂಕ್‌ ಖಾತೆಗೆ ನೇರವಾಗಿ ರಿಫ‌ಂಡ್‌ ಪಾವತಿಯಾಗುತ್ತಿದೆ.

ಒಂದು ಹೆಜ್ಜೆ ಮುಂದಿಟ್ಟು ಆದಾಯ ತೆರಿಗೆ ವಿಶ್ಲೇಷಣೆಯನ್ನು ನಾವು ಫೇಸ್‌ಲೇಸ್‌ ಮಾಡಲಿದ್ದೇವೆ. ತೆರಿಗೆ ವ್ಯವಸ್ಥೆಯಲ್ಲಿ ಪಾರದರ್ಶಕತೆಯ ಹೊಸ ಶಕೆಯನ್ನು ಇದು ತೆರೆಯಲಿದೆ. ನಾವು ಯಾವುದೇ ಭ್ರಷ್ಟಾಚಾರಕ್ಕೆ ಅವಕಾಶ ಮಾಡಿಕೊಡುವುದಿಲ್ಲ ಹಾಗೂ ಯಾವುದೇ ರೀತಿಯ ದೌರ್ಜನ್ಯಕ್ಕೂ ಅವಕಾಶ ಮಾಡಿಕೊಡುವುದಿಲ್ಲ ಎಂಬ ಬದ್ಧತೆ ನಾವು ಹೊಂದಿದ್ದೇವೆ.

Advertisement

Udayavani is now on Telegram. Click here to join our channel and stay updated with the latest news.

Next