Advertisement

ಬಯಲು ಶೌಚ ಮುಕ್ತ ಪುತ್ತೂರು: ನಗರಸಭೆ ಯೋಜನೆ

03:25 PM Oct 05, 2017 | |

ನಗರ : ಬಯಲು ಶೌಚ ಮುಕ್ತ ನಗರಸಭೆಯಾಗಿಸುವ ನಿಟ್ಟಿನಲ್ಲಿ ಪುತ್ತೂರಿನ ಎರಡು ಕಡೆಗೆ ಇ-ಶೌಚಾಲಯ ಬರಲಿದೆ. ಕೆಎಸ್‌ ಆರ್‌ಟಿಸಿ ಬಸ್‌ ನಿಲ್ದಾಣದ ಮುಂಭಾಗ, ಬೊಳುವಾರು ಶೌಚಾಲಯದ ಬಳಿ ನಿರ್ಮಿಸಲು ಟೆಂಡರ್‌
ಪ್ರಕ್ರಿಯೆ ನಡೆದಿದೆ.

Advertisement

ಘನ ತ್ಯಾಜ್ಯದ ಅನಂತರ ಎರಡನೇ ಬಹು ದೊಡ್ಡ ಸವಾಲು ಆಗಿರುವುದು ಶೌಚಾ ಲಯ. ಅದರಲ್ಲೂ ಪುತ್ತೂರಿನ ಪ್ರಮುಖ ಜಂಕ್ಷನ್‌ಗಳಲ್ಲಿ ಶೌಚಾಲಯದ ಕೊರತೆ ಬಹುದೊಡ್ಡ ಸಮಸ್ಯೆಯಾಗಿ  ಕಾಡುತ್ತಿದೆ. ಹೆಚ್ಚೇಕೆ? ವಾಣಿಜ್ಯ ಕಟ್ಟಡ ಗಳಲ್ಲೂ ಶೌಚಾಲಯ ಇಲ್ಲದಿರುವ ಉದಾಹರಣೆಗಳಿವೆ. ಹಾಗಿರುವಾಗ  ಶೌಚಾಲಯವನ್ನು ಅರಸಿ ಹೋಗುವುದಾದರೂ ಎಲ್ಲಿಗೆ? ಇದಕ್ಕೆ ಉತ್ತರ ನೀಡಲು ನಗರಸಭೆ ಸಿದ್ಧವಾಗಿದೆ. ಎರಡು ಇ- ಶೌಚಾಲಯ, ಎರಡು ಸಾಮೂಹಿಕಶೌಚಾಲಯ ನಿರ್ಮಾಣ ಹಾಗೂ ಹಾಲಿ ಇರುವ ಶೌಚಾಲಯಗಳ ನವೀಕರಣಕ್ಕೆ ಮುಂದಾಗಿದೆ.

ಶೌಚಾಲಯದ ಕೊರತೆ ನೀಗಿಸದೇ ಇದ್ದರೆ ಶುಚಿತ್ವದ ಬಗ್ಗೆ ಭಾಷಣ ಬಿಗಿದರೆ, ಜಾಗೃತಿ ಮೂಡಿಸಿದರೆ ಪ್ರಯೋಜನ 
ವೇನು? ನಗರಸಭೆ ವಾಣಿಜ್ಯ ಸಂಕೀರ್ಣದ ಹಿಂಭಾಗ ದುರ್ವಾಸನೆ ರಾಚುತ್ತಿದೆ. ಇದೇ ಪರಿಸ್ಥಿತಿ ಪುತ್ತೂರು ನಗರದ ಹಲವು ಕಡೆಗಳಲ್ಲಿ ಇದೆ. ಇದನ್ನೆಲ್ಲ ಗಮನಿಸಿದ ಪುತ್ತೂರು ನಗರಸಭೆ, ಶೌಚಾಲಯದ ಅನಿವಾರ್ಯವಯನ್ನು ಮನಗಂಡಿದೆ.

ಇ-ಶೌಚಾಲಯ
ಆಧುನಿಕ ವ್ಯವಸ್ಥೆಯ ಇ-ಶೌಚಾಲಯ ಮಹಾನಗರಗಳಲ್ಲಿ ಬಳಕೆಯಾಗುತ್ತಿವೆ. ಆದರೆ ಪುತ್ತೂರಿನ ಮಟ್ಟಿಗೆ ಇದೇ ಪ್ರಥಮ. ಸುಮಾರು 23 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲು ಟೆಂಡರ್‌ ನೀಡಲಾಗಿದೆ. ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣ
ಮುಂಭಾಗ ಎರಡು ಯೂನಿಟ್‌ ಹಾಗೂ ಬೊಳುವಾರಿನಲ್ಲಿ ಒಂದು ಯೂನಿಟ್‌ ನಿರ್ಮಿಸಲಾಗುವುದು. ಪ್ರತಿ ಯೂನಿಟ್‌ಗೆ
ಸುಮಾರು 6 ಲಕ್ಷ ರೂ. ವೆಚ್ಚವಿದೆ. ಅಂದರೆ ಮೂರು ಯೂನಿಟ್‌ಗೆ 18 ಲಕ್ಷ ರೂ. ವಿನಿಯೋಗವಾಗಲಿದೆ. ಉಳಿದ 5 ಲಕ್ಷ ರೂ.ಗಳಲ್ಲಿ ಸಂಪು, ಗ್ರಾನೈಟ್‌, ರೈಲಿಂಗ್ಸ್‌, ಫುಟ್‌ಪಾತ್‌ ನಿರ್ಮಾಣವಾಗಲಿದೆ.

ಸಾಮೂಹಿಕ ಶೌಚಾಲಯ
ನಗರಸಭೆ ಅಧ್ಯಕ್ಷರ ಮನೆ ಹಿಂಭಾಗದಲ್ಲೇ ಇರುವ ಅರ್ತಿಪದವು ಮಾಯಿಲರ ಕಾಲನಿ ಹಾಗೂ ಸಾಮೆತ್ತಡ್ಕ ಅಂಬೇಡ್ಕರ್‌ ಕಾಲನಿಗೆ ಸಾಮೂಹಿಕ ಶೌಚಾಲಯ ನಿರ್ಮಿಸಲು 14ನೇ ಹಣಕಾಸು ನಿಧಿಯಡಿ ಅನುದಾನ ನೀಡಲಾಗಿದೆ.  ಸುಮಾರು 3.94 ಲಕ್ಷ ರೂ. ವೆಚ್ಚದಲ್ಲಿ ಎರಡೂ ಕಡೆಗಳಲ್ಲಿ ಶೌಚಾಲಯ ನಿರ್ಮಾಣವಾಗಲಿದೆ.

Advertisement

ಅರ್ತಿಪದವು ಮಾಯಿಲರ ಕಾಲನಿಯಲ್ಲಿ ಒಟ್ಟು 9 ಮನೆಗಳಿವೆ (ನಗರಸಭೆ ದಾಖಲೆಗಳ ಪ್ರಕಾರ ಎಂಟು). ಈ ಪೈಕಿ 4
ಮನೆಗಳಲ್ಲಿ ಶೌಚಾಲಯವಿದೆ. ಉಳಿದ ನಿವಾಸಿಗಳ ಸಮಸ್ಯೆಗೆ ತತ್‌ಕ್ಷಣ ಸ್ಪಂದಿಸುವ ನಿಟ್ಟಿನಲ್ಲಿ ಸಾಮೂಹಿಕ ಶೌಚಾಲಯವಾದರೂ ನಿರ್ಮಿಸಿಕೊಡುವ ಅನಿವಾರ್ಯವಯನ್ನು ನಗರಸಭೆ ಅರಿತುಕೊಂಡಿದೆ. 

ದರ್ಬೆ ಶೌಚಾಲಯ
ಪುತ್ತೂರಿನ ಎರಡನೇ ದೊಡ್ಡ ಪೇಟೆಯಾಗಿ ದರ್ಬೆ ಬೆಳೆಯುತ್ತಿದೆ. ವಿದ್ಯಾರ್ಥಿಗಳ ಸಂಖ್ಯೆ ಮಾತ್ರವಲ್ಲ,
ವಾಣಿಜ್ಯಿಕವಾಗಿಯೂ ಅಭಿವೃದ್ಧಿಗೊಳ್ಳುತ್ತಿದೆ. ಇಂತಹ ಪ್ರದೇಶಕ್ಕೆ ಶೌಚಾಲಯದ ಅಗತ್ಯ ಹೆಚ್ಚಿದೆ. ದರ್ಬೆ ವೃತ್ತದ ಬಳಿಯ ಶೌಚಾಲಯ ನಾದುರಸ್ತಿಯಲ್ಲಿದೆ. ನಿರ್ವಹಣೆ ಕೊರತೆಯಿಂದ ಸಾಕಷ್ಟು ಸಮಸ್ಯೆ ಎದುರಿಸುತ್ತಿದೆ. ಈ ಹಿನ್ನೆಲೆಯಲ್ಲಿ ಸುಮಾರು 5 ಲಕ್ಷ ರೂ. ಅನುದಾನ ನೀಡಿ, ಕಾಮಗಾರಿ ನಡೆಸಲು ನಗರಸಭೆ ಮುಂದಾಗಿದೆ.

ಶೌಚ ಮುಕ್ತ ಪ್ರದೇಶವಾಗಿಸುವ ಬಯಕೆ
ಪ್ರತಿಯೊಂದು ಮನೆಯಲ್ಲೂ ಶೌಚಾಲಯ ಇರಬೇಕೆಂಬ ನಿಟ್ಟಿನಲ್ಲಿ ನಗರಸಭೆ ಕಾರ್ಯಕ್ರಮ ಹಮ್ಮಿಕೊಂಡಿದೆ. ಇದರ ಜತೆಗೆ ಸಾರ್ವಜನಿಕರ ಬಳಕೆಗೂ ಶೌಚಾಲಯ ಸಿಗಬೇಕೆಂಬ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿದೆ. ಈ ಹಿನ್ನೆಲೆಯಲ್ಲಿ ಪುತ್ತೂರಿಗೆ ಪ್ರಥಮ ಬಾರಿಗೆ ಎರಡು ಕಡೆ ಮೂರು ಯೂನಿಟ್‌ ಇ-ಶೌಚಾಲಯ ನಿರ್ಮಿಸಲಾಗುವುದು. ಪುತ್ತೂರು ಹಾಗೂ ಬೊಳುವಾರಿನ ಶೌಚಾಲಯ ನವೀಕರಿಸಲಾಗಿದೆ. ಒಟ್ಟಿನಲ್ಲಿ ಬಯಲು ಶೌಚ ಮುಕ್ತ ಪ್ರದೇಶವಾಗಿ ಪುತ್ತೂರನ್ನು ಬೆಳೆಸುವ ಬಯಕೆ ಇದೆ.
ಜಯಂತಿ ಬಲ್ನಾಡ್, 
ಅಧ್ಯಕ್ಷೆ, ನಗರಸಭೆ 

Advertisement

Udayavani is now on Telegram. Click here to join our channel and stay updated with the latest news.

Next