ಲಿಂಗಸುಗೂರು: ನಮ್ಮ ಪ್ರತಿಯೊಂದು ಕಾರ್ಯಕ್ರಮಕ್ಕೆ ಅಡ್ಡಿಪಡಿಸಿ ಕುತಂತ್ರ ರಾಜಕಾರಣ ಮಾಡುತ್ತಿರುವ ವಿರೋಧ
ಪಕ್ಷಗಳು ಈಗ ಉದ್ಯೋಗ ಮೇಳಕ್ಕೂ ಅಡ್ಡಿಪಡಿಸಿದ್ದಾರೆ. ನಿರುದ್ಯೋಗಿಗಳ ಭವಿಷ್ಯದ ವಿಷಯದಲ್ಲಿ ರಾಜಕಾರಣ ಮಾಡುವುದು ಸರಿಯಲ್ಲ ಎಂದು ಮಾಜಿ ಶಾಸಕ ಮಾನಪ್ಪ ವಜ್ಜಲ್ ಹೇಳಿದರು. ಪಟ್ಟಣದಲ್ಲಿ ಶನಿವಾರ ಎಂಎನ್ಕೆವಿ ಸಂಘ ಹಮ್ಮಿಕೊಂಡಿದ್ದ ಕೌಶಲ್ಯ ತರಬೇತಿ ಮತ್ತು ಉದ್ಯೋಗ ಮೇಳ ಉದ್ಘಾಟಿಸಿ ಅವರು ಮಾತನಾಡಿದರು.
ನಮ್ಮ ಅಭಿಮಾನಿಗಳ ಸಂಘದವರು ಪಟ್ಟಣದ ಸರಕಾರಿ ಕಾಲೇಜಿನ ಮೈದಾನದಲ್ಲಿ ಉದ್ಯೋಗ ಮೇಳ ನಡೆಸಲು ತಿರ್ಮಾನಿಸಿದ್ದರು. ಆದರೆ ವಿರೋಧ ಪಕ್ಷಗಳು ಅಧಿಕಾರಿಗಳ ಮೇಲೆ ಒತ್ತಡ ತಂದು ಅಲ್ಲಿ ಮೇಳ ನಡೆಸಲು ಪರವಾನಗಿ ನೀಡದಂತೆ ನೋಡಿಕೊಂಡಿದ್ದಾರೆ. ನಾನಾಗಲಿ ಅಥವಾ ಅಭಿಮಾನಿಗಳ ಸಂಘದವರು ಕ್ಷೇತ್ರದ ಜನರ ಅನುಕೂಲಕ್ಕಾಗಿ ಕಾರ್ಯಕ್ರಮ ಮಾಡಿದರೂ ಅದಕ್ಕೆ ವಿರೋಧ ಪಕ್ಷದವರು ಅಡ್ಡಿಪಡಿಸುತ್ತಲೇ ಇದ್ದಾರೆ. ಆದರೆ ನಾನು ಇದಕ್ಕೆ ಹೆದರುವ ಪ್ರಶ್ನೆಯೇ ಇಲ್ಲ ಎಂದು ಹೇಳಿದರು.
ನನ್ನ ಕ್ಷೇತ್ರದ ನಿರುದ್ಯೋಗಿ ಯುವಕ ಮತ್ತು ಯುವತಿಯರಿಗೆ ಉದ್ಯೋಗ ನೀಡಲು ಪ್ರತಿ ವರ್ಷ ಉದ್ಯೋಗ ಮೇಳ ನಡೆಸುತ್ತೇನೆ. ಕ್ಷೇತ್ರದಲ್ಲಿ ಗೂಂಡಾಗಿರಿ, ವ್ಯಾಪಾರಿಗಳಿಗೆ ಕಿರುಕುಳ, ಜಾತಿ ನಿಂದನೆ ಪ್ರಕರಣ ಹಾಕಿಸಿ ಅಮಾಯಕರಿಗೆ ತೊಂದರೆ ನೀಡಲಾಗುತ್ತಿತ್ತು. ಇದರಿಂದ ಕಾನೂನು ಸುವ್ಯವಸ್ಥೆ ಹದಗೆಟ್ಟಿತ್ತು. ನಾನು ಶಾಸಕನಾದ ಮೇಲೆ ಇಂತಹ ಕೃತ್ಯಗಳಿಗೆ ಕಡಿವಾಣ ಹಾಕಿದ್ದೇನೆ. ಕ್ಷೇತ್ರದ ಜನತೆ ನೆಮ್ಮದಿಯ ಬದುಕು ಸಾಗಿಸುವಂತೆ ಮಾಡಿದ್ದೇನೆ. ಇದನ್ನು ಸಹಿಸದ ವಿರೋಧಿಗಳು ನನ್ನ ವಿರುದ್ಧ ಕತ್ತಿ ಮಸೆಯುತ್ತಿದ್ದಾರೆ ಎಂದರು. ಎರಡು ಅವಧಿಗೆ ಶಾಸಕನಾಗಿ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದೇನೆ ಎಂದರು.
ಬಿಜೆಪಿ ಮುಖಂಡರಾದ ಟಿ.ಆರ್.ನಾಯ್ಕ, ನಾಗಪ್ಪ ವಜ್ಜಲ್, ಡಾ| ಶಿವಬಸಪ್ಪ, ಗಿರಿಮಲ್ಲನಗೌಡ ಕರಡಕಲ್, ಶಿವಾನಂದ ಐದನಾಳ, ನರಸಿಂಹ ನಾಯಕ, ಜಗನ್ನಾಥ ಕುಲಕರ್ಣಿ, ಶಶಿಕಾಂತ ಗಸ್ತಿ, ವೀರಣ್ಣ ಹುರಕಡ್ಲಿ, ರತ್ನಾ ಅಂಗಡಿ ಇತರರು ಇದ್ದರು.