Advertisement

ಲೋಕಪಾಲ ನೇಮಕಾತಿ ಮೈಲುಗಲ್ಲು 

12:30 AM Mar 21, 2019 | |

ದೇಶಕ್ಕೆ ಇದೇ ಮೊದಲ ಬಾರಿಗೆ ಲೋಕಪಾಲರ ನೇಮಕವಾಗಿರುವುದನ್ನು ಒಂದು ಮೈಲುಗಲ್ಲು ಎಂದೇ ಪರಿಗಣಿಸಬಹುದು. ಪ್ರಧಾನಿ ನೇತೃತ್ವದ ಸಮಿತಿ ಸುಪ್ರೀಂ ಕೋರ್ಟಿನ ವಿಶ್ರಾಂತ ನ್ಯಾಯಾಧೀಶ ಪಿನಾಕಿ ಚಂದ್ರ ಘೋಶ್‌ ಅವರ ಹೆಸರನ್ನು ಲೋಕಪಾಲ ಹುದ್ದೆಗೆ ಶಿಫಾರಸು ಮಾಡಿದ್ದು, ಅದಕ್ಕೆ ರಾಷ್ಟ್ರಪತಿ ಅಂಕಿತ ಬಿದ್ದಾಗಿದೆ. ಇದರ ಜತೆಗೆ ನಾಲ್ಕು ಮಂದಿ ನ್ಯಾಯಾಂಗೇತರರು ಐದು ಮಂದಿ ನ್ಯಾಯಾಧೀಶರು ಲೋಕಪಾಲದ ಸದಸ್ಯರಾಗಿ ನೇಮಕಗೊಂಡಿದ್ದಾರೆ. 

Advertisement

ಭ್ರಷ್ಟಾಚಾರ ವಿರುದ್ಧ ದೇಶ ನಡೆಸಿದ ಸುದೀರ್ಘ‌ ಹೋರಾಟಕ್ಕೆ ಕಡೆಗೂ ಸಿಕ್ಕಿದ ಜಯ ಇದು ಎಂಬ ಕಾರಣಕ್ಕೆ ಮೋದಿ ಸರಕಾರ ತನ್ನ ಅಧಿಕಾರವಧಿಯ ಕಡೇ ಗಳಿಗೆಯಲ್ಲಿ ಮಾಡಿದ ಈ ನೇಮಕಾತಿ ಮಹತ್ವ ಪಡೆಯುತ್ತದೆ. 

ಲೋಕಪಾಲರಿಗಾಗಿ ಐದು ದಶಕಗಳ ಹೋರಾಟ ನಡೆದಿದೆ. 2013ರಲ್ಲಿ ಸಮಾಜ ಸೇವಕ ಅಣ್ಣಾ ಹಜಾರೆ ರಂಗಕ್ಕಿಳಿದ ಬಳಿಕ ಲೋಕಪಾಲ ಆಂದೋಲನ ತೀವ್ರಗತಿ ಪಡೆದಿತ್ತು. ಆಗಿನ ಸರಕಾರದ ಸರಣಿ ಹಗರಣಗಳಿಂದ ರೋಸಿ ಹೋಗಿದ್ದ ಜನತೆ ಹಜಾರೆ ನೇತೃತ್ವದ ನಾಗರಿಕ ಹೋರಾಟಕ್ಕೆ ಅಭೂತಪೂರ್ವ ಬೆಂಬಲ ನೀಡಿದ್ದರು. ಈ ಹೋರಾಟದ ಫ‌ಲವಾಗಿಯೇ 2013ರಲ್ಲಿ ಲೋಕಪಾಲ ಮತ್ತು ಲೋಕಾಯುಕ್ತ ಮಸೂದೆ ಮಂಜೂರಾಗಿ 2014ರಲ್ಲಿ ಅದಕ್ಕೆ ರಾಷ್ಟ್ರಪತಿ ಅಂಕಿತ ಬಿದ್ದಿತ್ತು.ಹೀಗಾಗಿ ಪ್ರಸ್ತುತ ಲೋಕಪಾಲ ನೇಮಕಾತಿಯಾಗಿರುವ ಬಹುತೇಕ ಶ್ರೇಯಸ್ಸು ಅಣ್ಣಾ ಹಜಾರೆಯವರಿಗೆ ಸಲ್ಲುತ್ತದೆ.
 
ಕಾಯಿದೆ ರಚನೆಯಾದರೂ ಲೋಕಪಾಲರ ನೇಮಕವಾಗಲು ಐದು ವರ್ಷ ಹಿಡಿದಿದೆ ಎನ್ನುವುದು ನಮ್ಮ ಸರಕಾರಿ ವ್ಯವಸ್ಥೆ ಯಾವ ರೀತಿ ಕಾರ್ಯವೆಸಗುತ್ತಿದೆ ಎನ್ನುವುದನ್ನು ತಿಳಿಸುತ್ತದೆ. ಹಿಂದಿನ ಸರಕಾರದ ಭ್ರಷ್ಟಾಚಾರ ವಿರುದ್ಧ ನಡೆದ ಹೋರಾಟದ ಅಲೆಯಲ್ಲಿಯೇ ಅಧಿಕಾರ ಹಿಡಿದಿದ್ದ ನರೇಂದ್ರ ಮೋದಿ ಸರಕಾರ ಅಧಿಕಾರಕ್ಕೇರಿದ ತಕ್ಷಣವೇ ಲೋಕಪಾಲರನ್ನು ನೇಮಕಾತಿ ಮಾಡಬಹುದು ಎಂಬ ನಿರೀಕ್ಷೆ ಇತ್ತು. ಆದರೆ ಲೋಕಸಭೆಯಲ್ಲಿ ವಿಪಕ್ಷ ನಾಯಕರು ಇಲ್ಲ ಎಂಬ ಚಿಕ್ಕದೊಂದು ತಾಂತ್ರಿಕ ಕಾರಣ ನೆಪವಾಗಿ ಲೋಕಪಾಲ ನೇಮಕಾತಿ ಮುಂದೂಡಿಕೆಯಾಗುತ್ತಾ ಹೋಯಿತು. 

ಒಂದು ತಿದ್ದುಪಡಿಯಿಂದ ಈ ತಾಂತ್ರಿಕ ಲೋಪವನ್ನು ಸರಿಪಡಿಸುವ ಅವಕಾಶವಿತ್ತು. ಆದರೆ ಅದಕ್ಕೆ ಸರಕಾರದ ರಾಜಕೀಯ ಇಚ್ಚಾಶಕ್ತಿ ಅಡ್ಡಿಯಾಯಿತು.ಪ್ರತಿಪಕ್ಷ ಸ್ಥಾನ ಸಿಗದೆ ಹತಾಶ ಸ್ಥಿತಿಯಲ್ಲಿದ್ದ ಲೋಕಸಭೆಯ ಅತಿ ದೊಡ್ಡ ಪಕ್ಷ ಕಾಂಗ್ರೆಸ್‌ ತನ್ನನ್ನು ವಿಶೇಷ ಆಹ್ವಾನಿತ ಎಂದು ಪರಿಗಣಿಸಿದ್ದನ್ನು ಪ್ರತಿಭಟಿಸಿ ಲೋಕಸಭೆ ನೇಮಕಾತಿಗಾಗಿ ನಡೆದ ಏಳು ಸಭೆಗಳನ್ನೂ ಬಹಿಷ್ಕರಿಸಿತು. ಹೀಗೆ ಲೋಕಪಾಲ ನೇಮಕಾತಿ ವಿಳಂಬವಾಗಿರುವುದಕ್ಕೆ ಸರಕಾರದ್ದಷ್ಟೇ ಕಾಂಗ್ರೆಸ್‌ ಸಮಾನ ಹೊಣೆಯಾಗಿದೆ.ಕೊನೆಗೆ ನ್ಯಾಯಾಂಗ ನಿಂದನೆ ದಾವೆ ದಾಖಲಾದ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್‌ ತಾಕೀತು ಮಾಡಿದ ಬಳಿಕವಷ್ಟೇ ಸರಕಾರ ಲೋಕಪಾಲರ ನೇಮಕಾತಿ ಪ್ರಕ್ರಿಯೆಯನ್ನು ಚುರುಕುಗೊಳಿಸಿತು.
 
ಸಿಬಿಐ, ವಿಚಕ್ಷಣ ದಳದಂಥ ಕೇಂದ್ರೀಯ ತನಿಖಾ ಸಂಸ್ಥೆಗಳ ಮೇಲಿರುವ ವಿಶ್ವಾಸವೂ ಕಡಿಮೆಯಾಗುತ್ತಿರುವ ಸಂದರ್ಭದಲ್ಲಿ ಲೋಕಪಾಲರ ನೇಮಕಾತಿಯಾಗಿದೆ. ಲೋಕಪಾಲರ ತನಿಖಾ ವ್ಯಾಪ್ತಿ ಮತ್ತು ಅವರಿಗಿರುವ ಅಧಿಕಾರದ ಹಿನ್ನೆಲೆಯಲ್ಲಿ ಹೇಳುವುದಾದರೆ ಲೋಕಪಾಲರಿಗೆ ದೇಶದಲ್ಲಿ ಗುಣಾತ್ಮಕವಾದ ಬದಲಾವಣೆಗಳನ್ನು ತರುವ ಧಾರಾಳ ಅವಕಾಶಗಳಿವೆ. ಮುಖ್ಯವಾಗಿ ಸಾರ್ವಜನಿಕ ರಂಗದ ಭ್ರಷ್ಟಾಚಾರವನ್ನು ನಿರ್ಮೂಲನಗೊಳಿಸುವಲ್ಲಿ ಲೋಕಪಾಲರು ನಿರ್ಣಾಯಕವಾದ ಪಾತ್ರವನ್ನು ವಹಿಸಬಹುದು. ಇಂದು ದೇಶದ ಸರ್ವಾಂಗೀಣ ಅಭಿವೃದ್ಧಿಗೆ ತೊಡಕಾಗಿರುವುದೇ ಎಲ್ಲೆಡೆ ವ್ಯಾಪಿಸಿರುವ ಭ್ರಷ್ಟಾಚಾರ. ಸಮಸ್ತ ಸರಕಾರಿ ನೌಕರರು ಮಾತ್ರವಲ್ಲದೆ ಉನ್ನತ ಅಧಿಕಾರ ಸ್ಥಾನದಲ್ಲಿರುವವರನ್ನು ಕೂಡಾ ತನಿಖೆ ನಡೆಸುವ ಅಧಿಕಾರ ಲೋಕಪಾಲರಿಗಿದೆ ಎನ್ನುವುದೇ ಈ ಹುದ್ದೆ ಎಷ್ಟು ಮಹತ್ವದ್ದು ಎನ್ನುವುದನ್ನು ತಿಳಿಸುತ್ತದೆ. ಇಷ್ಟು ಕಾಲ ಇಂಥ ಒಂದು ಕಣ್ಗಾವಲು ವ್ಯವಸ್ಥೆ ಇಲ್ಲದಿರುವುದರಿಂದಲೇ ಭ್ರಷ್ಟಾಚಾರ ಸರ್ವವ್ಯಾಪಿಯಾಗಿ ದೇಶ ಹಿಂದುಳಿಯಲು ಕಾರಣವಾಯಿತು.

ಹಾಗೆಂದು ಲೋಕಪಾಲರ ನೇಮಕವಾದ ತಕ್ಷಣದಿಂದಲೇ ಜನಸಾಮಾನ್ಯರ ಬದುಕಿನಲ್ಲಿ ಭಾರೀ ದೊಡ್ಡ ಬದಲಾವಣೆಗಳಾಗಬಹುದು ಅಥವಾ ಸರಕಾರಿ ವ್ಯವಸ್ಥೆ ದಕ್ಷವಾಗಬಹುದು ಎಂಬ ನಿರೀಕ್ಷೆಗಳು ಬರೀ ಭ್ರಮೆಯಷ್ಟೆ. ಆದರೆ ಮೇಲೊಬ್ಬರು ಪ್ರಶ್ನಿಸುವವರು ಇದ್ದಾರೆ, ಅವರು ನಮ್ಮನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ ಎಂಬ ಅಂಶ ಸರಕಾರ ನಡೆಸುವವರನ್ನು ಸದಾ ಜಾಗೃತ ಸ್ಥಿತಿಯಲ್ಲಿಡುತ್ತದೆ. ಭ್ರಷ್ಟಾಚಾರದ ಆರೋಪ ಕೇಳಿ ಬಂದರೆ ನೇರವಾಗಿ ತನಿಖೆಗೊಳಪಡುವ ಭೀತಿ ಸರಕಾರಿ ಯಂತ್ರದ ದಕ್ಷತೆಯನ್ನು ಹೆಚ್ಚಿಸಿದರೆ ಅದರ ಗುಣಾತ್ಮಕವಾದ ಪರಿಣಾಮ ಜನಸಾಮಾನ್ಯರ ಮೇಲಾಗುತ್ತದೆ. ಇದು ಬಹಳ ಸಮಯ ಬೇಡುವ ಪ್ರಕ್ರಿಯೆಯಾಗಿದ್ದರೂ, ಈ ನಿಟ್ಟಿನಲ್ಲಿ ಈಗ ನಾವು ಹೆಜ್ಜೆ ಇಟ್ಟಿದ್ದೇವೆ ಎನ್ನುವುದು ಈ ಸಂದರ್ಭದಲ್ಲಿ ಮುಖ್ಯವಾಗುತ್ತದೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next