Advertisement

ನಾಲ್ಕು ಊರಿನ ಜನರಿಂದ ಇಂದು ಕಂಬದ ಮೆರವಣಿಗೆ

09:14 PM Oct 28, 2019 | Team Udayavani |

ಕೆ.ಆರ್‌.ನಗರ: ತಾಲೂಕಿನ ಹಂಪಾಪುರ ಗ್ರಾಮದಲ್ಲಿ ದೀಪಾವಳಿ ಪ್ರಯುಕ್ತ ಸಾಲು ಕಂಬದ ಮೆರವಣಿಗೆ ಅ.29ರಂದು ಮಂಗಳವಾರ ಸಂಜೆ ಅಪಾರ ಭಕ್ತರ ಸಮ್ಮುಖದಲ್ಲಿ ವೈಭವಯುತವಾಗಿ ಜರುಗಲಿದೆ.

Advertisement

ಗ್ರಾಮ ದೇವತೆ ದುರ್ಗಾಪರಮೇಶ್ವರಿ ದೇವಿಗೆ ದೀಪಾವಳಿಯಂದು ತಿಪ್ಪೂರು ಸುತ್ತಮುತ್ತಲಿನ ನಾಲ್ಕು ಗ್ರಾಮಗಳಿಂದ ನಾಲ್ಕು ಅಡಕೆ ಮರಗಳನ್ನು ಕೊಡುವ ಸಂಪ್ರದಾಯವಿದೆ. ಜಿಲ್ಲೆಯ ವಿವಿಧ ಭಾಗಗಳಿಂದ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಮೆರವಣಿಗೆಯಲ್ಲಿ ಭಾಗವಹಿಸುವರು.

ಆಕರ್ಷಕ ದೀಪಾಲಂಕಾರ: ಹಬ್ಬದ ಅಂಗವಾಗಿ ಪ್ರತಿ ವರ್ಷದಂತೆ ಗ್ರಾಮದ ಪ್ರಮುಖ ಬೀದಿಗಳನ್ನು ತಳಿರು ತೋರಣಗಳಿಂದ ಶೃಂಗರಿಸುವುದರ ಜತೆಗೆ ರಸ್ತೆಯ ಇಕ್ಕೆಲಗಳಲ್ಲಿ ಆಕರ್ಷಕ ವಿದ್ಯುತ್‌ ದೀಪಾಲಂಕಾರ ಮಾಡಿರಲಾಗಿರುತ್ತದೆ. ಸಂಜೆಯಿಂದ ಮಧ್ಯರಾತ್ರಿಯವರೆಗೆ ಈ ದೀಪಾಲಂಕಾರ ನೋಡಲು ಭಕ್ತರ ದಂಡೇ ಹರಿದು ಬರುತ್ತದೆ.

ಅಡಕೆ ಮರ ಗುರುತು: ದೀಪಾವಳಿಯಂದು ಮುಂದಿನ ಬಾರಿ ಕಡಿಯಬೇಕಾದ ಅಡಕೆ ಮರಗಳನ್ನು ಈ ಸಾಲಿನ ಹಬ್ಬದಂದು ಕಡಿಯಲು ತೆರಳಿದ ಸಂದರ್ಭದಲ್ಲಿಯೇ ಪೂಜೆ ಸಲ್ಲಿಸಿ ಗುರುತು ಮಾಡಿ ಬಿಡಲಾಗುತ್ತದೆ. ಒಂದು ವರ್ಷದ ಅವಧಿಯೊಳಗೆ ಆ ಮರಗಳು ಅತ್ಯಂತ ಎತ್ತರಕ್ಕೆ ಬೆಳೆದು ನಿಂತಿರುತ್ತವೆ.

ವಿಶೇಷ ಪೂಜೆ: ಸಂಪ್ರದಾಯದಂತೆ ಬಲಿಪಾಡ್ಯಮಿಯಂದು ಮಧ್ಯಾಹ್ನ ತಮಟೆ ಮತ್ತಿತರ ಜಾನಪದ ಕಲಾ ತಂಡಗಳೊಂದಿಗೆ ಗ್ರಾಮದ ಮುಖಂಡರೊಂದಿಗೆ ಕಳೆದ ಸಾಲಿನಲ್ಲಿ ಗುರುತು ಮಾಡಿದ್ದ ತೋಟಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿ ಅಡಕೆ ಮರಗಳನ್ನು ಕಡಿದು ತರುವ ಪದ್ಧತಿಯಿದೆ.

Advertisement

ಬಣ್ಣ ಬಣ್ಣದ ರಂಗೋಲಿ: ಮೆರವಣಿಗೆ ಸಾಗುವ ಬೀದಿಗಳಲ್ಲಿ ಮಹಿಳೆಯರು ನೀರು ಸುರಿದು ಬಣ್ಣ ಬಣ್ಣದ ರಂಗೋಲಿಗಳನ್ನು ಬಿಡಿಸಿರುತ್ತಾರೆ. ಈ ಸಂದರ್ಭದಲ್ಲಿ ಭಕ್ತರು ತಮ್ಮ ಇಷ್ಟಾರ್ಥಗಳನ್ನು ನೆರವೇರಿಸುವಂತೆ ಪ್ರಾರ್ಥಿಸಿಕೊಳ್ಳುವರು. ಜತೆಗೆ ಕಳೆದ ಬಾರಿ ಬೇಡಿಕೊಂಡಿದ್ದ ಇಷ್ಟಾರ್ಥಗಳು ನೆರವೇರಿರುವವರು ತಮ್ಮ ಹರಕೆಗಳನ್ನು ತೀರಿಸುತ್ತಾರೆ.

ಇತಿಹಾಸ-ವಿಜಯನಗರ ಸಾಮ್ರಾಜ್ಯದ ಸೀಮಾ ಗ್ರಾಮವಾದ ಹಂಪಾಪುರದ ಪಾಳೇಗಾರರಾಗಿದ್ದ ನರಸಿಂಹನಾಯಕ ಮತ್ತು ಪಕ್ಕದ ತಿಪ್ಪೂರು ಗ್ರಾಮದ ಪಾಳೇಗಾರ ತಿಪ್ಪನಾಯಕನ ನಡುವೆ ಕಲಹಗಳು ನಡೆದಿದ್ದವು. ಆ ಸಮಯದಲ್ಲಿ ಎರಡು ಗ್ರಾಮಗಳ ಗ್ರಾಮಸ್ಥರು ರಾಜಿ ಮಾಡಿಕೊಂಡರು.

ಕೊನೆಗೆ ತಿಪ್ಪೂರಿನ ಪಾಳೇಗಾರರು ಹಂಪಾಪುರದ ದುರ್ಗಾಪರಮೇಶ್ವರಿ ದೇವಿಗೆ ಪ್ರತಿ ವರ್ಷ ದೀಪಾವಳಿಯಂದು ನಾಲ್ಕು ನರಬಲಿ ನೀಡಬೇಕು ಎಂದು ಕರಾರು ಮಾಡಿಕೊಂಡರೆಂಬ ಪ್ರತೀತಿ ಇದೆ. ಕಾಲ ಕ್ರಮೇಣ ಕೋಣ ಬಲಿ ಕೊಡುತ್ತಿದ್ದರು. ಸಮಾಜ ಸುಧಾರಣೆ ಕಂಡಂತೆ ಕೋಣನ ಬದಲಿಗೆ ನಾಲ್ಕು ಅಡಕೆ ಮರಗಳನ್ನು ಕೊಡುವ ಕ್ರಮ ಪ್ರಾರಂಭವಾಗಿ ಇಂದಿಗೂ ಮುಂದುವರಿದುಕೊಂಡು ಬರುತ್ತಿದೆ.

ದೇವಿಯ ನಾಲ್ಕು ಗ್ರಾಮಗಳಾದ ಹಂಪಾಪುರ, ಮಂಚನಹಳ್ಳಿ, ಬಡಕನಕೊಪ್ಪಲು, ಸನ್ಯಾಸಿಪುರ ಗ್ರಾಮಗಳ ಜನತೆ ದೀಪಾವಳಿಯಂದು ಮಧ್ಯಾಹ್ನ ಪೂಜೆ, ಅರ್ಚನೆ, ಮಂಗಳ ವಾದ್ಯಗಳೊಂದಿಗೆ ಒಟ್ಟಾಗಿ ತಿಪ್ಪೂರಿಗೆ ತೆರಳಿ ಅಡಕೆ ಮರಗಳನ್ನು ನೆಲಕ್ಕೆ ತಾಗಿಸದಂತೆ ಸುಳಿ ಸಮೇತವಾಗಿ ಕಡಿದು ತರುತ್ತಾರೆ.

ಉಯ್ಯಾಲೋತ್ಸವ: ಸುಮಾರು 12 ಕಿ.ಮೀ. ದೂರ ಬರಿಗಾಲಿನಲ್ಲಿ ಅಡಕೆ ಮರಗಳನ್ನು ಹೊತ್ತು ತಂದು ಹಂಪಾಪುರದ ದೇವಾಲಯದ ಮುಂದೆ ಬೆಳಗಿನ ಜಾವ ಪ್ರತಿಷ್ಠಾಪಿಸಿ ಬುಧುವಾರ ಸಂಜೆ ದೇವಿಯ ಉತ್ಸವ ಮೂರ್ತಿಯನ್ನು ಇದೇ ಅಡಕೆ ಮರಗಳಿಗೆ ಕಟ್ಟಿದ ಉಯ್ಯಾಲೆಯಲ್ಲಿರಿಸಿ ವೈಭವದಿಂದ ಉಯ್ಯಾಲೋತ್ಸವ ನಡೆಸಲಾಗುತ್ತದೆ.

ದೇವಿ ರಥೋತ್ಸವ: ಮುಂದೆ ಫಾಲ್ಗುಣ ಮಾಸದಲ್ಲಿ ನಡೆಯುವ ದೇವಿಯ ರಥೋತ್ಸವ ಕಾಲದಲ್ಲಿ ಇದೇ ಅಡಕೆ ಮರಗಳಿಂದ ರಥದ ಅಲಂಕಾರ ಮಾಡಲಾಗುತ್ತದೆ. ಇಂದಿಗೂ ತಪ್ಪದೆ ಶ್ರದ್ಧಾ ಭಕ್ತಿಗಳಿಂದ ವಿಶೇಷತೆಗಳೊಂದಿಗೆ ನಾಲ್ಕು ಗ್ರಾಮಗಳ ಜನತೆ ಒಟ್ಟಿಗೆ ಸೇರಿ ದೀಪಾವಳಿಯಂದು ಈ ಉತ್ಸವವನ್ನು ಆಚರಿಸಿಕೊಂಡು ಬರುತ್ತಿದ್ದಾರೆ.

ನಾಲ್ಕು ಗ್ರಾಮಗಳ ಇತಿಹಾಸ: ಹಂಪಾಪುರ ಗ್ರಾಮದ ಪಾಳೇಗಾರನಿಗೆ ಮಂಚ ಹಾಗೂ ಬಡಕ ಎಂಬ ಇಬ್ಬರು ಸಹವರ್ತಿಗಳಿದ್ದರು. ಇವರು ಭಾವ ಮತ್ತು ಭಾವ ಮೈದುನರಾಗಿದ್ದು, ಸ್ನೇಹ, ನಿಷ್ಠೆ ಹಾಗೂ ಭಕ್ತಿಗೆ ಖ್ಯಾತರಾಗಿದ್ದರು. ಇವರ ನಿಷ್ಠೆಗೆ ಪಾಳೇಗಾರ ತನ್ನ ಗ್ರಾಮ ವ್ಯಾಪ್ತಿಯ ಉತ್ತರ ದಿಕ್ಕಿನೆಡೆ ಇಬ್ಬರಿಗೂ ಒಂದೊಂದು ಪುಟ್ಟ ಬೀದಿಗಳನ್ನು ನಿರ್ಮಿಸಿಕೊಟ್ಟಿದ್ದರು.

ಇವೇ ಮುಂದೆ ಮಂಚನಹಳ್ಳಿ ಮತ್ತು ಬಡಕನಕೊಪ್ಪಲು ಗ್ರಾಮಗಳೆಂದು ಗುರುತಿಸಲಾಯಿತು. ಋಷಿಗಳ ಶಿಷ್ಯರು ಗ್ರಾಮದಿಂದ ದಕ್ಷಿಣಕ್ಕೆ ಅನತಿ ದೂರದಲ್ಲಿ ಕಾವೇರಿ ನದಿ ತೀರದಲ್ಲಿ ತಮ್ಮ ಜಪ-ತಪ ಅನುಷ್ಠಾನಕ್ಕೆಂದು ಆಯ್ದುಕೊಂಡ ಅರಣ್ಯ ಭಾಗವನ್ನು ಸನ್ಯಾಸಿಪುರ ಎಂದು ಕರೆಯಲಾಗಿದೆ.

ಕಾಲಾನುಕ್ರಮದಲ್ಲಿ ಋಷಿ ಪರಂಪರೆ ನಶಿಸಿದಂತೆಲ್ಲಾ ಹಂಪಾಪುರದ ಮೂಲ ನಿವಾಸಿಗಳ ಗುಂಪೊಂದು ಹೋಗಿ ನೆಲೆಸಿ ಇಂದಿಗೂ ಸನ್ಯಾಸಿಪುರವಾಗಿಯೇ ಉಳಿದಿದೆ. ಐತಿಹಾಸಿಕ ಪಾಳೇಗಾರರ ಕಾಲದಿಂದ ನಡೆದುಕೊಂಡು ಬಂದಿರುವ ಕಂಬದ ಹಬ್ಬ ಇಡೀ ನಾಲ್ಕು ಗ್ರಾಮಗಳ ಇತಿಹಾಸವನ್ನು ಸಾರಿ ಹೇಳುವ ಹಬ್ಬವಾಗಿದ್ದು, ಇಂದಿಗೂ ಜನತೆ ಭಯ ಮತ್ತು ಭಕ್ತಿಯಿಂದ ಆಚರಿಸಿಕೊಂಡು ಹೋಗುತ್ತಿದ್ದಾರೆ.

* ಗೇರದಡ ನಾಗಣ್ಣ

Advertisement

Udayavani is now on Telegram. Click here to join our channel and stay updated with the latest news.

Next