ಬೆಳ್ತಂಗಡಿ: ಭಕ್ತರ ದೋಷಗಳನ್ನು ಗ್ರಹಣ ಮಾಡಿ, ಸಂಕಷ್ಟ ಪರಿಹರಿಸುವ ಶಕ್ತಿ ಹೊಂದಿರುವ ಸಾನ್ನಿಧ್ಯಗಳು ತೀರ್ಥ ಕ್ಷೇತ್ರಗಳಾಗಿ ಬೆಳಗುತ್ತವೆ, ಬೆಳೆಯುತ್ತವೆ. ಸಾರ್ಥಕ ಬದುಕಿಗೆ ದಾರಿದೀಪವಾಗುತ್ತವೆ. ತಮ್ಮಲ್ಲಿರುವ ಕೋಪ, ದ್ವೇಷ, ಅಸೂಯೆ ಮೊದಲಾವುಗಳನ್ನು ಕಳಚಿ, ದುಃಖ, – ದುಮ್ಮಾನಗಳನ್ನು ಮರೆಯಲು ಧರ್ಮಸ್ಥಳ ಕ್ಷೇತ್ರಕ್ಕೆ ಭಕ್ತರು ಬರುತ್ತಾರೆ ಎಂದು ಧರ್ಮ ಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರು ಹೇಳಿದರು.
ಧರ್ಮಸ್ಥಳದಲ್ಲಿ ಗುರುವಾರ ರಾತ್ರಿ ಶಿವರಾತ್ರಿ ಜಾಗರಣೆಗೆ ಬಂದ ಪಾದಯಾತ್ರಿ ಗಳಿಗೆ ಅವರು ಶುಭ ಹಾರೈಸಿ, ಶಿವ ಭಕ್ತರ ಸರ್ವ ದೋಷ ಸ್ವೀಕರಿಸಿ ವಿಷಕಂಠನಾಗಿ ಭಕ್ತರ ಅಭೀಷ್ಟ ಈಡೇರಿಸಿ ಮಂಗಳಕಾರಕನಾಗಿ ಭಕ್ತರನ್ನು ಅನುಗ್ರಹಿಸುತ್ತಾನೆ ಎಂದರು.
ಅನೇಕ ಮಂದಿ ಪಾದಯಾತ್ರಿಗಳು ಒಂದೆರಡು ದಿನ ಮುಂಚಿತವಾಗಿ ಬಂದು ದೇವರ ದರ್ಶನ ಮಾಡಿ ಇತರ ಭಕ್ತರಿಗೆ ಅನುಕೂಲ ಮಾಡಿದ್ದಾರೆ ಎಂದು ಡಾ| ಹೆಗ್ಗಡೆಯವರು ಮೆಚ್ಚುಗೆ ವ್ಯಕ್ತಪಡಿಸಿದರು. ಪಾದಯಾತ್ರಿಗಳಲ್ಲಿರುವ ಶಿಸ್ತು, ಸಂಯಮ, ಸ್ವತ್ಛತೆಯ ಕಾಳಜಿ ಇತ್ಯಾದಿಗಳನ್ನು ಶ್ಲಾ ಸಿ ಎಲ್ಲರಿಗೂ ಪಾದಯಾತ್ರೆಯ ಫಲ ಸಿಗಲಿ. ಮಳೆ-ಬೆಳೆ ಚೆನ್ನಾಗಿ ಆಗಲಿ. ಎಲ್ಲೆಲ್ಲೂ ಸುಖ- ಶಾಂತಿ-ನೆಮ್ಮದಿ ನೆಲೆಸಿ ಲೋಕಕಲ್ಯಾಣ ವಾಗಲಿ ಎಂದು ಹಾರೈಸಿದರು.
ಪಾದಯಾತ್ರಿಗಳ ತಂಡದ ನಾಯಕರಾದ ಬೆಂಗಳೂರಿನ ಹನುಮಂತಪ್ಪ ಸ್ವಾಮೀಜಿ ಮತ್ತು ಶಶಿಕುಮಾರ್ ಹಾಗೂ ಇತರರನ್ನು ಡಾ| ಹೆಗ್ಗಡೆಯವರು ಗೌರವಿಸಿದರು. ಹೇಮಾವತಿ ವೀ. ಹೆಗ್ಗಡೆ, ನಾಗರಾಜ ರೆಡ್ಡಿ ಮತ್ತು ಮರಿಯಪ್ಪ ಗುರು ಮೊದಲಾದವರು ಉಪಸ್ಥಿತರಿದ್ದರು.
ಶಾಂತಿ-ನೆಮ್ಮದಿ
ನೇತ್ರಾವತಿ ನದಿಯಲ್ಲಿ ಮಿಂದು ಬಹಿರಂಗ ಪರಿಶುದ್ಧಿಯೊಂದಿಗೆ, ಉಪವಾಸ, ವ್ರತ-ನಿಯಮಗಳ ಪಾಲನೆಯೊಂದಿಗೆ ಅಂತರಂಗ ಶುದ್ಧಿಯಿಂದ ದೇವರನ್ನು ಪ್ರಾರ್ಥಿಸಿದಾಗ ಸಕಲ ದೋಷಗಳ ನಿವಾರಣೆಯಾಗಿ ಶಾಂತಿ, ನೆಮ್ಮದಿ ನೆಲೆಸುತ್ತದೆ.
- ಡಾ| ಡಿ. ವೀರೇಂದ್ರ ಹೆಗ್ಗಡೆ ಧರ್ಮಸ್ಥಳದ ಧರ್ಮಾಧಿಕಾರಿ