Advertisement

ಅಶಕ್ತರ ಮನೆಗೆ ಪಿಎಫ್‌ ಇಲಾಖೆ

01:00 AM Feb 11, 2019 | Team Udayavani |

ಮಂಗಳೂರು: ನಡೆದಾಡುವುದಕ್ಕೆ ಅಶಕ್ತರಾದ ವಯೋವೃದ್ಧರು, ಅನಾರೋಗ್ಯದಿಂದ ಹಾಸಿಗೆ ಹಿಡಿದವರು ಹಾಗೂ ವಿಕಲಚೇತನ ಮಾಸಿಕ ಪಿಂಚಣಿದಾರರ ಮನೆ ಬಾಗಿಲಿಗೇ ತೆರಳಿ “ಡಿಜಿಟಲ್‌ ಜೀವಿತ ಪ್ರಮಾಣ ಪತ್ರ’ ವಿತರಿಸುವ ಕಾರ್ಯವನ್ನು ಮಂಗಳೂರು ಪ್ರಾದೇಶಿಕ ಭವಿಷ್ಯನಿಧಿ ಕಚೇರಿ ಪ್ರಾರಂಭಿಸಿದೆ. ಭವಿಷ್ಯನಿಧಿ ಇಲಾಖೆ ಇತಿಹಾಸದಲ್ಲೇ ಮೊದಲ ಬಾರಿಗೆ ಮಾನವೀಯ ನೆಲೆಯಲ್ಲಿ ಪಿಂಚಣಿ ಫಲಾನುಭವಿಗಳಿಗೆ ನೆರವಾಗುವ ಈ ವಿಭಿನ್ನ ಪ್ರಯತ್ನಕ್ಕೆ ಜಿಲ್ಲೆ ಸಾಕ್ಷಿಯಾಗಿದೆ. 

Advertisement

ಡಿಜಿಟಲ್‌ ಪ್ರಮಾಣಪತ್ರ ಬರುವುದಕ್ಕೆ ಮೊದಲು ನಿಗದಿತ ನಮೂನೆಯಲ್ಲಿ ಭರ್ತಿ ಮಾಡಿ ಪ್ರಮಾಣಪತ್ರ ನೀಡಲಾಗುತ್ತಿತ್ತು. ಆಗ ಅಶಕ್ತರು ಅರ್ಜಿಗೆ ತಮ್ಮ ಸಹಿ ಮಾಡಿ ಬ್ಯಾಂಕ್‌ ಅಥವಾ ಪಿಂಚಣಿ ಕಚೇರಿಗೆ ಸಲ್ಲಿಸಬಹುದಿತ್ತು. ಈಗ ಡಿಜಿಟಲ್‌ ಪ್ರಮಾಣಪತ್ರ ಕಡ್ಡಾಯವಾಗಿದ್ದು, ಬಯೋಮೆಟ್ರಿಕ್ಸ್‌ ಮಾಡಿಸುವ ಸಂಬಂಧ ಫಲಾನುಭವಿಗಳು ಸಂಬಂಧಪಟ್ಟ ಬ್ಯಾಂಕ್‌ಗಳಿಗೆ ಖುದ್ದು ಹಾಜರಾಗಲೇಬೇಕು. ಇದರಿಂದ ನಡೆದಾಡುವುದಕ್ಕೆ ಅಸಾಧ್ಯವಾದವರು, ಅನಾರೋಗ್ಯಕ್ಕೆ ಒಳಗಾದವರು, ವಿಕಲಚೇತನ ಪಿಂಚಣಿದಾರರಿಗೆ ತುಂಬಾ ತೊಂದರೆಯಾಗುತ್ತಿತ್ತು.

ನಾಗರಿಕ ಸ್ನೇಹಿ ಉಪಕ್ರಮ
ಈ ಸಮಸ್ಯೆ ತಪ್ಪಿಸಲು ಮಂಗಳೂರು ಪ್ರಾದೇಶಿಕ ಭವಿಷ್ಯ ನಿಧಿ ಕಚೇರಿ ಈಗ ಹಿರಿಯ ನಾಗರಿಕ ಸ್ನೇಹಿ ಉಪಕ್ರಮ ಕೈಗೊಂಡಿದೆ. ಮಂಗಳೂರು ಪ್ರಾದೇಶಿಕ ಭವಿಷ್ಯ ನಿಧಿ ಆಯುಕ್ತ ಮಾರುತಿ ಭೋಯಿ ಈ ವಿನೂತನ ಪ್ರಯತ್ನ ವೊಂದಕ್ಕೆ ಮುಂದಾಗಿರುವುದು ವಿಶೇಷ. ಅದರಂತೆ ಅಶಕ್ತ ಪಿಂಚಣಿದಾರರ ಮನೆಗಳಿಗೆ ತಮ್ಮ ಇಲಾಖೆ ಸಿಬಂದಿಯನ್ನೇ ಕಳುಹಿಸಿ ಫಲಾನುಭವಿಗಳಿಂದ ಡಿಜಿಟಲ್‌ ಮಾದರಿ ಜೀವಿತ ಪ್ರಮಾಣ ಪತ್ರ ಅರ್ಜಿಗಳನ್ನು ಭರ್ತಿ ಮಾಡಿಸಿಕೊಳ್ಳುವ ತೀರ್ಮಾನ ಕೈಗೊಂಡಿದ್ದಾರೆ. ಜಿಲ್ಲೆಯಾದ್ಯಂತ ಜ.30ರಿಂದ ಇಲಾಖೆ ಸಿಬಂದಿಯೇ ಡಿಜಿಟಲ್‌ ಜೀವಿತ ಪ್ರಮಾಣ ಪತ್ರ ಪಡೆಯುವುದಕ್ಕೆ ಅಶಕ್ತ ಪಿಂಚಣಿದಾರರ ಮನೆಗಳಿಗೆ ತೆರಳುವ ಕಾರ್ಯ ಪ್ರಾರಂಭಿಸಿದ್ದಾರೆ. 

ವಿಧಾನ
ಅಶಕ್ತ ಪಿಂಚಣಿದಾರರು ಸ್ವತಃ ಅಥವಾ ತಮ್ಮ ಪ್ರತಿನಿಧಿಗಳ  ಮೂಲಕ ಮಂಗಳೂರಿನಲ್ಲಿರುವ ಪ್ರಾದೇಶಿಕ ಕಚೇರಿಯನ್ನು ಮೊಬೈಲ್‌ ಮೂಲಕ ಸಂಪರ್ಕಿಸಿ ಅಗತ್ಯ ಮಾಹಿತಿ ಒದಗಿಸಬೇಕು. ಬಳಿಕ ನಿರ್ದಿಷ್ಟ ದಿನಾಂಕ ನಿಗದಿಪಡಿಸಿ ಮೊಬೈಲ್‌ ಮೂಲಕ ತಿಳಿಸಲಾಗುತ್ತದೆ. ಅಂದು ಕಚೇರಿಯ ಸಿಬಂದಿ ಅಗತ್ಯ ಉಪಕರಣ ಸಹಿತ ಸಹಿತ ತೆರಳಿ ಬಯೋಮೆಟ್ರಿಕ್ಸ್‌ ದಾಖಲಿಸಿಕೊಳ್ಳುತ್ತಾರೆ. ಪೂರಕ ಪ್ರಕ್ರಿಯೆಗಳು ಮುಗಿದು ಜೀವಿತ ಪ್ರಮಾಣ ದಾಖಲಾಗುತ್ತದೆ.  

ಅಶಕ್ತರು ಸಂಪರ್ಕಿಸಿ
ದೈಹಿಕವಾಗಿ ಅಶಕ್ತರಾಗಿ ಡಿಜಿಟಲ್‌ ಜೀವಿತ ಪ್ರಮಾಣಪತ್ರ ಸಲ್ಲಿಸಲು ಸಾಧ್ಯವಾಗದ ಪಿಂಚಣಿದಾರರ ನಿವಾಸಕ್ಕೆ ತೆರಳಿ ಪ್ರಮಾಣಪತ್ರ ಮಾಡಿಸುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಅಶಕ್ತ ಪಿಂಚಣಿದಾರರು ತಮ್ಮ ಪ್ರತಿನಿಧಿಗಳ ಮೂಲಕ ಮಂಗಳೂರಿನಲ್ಲಿರುವ ಪ್ರಾದೇಶಿಕ ಕಚೇರಿಯನ್ನು ಸಂಪರ್ಕಿಸಿದರೆ ಸಿಬಂದಿ ಅವರ ಮನೆಗೆ ಹೋಗಿ ಡಿಜಿಟಲ್‌ ಜೀವಿತ ಪ್ರಮಾಣ ಪತ್ರ ಮಾಡುತ್ತಾರೆ.
-ಮಾರುತಿ ಭೋಯಿ, ಪ್ರಾದೇಶಿಕ ಭವಿಷ್ಯನಿಧಿ ಆಯುಕ್ತರು, ಮಂಗಳೂರು ಕಚೇರಿ

Advertisement

ಅತ್ಯುತ್ತಮ ಸೇವೆ
ಇದು ಅತ್ಯುತ್ತಮ ಸೇವೆಯಾಗಿದೆ. ನನ್ನ ಅಮ್ಮ ಜೂಲಿಯಾನ ಲೋಬೋ ಅವರಿಗೆ 70 ವರ್ಷ. ನಡೆದಾಡಲು ಸಾಧ್ಯವಾಗುತ್ತಿಲ್ಲ. ಪಿಎಫ್‌ ಕಚೇರಿಯವರು ನಮ್ಮ ಮನವಿಗೆ ಸ್ಪಂದಿಸಿ ಮನೆಗೆ ಬಂದು ಡಿಜಿಟಲ್‌ ಪ್ರಮಾಣ ಪತ್ರ ಮಾಡಿಸಿದ್ದಾರೆ. ಈ ಸೇವೆ ಆಶಕ್ತರಿಗೆ ಒಂದು ವರದಾನವಾಗಿದೆ.
– ಕ್ಲಾರಾ ಪಾçಸ್‌, ಮರೋಳಿ

Advertisement

Udayavani is now on Telegram. Click here to join our channel and stay updated with the latest news.

Next