Advertisement

ಬಲಿ ಪಡೆಯುತ್ತಿರುವ ಕೀಟನಾಶಕಗಳು

01:48 PM Dec 04, 2017 | |

ಈ ಪೀಡೆನಾಶಕಗಳ ಅತಿಬಳಕೆಯಿಂದಾಗಿ ಪಂಜಾಬಿನಲ್ಲಿ ಸಾವಿರಾರು ರೈತರು ಕ್ಯಾನ್ಸರಿಗೆ ಬಲಿ ಆಗುತ್ತಿರುವುದು ಜಾಗತಿಕ ಮಟ್ಟದಲ್ಲಿ ಸುದ್ದಿಯಾಗಿದೆ. ಹಾಗೆಯೇ ಕೇರಳದ ಕಾಸರಗೋಡು ಜಿಲ್ಲೆಯ ಪಡ್ರೆಯಲ್ಲಿ ಮತ್ತು ಕರ್ನಾಟಕದ ದಕ್ಷಿಣಕನ್ನಡದ ಪಟ್ರಮೆಯಲ್ಲಿ ಗೇರುತೋಟಗಳ ಮೇಲೆ ಘೋರವಿಷ ಎಂಡೋಸಲ್ಫಾನನ್ನು ಇಪ್ಪತ್ತು ವರುಷ ಹೆಲಿಕಾಪ್ಟರಿನಿಂದ ಸಿಂಪಡಿಸಿದ್ದರಿಂದಾಗಿ ಸಾವಿರಾರು ಜನರು ಭೀಕರ ರೋಗಗಳಿಗೆ ಬಲಿಯಾಗುತ್ತಿದ್ದಾರೆ. 

Advertisement

“ಇದೇ ವರ್ಷ ಅಕ್ಟೋಬರ್‌ ಒಂದನೇ ತಾರೀಖೀನಂದು ಪೆಸ್ಟಿಸೈಡ್‌ ವಿಷಕ್ಕೆ ನನ್ನ ಅಪ್ಪ ಬಲಿಯಾದ ನಂತರ ನಮ್ಮ ಹಳ್ಳಿಯಲ್ಲಿ ಪೆಸ್ಟಿಸೈಡ್‌ ಸಿಂಪಡಿಸಲು ಜನರು ಹೆದರುತ್ತಿದ್ದಾರೆ. ಜನರ ಪ್ರಾಣಕ್ಕೆ ಕುತ್ತಾಗುವಂತಹ ಪೆಸ್ಟಿಸೈಡ್‌ ಕ್ರಿಮಿ ನಾಶಕದ ಬಳಕೆ ಮಾಡಲಿಕ್ಕೆ ಸರಕಾರ ಯಾಕೆ ಬಿಡುತ್ತಿದೆ?’ ಇದು, 20 ವರುಷ ವಯಸ್ಸಿನ ಪ್ರತೀಕ್ಷಾ ಜಿ. ಫ‌ುಲ್ಮಾಲಿ ಅವಳ ಪ್ರಶ್ನೆ. ಆಕೆ ಮಹಾರಾಷ್ಟ್ರದ ಯವತ್ಮಾಲ್ ಜಿಲ್ಲೆಯ ಕಲಂಬ… ತಾಲೂಕಿನ ಸವರ್ಗಾಂವ್‌ ಹಳ್ಳಿಯವಳು.

ಮಹಾರಾಷ್ಟ್ರದ ಒಣಭೂಮಿ ವಿದರ್ಭದಲ್ಲಿ ರೈತರ ಸಾವುಗಳಿಗೆ ಕೊನೆಯೇ ಇಲ್ಲ ಎಂಬಂತಾಗಿದೆ. ಅಲ್ಲಿ 2001ರಿಂದೀಚೆಗೆ ಸಾವಿರಾರು ರೈತರ ಆತ್ಮಹತ್ಯೆ ಪ್ರಕರಣಗಳು ವರದಿಯಾಗಿವೆ.  ಇದೀಗ ಜುಲೈ 2017ರಿಂದೀಚೆಗೆ ರಾಸಾಯನಿಕ ಪೀಡೆನಾಶಕಗಳ ವಿಷದಿಂದಾಗಿ 35 ರೈತರು ಮತ್ತು ಕೃಷಿಕೆಲಸಗಾರರ ಸಾವು ಸಂಭವಿಸಿವೆ. ಇವರಲ್ಲಿ ಬಹುಪಾಲು ಜನರು ಹತ್ತಿ ಮತ್ತು ಸೋಯಾಬೀನ್‌ ಹೊಲಗಳಲ್ಲಿ ಮಾರಕ ಪೀಡೆನಾಶಕಗಳನ್ನು ಸಿಂಪಡಣೆ ಮಾಡುತ್ತಿದ್ದವರು; ಆಗ ಶ್ವಾಸಕೋಶಗಳಿಗೆ ನುಗ್ಗಿದ ಘೋರ ವಿಷಕ್ಕೆ ಬಲಿಯಾದವರು. ವಿದರ್ಭ ಪ್ರದೇಶದ ಯವತ್ಮಾಲ್, ನಾಗಪುರ, ಅಕೋಲಾ ಮತ್ತು ಅಮರಾವತಿ ಜಿಲ್ಲೆಗಳಲ್ಲಿ ಸಾವುಗಳ ಸರಣಿ. ಯವತ್ಮಾಲಿನ ವಸಂತರಾವ್‌ ನಾಯಕ್‌ ಸರಕಾರಿ ವೈದ್ಯಕೀಯ ಕಾಲೇಜಿನ ಆಸ್ಪತ್ರೆಗೆ ಜುಲೈ 2017ರಿಂದ ವಿಷಬಾಧೆಯ ಚಿಕಿತ್ಸೆಗಾಗಿ 479 ಜನರು ದಾಖಲಾಗಿದ್ದಾರೆ ಅಂದರೆ ಅಲ್ಲಿ ನಡೆದಿರುವ ಅನಾಹುತ ಎಂಥದೆಂದು ಅಂದಾಜು ಮಾಡಿಕೊಳ್ಳಿ. 

ಈ ಎಲ್ಲ ಘಟನೆಗಳ ನಂತರ ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫ‌ಡ್ನವಿಸ್‌ ರೈತರ ಸಾವುಗಳ ಬಗ್ಗೆ ವಿಶೇಷ ತನಿಖಾ ತಂಡದಿಂದ ತನಿಖೆ ನಡೆಸಲು ಆದೇಶಿಸಿದ್ದಾರೆ. ಈ ನಡುವೆ, ಆಶಾ (ಸುಸ್ಥಿರ ಮತ್ತು ಪರಿಪೂರ್ಣ ಕೃಷಿ ವೇದಿಕೆ) ಎಂಬ ರೈತರ ಸಂಘಟನೆಗಳ ರಾಷ್ಟ್ರವ್ಯಾಪಿ ಜಾಲದ ತಂಡವು ಅಕ್ಟೋಬರ್‌ 9 ಮತ್ತು 10ರಂದು ಕಲಂಬ್‌ ಹಾಗೂ ಆರ್ನಿ ತಾಲೂಕುಗಳಿಗೆ ಭೇಟಿಯಿತ್ತು, ತನ್ನ ಸತ್ಯಶೋಧನಾ ವರದಿಯನ್ನು 12 ಅಕ್ಟೋಬರ್‌ 2017ರಂದು ಬಿಡುಗಡೆ ಮಾಡಿದೆ. ಆ ವರದಿಯಲ್ಲಿ, ರೈತರು ಸಿಂಪಡಿಸಿದ ಈ ಮಹಾವಿಷಕಾರಿ ಪೀಡೆನಾಶಕಗಳೇ ರೈತರ ಸಾವಿಗೆ ಕಾರಣ ಎಂದು ದಾಖಲಿಸಲಾಗಿದೆ: ಮೊನೊಕ್ರೊಟೊಫಾಸ್‌, ಆಕ್ಸಿಡೆಮೆಟೊನ್‌-ಮಿಥೈಲ್, ಅಸೆಫೇಟ್, ಪ್ರೊಫೆನೊಫೋಸ್‌, ಫಿಪ್ರೊನಿಲ್, ಇಮಿಡಾಕ್ಲೊಪ್ರಿಡ್‌ ಮತ್ತು ಸೈಪರ್ಮೆಥ್ರಿನ್‌. ತದನಂತರ, 1 ನವಂಬರ್‌ 2017ರಂದು, ತಕ್ಷಣದ ಕ್ರಮವಾಗಿ ಈ ಕೆಳಗಿನ ರಾಸಾಯನಿಕಗಳಿರುವ ಪೀಡೆನಾಶಕಗಳ ಬಳಕೆಯನ್ನು ಯವತ್ಮಾಲ…, ಅಕೊಲಾ, ಅಮ್ರಾವತಿ, ಬುಲ್ದಾನಾ ಮತ್ತು ವಾಸಿಂಗಳಲ್ಲಿ 60 ದಿನಗಳ ಅವಧಿಗೆ ಮಹಾರಾಷ್ಟ್ರ ಸರಕಾರ ನಿಷೇಧಿಸಿದೆ: ಅಸೆಫೋಟ…, ಮೊನೊಕ್ರೊಟೊಫಾಸ್‌, ಡೈಯಾ ಫೆನಿಯುರೊನ್‌, ಪೊ›ಫೆನೊಫೋನ್‌ ಮತ್ತು ಸೈಪರ್ಮೆಥ್ರಿನ್‌.

ರಾಸಾಯನಿಕ ಪೀಡೆನಾಶಕಗಳ ವಿಷಬಾಧೆಯಿಂದಾಗಿ ಜನರು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಬೇಕಾದ ಪ್ರಕರಣ ಇದೇ ಮೊದಲಲ್ಲ. ಈ ಪೀಡೆನಾಶಕಗಳ ಅತಿಬಳಕೆಯಿಂದಾಗಿ ಪಂಜಾಬಿನಲ್ಲಿ ಸಾವಿರಾರು ರೈತರು ಕ್ಯಾನ್ಸರಿಗೆ ಬಲಿ ಆಗುತ್ತಿರುವುದು ಜಾಗತಿಕ ಮಟ್ಟದಲ್ಲಿ ಸುದ್ದಿಯಾಗಿದೆ. ಹಾಗೆಯೇ ಕೇರಳದ ಕಾಸರಗೋಡು ಜಿಲ್ಲೆಯ ಪಡ್ರೆಯಲ್ಲಿ ಮತ್ತು ಕರ್ನಾಟಕದ ದಕ್ಷಿಣಕನ್ನಡದ ಪಟ್ರಮೆಯಲ್ಲಿ ಗೇರುತೋಟಗಳ ಮೇಲೆ ಘೋರವಿಷ ಎಂಡೋಸಲ್ಫಾನನ್ನು ಇಪ್ಪತ್ತು ವರುಷ ಹೆಲಿಕಾಪ್ಟರಿನಿಂದ ಸಿಂಪಡಿಸಿದ್ದರಿಂದಾಗಿ ಸಾವಿರಾರು ಜನರು ಭೀಕರ ರೋಗಗಳಿಗೆ ಬಲಿಯಾಗುತ್ತಿದ್ದಾರೆ. ಯವತ್ಮಾಲ… ಜಿಲೆಯಲ್ಲಿಯೇ ಕಳೆದ ವರುಷ ಪೀಡೆನಾಶಕಗಳ ವಿಷಪರಿಣಾಮದಿಂದಾಗಿ ಆರು ರೈತರು ಸತ್ತಿದ್ದಾರೆ; ಕನಿಷ್ಠ 176 ಜನರು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಬೇಕಾಯಿತು. ರಾಷ್ಟ್ರೀಯ ಅಪರಾಧಗಳ ದಾಖಲೆಗಳ ಬ್ಯೂರೋದ ಅಂಕೆಸಂಖ್ಯೆಗಳ ಪ್ರಕಾರ, 2015ರಲ್ಲಿ ನಮ್ಮ ದೇಶದಲ್ಲಿ ಪೀಡೆನಾಶಕಗಳ ವಿಷಪರಿಣಾಮದಿಂದ ಮೃತರಾದವರು ಸಂಖ್ಯೆ 7,060.

Advertisement

ಇಷ್ಟೆಲ್ಲ ಸಾವುಗಳ ಆಗಿರುವಾಗ ಸರಕಾರ ಏನು ಮಾಡುತ್ತಿದೆ? ಈ ವರುಷ ಯವತ್ಮಾಲ… ಜಿಲ್ಲೆಯಲ್ಲಿ ರೈತರ ಮರಣಕ್ಕೆ ಕಾರಣವಾದ ಮೊನೊಕ್ರೊಟೊಫಾಸ್‌ ಮತ್ತು ಆಕ್ಸಿಡೆಮೆಟೊನ್‌-ಮಿಥೈಲ… ಇವು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯು.ಎಚ….ಓ.) ಪ್ರಕಾರ ಕ್ಲಾಸ್‌-1 ಪೀಡೆನಾಶಕಗಳೆಂದು ವರ್ಗೀಕರಿಸಲ್ಪಟ್ಟಿವೆ. ಇದಕ್ಕೆ ಕಾರಣ ಅವುಗಳ ಘೋರ ವಿಷ! ಒಬ್ಬ ಸಾಮಾನ್ಯ ವಯಸ್ಕ ವ್ಯಕ್ತಿಯನ್ನು ಕೊಲ್ಲಲು ಕ್ಲಾಸ್‌-1 ಪೀಡೆನಾಶಕಗಳ ಕೆಲವೇ ಗ್ರಾಮ… ಸಾಕು! ಯುರೋಪಿಯನ್‌ ಯೂನಿಯನ್‌ ಸಹಿತ ಹಲವು ದೇಶಗಳು ಇವುಗಳ ಬಳಕೆ ನಿಷೇಧಿಸಿವೆ. ಆದರೆ ಭಾರತದಲ್ಲಿ ಇವುಗಳ ಬಳಕೆ ವ್ಯಾಪಕ! 

ಪೀಡೆನಾಶಕಗಳ ನೋಂದಾವಣೆಯ ಜವಾಬ್ದಾರಿ ಕೇಂದ್ರ ಕೀಟನಾಶಕಗಳ ಮಂಡಲಿ ಮತ್ತು ನೋಂದಾವಣೆ ಸಮಿತಿಯದ್ದು (ಸಿಐಬಿಆರ್ಸಿ). ಅಲ್ಲಿ ನೋಂದಾವಣೆ ಆಗಿರುವ ಕ್ಲಾಸ್‌-1 ಪೀಡೆನಾಶಕಗಳ ಸಂಖ್ಯೆ 18. ಇವೆಲ್ಲ ಭಾರತದ ಉದ್ದಗಲದಲ್ಲಿ ಬಳಕೆಯಾಗುತ್ತಿವೆ. ಕೇಂದ್ರ ಕೃಷಿ ಮತ್ತು ಕೃಷಿಕ ಕಲ್ಯಾಣ ಮಂತ್ರಾಲಯದ ಅಂಗಸಂಸ್ಥೆಯ ಮಾಹಿತಿಯ ಅನುಸಾರ, ಭಾರತದಲ್ಲಿ 2015-16ರಲ್ಲಿ ಒಟ್ಟು ಬಳಕೆಯಾದ 7,717 ಟನ್‌ ಕೀಟನಾಶಕಗಳಲ್ಲಿ ಶೇ.30ರಷ್ಟು (2,254 ಟನ…) ಈ ಮಾರಕ ಕ್ಲಾಸ್‌-1 ಕೀಟನಾಶಕಗಳಾಗಿವೆ!

2003ರಲ್ಲೇ, ಅನುಪಮ… ವರ್ಮಾ (ಭಾರತೀಯ ಕೃಷಿ ಸಂಶೋಧನಾ ಸಂಸ್ಥೆಯ ನಿವೃತ್ತ ಪೊ›ಫೆಸರ್‌) ಚೇರ್ಮನ್‌ ಆಗಿದ್ದ ಪರಿಣತರ ಸಮಿತಿಯನ್ನು ಕೇಂದ್ರ ಸರಕಾರ ನೇಮಿಸಿತ್ತು.  ಇತರ ಹಲವು ದೇಶಗಳಲ್ಲಿ ನಿಷೇಧಿತವಾದ, ಆದರೆ ಭಾರತದಲ್ಲಿ ಬಳಕೆಯಲ್ಲಿರುವ 66 ಪೀಡೆನಾಶಕಗಳ ಪರಿಶೀಲನೆಗಾಗಿ. ಆ ಸಮಿತಿಯ ಶಿಫಾರಸ್‌ ಪ್ರಕಾರ, 2018 ಮತ್ತು 2021ರಲ್ಲಿ ಒಟ್ಟು ಏಳು ಪೀಡೆನಾಶಕಗಳನ್ನು ನಿಷೇಧಿಸಲು ಕೇಂದ್ರ ಮಂತ್ರಾಲಯವು ಯೋಚಿಸುತ್ತಿದೆ. ಆದರೆ, ಆ ಏಳು ಪೀಡೆನಾಶಕಗಳಲ್ಲಿ, ಯವತ್ಮಾಲಿನಲ್ಲಿ ರೈತರ ಬಲಿ ತಗೊಂಡ ಆ ಎರಡು ಘೋರ ಪೀಡೆನಾಶಕಗಳು ಸೇರಿಲ್ಲ!

ಪ್ರತಿ ವರುಷ ಭಾರತದಲ್ಲಿ ಪೀಡೆನಾಶಕ ವಿಷಬಾಧೆಯ ಸುಮಾರು 10,000 ಪ್ರಕರಣಗಳು ವರದಿಯಾಗಿವೆ. ಈ ಪ್ರಮಾಣದಲ್ಲಿ ಪೀಡೆನಾಶಕಗಳ ಅಸುರಕ್ಷಿತ ಬಳಕೆಗೆ ಕೇಂದ್ರ ಮಂತ್ರಾಲಯ ಮತ್ತು ರಾಜ್ಯ ಕೃಷಿ ಇಲಾಖೆಗಳೇ ಕಾರಣ ಎನ್ನುತ್ತಾರೆ ಡೆಲ್ಲಿಯ ಸೆಂಟರ್‌ ಫಾರ್‌ ಸೈನ್ಸ್‌ ಆಂಡ್‌ ಎನ್ವಿರಾನ್ಮೆಂಟಿನ ಉಪಮಹಾನಿರ್ದೇಶಕ ಚಂದ್ರಭೂಷಣ್‌. ನಮ್ಮ ದೇಶದಲ್ಲಿ ಮಾರಕ ಪೀಡೆನಾಶಕಗಳ ಬಳಕೆಯ ಅವಾಂತರಗಳ ಅರಿವಾದರೆ, ರೈತರ ಹಾಗೂ ಅವರ ಕುಟುಂಬದವರ ಎದೆಯೊಡೆದು ಹೋದೀತು. ವಿವೇಚನಾರಹಿತ ಬಳಕೆ ಮತ್ತು ಸುರಕ್ಷತಾ ನಿಯಮಗಳ ಬಗ್ಗೆ ಅಸಡ್ಡೆ  ಇದರಿಂದಾಗಿ ನೂರಾರು ರೈತರು ಮತ್ತು ಕೃಷಿ ಕೆಲಸಗಾರರು ಪೀಡೆನಾಶಕಗಳ ವಿಷಕ್ಕೆ ಸುಲಭ ಬಲಿ ಆಗುತ್ತಿದ್ದಾರೆ.

ಇಂತಹ ಪರಿಸ್ಥಿತಿಯಲ್ಲಿ, ಪ್ರತೀಕ್ಷಾಳ ಪ್ರಶ್ನೆಗೆ ಉತ್ತರ ನೀಡಬೇಕಾದ ಸವಾಲು ನಮ್ಮೆದುರಿಗಿದೆ. ಘೋರ ವಿಷಗಳಾದ ಕ್ಲಾಸ್‌-1 ಪೀಡೆನಾಶಕಗಳನ್ನು ಸರಕಾರ ನಿಷೇಧಿಸುವ ವರೆಗೆ ನಮ್ಮ ರೈತರು ಕಾಯಬೇಕೆ ಅಥವಾ, ತಮ್ಮ ಪ್ರಾಣ ರಕ್ಷಣೆಗಾಗಿ ಅಂತಹ ರಾಸಾಯನಿಕ ವಿಷಗಳ ಬಳಕೆ ಕೈಬಿಡಬೇಕೇ? ಈ ಪ್ರಶ್ನೆಗಳ ಉತ್ತರ ರೈತರ ಕೈಯಲ್ಲಿದೆ. 

ಅಡ್ಡೂರು ಕೃಷ್ಣ ರಾವ್

Advertisement

Udayavani is now on Telegram. Click here to join our channel and stay updated with the latest news.

Next