Advertisement

ಜಾಹೀರಾತು ಫ‌ಲಕಗಳ ಶಾಶ್ವತ ಬ್ಯಾನ್‌!

12:26 PM Aug 26, 2018 | Team Udayavani |

ಬೆಂಗಳೂರು: ರಾಜಧಾನಿಯಲ್ಲಿ ಈಗಾಗಲೇ ಒಂದು ವರ್ಷದ ಮಟ್ಟಿಗೆ ಎಲ್ಲ ವಿಧದ ಜಾಹೀರಾತು ಪ್ರದರ್ಶನ ನಿಷೇಧಿಸಿರುವ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ, ಇದೀಗ ಜಾಹೀರಾತು ಫ‌ಲಕಗಳನ್ನು ಶಾಶ್ವತವಾಗಿ ನಿಷೇಧಿಸುವ ಕಠಿಣ ನಿರ್ಧಾರ ಕೈಗೊಳ್ಳಲು ಗಟ್ಟಿ ಮನಸ್ಸು ಮಾಡಿದೆ. ಈ ಕುರಿತಂತೆ ಶೀಘ್ರವೇ ಅಧಿಕೃತ ಆದೇಶ ಕೂಡ ಹೊರಬೀಳಲಿದೆ.

Advertisement

ನಗರದ ಪಾದಾಚಾರಿ ಮಾರ್ಗ, ರಾಜಕಾಲುವೆ, ಧಾರ್ಮಿಕ ಕೇಂದ್ರಗಳು, ರುದ್ರಭೂಮಿ, ವಸತಿ ಕಟ್ಟಡಗಳು ಹೀಗೆ ಎಲ್ಲೆಂದರಲ್ಲಿ ಅಳವಡಿಸಿರುವ ಹೋರ್ಡಿಂಗ್‌ಗಳಿಂದ ನಗರದ ಸೌಂದರ್ಯಕ್ಕೆ ಧಕ್ಕೆಯಾಗುತ್ತಿದೆ. ಜತೆಗೆ ಜಾಹೀರಾತು ಫ‌ಲಕಗಳಿಂದ ಅಪಘಾತಗಳು ಹೆಚ್ಚಾಗುತ್ತಿವೆ ಎಂಬ ಆರೋಪಗಳಿವೆ. ಆ ಹಿನ್ನೆಲೆಯಲ್ಲಿ ಜಾಹೀರಾತು ಫ‌ಲಕಗಳನ್ನು ಶಾಶ್ವತವಾಗಿ ನಿಷೇಧಿಸುವ ಮೂಲಕ ಬೆಂಗಳೂರಿನ ಅಂದ ಹೆಚ್ಚಿಸುವತ್ತ ಹಾಗೂ ಜನರ ಪ್ರಾಣ ರಕ್ಷಿಸುವತ್ತ ದಿಟ್ಟ ಹೆಜ್ಜೆ ಇರಿಸಲು ಮಹಾನಗರ ಪಾಲಿಕೆ ತೀರ್ಮಾನಿಸಿದೆ.

ನಗರದಲ್ಲಿ ಫ್ಲೆಕ್ಸ್‌ಗಳನ್ನು ತೆರವುಗೊಳಿಸುವಂತೆ ಹೈಕೋರ್ಟ್‌ ಪಾಲಿಕೆಯನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡ ಪರಿಣಾಮ, ಪಾಲಿಕೆಯ ಅಧಿಕಾರಿಗಳು 25 ಸಾವಿರಕ್ಕೂ ಹೆಚ್ಚಿನ ಫ್ಲೆಕ್ಸ್‌, ಬ್ಯಾನರ್‌ ಹಾಗೂ ಬಂಟಿಂಗ್ಸ್‌ಗಳನ್ನು ತೆರವುಗೊಳಿಸಿದ್ದಾರೆ. ಇದರೊಂದಿಗೆ ನಗರದಲ್ಲಿ ಒಂದು ವರ್ಷದ ಮಟ್ಟಿಗೆ ಎಲ್ಲ ರೀತಿಯ ಜಾಹೀರಾತು ಪ್ರದರ್ಶನ ನಿಷೇಧಿಸಿ ಬಿಬಿಎಂಪಿ ಪಾಲಿಕೆ ಸಭೆಯೂ ನಿರ್ಣಯ ಕೈಗೊಂಡಿದೆ.

ಅದರಂತೆ ನಗರದಲ್ಲಿನ ಅಧಿಕೃತ ಜಾಹೀರಾತು ಫ‌ಲಕಗಳ ಪತ್ತೆಗೆ ಮುಂದಾದ ಪಾಲಿಕೆ ಈಗಾಗಲೇ ಪಾದಾಚಾರಿ ಮಾರ್ಗ, ರಾಜಕಾಲುವೆ ಸೇರಿ ಪಾಲಿಕೆ ಜಾಗಗಳಲ್ಲಿ ಖಾಸಗಿಯವರು ಅಳವಡಿಸಿದ ಜಾಹೀರಾತು ಫ‌ಲಕಗಳ (ಸ್ಟ್ರಕ್ಚರ್‌) ತೆರವು ಕಾರ್ಯ ಆರಂಭಿಸಿದ್ದಾರೆ. ಇದರೊಂದಿಗೆ ಗೋಡೆಗಳಿಗೆ ಅಂಟಿಸಿದ ಭಿತ್ತಿಪತ್ರಗಳ ತೆರವು ಕಾರ್ಯ ನಡೆಸಲಾಗುತ್ತಿದೆ. 

ನಗರ ಈಗ ಫ್ಲೆಕ್ಸ್‌ಮುಕ್ತ: ಹೈಕೋರ್ಟ್‌ ಬಿಸಿ ಮುಟ್ಟಿಸಿದ ಹಿನ್ನೆಲೆಯಲ್ಲಿ ಕಳೆದ 25 ದಿನಗಳಿಂದ ನಿಂತರ ಕಾರ್ಯಾಚರಣೆ ನಡೆಸಿರುವ ಪಾಲಿಕೆ ಸಿಬ್ಬಂದಿ ನಗರವನ್ನು ಫ್ಲೆಕ್ಸ್‌ ಮುಕ್ತಗೊಳಿಸಿದ್ದಾರೆ. ಪರಿಣಾಮ, ಫ್ಲೆಕ್ಸ್‌, ಬ್ಯಾನರ್‌, ಬಂಟಿಂಗ್ಸ್‌ ಹಾಗೂ ಜಾಹೀರಾತು ಪ್ರದರ್ಶನವಿಲ್ಲದೆ ನಗರವು ಹೊಸ ರೂಪ ಪಡೆದುಕೊಂಡಿದೆ.

Advertisement

ಈ ಸೌಂದರ್ಯವನ್ನು ಹೀಗೇ ಮುಂದುವರಿಸಿಕೊಂಡು ಹೋಗುವಂತೆ ಸಾರ್ವಜನಿಕ ವಲಯದಿಂದ ಮೆಚ್ಚುಗೆ, ಸಲಹೆಗಳು ಬಂದಿವೆ. ಆ ಹಿನ್ನೆಲೆಯಲ್ಲಿ ಸರ್ಕಾರಿ ಜಾಹೀರಾತು ಫ‌ಲಕಗಳನ್ನು ಹೊರತುಪಡಿಸಿ ಉಳಿದೆಲ್ಲ ರೀತಿಯ ಜಾಹೀರಾತು ಫ‌ಲಕಗಳು, ಪ್ರದರ್ಶನವನ್ನು ಶಾಶ್ವತವಾಗಿ ನಿಷೇಧಿಸುವ ತೀರ್ಮಾನ ತೆಗೆದುಕೊಳ್ಳಲಾಗಿದೆ ಎಂದು ಪಾಲಿಕೆಯ ಉನ್ನತ ಮೂಲಗಳು “ಉದಯವಾಣಿ’ಗೆ ತಿಳಿಸಿವೆ.

ಸ್ಕೈವಾಕ್‌, ಬಸ್‌ಶೆಲ್ಟರ್‌ ಗೊಂದಲ: ಪಾಲಿಕೆ ವ್ಯಾಪ್ತಿಯಲ್ಲಿ ಜಾಹೀರಾತು ಫ‌ಲಕ ಹಾಗೂ ಪ್ರದರ್ಶನವನ್ನು ಶಾಶ್ವತವಾಗಿ ನಿಷೇಧಿಸಲು ಪಾಲಿಕೆ ನಿರ್ಧರಿಸಿದ ಬೆನ್ನಲ್ಲೇ ಹೊಸ ಗೊಂದ ಶುರುವಾಗಿದೆ. ಆದರೆ, ಈಗಾಗಲೇ ನಗರದ ನೂರಾರು ಕಡೆ ಸಾರ್ವಜನಿಕ ಖಾಸಗಿ ಸಹಭಾಗಿತ್ವ (ಪಿಪಿಪಿ) ಮಾದರಿಯಲ್ಲಿ ನಿರ್ಮಿಸಿದ ಸ್ಕೈವಾಕ್‌ ಹಾಗೂ ಬಸ್‌ ಶೆಲ್ಟರ್‌ಗಳಲ್ಲಿ ಜಾಹೀರಾತು ಪ್ರದರ್ಶನಕ್ಕೆ ಅನುಮತಿ ನೀಡುವ ಕುರಿತಂತೆ ಗೊಂದಲ ಸೃಷ್ಟಿಯಾಗಿದೆ. ಹೀಗಾಗಿ ಪಾಲಿಕೆ ಸಭೆಯಲ್ಲಿ ಈ ಕುರಿತು ಚರ್ಚಿಸಿದ ಬಳಿಕ ಆಯುಕ್ತರು ಅಂತಿಮ ತೀರ್ಮಾನ ಕೈಗೊಳ್ಳುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.

ಸರ್ಕಾರಿ ಜಾಹೀರಾತು ಫ‌ಲಕಗಳು ಸೇಫ್!: ಪಾಲಿಕೆಯ ವ್ಯಾಪ್ತಿಯಲ್ಲಿ ಈಗಾಗಲೇ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ನೂರಾರು ಅಧಿಕೃತ ಜಾಹೀರಾತು ಫ‌ಲಕಗಳಿವೆ. ಸರ್ಕಾರದ ವಿವಿಧ ಯೋಜನೆ, ಕಾರ್ಯಕ್ರಮಗಳ ಕುರಿತು ಜನರಿಗೆ ಮಾಹಿತಿ ನೀಡಲು ಈ ಫ‌ಲಕಗಳನ್ನು ಬಳಸಲಾಗುತ್ತಿದೆ. ಜತೆಗೆ ಪಲ್ಸ್‌ ಪೋಲಿಯೋ, ಇಂದ್ರ ಧನುಷ್‌ ಲಸಿಕೆ, ಜಂತುಹುಳ ಅಭಿಯಾನ, ಸ್ವತ್ಛ ಭಾರತ ಅಭಿಯಾನ ಸೇರಿದಂತೆ ಸಾರ್ವಜನಿಕರಿಗೆ ಮಾಹಿತಿ ನೀಡುವಂತಹ ಜಾಹೀರಾತುಗಳನ್ನು ಮಾತ್ರ ಪ್ರಕಟಿಸಲಾಗುತ್ತಿದೆ. ಹೀಗಾಗಿ ಇಂತಹ ಫ‌ಲಕಗಳಿಗೆ ವಿನಾಯಿತಿ ನೀಡಲು ಪಾಲಿಕೆ ತೀರ್ಮಾನಿಸಿದೆ ಎನ್ನಲಾಗಿದೆ.

* ವೆಂ. ಸುನೀಲ್‌ ಕುಮಾರ್‌ 

Advertisement

Udayavani is now on Telegram. Click here to join our channel and stay updated with the latest news.

Next