Advertisement

ಮದುಮಕ್ಕಳಿಗೆ ಶುಭಪ್ರದ ಜಾತ್ರೆ

01:58 AM Aug 15, 2019 | sudhir |

ಹೆಬ್ರಿ: ಉಡುಪಿ ತಾಲೂಕಿನ ಪೆರ್ಡೂರು ಕದಳೀ ಪ್ರಿಯ ಶ್ರೀ ಅನಂತಪದ್ಮನಾಭ ಸ್ವಾಮಿ ದೇವಸ್ಥಾನ ದಲ್ಲಿ ಆ. 17ರಂದು ನಡೆಯುವ ಸಿಂಹ ಸಂಕ್ರಮಣ ಆಚರಣೆ ಮದುಮಕ್ಕಳ ಜಾತ್ರೆ ಎಂದೇ ಪ್ರಸಿದ್ಧಿ ಪಡೆದಿದೆ.

Advertisement

ಬೆಳಗ್ಗೆ 4 ಗಂಟೆಯಿಂದ ಜನಜಂಗುಳಿ, ವಾಹನ ದಟ್ಟಣೆ ಆರಂಭವಾಗುತ್ತದೆ. ಉಡುಪಿ ಜಿಲ್ಲೆಯಾದ್ಯಂತದಿಂದ ಮಾತ್ರವಲ್ಲದೆ ದಕ್ಷಿಣ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಶ್ರೀ ಕ್ಷೇತ್ರದ ದರ್ಶನಕ್ಕೆ ಬರುವುದು ಇಲ್ಲಿಯ ವಿಶೇಷ.

ಬಾಳೆಹಣ್ಣಿನ ನೈವೇದ್ಯ ಪ್ರಿಯ ಶ್ರೀ ಅನಂತ ಪದ್ಮನಾಭನ ಕ್ಷೇತ್ರ ವಿಶೇಷ ಕಾರಣಿಕದ ಸಾನ್ನಿಧ್ಯವಾಗಿದ್ದು, ಭಕ್ತರು ತಮ್ಮ ಇಷ್ಟ ದೈವವನ್ನು ಸ್ಮರಿಸಿಕೊಂಡು ಪ್ರಾರ್ಥಿಸಿದರೆ ಖಂಡಿತ ಫಲ ನೀಡುತ್ತದೆ ಎಂಬ ನಂಬಿಕೆ ಭಕ್ತರದ್ದಾಗಿದೆ. 12 ಸಂಕ್ರಮಣಗಳೂ ಇಲ್ಲಿ ವಿಶೇಷವಾಗಿದ್ದು ಅದರಲ್ಲೂ ಸಿಂಹ ಸಂಕ್ರಮಣ ಹಬ್ಬದ ವಾತಾವರಣದೊಂದಿಗೆ ಬೃಹತ್‌ ಜನಸಾಗರ ಹರಿದುಬರುತ್ತದೆ.

ಮದುಮಕ್ಕಳ ಜಾತ್ರೆ

ಆಷಾಢ ಮಾಸದ ಬಳಿಕ ಬರುವ ಸಿಂಹ ಮಾಸ ನೂತನ ಮದುಮಕ್ಕಳಿಗೆ ವಿಶೇಷ. ಹೊಸದಾಗಿ ಮದುವೆಯಾದ ಮದುಮಕ್ಕಳು ದೇವರ ದರ್ಶನ ಮಾಡಿ ಹೋಗುವ ಸಂಪ್ರದಾಯ ಮೊದಲಿನಿಂದ‌ಲೂ ನಡೆದು ಬರುತ್ತಿದೆ. ಮದುಮಗ ತನ್ನ ಮನೆ ಹಿರಿಯರೊಂದಿಗೆ ಬಂದು ತನ್ನ ಮಡದಿಯನ್ನು ಕರೆದೊಯ್ಯುವ ಹಾಗೂ ಮದುಮಗಳು ತನ್ನ ತಂದೆ-ತಾಯಿಯೊಂದಿಗೆ ಬಂದು ಗಂಡನ ಮನೆಯೆಡೆಗೆ ನಡೆಯಲು ಸೇರುವ ತಾಣ ಪೆರ್ಡೂರಿನ ಸಿಂಹ ಸಂಕ್ರಮಣವಾಗಿತ್ತು.ಅದಕ್ಕಾಗಿಯೇ ಕಳೆದ ವರ್ಷ ಮದುವೆಯಾದ ಜೋಡಿಗಳು ಜತೆಯಾಗಿ ಬಂದು ಮುಂದಿನ ಭವ್ಯ ಭವಿತವ್ಯಕ್ಕಾಗಿ ಶ್ರೀ ಸ್ವಾಮಿಯನ್ನು ಪ್ರಾರ್ಥಿಸುವುದು ಹಿಂದಿನಿಂದಲೂ ನಡೆದು ಬಂದ ಸಂಪ್ರದಾಯವಾಗಿದ್ದು, ಇಂದು ಮದುಮಕ್ಕಳ ಜಾತ್ರೆ ಎಂದೇ ಪ್ರಸಿದ್ಧಿಯನ್ನು ಪಡೆದಿದೆ.

Advertisement

ಹನ್ನೆರಡು ಸಂಕ್ರಮಣ ವ್ರತ

ಸಂಕ್ರಮಣ ದೇವರು ಎಂದು ಪ್ರಸಿದ್ಧಿ ಪಡೆದ ಪೆರ್ಡೂರು ಕ್ಷೇತ್ರವು ವರ್ಷದ ಹನ್ನೆರಡು ರಾಶಿಗಳನ್ನು ಸೂರ್ಯ ಕ್ರಮಿಸುವ ಘಟ್ಟ ದಲ್ಲಿ ಅನಂತಪದ್ಮನಾಭ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ ಆರಾಧಿಸುವ ಪದ್ಧತಿ ಹಿಂದಿನಿಂದಲೂ ಇದೆ. ಶ್ರೀ ಕ್ಷೇತ್ರದಲ್ಲಿ 12 ಸಂಕ್ರಮಣಕ್ಕೆ ತಪ್ಪದೇ ಬಂದು ಭಗವಂತನ ದರ್ಶನ ಪಡೆದರೆ‌ ಸಂಕಲ್ಪ ಈಡೇರಿಸುತ್ತಾನೆ ಎಂಬ ನಂಬಿಕೆ ಇದೆ. ಹಿಂದೆ ಪ್ರತಿ ಸಂಕ್ರಮಣದಂದು ಕಾಲ್ನಡಿಗೆಯಲ್ಲಿಯೇ ದೇವರ ದರ್ಶನ ಪಡೆಯುತ್ತಿದ್ದರು. ಈಗಲೂ ಹೆಚ್ಚಿನ ಭಕ್ತಾದಿಗಳು ನಿರಾಹಾರರಾಗಿ ಶ್ರೀ ಸನ್ನಿಧಿಗೆ ಬಂದು ಹಣ್ಣು ಕಾಯಿ ಸಮರ್ಪಿಸಿ ಭಕ್ತಿಯಿಂದ ದೇವರಲ್ಲಿ ಪ್ರಾಥಿಸಿ ವ್ರತಾವರಣೆಯಲ್ಲಿ ಪಾಲ್ಗೋಳ್ಳುತ್ತಾರೆ.

ಬಾಳೆಹಣ್ಣಿಗೊಲಿದ ಭಗವಂತನೆಂದೇ ಖ್ಯಾತಿ ಪಡೆದ ಕದಳಿಪ್ರಿಯ ಪೆರ್ಡೂರು ಶ್ರೀ ಅನಂತ ಪದ್ಮನಾಭ ಸ್ವಾಮಿ ದೇವರಿಗೆ ಸುಮಾರು ಒಂದು ಸಾವಿರ ವರ್ಷಗಳಿಂದಲೂ ಭಕ್ತರಿಂದ ಬಾಳೆಹಣ್ಣಿನ ಸೇವೆ ಇಲ್ಲಿ ನಡೆದು ಬರುತ್ತಿದೆ. ತಮ್ಮ ಇಷ್ಟಾರ್ಥ ಸಿದ್ಧಿ ಸಂಕಲ್ಪಗಳಿಗೆ ಬಾಳೆಹಣ್ಣಿನ ಸೇವೆ ಸಲ್ಲಿಸುವುದು ಇಲ್ಲಿ ವಿಶೇಷ. ಅನಾರೋಗ್ಯದ ನಿವಾರಣೆಗೆ ಸಾವಿರ ಬಾಳೆಹಣ್ಣು , 500 ಬಾಳೆಹಣ್ಣು , ದಿನಕ್ಕೊಂದು ಬಾಳೆಹಣ್ಣು , ಸಿಬ್ಲಿ ಹಣ್ಣು ಹೀಗೆ ಬಾಳೆಹಣ್ಣಿನ ಹರಕೆ ಸೇವೆ ನಡೆಯುತ್ತಿದೆ. ಕಳೆದ ವರ್ಷ ಸುಮಾರು ಒಂದು ಲಕ್ಷಕೂ ಮಿಕ್ಕಿ ಬಾಳೆಹಣ್ಣು ಶ್ರೀ ದೇವರಿಗೆ ಸಮರ್ಪಿತಗೊಂಡಿದೆ.

Advertisement

Udayavani is now on Telegram. Click here to join our channel and stay updated with the latest news.

Next