Advertisement

ಜನಾನುರಾಗಿ ಡಿಸಿ ರಮೇಶ್‌ಗೆ ಬೀಳ್ಕೊಡುಗೆ

05:25 PM Oct 12, 2018 | |

ದಾವಣಗೆರೆ: ನಡು ಕರ್ನಾಟಕದ ಕೇಂದ್ರ ಬಿಂದು ದಾವಣಗೆರೆ ಜಿಲ್ಲೆಯ ದಂಡಾಧಿಕಾರಿಯಾಗಿ 2 ವರ್ಷ 4 ತಿಂಗಳು ಉತ್ತಮ ಸೇವೆ ಸಲ್ಲಿಸುವ ಮೂಲಕ ಜನಾನುರಾಗಿ, ಸರಳ ಜೀವಿ, ಬಿಗಿ ಆಡಳಿತಗಾರ ಎಂದೆಲ್ಲಾ ಕೀರ್ತಿಗೆ ಪಾತ್ರವಾಗಿದ್ದ ಡಿ.ಎಸ್‌. ರಮೇಶ್‌ಗೆ ಆತ್ಮೀಯ ಬೀಳ್ಕೊಡುಗೆ ಮತ್ತು ನೂತನ ಜಿಲ್ಲಾಧಿಕಾರಿ ಡಾ| ಬಗಾದಿ ಗೌತಮ್‌ಗೆ ಹೃದಯಪೂರ್ವಕ ಸ್ವಾಗತಕ್ಕೆ ಗುರುವಾರ ಸಂಜೆ ಜಿಲ್ಲಾಡಳಿತ ಭವನದ ತುಂಗಭದ್ರಾ ಸಭಾಂಗಣ ಸಾಕ್ಷಿಯಾಯಿತು.

Advertisement

ನಿಕಟಪೂರ್ವ ಜಿಲ್ಲಾಧಿಕಾರಿ ಡಿ.ಎಸ್‌. ರಮೇಶ್‌ ಕುರಿತಂತೆ ಅಭಿಪ್ರಾಯ ಹಂಚಿಕೊಂಡವರೆಲ್ಲರೂ ಜಿಲ್ಲಾ ದಂಡಾಧಿಕಾರಿಯಾಗಿದ್ದರೂ ಅವರ ಸರಳತೆ, ಎಂತದ್ದೇ ತಪ್ಪಿನ ಸಂದರ್ಭದಲ್ಲಿ ಸಿಟ್ಟಾಗದಿರುವುದು, ಕ್ಲಿಷ್ಟಕರ ಸಮಸ್ಯೆಯನ್ನೂ ಬಾಳೆಹಣ್ಣು ಸುಲಿದಂತೆ ಸುಲಭ ಮತ್ತು ಸೂಕ್ತವಾಗಿ ಪರಿಹರಿಸುತ್ತಿದ್ದ ಚಾಣಾಕ್ಷತೆ, ಕೆಳಗಿನ ಸಿಬ್ಬಂದಿಯಿಂದ ಹಿಡಿದು ಪ್ರತಿಯೊಬ್ಬರನ್ನೂ ಆಪ್ತತೆಯಿಂದ ಕಾಣುತ್ತಿದ್ದ ಬಗೆ, ಜನಸಾಮಾನ್ಯರು ಅದರಲ್ಲೂ ವಿಕಲ ಚೇತನರಿಗೆ ಸ್ಪಂದಿಸುತ್ತಿದ್ದ ರೀತಿ, ತೀವ್ರ ಒತ್ತಡದ ನಡುವೆಯೂ ಕುಟುಂಬದ ಸದಸ್ಯರು ಸದಾ ನಗು, ಸಂತೋಷದಿಂದ ಇರುವಂತೆ ನೋಡಿಕೊಳ್ಳುವುದು… ಹೀಗೆ ಅನೇಕ ವಿಚಾರಗಳ ಮೆಲುಕು ಹಾಕಿದರು.

ಗದ್ಗಿತ ಧ್ವನಿಯಲ್ಲೇ ಪ್ರಾಸ್ತಾವಿಕ ಮಾತುಗಳಾಡಿದ ಅಪರ ಜಿಲ್ಲಾಧಿಕಾರಿ ಪದ್ಮಾ ಬಸವಂತಪ್ಪ, ಜಿಲ್ಲಾಧಿಕಾರಿ, ದಂಡಾಧಿಕಾರಿಯಾಗಿದ್ದರೂ ರಮೇಶ್‌ ಸರ್‌ ಅವರಲ್ಲಿನ ಸರಳತೆ ನಮ್ಮಂತ ಅಧಿಕಾರಿಗಳಿಗೆ ಮಾದರಿ. 2 ವರ್ಷ 4 ತಿಂಗಳು ಅವರು ಒಮ್ಮೆಯೂ ಸಿಟ್ಟಾಗದೇ ಇರುವುದು ಕಂಡು ನಮಗೇ ಅಶ್ವರ್ಯವಾಗುತ್ತಿತ್ತು. ನಾವು ತಪ್ಪು ಮಾಡಿದ್ದರೂ ಇವರಿಗೆ ಸಿಟ್ಟೇ ಬರುವುದಿಲ್ಲವಲ್ಲ ಅಂದುಕೊಂಡಿದ್ದು ಇದೆ. ಅತೀವ ಒತ್ತಡದ ನಡುವೆಯೂ ಅಷ್ಟೊಂದು ಶಾಂತತೆ, ನೆಮ್ಮದಿಯಿಂದ ಕೆಲಸ ಮಾಡುವುದಕ್ಕೆ ಬೇರೆ ಯಾರಿಂದಲೂ ಸಾಧ್ಯವೇ ಇಲ್ಲ. ಚುನಾವಣಾ ಸಂದರ್ಭದಲ್ಲಿ ನಮ್ಮವರು ಮಾಡಿದ ಸಣ್ಣ ಅಚಾತುರ್ಯ ಬಿಟ್ಟರೆ ಸುಲಲಿತವಾಗಿ ಕೆಲಸ ನಿರ್ವಹಿಸಲಾಯಿತು. ಅವರ ವರ್ಗಾವಣೆ ನಿಜಕ್ಕೂ ಶಾಕ್‌. ಅವರನ್ನು ತುಂಬಾ ಮಿಸ್‌ ಮಾಡಿಕೊಳ್ಳುತ್ತಿದ್ದೇವೆ. ಅವರೊಂದಿಗೆ ಕೆಲಸ ಮಾಡುವುದು ಸುಲಭ. ಹಾಗಾಗಿ ನಾನು ಸಹ ಅವರು ಇರುವ ಕಡೆ ವರ್ಗಾವಣೆ ಬಯಸುವೆ ಎಂದರು.

ನೂತನ ಡಿಸಿ ಡಾ| ಬಗಾದಿ ಗೌತಮ್‌ ಅವರು ಈಗಾಗಲೇ ಎರಡು ಬಾರಿ ಪ್ರಶಸ್ತಿಗೆ ಪಾತ್ರವಾಗಿದ್ದಾರೆ. ಅವರಿಗೆ ಎಲ್ಲಾ ಅಧಿಕಾರಿಗಳು, ಸಿಬ್ಬಂದಿ ಎಲ್ಲ ರೀತಿಯ ಸಹಕಾರ ನೀಡುವ ಮೂಲಕ ಇನ್ನಷ್ಟು ಪ್ರಶಸ್ತಿಗೆ ಬರಲು ಕಾರಣವಾಗುತ್ತೇವೆ ಎಂದು ತಿಳಿಸಿದರು. 

ದಾವಣಗೆರೆ ಉಪ ವಿಭಾಗಾಧಕಾರಿ ಬಿ.ಟಿ. ಕುಮಾರಸ್ವಾಮಿ ಮಾತನಾಡಿ, ಮೈ ಲೈಫ್‌ ಮೈ ಮೆಸೇಜ್‌…. ಎಂಬ ಮಹಾತ್ಮ ಗಾಂಧೀಜಿಯವರ ಮಾತಿನಂತೆ ನಿಕಟಪೂರ್ವ ಜಿಲ್ಲಾಧಿಕಾರಿಗಳು ಕೆಲಸದ ಮೂಲಕ ನಮ್ಮೆಲ್ಲರಿಗೂ ಒಳ್ಳೆಯ ಕೆಲಸ ಮಾಡುವಂತೆ ಸಂದೇಶ ನೀಡಿದ್ದಾರೆ. ಅವರು ದಾವಣಗೆರೆಯ ಮಗ ಎಂದೆನಿಸಯ್ಯ… ಎನ್ನುವಂತೆ ಎಲ್ಲರನ್ನೂ ಕಾಣುತ್ತಿದ್ದರು. ಎಂತಹ ಸಾಮಾನ್ಯರು ಬಂದರೂ ಅವರ ಸಮಸ್ಯೆ ಆಲಿಸಿ, ಪರಿಹಾರ ಒದಗಿಸುವ ಕೆಲಸ ಮಾಡುತ್ತಿದ್ದರು. ಅವರ ತಾಳ್ಮೆ ಮತ್ತು ಆಲಿಸುವಿಕೆ…. ಗುಣ ಮೈಗೂಡಿಸಿಕೊಂಡರೆ ಎಲ್ಲಾ ಅಧಿಕಾರಿಗಳು, ಸಿಬ್ಬಂದಿ ಉತ್ತಮ ಹೆಸರು ಪಡೆಯುವಂತಾಗಬಹುದು. 

Advertisement

ಜಿಲ್ಲೆಯಲ್ಲಿ ಯಾವುದೇ ರೀತಿಯ ಅಹಿತಕರ ಘಟನೆ, ಕಾನೂನು ಸುವ್ಯವಸ್ಥೆಗೆ ಭಂಗ ಆಗದಂತೆ ಉತ್ತಮ ಆಡಳಿತ ನೀಡಿರುವ ಅವರನ್ನು ಭಾರವಾದ ಹೃದಯದಿಂದ ಬೀಳ್ಕೊಡುತ್ತಿದ್ದೇವೆ ಎಂದರು. ನಗರಾಭಿವೃದ್ಧಿ ಕೋಶ ಯೋಜನಾ ನಿರ್ದೇಶಕಿ ಜಿ. ನಜ್ಮಾ ಮಾತನಾಡಿ, ಡಿ.ಎಸ್‌. ರಮೇಶ್‌ರವರು ಧನಾತ್ಮಕ ಚಿಂತನೆಯ ಮೂಲಕವೇ ಇಡೀ ಜಿಲ್ಲೆಯ ಆಡಳಿತದಲ್ಲಿ ಹೊಸ ಬದಲಾವಣೆ ತಂದರು. ಅವರ ತಾಳ್ಮೆ, ಆಡಳಿತದಲ್ಲಿನ ಬಿಗಿ… ಗುಣಗಳನ್ನ ಅಧಿಕಾರಿಗಳು ಕಲಿಯಬೇಕು ಎಂದರು. 

ಜಿಲ್ಲಾಧಿಕಾರಿ ಡಾ| ಬಗಾದಿ ಗೌತಮ್‌ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ರಕ್ಷಣಾಧಿಕಾರಿ ಆರ್‌. ಚೇತನ್‌, ನಿಕಟಪೂರ್ವ ಜಿಲ್ಲಾಧಿಕಾರಿ ಡಿ.ಎಸ್‌. ರಮೇಶ್‌, ಶೋಭಾ ರಮೇಶ್‌, ಪುತ್ರಿ ಚಿನ್ಮಯಿ ಇದ್ದರು. ಭಾರತಿ ನೇರಲಕಟ್ಟೆ ಪ್ರಾರ್ಥಿಸಿದರು. ಗಂಗಾಧರ್‌ ಬಿ.ಎಲ್‌. ನಿಟ್ಟೂರು ನಿರೂಪಿಸಿದರು. 

ಎಲ್ಲರ ಸಹಕಾರ ಕಾರಣ ಸರ್ಕಾರಿ ಅಧಿಕಾರಿ ಎಂದರೆ ಎಲ್ಲೇ ಇರಲಿ ಕೆಲಸ ಮಾಡಬೇಕು. ನಾನು ಅದೇ ರೀತಿ ದಾವಣಗೆರೆ ಜಿಲ್ಲಾಧಿಕಾರಿಯಾಗಿ ಕೆಲಸ ಮಾಡಿದ್ದೇನೆ. ನನ್ನಿಂದೇನೂ ಅಲ್ಲ. ಎಲ್ಲಾ ಹಂತದ ಅಧಿಕಾರಿಗಳು, ಸಿಬ್ಬಂದಿ ಸಮನ್ವಯತೆಯಿಂದ ಯಾವುದೇ ಬಿಕ್ಕಟ್ಟು ಎದುರಾಗದಂತೆ 2 ವರ್ಷ 4 ತಿಂಗಳು ಒಳ್ಳೆಯ ಕೆಲಸ ಮಾಡಲು ಸಾಧ್ಯವಾಯಿತು. ಎಲ್ಲಾ ಹಂತದಲ್ಲಿ ಸಹಕಾರ ನೀಡಿದ್ದಕ್ಕೆ ಧನ್ಯವಾದ ಅರ್ಪಿಸುವೆ.
 ಡಿ.ಎಸ್‌. ರಮೇಶ್‌, ನಿಕಟಪೂರ್ವ ಜಿಲ್ಲಾಧಿಕಾರಿ

ವಿಕಲಚೇತನ ಮಕ್ಕಳಿಗೆ ಐಡಿ ಕಾರ್ಡ್‌ ವಿತರಣೆ ಚನ್ನಗಿರಿ ತಾಲೂಕಿನ ವಿವಿಧ ಭಾಗದ 5 ವರ್ಷದೊಳಗಿನ ವಿಕಲಚೇತನ ಮಕ್ಕಳು ಗುರುತಿನ ಪತ್ರ ಇಲ್ಲದ ಕಾರಣಕ್ಕೆ ಸರ್ಕಾರಿ ಸೌಲಭ್ಯದಿಂದ ವಂಚಿತರಾಗಿರುವುದು ಡಿ.ಎಸ್‌. ರಮೇಶ್‌
ರವರ ಗಮನಕ್ಕೆ ಬರುತ್ತಿದ್ದಂತೆ ವಿಶೇಷ ಶಿಬಿರದ ಯೋಜಿಸಿದ್ದರು. ಗುರುತಿನ ಪತ್ರದ ವ್ಯವಸ್ಥೆ ಮಾಡಿದ್ದರು. ಬೀಳ್ಕೊಡುಗೆ ಸಮಾರಂಭದಲ್ಲಿ ಆ ಎಲ್ಲಾ 57 ಮಕ್ಕಳಿಗೆ ಗುರುತಿನ ಚೀಟಿ ಖುದ್ದು ಅವರೇ ವಿತರಿಸಿದ್ದು ವಿಶೇಷ

ಸಮನ್ವಯತೆ ಇರಲಿ ಜಿಲ್ಲಾಧಿಕಾರಿ, ಜಿಪಂ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ, ಜಿಲ್ಲಾ ರಕ್ಷಣಾಧಿಕಾರಿ ಒಟ್ಟಿಗೆ ಎಲ್ಲಾ ಅಧಿಕಾರಿಗಳು, ಸಿಬ್ಬಂದಿ ಒಳ್ಳೆಯ ಕೆಲಸ ಮಾಡಿದಾಗ ಜಿಲ್ಲೆಯಲ್ಲಿ ಅಭಿವೃದ್ಧಿ ಕಾರ್ಯ ನಡೆಯುತ್ತವೆ. ಹಿಂದಿನ
ಡಿಸಿ ಡಿ.ಎಸ್‌. ರಮೇಶ್‌ ಸಮನ್ವಯತೆಯಿಂದ ಕೆಲಸ ಮಾಡಿದ್ದಾರೆ ಎಂಬುದು ಗೊತ್ತಾಗುತ್ತದೆ. ಅದೇ ಸಮನ್ವಯತೆಯೊಂದಿಗೆ ಎಲ್ಲರೂ ಕಾರ್ಯಪ್ರವೃತ್ತರಾಗೋಣ.
 ಡಾ| ಬಗಾದಿ ಗೌತಮ್‌, ನೂತನ ಜಿಲ್ಲಾಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next