Advertisement

ಜನರೇ ಭಾಷಾ ಹೇರಿಕೆಯನ್ನು ವಿರೋಧಿಸಬೇಕು:ಶಾಸಕ ಸುನಿಲ್ ನಾಯ್ಕ

04:43 PM Nov 01, 2021 | Team Udayavani |

ಭಟ್ಕಳ: ”ಇಂದು ಹಲವು ಅಂಗಡಿಗಳು, ಮಾಲ್‍ಗಳು, ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಪರಭಾಷಿಕರು ತುಂಬಿಕೊಂಡಿದ್ದು ಇಂಗ್ಲೀಷ್, ಹಿಂದಿಯನ್ನೇ ಮಾತನಾಡುತ್ತಿದ್ದಾರೆ. ನಮ್ಮ ಗ್ರಾಮೀಣ ಭಾಗದವರು ಹೋದರೆ ಅಲ್ಲಿ ಕನ್ನಡದಲ್ಲಿ ವ್ಯವಹಾರ ಮಾಡುವುದೇ ಕಷ್ಟಕರವಾಗುತ್ತದೆ. ಅಂತಹ ಸ್ಥಳಗಳಲ್ಲಿ ಜನರೇ ಭಾಷಾ ಹೇರಿಕೆಯನ್ನು ವಿರೋಧಿಸಬೇಕು” ಎಂದು ಶಾಸಕ ಸುನಿಲ್ ನಾಯ್ಕ ಸೋಮವಾರ ಕರೆ ನೀಡಿದ್ದಾರೆ.

Advertisement

ತಾಲೂಕಾ ಕ್ರೀಡಾಂಗಣದಲ್ಲಿ ತಾಲೂಕ ಕ್ರೀಡಾಂಗಣದಲ್ಲಿ ತಾಲೂಕಾ ಆಡಳಿತದ ವತಿಯಿಂದ ಏರ್ಪಡಿಸಲಾಗಿದ್ದ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ, ”ಯುವ ಜನತೆ ನಮ್ಮ ಇತಿಹಾಸದ ಕುರಿತು ಅರಿವು ಮೂಡಿಸಿಕೊಂಡು, ಬೇರೆಯವರಿಗೆ ಪರಿಚಯಿಸುವ ಕಾರ್ಯ ಮಾಡಬೇಕು” ಎಂದರು.

ಕನ್ನಡ ಪರ ಹೋರಾಟಗಾರರನ್ನು ನೆನಪಿಸಿದ ಅವರು ”ಇಂದು ಹೋರಾಟಗಾರದಿಂದಾಗಿ ಕನ್ನಡವನ್ನು ಗಟ್ಟಿಗೊಳಿಸುವ ಭರವಸೆ ಮೂಡುತ್ತಿದೆ” ಎಂದರು.

ಕಾರ್ಯಕ್ರಮದಲ್ಲಿ ಕನ್ನಡ ಧ್ವಜಾರೋಹಣವನ್ನು ನೆರವೇರಿಸಿದ ಸಹಾಯಕ ಆಯುಕ್ತೆ ನಾಡಿನ ಜನತೆ ಇಂದು ಕನ್ನಡ ರಾಜ್ಯೋತ್ಸವವನ್ನು ಅತ್ಯಂತ ಸಂಭ್ರಮದಿಂದ ಆಚರಿಸುತ್ತಿದ್ದೇವೆ ಎಂದು ಶುಭಕೋರಿದರು.

ರಾಜ್ಯೋತ್ಸವದ ಪ್ರಯುಕ್ತ ಉಪನ್ಯಾಸ ನೀಡಿದ ಸಾಹಿತಿ ಶ್ರೀಧರ ಶೇಟ್ ಅವರು ”ಕ್ನನ್ನಡ ನಾಡಿನಲ್ಲಿ ಭಟ್ಕಳವು ತನ್ನದೇ ಆದ ವಿಶಿಷ್ಟತೆಯನ್ನು ಹೊಂದಿದೆ. 8ನೇ ಶತಮಾನದಲ್ಲಿ ಸಹ ಭಟ್ಕಳದಲ್ಲಿ ಮಲ್ಲಿಗೆ ಬೆಳೆಯಲಾಗುತ್ತಿತ್ತೇ ಎನ್ನುವ ಕುರಿತು ಪಂಪನ ಪದಗಳಲ್ಲಿ ಉಲ್ಲೇಖವಿದೆ. ಈ ಬಗ್ಗೆ ಅಧ್ಯಯನವಾಗಬೇಕು ಎಂದು ಆಗ್ರಹಿಸಿದ ಅವರು ಭಟ್ಕಳ ಕ್ರಿ.ಶ. 750ರಲ್ಲಿಯೇ ಒಂದು ಉತ್ತಮ ಇತಿಹಾಸ ಹೊಂದಿದ ನಗರವಾಗಿತ್ತು ಎಂದೂ ಹೇಳಿದರು. ಕನ್ನಡ ಭಾಷೆಗೆ ಎರಡು ಸಾವಿರ ವರ್ಷಗಳ ಇತಿಹಾಸವಿದ್ದು ಹಿಂದಿಯನ್ನು ಹೊರತುಪಡಿಸಿದರೆ ಅತ್ಯಂತ ಹೆಚ್ಚು ಜ್ಞಾನಪೀಠ ಪ್ರಶಸ್ತಿಯನ್ನು ಪಡೆದ ಭಾಷೆಯಿದ್ದರೆ ಅದು ಕನ್ನಡ ಮಾತ್ರ” ಎಂದರು.

Advertisement

ವೇದಿಕೆಯಲ್ಲಿ ತಾಲೂಕಾ ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಪ್ರಭಾಕರ ಚಿಕ್ಕನಮನೆ, ಪುರಸಭಾ ಮುಖ್ಯಾಧಿಕಾರಿ ರಾಧಿಕಾ ಎನ್.ಎಸ್., ಜಾಲಿ ಪಂ.ಪಂ. ಮುಖ್ಯಾಧಿಕಾರಿ ರಾಮಚಂದ್ರ ವರ್ಣೇಕರ್, ರಾಜ್ಯ ಸರಕಾರಿ ನೌಕರರ ಸಂಘದ ತಾಲೂಕಾಧ್ಯಕ್ಷ ಮೋಹನ ನಾಯ್ಕ, ಪುರಸಭೆಯ ವೇಣುಗೋಪಾಲ ಶಾಸ್ತ್ರಿ ಮುಂತಾದವರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದಲ್ಲಿ ಉತ್ತಮ ಸೇವೆ ಸಲ್ಲಿಸಿದವರನ್ನು ಸ್ಮರಣಿಕೆ ನೀಡಿ ಗೌರವಿಸಲಾಯಿತು. ವಿವಿಧ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು.

ಇದಕ್ಕೂ ಪೂರ್ವ ಇಲ್ಲಿನ ನ್ಯೂ ಇಂಗ್ಲೀಷ್ ಶಾಲೆಯ ಆವರಣದಿಂದ ಭುವನೇಶ್ವರಿ ದೇವಿಗೆ ಪೂಜೆ ಸಲ್ಲಿಸಿ, ಮೆರವಣಿಗೆಯ ಮೂಲಕ ತಾಲೂಕಾ ಕ್ರೀಡಾಂಗಣಕ್ಕೆ ಬರಲಾಯಿತು.

ತಹಸೀಲ್ದಾರ್ ರವಿಚಂದ್ರ ಸ್ವಾಗತಿಸಿದರು, ಶಿಕ್ಷಕ ಪರಮೇಶ್ವರ ನಾಯ್ಕ ನಿರೂಪಿಸಿದರು. ಕ್ಷೇತ್ರ ಶಿಕ್ಷಣಾಧಿಕಾರಿ ದೇವಿದಾಸ ಮೊಗೇರ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next