Advertisement

ನಾಲ್ಕು ವರ್ಷಗಳಲ್ಲಿ ಜನಪರ ಆಡಳಿತ

11:29 AM May 26, 2018 | Team Udayavani |

ಹೊಸದಿಲ್ಲಿ: ಕಳೆದ ನಾಲ್ಕು ವರ್ಷಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರಕಾರ ಹಮ್ಮಿಕೊಂಡ ಕಲ್ಯಾಣ ಯೋಜನೆಗಳಿಂದಾಗಿ 22 ಕೋಟಿ ಬಡ ಕುಟುಂಬಗಳಿಗೆ ಅನುಕೂಲವಾಗಿದೆ ಎಂದು ಬಿಜೆಪಿ ಅಧ್ಯಕ್ಷ ಅಮಿತ್‌ ಷಾ ಹೇಳಿದ್ದಾರೆ. ಇದು ಜನಪರ ಆಡಳಿತಕ್ಕೆ ಒಂದು ಮಾದರಿಯಾಗಿದೆ. ಅಷ್ಟೇ ಅಲ್ಲ, ದೇಶದ ಜನರಲ್ಲಿ ಆತ್ಮವಿಶ್ವಾಸವನ್ನೂ ಹೆಚ್ಚಿಸಿದೆ ಎಂದಿದ್ದಾರೆ.

Advertisement

ಸಾಫ್ ನಿಯತ್‌, ಸಹಿ ವಿಕಾಸ್‌ (ಸ್ವತ್ಛ ಉದ್ದೇಶ, ಸೂಕ್ತ ವಿಕಾಸ) ಎಂಬ ಹೊಸ ಘೋಷವಾಕ್ಯವನ್ನೂ ಇದೇ ವೇಳೆ ಪರಿಚಯಿ ಸಲಾಗಿದೆ. ಈ ಘೋಷವಾಕ್ಯದ ಅಡಿಯಲ್ಲಿ ದೇಶಾದ್ಯಂತ ಸರಕಾರದ ಯೋಜನೆಗಳ ಪ್ರಚಾರ ನಡೆಸಲಾಗುತ್ತದೆ. 2019ರ ಚುನಾವಣೆ ಹಿನ್ನೆಲೆಯಲ್ಲಿ ಈ ಕ್ರಮಗಳು ಅತ್ಯಂತ ಮಹತ್ವ ಪಡೆಯಲಿವೆ.

ಮೈತ್ರಿಕೂಟದಿಂದ ಜನರು ಬೇಸತ್ತಿದ್ದರಿಂದ ಬಿಜೆಪಿಗೇ ಜನರು ಬಹುಮತ ನೀಡಿದ್ದರು. ಇದಕ್ಕೆ ಪೂರಕವಾಗಿ ಬಡವರ ಅನುಕೂಲಕ್ಕೆ ತಕ್ಕಂತೆ ಆಡಳಿತ ನೀಡಿದ್ದೇವೆ. ರೈತ ಪರ ಸರಕಾರ ನಡೆಸುವುದರ ಜೊತೆಗೇ, ಉದ್ಯಮಕ್ಕೂ ಸಹಾಯಕವಾಗಿದೆ. ನಗರ ಮತ್ತು ಗ್ರಾಮೀಣ ಪ್ರದೇಶಗಳೆರಡನ್ನೂ ಒಟ್ಟಿಗೇ ಅಭಿವೃದ್ಧಿಯತ್ತ ಕೊಂಡೊಯಲು ಸರಕಾರ ಶಕ್ತವಾಗಿದೆ.

ಇದೇ ವೇಳೆ 48 ತಿಂಗಳುಗಳಲ್ಲಿ ಭಾರತದ ರೂಪಾಂತರ ಎಂಬ ಶೀರ್ಷಿಕೆಯಡಿಯಲ್ಲಿ ಸರಕಾರದ ಸಾಧನೆಗಳನ್ನು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌ ವಿವರಿಸಿದ್ದಾರೆ. 4 ವರ್ಷದಲ್ಲಿ ದೇಶದ ನೈರ್ಮಲ್ಯವು 2014ರಲ್ಲಿ ಶೇ. 38ರಿಂದ 2018ರಲ್ಲಿ ಶೇ. 83ಕ್ಕೆ ಏರಿದೆ. 7.25 ಕೋಟಿ ಶೌಚಾಲಯಗಳನ್ನು ನಿರ್ಮಿಸಲಾಗಿದೆ. 3.6 ಲಕ್ಷ ಗ್ರಾಮಗಳನ್ನು ಬಯಲು ಶೌಚಮುಕ್ತ ಎಂದು ಘೋಷಿಸಲಾಗಿದೆ.

31.52 ಲಕ್ಷ ಜನಧನ ಖಾತೆಗಳನ್ನು ತೆರೆಯಲಾಗಿದ್ದು, 5.22 ಕೋಟಿ ಕುಟುಂಬಗಳಿಗೆ ವಾರ್ಷಿಕ 330 ರೂ. ಪ್ರೀಮಿಯಂನಲ್ಲಿ ಜೀವ ವಿಮೆ ಒದಗಿಸಲಾಗಿದೆ. 

Advertisement

ಎಸ್‌ಪಿ, ಬಿಎಸ್‌ಪಿ ಸವಾಲು
ಉತ್ತರ ಪ್ರದೇಶದಲ್ಲಿ 2019ರ ಚುನಾವಣೆಯ ವೇಳೆ ಎಸ್‌ಪಿ ಮತ್ತು ಬಿಎಸ್‌ಪಿ ಒಂದಾದರೆ ನಮಗೆ ಸವಾಲಾಗು ತ್ತದೆ ಎಂದು ಬಿಜೆಪಿ ಅಧ್ಯಕ್ಷ ಅಮಿತ್‌ ಷಾ ಹೇಳಿದ್ದಾರೆ. ಆದರೆ ಅಮೇಥಿ ಅಥವಾ ರಾಯ್‌ಬರೇಲಿಯಲ್ಲಿ ಕಾಂಗ್ರೆಸನ್ನು ನಾವು ಸೋಲಿಸುತ್ತೇವೆ ಎಂದೂ ಹೇಳಿದ್ದಾರೆ. ಮಹಾರಾಷ್ಟ್ರದಲ್ಲಿ 2019ರಲ್ಲೂ ಶಿವಸೇನೆಯ ಜೊತೆಗೆ ನಾವು ಚುನಾವಣೆ ಎದುರಿಸುತ್ತೇವೆ. ಎನ್‌ಡಿಎಯಿಂದ ಶಿವಸೇನೆ ಹೊರಹಾಕಲು ನಾವು ಬಯಸುವುದಿಲ್ಲ. ಆದರೆ, ಅವರೇ ಹೋದರೆ ನಾವೇನೂ ಮಾಡಲಾಗದು. ಎಲ್ಲ ಸನ್ನಿವೇಶಕ್ಕೂ ನಾವು ತಯಾರಿದ್ದೇವೆ ಎಂದಿದ್ದಾರೆ.

ಮಿಂಚಿದ ವಿದೇಶಾಂಗ ನೀತಿ
ಮೋದಿ ಸರಕಾರದ 4 ವರ್ಷಗಳಲ್ಲಿ ಪ್ರಖರವಾಗಿ ಮಿಂಚಿದ್ದು ವಿದೇಶಾಂಗ ನೀತಿ. ಸಚಿವೆ ಸುಷ್ಮಾ ಸ್ವರಾಜ್‌, ವಿದೇಶಾಂಗ ಖಾತೆಯ ನಿವೃತ್ತ ಕಾರ್ಯದರ್ಶಿ ಸುಬ್ರಹ್ಮಣ್ಯಂ ಜೈಶಂಕರ್‌, ರಾಷ್ಟ್ರೀಯ ಭದ್ರತಾ ಸಲಹೆಗಾರ (ಎನ್‌ಎಸ್‌ಎ) ಅಜಿತ್‌ ದೋವಲ್‌ ಅವರನ್ನೊಳಗೊಂಡ ವಿದೇಶಾಂಗ ವ್ಯವಹಾರಗಳ ತಂಡ  ದೊಂದಿಗೆ ಪ್ರಧಾನಿ ಮೋದಿ ಸ್ವತಃ ಮುತುವರ್ಜಿಯಿಂದ ಕಾರ್ಯನೀತಿ ರೂಪಿಸುತ್ತಾ ಬಂದಿದ್ದಾರೆ.

ಪ್ರಮಾಣವಚನ ಸ್ವೀಕಾರದ ದಿನದಂದೇ ಸಾರ್ಕ್‌ ರಾಷ್ಟ್ರಗಳ ನಾಯಕರನ್ನು ಆಹ್ವಾನಿಸಿ ಮಾತುಕತೆ ನಡೆಸುವ ಮೂಲಕ ತಮ್ಮ ಆದ್ಯತೆಯ ಕ್ಷೇತ್ರಗಳಲ್ಲಿ ವಿದೇಶಾಂಗ ವ್ಯವಹಾರವೂ ಒಂದು ಎಂಬು ದನ್ನು ತೋರಿಸಿದ್ದರು. ಭಾರತವೇ ಪ್ರಥಮ, ನೆರೆಹೊರೆಯೇ ಪ್ರಥಮ, ಸಾಂಸ್ಕೃತಿಕ ಬಂಧ ಬಲಪಡಿಸುವಿಕೆ, ವಿದೇಶಿ ತಂತ್ರಜ್ಞಾನದ ನೆರವಿನೊಂ ದಿಗೆ ಮೇಕ್‌ ಇನ್‌ ಇಂಡಿಯಾ- ಈ ತತ್ವಗಳ ಅಡಿಯಲ್ಲಿ ಮೋದಿ ಸರಕಾರ ಕಾರ್ಯನಿರ್ವಹಿಸಿತು. ಈ ಒಟ್ಟಾರೆ ಕಾರ್ಯತಂತ್ರದ ಮೂಲಕ ಇಡೀ ವಿಶ್ವವೇ ಭಾರತದತ್ತ ತಿರುಗಿ ನೋಡುವಂತಾಗಿದ್ದು ಸುಳ್ಳಲ್ಲ.

ಭಾರತದ ಹೆಮ್ಮೆಯ ಯೋಗವನ್ನು ವಿಶ್ವಕ್ಕೆ ಪಸರಿಸುವ ದೃಷ್ಟಿಯಿಂದ ವಿಶ್ವ ಯೋಗ ದಿನದ ಆಚರಣೆಗೆ (ಜೂ.21) 2015ರಲ್ಲಿ ವಿಶ್ವಸಂಸ್ಥೆಯಿಂದ ಅನುಮೋದನೆ ಗಿಟ್ಟಿಸಿಕೊಂಡಿದ್ದು ಮಹತ್ತರ ಸಾಧನೆ “ಲುಕ್‌ ಈಸ್ಟ್‌ ಪಾಲಿಸಿ’ಯಡಿ ಜಪಾನ್‌, ವಿಯೆಟ್ನಾಂ ಹಾಗೂ ಆಸ್ಟ್ರೇಲಿಯಾದೊಂದಿಗಿನ ಸಂಬಂಧ ಬಲಪಡಿಸಲಾಗಿದ್ದು, ದೇಶದ ಅಭಿವೃದ್ಧಿಗಾಗಿ ಅಲ್ಲಿನ ತಂತ್ರಜ್ಞಾನವನ್ನು ಎರವಲು ಪಡೆಯುವ ಕೆಲಸ ಆರಂಭಗೊಂಡಿದೆ. ಅಪಾಯಕಾರಿ ಪಾಕಿಸ್ತಾನವನ್ನು ಅಂತಾರಾಷ್ಟ್ರೀಯ ಸಮುದಾಯದಲ್ಲಿ ಮೂಲೆಗುಂಪು ಮಾಡುವಲ್ಲಿ ಮೋದಿ ಸರಕಾರ ಸಫ‌ಲವಾಗಿದೆ. ಬಾಂಗ್ಲಾದೇಶದ ಗಡಿ ಸಮಸ್ಯೆಗೆ ಶಾಶ್ವತ ಮುಕ್ತಿ ಹಾಡಲು ಐತಿಹಾಸಿಕ ಭೂ ವಿನಿಮಯ ಒಪ್ಪಂದ ನಡೆಸಲಾಗಿದೆ. ಅಮೆರಿಕ, ರಷ್ಯಾ ಸ್ನೇಹ ಸಂಬಂಧ ವೃದ್ಧಿ ಜತೆಗೆ ಇಸ್ರೇಲ್‌ ಹಾಗೂ ಪ್ಯಾಲೆಸ್ತೀನ್‌ ಜತೆಗೆ ಸ್ನೇಹ ಸಂಬಂಧ ಸಾಧಿಸಿದ್ದಾರೆ ಮೋದಿ.  

ಈ ನಾಲ್ಕು ವರ್ಷಗಳಲ್ಲಿ ಮೋದಿ ಸರಕಾರಕ್ಕೆ ಮಗ್ಗುಲ ಮುಳ್ಳಾಗಿದ್ದು ಚೀನ.  ಆ ನಿಟ್ಟಿನಲ್ಲಿ ಪ್ರಯತ್ನ ಮುಂದುವರಿಯುತ್ತಲೇ ಇದೆ. ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಖಾಯಂ ಸದಸ್ಯತ್ವದ ಭಾರತದ ಹೋರಾಟಕ್ಕೂ ಚೀನಾ ತೊಡರುಗಾಲಾಗಿದೆ. ಅಲ್ಲೂ ಕೂಡ ಯಶಸ್ಸು ಇನ್ನೂ ಮರೀಚಿಕೆಯಾಗಿದೆ. 

4 ಸರಳ ಸುಧಾರಣೆ
ಹಲವಾರು ಕಾಯ್ದೆ, ಕಾನೂನುಗಳಿಂದ ಕಗ್ಗಂಟಾಗಿದ್ದ ಜನರ ಜೀವನವನ್ನು ಹಸನಾಗಿಸಲು ಮೋದಿ ಸರಕಾರ, ಹಲವಾರು ಸಣ್ಣ ಪುಟ್ಟ ಸುಧಾರಣೆಗಳನ್ನು ಜಾರಿಗೆ ತಂದಿದೆ. ಪ್ರಸ್ತುತವಲ್ಲದ ಹಳೆಯ 1,872 ಕಾನೂನುಗಳಲ್ಲಿ 1,7175 ಕಾನೂನುಗಳನ್ನು ರದ್ದುಗೊಳಿಸಲಾಗಿದೆ. ಈ ನಿಟ್ಟಿನಲ್ಲಿ ಮೋದಿ ಕೈಗೊಂಡ ,ಜನರ ಮನಸ್ಸಿನಿಂದ ಬೇಗ ಮರೆಯಾದ 4 ಪ್ರಮಖ ಸುಧಾರಣೆಗಳನ್ನು ಇಲ್ಲಿ ನೀಡಲಾಗಿದೆ. 

ಸ್ವಯಂ ದೃಢೀಕರಣ
ಸರಕಾರಿ ಸಂಬಂಧಿ ಕೆಲಸ ಕಾರ್ಯಗಳಿಗೆ ಸಲ್ಲಿಸಬೇಕಿದ್ದ ದಾಖಲೆಗಳ ಮೇಲೆ ಪತ್ರಾಂಕಿತ ಅಧಿಕಾರಿಗಳ (ಗೆಜೆಟೆಡ್‌ ಅಧಿಕಾರಿಗಳು) ಸಹಿ (ಅಟೆಸ್ಟೇಷನ್‌)  ಕಡ್ಡಾಯ ಎಂಬ ನಿಯಮ ರದ್ದು ಮಾಡಿದ್ದಾರೆ.  ಅಧಿಕಾರಿಗಳ ಸಹಿ ಬದಲಿಗೆ, ಅರ್ಜಿದಾರರೇ ತಮ್ಮ ಜನನ ಪ್ರಮಾಣ ಪತ್ರ, ಅಂಕ ಪಟ್ಟಿ ಹಾಗೂ ಇನ್ನಿತರ ದಾಖಲೆಗಳನ್ನು ಸ್ವಯಂ ದೃಢೀಕರಣಗೊಳಿಸುವ ನಿಯಮ ಜಾರಿ. 

ಜನನ ಪ್ರಮಾಣ ಅನಗತ್ಯ
ಪಾಸ್‌ಪೋರ್ಟ್‌ ಪಡೆಯಲು ಜನನ ಪ್ರಮಾಣ ಪತ್ರ ಕಡ್ಡಾಯ ಎಂಬ 1980ರ ಪಾಸ್‌ ಪೋರ್ಟ್‌ ನಿಯಮಗಳಿಗೆ ತಿದ್ದುಪಡಿ. ಜನನ ಪ್ರಮಾಣವಿಲ್ಲದಿದ್ದರೂ ಆಧಾರ್‌ ಕಾರ್ಡ್‌ ಅಥವಾ ಪ್ಯಾನ್‌ ಕಾರ್ಡುಗಳ ದಾಖಲೆಗಳನ್ನೂ ಜನನ ಪ್ರಮಾಣಕ್ಕೆ ಪರಿಗಣಿಸುವಂಥ ಹೊಸ ನಿಯಮ ಜಾರಿ . 

ತತ್ಕಾಲ್‌ ಸುಧಾರಣೆ
ರೈಲುಗಳಲ್ಲಿ ದಿಢೀರ್‌ ಪ್ರಯಾಣ ಕೈಗೊಳ್ಳುವವರಿಗಾಗಿ ಜಾರಿಗೆ ತರಲಾಗಿದ್ದ ತತ್ಕಾಲ್‌ ವ್ಯವಸ್ಥೆಗಾಗಿ ಪ್ರತ್ಯೇಕ ಮೊಬೈಲ್‌ ಆ್ಯಪ್‌ ಬಿಡುಯ್‌ ಆ್ಯಪ್‌ ಮೂಲಕ ಒಂದೇ ನಿಮಿಷದೊಳಗೆ ಟಿಕೆಟ್‌ ಖಚಿತತೆಗೆ ಅವಕಾಶ. ತತ್ಕಾಲ್‌ ಬುಕಿಂಗ್‌ ವೇಳಾಪಟ್ಟಿ ಬದಲಿಸಿ, ಸರ್ವರ್‌ನ ಸುಗಮ ಕಾರ್ಯಾಚರಣೆಗೆ ಅವಕಾಶ. 

ತೆರಿಗೆ ಸಲ್ಲಿಕೆ ಸರಳ
ತೆರಿಗೆ ಸಲ್ಲಿಕೆ ಪ್ರಕ್ರಿಯೆ ಮತ್ತಷ್ಟು ಸರಳವಾಗಿಸಲು ಮಾಡರ್ನ್ ಎಂಟರ್‌ ಪ್ರೈಸ್‌ ರಿಸೋರ್ಸ್‌ ಪ್ಲಾನಿಂಗ್‌ (ಇಆರ್‌ಪಿ) ಅಳವಡಿಸಿಕೊಂಡ ತೆರಿಗೆ ಇಲಾಖೆ. ಇದರಿಂದ, ಆನ್‌ಲೈನ್‌ ಮಾರ್ಗವಾಗಿ ಸುಲಭವಾಗಿ ತೆರಿಗೆ ಸಲ್ಲಿಸಲು ಅವಕಾಶ. 

Advertisement

Udayavani is now on Telegram. Click here to join our channel and stay updated with the latest news.

Next