Advertisement

ಇದು ಜನರ ಪ್ರಣಾಳಿಕೆ:ಉಡುಪಿ‌

01:12 PM Mar 31, 2019 | keerthan |

ಉಡುಪಿ ಲೋಕಸಭಾ ಕ್ಷೇತ್ರ ಕ್ಷಿಪ್ರಗತಿಯಲ್ಲಿ ಬೆಳೆಯುತ್ತಿರುವಂಥವು. ಇವುಗಳ ಅಭಿವೃದ್ಧಿಗೆ ಸಂಸದರ ಕೊಡುಗೆ ತೀರಾ ಅವಶ್ಯ. ಯುವಜನರಿಗೆ ಉದ್ಯೋಗ, ಕೃಷಿ, ಕೈಗಾರಿಕೆ, ಪ್ರವಾಸೋದ್ಯಮ, ಕ್ಷೇತ್ರಗಳ ಅಗತ್ಯಗಳಿಗೆ ಸ್ಪಂದಿಸುವ ಜನಪ್ರತಿನಿಧಿಗಳು ಅವಶ್ಯವಾಗಿ ಬೇಕು. ಹೀಗಾಗಿ ಜನರ ಅಗತ್ಯಗಳನ್ನು ಪ್ರತಿಪಾದಿಸಿ ಉದಯವಾಣಿಯೇ ರೂಪಿಸಿದ ಪ್ರಣಾಳಿಕೆ ಇದು.

Advertisement

ನನಸಾಗದ ಇಎಸ್‌ಐ ಆಸ್ಪತ್ರೆ
ಚಿಕ್ಕಮಗಳೂರು ಜಿಲ್ಲೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕಾರ್ಮಿಕರು ಇರುವುದರಿಂದ ಇಲ್ಲಿ ಇಎಸ್‌ಐ ಆಸ್ಪತ್ರೆ ತೆರೆಯಬೇಕೆಂಬ ಬೇಡಿಕೆಯೂ ಇದೆ. ಉಡುಪಿಯಲ್ಲಿ ಇಎಸ್‌ಐ ಆಸ್ಪತ್ರೆ ತೆರೆಯುತ್ತೇವೆಂದು ಹೇಳಿದ್ದರೂ ಆಗಲಿಲ್ಲ.

ಕುಡಿಯುವ ನೀರು
ಕುಂದಾಪುರ, ಕಾರ್ಕಳ ಸೇರಿದಂತೆ ಉಡುಪಿ ಕ್ಷೇತ್ರದ ಹಲವೆಡೆ ಕುಡಿಯುವ ನೀರಿನ ಸಮಸ್ಯೆ ಇದೆ. ಉಡುಪಿ ನಗರದ ಕುಡಿಯುವ ನೀರು ಸಮಸ್ಯೆಗೆ ಶಾಶ್ವತ ಪರಿಹಾರವೆಂಬ ನೆಲೆಯಲ್ಲಿ ಕೈಗೆತ್ತಿಕೊಳ್ಳಲಾಗಿರುವ ವಾರಾಹಿ ಕುಡಿಯುವ ನೀರಿನ ಯೋಜನೆ ವೇಗ ಪಡೆದುಕೊಂಡಿಲ್ಲ.

ನಿರುದ್ಯೋಗ
ಕೈಗಾರಿಕಾ ವಲಯಗಳು ಕಡಿಮೆ. ಉದ್ಯೋಗಾವಕಾಶಗಳು ಕೂಡ ಕಡಿಮೆ. ದೂರದ ಬೆಂಗಳೂರು, ಮುಂಬೈ ಅಥವಾ ವಿದೇಶಗಳಿಗೆ ಉದ್ಯೋಗಕ್ಕೆ ತೆರಳುವವರ ಸಂಖ್ಯೆ ಹೆಚ್ಚು. ಈ ರೀತಿ ಪ್ರತಿಭಾ ಪಲಾಯನವನ್ನು ತಡೆಯಲು ಸೂಕ್ತ ಯೋಜನೆ ಬೇಕಾಗಿದೆ. ಐಟಿ, ಬಿಟಿ ಕಂಪೆನಿಗಳ ಸ್ಥಾಪನೆ ಅಗತ್ಯವಾಗಿದೆ. ಎಲ್ಲೂರು ಗ್ರಾಮದಲ್ಲಿರುವ ಅದಾನಿ ಯುಪಿಸಿಎಲ್‌ ಉಷ್ಣ ವಿದ್ಯುತ್‌ ಸ್ಥಾವರ ಪರಿಸರ ನಿಯಮಗಳನ್ನು ಗಾಳಿಗೆ ತೂರಿದೆ ಎಂದು ರಾಷ್ಟ್ರೀಯ ಹಸಿರು ಪೀಠ ಹೇಳಿರುವುದರಿಂದ ಆ ಕುರಿತಾದ ಚರ್ಚೆಗಳು ಬಲಗೊಂಡಿವೆ. ಜನರ ಆತಂಕ ದೂರ ಮಾಡುವ ಅಗತ್ಯವಿದೆ.

ರಾಷ್ಟ್ರೀಯ ಹೆದ್ದಾರಿ
ರಾಷ್ಟ್ರೀಯ ಹೆದ್ದಾರಿ 66ರ ಸುರತ್ಕಲ್‌ ಕುಂದಾಪುರ ನಡುವಿನ ಕಾಮಗಾರಿ ಪೂರ್ಣಗೊಂಡಿಲ್ಲ. ಪಡುಬಿದ್ರಿ ಮತ್ತು ಕುಂದಾಪುರದಲ್ಲಿ ಸೇತುವೆ ನಿರ್ಮಾಣ ಕಾಮಗಾರಿ ಬಾಕಿಯಾಗಿದೆ. ಕಾಮಗಾರಿ ಪೂರ್ಣಗೊಳ್ಳದೆಯೇ ಟೋಲ್‌ ಸಂಗ್ರಹಿಸುತ್ತಿರುವುದಕ್ಕೆ ಆಕ್ಷೇಪ ವ್ಯಕ್ತವಾಗಿದೆ. ಹಲವೆಡೆ ಜಂಕ್ಷನ್‌ಗಳಲ್ಲಿ ಫೈ ಓವರ್‌ಗಳ ನಿರ್ಮಾಣ ಬೇಡಿಕೆಯೂ ಈಡೇರಿಲ್ಲ.

Advertisement

ಕಾಫಿ, ಅಡಿಕೆ ಬೆಳೆ ಸಮಸ್ಯೆ
ಚಿಕ್ಕಮಗಳೂರು ಜಿಲ್ಲೆಯಲ್ಲಿ ಕಾಫಿ ಮತ್ತು ಅಡಿಕೆ ಬೆಳೆಗಾರರ ಸಮಸ್ಯೆಗಳಿಗೆ ಪರಿಹಾರ ಸಿಕ್ಕಿಲ್ಲ. ಅಡಿಕೆ ಬೆಳೆಗೆ ಹಳದಿ ಎಲೆರೋಗ ಸಮಸ್ಯೆ ಹೆಚ್ಚಾಗಿದ್ದ ಹಿನ್ನೆಲೆಯಲ್ಲಿ ಈ ಬಗ್ಗೆ ಅಧ್ಯಯನ ಮಾಡಲು ರಚಿಸಲಾಗಿದ್ದ ಗೋರಕ್‌ಸಿಂಗ್‌ ಸಮಿತಿಯ ವರದಿಯ ಅಂಶ ಜಾರಿಗೆ ತಂದಿಲ್ಲ. ಜಿಲ್ಲೆಯಲ್ಲಿ ಸಂಬಾರ ಪಾರ್ಕ್‌ ತೆರೆಯಬೇಕು.

ಮರಳು ಗೋಳು
ಜಿಲ್ಲೆಯ ಸಿಆರ್‌ಝಡ್‌ ವ್ಯಾಪ್ತಿಯಲ್ಲಿ ಉಂಟಾಗಿರುವ ಮರಳು ಸಮಸ್ಯೆಗೆ ಪರಿಹಾರ ಸಿಕ್ಕಿಲ್ಲ. ಇದು ಜಿಲ್ಲೆಯ ನಿರ್ಮಾಣ ಕ್ಷೇತ್ರದ ಮೇಲೆ
ದುಷ್ಪರಿಣಾಮವನ್ನುಂಟು ಮಾಡಿದೆ. ಜಿಲ್ಲೆಯಲ್ಲಿ ಈ ಹಿಂದೆ ಇದ್ದ 171 ಮಂದಿ ಪರವಾನಿಗೆದಾರರಿಗೂ ಮರಳುಗಾರಿಕೆಗೆ ಅವಕಾಶ ನೀಡಬೇಕೆಂಬ ಬೇಡಿಕೆ ಜಿಲ್ಲಾಡಳಿತ, ಕೇಂದ್ರ ಸರಕಾರಕ್ಕೂ ತಲುಪಿದೆ. ಹೋರಾಟಗಾರರು ಜಿಲ್ಲಾಧಿಕಾರಿಗಳೇ ಸಮಸ್ಯೆಗೆ ಹೊಣೆಗಾರರು ಎಂಬ ದೂರಿದೆ.

ಮಲ್ಪೆ ಮೀನುಗಾರಿಕೆ ಬಂದರು
ಸರ್ವಋತು ಬಂದರು ಎಂದು ಗುರುತಿಸಿಕೊಂಡಿರುವ ಮಲ್ಪೆ ಮೀನುಗಾರಿಕೆ ಬಂದರಿನಲ್ಲಿ ದೋಣಿಗಳ ನಿಲುಗಡೆಗೆ ಸ್ಥಳಾಭಾವ ಇದೆ. 2,200ಕ್ಕೂ ಅಧಿಕ ಬೋಟ್‌ಗಳು ಇಲ್ಲಿಂದ ಮೀನುಗಾರಿಕೆ ನಡೆಸುತ್ತವೆ. ಆದರೆ 1,500ರಷ್ಟು ಬೋಟ್‌ ನಿಲುಗಡೆಗೆ ಮಾತ್ರ ಸ್ಥಳವಿದೆ. ಸದ್ಯ ಪಡುಕರೆಯಲ್ಲಿ 10 ಕೋ.ರೂ. ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸಲಾಗಿರುವ ಜೆಟ್ಟಿಗೆ ಸ್ಥಳೀಯರ ವಿರೋಧ ಇರುವುದರಿಂದ ಆ ಜೆಟ್ಟಿಯನ್ನು ಒಂದು ಮತ್ತು ಮೂರನೇ ಹಂತದ ಅಭಿವೃದ್ಧಿ ನಡೆದ ಸ್ಥಳಗಳ ನಡುವೆ ಇರುವ 135 ಮೀ. ಜಾಗದಲ್ಲಿ ಜೆಟ್ಟಿ ನಿರ್ಮಿಸಿದರೆ ಉಳಿದ ಬೋಟ್‌ಗಳಿಗೆ ಅವಕಾಶವಾಗುತ್ತದೆ ಎನ್ನುತ್ತಾರೆ ಮಲ್ಪೆಯ ಮೀನುಗಾರರು. ಸ್ಲಿಪ್‌ವೇ ನಿರ್ಮಾಣವಾಗಿದ್ದರೂ ಉಪಯೋಗಕ್ಕೆ ನೀಡಿಲ್ಲ. ಮೀನುಗಾರರ ಸಂಘಕ್ಕೆ ಕೂಡಲೇ ನಿರ್ವಹಣೆಗೆ ನೀಡಬೇಕು ಎಂಬುದು ಮೀನುಗಾರರ ಒತ್ತಾಯ.

ಹೆಜಮಾಡಿ ಮೀನುಗಾರಿಕೆ ಬಂದರು
ಬಹುಕಾಲದ ಬೇಡಿಕೆಯಾದ ಹೆಜಮಾಡಿಯ ನೂತನ ಮೀನುಗಾರಿಕೆ ಬಂದರು ನಿರ್ಮಾಣ ಯೋಜನೆ ನನೆಗುದಿಗೆ ಬಿದ್ದಿದೆ. ಒಟ್ಟು 138.98 ಕೋ.ರೂ ಅಂದಾಜು ವೆಚ್ಚದ ಈ ಯೋಜನೆಗೆ ಕೇಂದ್ರ ಸರಕಾರದಿಂದ ಅನುಮೋದನೆ ಸಿಕ್ಕಿದೆ. ಮೊದಲ ಹಂತದ 138.98 ಕೋ.ರೂ ಬಿಡುಗಡೆಯಾಗಿದೆ. ರಾಜ್ಯ ಸರಕಾರದ ಅನುಮೋದನೆ ಮತ್ತು 13.85 ಕೋ.ರೂ. ಬಿಡುಗಡೆ ಬಾಕಿ ಇದೆ.

Advertisement

Udayavani is now on Telegram. Click here to join our channel and stay updated with the latest news.

Next