ಹೊಸಂಗಡಿ: ದೇಶದಲ್ಲಿ ಮೋದಿ ಮತ್ತೆ ಪ್ರಧಾನಿ ಪಟ್ಟ ಏರುವಾಗ ಒಂದು ಮೆಟ್ಟಿಲು ಈ ಕಾಸರಗೋಡು ಲೋಕಸಭಾ ಕ್ಷೇತ್ರವಾಗಲಿದೆ. ಕೇರಳದಲ್ಲಿ ಪರಸ್ಪರ ಕಚ್ಚಾಡುವ ಎಡರಂಗದ ಪ್ರಧಾನಿ ಅಭ್ಯರ್ಥಿ ರಾಹುಲ್ ಗಾಂಧಿಯಾಗಿರುವಾಗ ಕೇರಳದಲ್ಲಿ ಈ ಎರಡು ಒಕ್ಕೂಟ ಸ್ಪರ್ಧಿಸುವ ಔಚಿತ್ಯ ಏನು ಎಂದು ಬಿಜೆಪಿ ಕಾಸರಗೋಡು ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಶ್ರೀ ರವೀಶ ತಂತ್ರಿ ಪ್ರಶ್ನಿಸಿದರು.
ಜನತೆಯ ಆಶೀರ್ವಾದ ಇದ್ದರೆ ತಂತ್ರಿ ಮಂತ್ರಿಯಾದರೂ ಅಚ್ಚರಿ ಪಡಬೇಕಿಲ್ಲ ಎಂದು ಅವರು ಗೆಲುವಿನ ಆತ್ಮವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಪೈವಳಿಕೆ, ಎಣ್ಮಕಜೆ ಪಂಚಾಯತ್ಗಳಲ್ಲಿ ಜಂಟಿ ಆಡಳಿತ ನಡೆಸುವ ಎಡರಂಗ, ಐಕ್ಯರಂಗಕ್ಕೆ ರಾಜಕೀಯ ನೈತಿಕತೆ ಇಲ್ಲ ಎಂದು ಅವರು ಆರೋಪಿಸಿದರು.
ಮಂಜೇಶ್ವರ ವಿಧಾನಸಭಾ ವ್ಯಾಪ್ತಿಯಲ್ಲಿ ನಡೆದ ಚುನಾವಣಾ ಪ್ರಚಾರ ಮತಯಾಚನೆ ಯಲ್ಲಿ ವಿವಿಧ ಕಡೆ ಅವರು ಮತಯಾಚಿಸಿ ಮಾತನಾಡಿದರು.
ಪೆರ್ಲದಲ್ಲಿ ಬಿಜೆಪಿ ಹಿರಿಯ ನೇತಾರ ಟಿ.ಆರ್.ಕೆ. ಭಟ್ ಅವರ ಮನೆಯಿಂದ ಪ್ರಚಾರ ಆರಂಭಿಸಿ ಪೆರ್ಲ ಪೇಟೆ, ಸೀತಾಂಗೋಳಿ, ಪೆರ್ಮುದೆ, ಬಾಯಾರುಪದವು, ಮೀಯಪದವು, ಮಜೀರ್ಪಳ್ಳ, ಹೊಸಂಗಡಿ, ಮಲಂಗೈ ಪೇಟೆಗಳಲ್ಲಿ ವಿವಿಧ ಪ್ರಚಾರ ಸಭೆಗಳಲ್ಲಿ ಅವರು ಭಾಗವಹಿಸಿದರು.
ಮಂಡಲಾಧ್ಯಕ್ಷ ಸತೀಶ್ಚಂದ್ರ ಭಂಡಾರಿ ಕೆ., ಪ್ರಧಾನ ಕಾರ್ಯದರ್ಶಿ ಆದರ್ಶ್ ಬಿ.ಎಂ., ಎಂ. ಮುರಳೀಧರ್ ಯಾದವು, ಮುಖಂಡರಾದ ಪುಷ್ಪಾ ಅಮ್ಮೆಕಳ, ರೂಪವಾಣಿ ಭಟ್, ಸುಬ್ರಹ್ಮಣ್ಯ ಭಟ್, ಹರಿಶ್ಚಂದ್ರ ಎಂ., ಮಣಿಕಂಠ ರೈ, ಸತ್ಯಶಂಕರ ಭಟ್, ಗೋಪಾಲ್ ಶೆಟ್ಟಿ ಅರಿಬೈಲ್, ಬಾಲಕೃಷ್ಣ ಶೆಟ್ಟಿ, ಚಂದ್ರಶೇಖರ್, ಪ್ರಜಿತ್, ಚಂದ್ರಕಾಂತ್, ಧನರಾಜ್, ಸುಮಿತ್ ರಾಜ್, ವಲ್ಸ್ ರಾಜ್, ಸದಾಶಿವ ಚೇರಲ್ ಮೊದಲಾದವರು ಅವರ ಜತೆಯಲ್ಲಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಅಂಬಾರು ಸದಾಶಿವ ದೇವಸ್ಥಾನ, ಮಂಜೇಶ್ವರ ಅನಂತೇಶ್ವರ ದೇವಸ್ಥಾನ, ಬಜಕೂಡ್ಲು ದೇವಸ್ಥಾನಗಳಿಗೆ ಭೇಟಿ ನೀಡಿದರು ಹಾಗೂ ವರ್ಕಾಡಿಯಲ್ಲಿ ಹಾಗೂ ಮಂಜೇಶ್ವರ ಹೊಸಬೆಟ್ಟುನಲ್ಲಿ ಬಿಜೆಪಿ ಚುನಾವಣಾ ಕಚೇರಿ ಉದ್ಘಾಟನೆಯನ್ನು ನೆರವೇರಿಸಿದರು.
ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈ ನಿವಾಸಕ್ಕೆ ಭೇಟಿ ನೀಡಿ ಪುತ್ಥಳಿಗೆ ಮಾಲಾರ್ಪಣೆ ಮಾಡಿ ವಂದಿಸಿ, ಕನ್ನಡದ ಉಳಿಯುವಿಕೆಗೆ ಸಂಕಲ್ಪಗೈದರು.