Advertisement

Movie review: ಜೀವ-ಜೀವನದ ಸುತ್ತ ‘ಪೆಂಟಗನ್‌’

12:24 PM Apr 08, 2023 | Team Udayavani |

ಗುರುದೇಶಪಾಂಡೆ ನಿರ್ಮಾಣದಲ್ಲಿ ಮೂಡಿಬಂದಿರುವ “ಪೆಂಟಗನ್‌’ ಐದು ಕಥಾಹಂದರದ ಗುತ್ಛಗಳಿರುವ ಸಿನಿಮಾ. ಪ್ರೇಮ ವೈಫ‌ಲ್ಯದಿಂದ ಮನನೊಂದು ಬದುಕು ಕೊನೆಗಾಣಿಸಲು ಹೊರಟ ಯುವಕನ ಜೀವನದಲ್ಲಿ ಪರಿಸ್ಥಿತಿಗಳು ಹೇಗೆಲ್ಲ ಆಟವಾಡುತ್ತದೆ ಎಂಬುದು ಚಿತ್ರ ಮೊದಲ ಕಥೆಯಲ್ಲಿದ್ದರೆ, ಜೊತೆಗಿದ್ದವರು ಬದುಕಿದ್ದಾಗ ಜೀವನವನ್ನೇ “ಮೈಸೂರು ಪಾಕ್‌’ನಂತೆ ಅವರೊಂದಿಗೆ ಆಸ್ವಾಧಿಸಬೇಕು ಎಂಬ ಸಂದೇಶ ಎರಡನೇ ಕಥೆಯಲ್ಲಿದೆ. ಮೂರನೇ ಕಥೆಯಲ್ಲಿ ಆನ್‌ಲೈನ್‌ ವಂಚನೆ ತೆರೆದುಕೊಂಡರೆ, ನಾಲ್ಕನೇ ಕಥೆಯಲ್ಲಿ ಜಾತಿವೈಷಮ್ಯಕ್ಕೆ ಉಸಿರು ಚೆಲ್ಲುವ ಅಮಾಯಕ ಜೀವಗಳ ಚಿತ್ರಣವಿದೆ. ಅಂತಿಮವಾಗಿ ಬರುವ ಐದನೇ ಕಥೆಯೊಳಗೆ ಸಮಯದ ಸುಳಿಗೆ ಸಿಲುಗಿ ಡಾನ್‌ ಪಟ್ಟಗಿಟ್ಟಿಸಿಕೊಂಡ ಹೋರಾಟಗಾರನೊಬ್ಬನ ಬದುಕಿನ ವರ್ತಮಾನದ ವ್ಯಥೆಯಿದೆ.

Advertisement

ಇನ್ನು ಆರಂಭದಲ್ಲಿಯೇ ಚಿತ್ರತಂಡ ಹೇಳಿಕೊಂಡಂತೆ “ಪೆಂಟಗನ್‌’ ಒಂದು ಆ್ಯಂಥಾಲಜಿ ಶೈಲಿಯ ಸಿನಿಮಾ. ಐದು ಬೇರೆ ಬೇರೆ ಹಿನ್ನೆಲೆಯ ಐದು ಕಥೆಗಳನ್ನು ಇಟ್ಟುಕೊಂಡು ನಿರ್ದೇಶಕರಾದ ಆಕಾಶ್‌ ಶ್ರೀವತ್ಸ, ಚಂದ್ರಮೋಹನ್‌, ರಾಘು ಶಿವಮೊಗ್ಗ, ಕಿರಣ್‌ ಕುಮಾರ್‌ ಮತ್ತು ಗುರುದೇಶಪಾಂಡೆ ಐವರೂ ಕೂಡ ಸಾವು ಮತ್ತು ಬದುಕಿನ ನಡುವಿನ ಪ್ರಯಾಣದ ಹಲವು ಸ್ತರಗಳನ್ನು ತಮ್ಮದೇ ಆದ ಶೈಲಿಯಲ್ಲಿ ತೆರೆಮೇಲೆ ತಂದಿದ್ದಾರೆ.

ಪ್ರತಿಕಥೆಯಲ್ಲೂ ಅದರದ್ದೇ ಆದ ಪಾತ್ರಗಳು, ಅದಕ್ಕೆ ತಕ್ಕಂತ ಕಲಾವಿದರು ಮತ್ತು ತಂತ್ರಜ್ಞರಿರುವುದರಿಂದ, “ಪೆಂಟಗನ್‌’ ಸಿನಿಮಾದಲ್ಲಿ ಬರುವ ಪ್ರತಿ ಕಥೆಯೂ ಹೊಸರೀತಿಯಲ್ಲಿ ತೆರೆಮೇಲೆ ತೆರೆದುಕೊಳ್ಳುತ್ತದೆ. ಹೀಗಾಗಿ ಇಡೀ ಸಿನಿಮಾದಲ್ಲಿ ಬೃಹತ್‌ ಕಲಾವಿದರ ದಂಡೇ ಕಾಣಬಹುದು. ಪ್ರತಿ ಕಥೆಯನ್ನೂ ಅದಕ್ಕೊಂದು ಬಲವಾದ ಹಿನ್ನೆಲೆಯನ್ನು ಇಟ್ಟುಕೊಂಡು ಚಿತ್ರಕಥೆ ಮೂಲಕ ಕಟ್ಟಿಕೊಡಲಾಗಿರುವುದು ಸಿನಿಮಾದ ಹೈಲೈಟ್ಸ್‌ಗಳಲ್ಲೊಂದು.

ನೋಡುಗರನ್ನು ಪ್ರಚೋದಿಸುತ್ತಲೇ “ಪೆಂಟಗನ್‌’ನಲ್ಲಿ ಹೊಸ ಕಥೆ ತೆರೆದುಕೊಳ್ಳುತ್ತದೆ. ಪ್ರತಿ ಕಥೆಯಲ್ಲೂ ಚರ್ಚೆ, ತರ್ಕ, ವಾದಗಳನ್ನು ಮುಂದಿಡುತ್ತಲೇ “ಪೆಂಟಗನ್‌’ ಮುಂದಕ್ಕೆ ಸಾಗುತ್ತದೆ. ಎಲ್ಲ ವರ್ಗದ ಪ್ರೇಕ್ಷಕರನ್ನೂ ಗಮನದಲ್ಲಿ ಇಟ್ಟುಕೊಂಡು, ಅಭಿರುಚಿಗೆ ತಕ್ಕಂತೆ ಕಥೆಯನ್ನು ಆಯ್ಕೆ ಮಾಡಿಕೊಳ್ಳುವಲ್ಲಿ ಚಿತ್ರತಂಡ ಯಶಸ್ವಿಯಾಗಿದೆ.

ಕನ್ನಡ ಚಿತ್ರರಂಗದಲ್ಲಿ ಅಪರೂಪ ಎಂದೇ ಹೇಳಲಾಗುವ ಆ್ಯಂಥಾಲಜಿ ಶೈಲಿಯ “ಪೆಂಟಗನ್‌’ ಅಂತಿಮವಾಗಿ ತನ್ನ ಕಥಾಹಂದರ, ನಿರೂಪಣೆ ಮತ್ತು ಪ್ರಯೋಗದಿಂದಾಗಿ ಒಮ್ಮೆ ನೋಡಬಹುದಾದ ಸಿನಿಮಾ ಎನಿಸಿಕೊಳ್ಳುತ್ತದೆ.

Advertisement

ಜಿ.ಎಸ್‌.ಕಾರ್ತಿಕ ಸುಧನ್‌

Advertisement

Udayavani is now on Telegram. Click here to join our channel and stay updated with the latest news.

Next