Advertisement

ಹಣ ಕೊಟ್ಟು ನವೀಕರಿಸಿ, ಇಲ್ಲವೇ ಭೂಮಿ ಬಿಡಿ

01:49 AM Jun 27, 2019 | Sriram |

ಸುಬ್ರಹ್ಮಣ್ಯ: ಕಿದುವಿನ ಅಂತಾ ರಾಷ್ಟ್ರೀಯ ತೆಂಗು ಅಭಿವೃದ್ಧಿ ಸಂಸ್ಥೆಯ ಭವಿಷ್ಯಮತ್ತೆ ತೂಗುಯ್ನಾಲೆಯಲ್ಲಿದೆ. ಕಿದು ಸುರಕ್ಷಿತಾ ರಣ್ಯದಲ್ಲಿ ಸಂಶೋಧನಾ ಉದ್ದೇಶಕ್ಕಾಗಿ ಗೇಣಿ ನೆಲೆಯಲ್ಲಿ ಪಡೆದಿದ್ದ ಪ್ರದೇಶವನ್ನು ಹಣ ಪಾವತಿಸಿ ನವೀಕರಿಸುವಂತೆ ಅರಣ್ಯ ಇಲಾಖೆ ಬುಧವಾರ ನೋಟಿಸ್‌ ನೀಡಿದ್ದು, ಇಲ್ಲದಿದ್ದಲ್ಲಿ ಅರಣ್ಯ ಭೂಮಿಯನ್ನು ಹಿಂಪಡೆಯುವುದಾಗಿ ತಿಳಿಸಿದೆ.

Advertisement

ಮಂಗಳೂರು ಉಪ ಅರಣ್ಯ ಸಂರಕ್ಷಣಾಧಿ ಕಾರಿಗಳು ಜೂ. 26ರಂದು ಹೊರಡಿಸಿರುವ ಸೂಚನೆಯಲ್ಲಿ ಕಿದು ಸುರಕ್ಷಿತಾರಣ್ಯದಲ್ಲಿ ಸಂಶೋಧನ ಉದ್ದೇಶಕ್ಕಾಗಿ ಗೇಣಿ ನೆಲೆಯಲ್ಲಿ ನೀಡಿದ 121.41 ಹೆ. ಭೂಮಿಯನ್ನು ಅರಣ್ಯ ಸಂರಕ್ಷಣ ಕಾಯ್ದೆ 1980ರನ್ವಯ ನವೀಕರಿಸಿ ಮಂಜೂರು ಮಾಡಲಾಗಿದೆ. ಅದರಂತೆ ಸಂಸ್ಥೆ ಯವರು ಎನ್‌ಪಿವಿ ಮತ್ತು ಸಿಎ ಮೊತ್ತವನ್ನು ಪಾವತಿಸಬೇಕಿದೆ. ಇದುವರೆಗೆ ಯಾವುದೇ ಮೊತ್ತ ಪಾವತಿಸಿಲ್ಲ. ಸಂಸ್ಥೆಯು ಎನ್‌ಪಿವಿ ಮೊತ್ತ 12,66,30,630 ರೂ. ಮತ್ತು ಸಿಎ ಮೊತ್ತ 6,60,47,040 ರೂ. ಸೇರಿದಂತೆ ಒಟ್ಟು 19,26,77,670 ರೂ.ಗಳನ್ನು ಮುಂದಿನ 10 ದಿನಗಳೊಳಗೆ ಪಾವತಿಸಬೇಕು. ಇಲ್ಲದಿದ್ದಲ್ಲಿ ಅರಣ್ಯ ಭೂಮಿಯನ್ನು ಹಿಂಪಡೆಯಲಾಗುವುದು ಎಂದಿದೆ.

1972ರಲ್ಲಿ ಸ್ಥಾಪನೆ
1972ರಲ್ಲಿ ಪುತ್ತೂರು ತಾಲೂಕಿನ ಬಿಳಿನೆಲೆ ಗ್ರಾಮದ ಕಿದು ರಕ್ಷಿತಾರಣ್ಯದಲ್ಲಿ 300 ಎಕರೆ ಭೂಮಿಯನ್ನು ಅರಣ್ಯ ಇಲಾಖೆಯಿಂದ 30 ವರ್ಷಗಳ ಅವಧಿಗೆ ಲೀಸಿಗೆ ಪಡೆದು ಅಡಿಕೆ, ತೆಂಗು ಮತ್ತು ಕೊಕ್ಕೊ ಗಿಡಗಳನ್ನು ಬೆಳೆಸಿ ಸಂಶೋಧನ ಉಪಕೇಂದ್ರವನ್ನು ಸ್ಥಾಪಿಸಲಾಗಿತ್ತು. ಇದರ ಅವಧಿ 2000ನೇ ಇಸವಿಗೆ ಮುಗಿದಿದೆ. ಅರಣ್ಯ ಇಲಾಖೆ ಲೀಸಿಗೆ ನೀಡಿದ ಭೂಮಿಯನ್ನು ಮರಳಿ ಪಡೆಯಬೇಕು ಎಂಬ ಸುಪ್ರೀಂ ಕೋರ್ಟಿನ ಆದೇಶದಂತೆ ಇಲಾಖೆ ಈ ಕ್ರಮಕ್ಕೆ ಮುಂದಾಗಿದ್ದು, ಜಾಗ ಮರಳಿ ನೀಡುವುದು ಅಥವಾ ಬದಲಾಗಿ 300 ಎಕರೆ ಖಾಲಿ ಜಾಗದಲ್ಲಿ ಅರಣ್ಯ ಬೆಳೆಸಲು ತಗಲುವ 12 ಕೋಟಿ ರೂ. ಭರಿಸಿ ಮತ್ತೆ 30 ವರ್ಷಗಳ ಅವಧಿಗೆ ಲೀಸ್‌ ಮುಂದುವರಿಸಲು ಅವಕಾಶ ಕಲ್ಪಿಸಿತ್ತು.

ಸಿಪಿಸಿಆರ್‌ಐ ಆಡಳಿತವೂ ಕೇಂದ್ರ ಅರಣ್ಯ ಮತ್ತು ಪರಿಸರ ಇಲಾಖೆಗೆ ನವೀಕರಣ ಕೋರಿ ಅರ್ಜಿ ಸಲ್ಲಿಸಿತ್ತು. ಅಷ್ಟರಲ್ಲಿ ಅರಣ್ಯ ಮತ್ತು ಪರಿಸರ ಇಲಾಖೆ ಸುಪ್ರೀಂ ಕೋರ್ಟ್‌ ಅರಣ್ಯ ಸಂರಕ್ಷಣೆ ವಿಚಾರವಾಗಿ ನೀಡಿದ್ದ ಆದೇಶವನ್ನು ಮುಂದಿರಿಸಿ ನವೀಕರಣಕ್ಕೆ ನಿರಾಕರಿಸಿತ್ತು. ಬದಲಿ ಜಾಗ ಗುರುತಿಸಿ ಅರಣ್ಯ ಅಭಿವೃದ್ಧಿಗೆ 12 ಕೋಟಿ ರೂ. ಭರಿಸುವಂತೆ ಹೇಳಿತ್ತು. ಇಲ್ಲಿ ಪರಿಸರಕ್ಕೆ ಪೂರಕ ಹಸಿರು ವಾತಾವರಣ ನಿರ್ಮಿಸುವ ಬೆಳೆ ಬೆಳೆಯಲಾಗುತ್ತಿದೆ. ಆದ್ದರಿಂದ ವಿನಾಯಿತಿ ನೀಡಬೇಕು ಎಂದು ಕೇಳಿಕೊಂಡಿತ್ತು. ಸುಪ್ರೀಂ ಕೋರ್ಟ್‌ ಆದೇಶದಲ್ಲಿ ಸೂಚಿಸಿದ ವಿನಾಯಿತಿ ಪಟ್ಟಿಯಲ್ಲಿ ನಿಮ್ಮ ಸಂಶೋಧನಾ ಕೇಂದ್ರ ಸೇರದೆ ಇರುವುದರಿಂದ ವಿನಾಯಿತಿ ಸಾಧ್ಯವಿಲ್ಲ ಎಂದು ಪರಿಸರ ಇಲಾಖೆ ಸ್ಪಷ್ಟಪಡಿಸಿತ್ತು.

ಅನಂತರ ಕೇಂದ್ರದ ಉನ್ನತ ಅಧಿಕಾರಿಗಳು ನಿರಾಸಕ್ತಿತೋರಿದ್ದರು. ಸಂಶೋಧನ ಕೇಂದ್ರ ರಾಜ್ಯದ ಕೈತಪ್ಪುವಸಾಧ್ಯತೆ ಬಗ್ಗೆ ಆತಂಕಗೊಂಡ ಈ ಭಾಗದ ಪ್ರಮುಖರು ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ ಅವರ ಗಮನಕ್ಕೆ ತಂದಿದ್ದರು. ಆವರು ಕೇಂದ್ರ ಕೃಷಿ ಸಚಿವರ ಮೇಲೆ ಒತ್ತಡ ತಂದು ತಾತ್ಕಾಲಿಕವಾಗಿ ತಡೆ ತಂದಿದ್ದರು.

Advertisement

ಲೀಸ್‌ ಅವಧಿ ಮುಗಿದ ಬಳಿಕವೂ ನವೀಕರಿಸದ ಸಂಸ್ಥೆಗಳಿಗೆ ನೋಟಿಸ್‌ನೀಡುತ್ತಿದ್ದೇವೆ. ಅದರಂತೆ ಕಿದು ಪ್ಲಾಂಟೇಶನ್‌ಗೂ ಜಾರಿಗೊಳಿಸಿದ್ದೇವೆ. ಲೀಸಿಗೆ ಪಡೆದ ಭೂಮಿಯನ್ನು ಕಾಲಕಾಲಕ್ಕೆ ನವೀಕರಿಸುವುದು ಅವರ ಜವಾಬ್ದಾರಿ. ಇಲ್ಲವಾದಲ್ಲಿ ಅರಣ್ಯ ಕಾಯ್ದೆಯಂತೆ ಭೂಮಿಯನ್ನು ವಾಪಸ್‌ ಪಡೆಯಲಾಗುತ್ತದೆ.
– ಕರಿಕಾಲನ್‌,ಉಪ ಅರಣ್ಯ ಸಂರಕ್ಷಣಾಧಿಕಾರಿ ಮಂಗಳೂರು

Advertisement

Udayavani is now on Telegram. Click here to join our channel and stay updated with the latest news.

Next