Advertisement

ಶಿಕ್ಷಕರ ನೇಮಕಾತಿಗೆ ಗಮನ ಕೊಡಿ

05:33 PM Sep 17, 2017 | |

ಸಿರಿಗೆರೆ: ಶಾಲಾ-ಕಾಲೇಜುಗಳಲ್ಲಿ ಶಿಕ್ಷಕರ ಕೊರತೆ ಇದ್ದು, ನೇಮಕಾತಿ ಪ್ರಕ್ರಿಯೆಗೆ ಸರ್ಕಾರ ವಿಳಂಬ ಮಾಡುತ್ತಿರುವುದರಿಂದ ಶೈಕ್ಷಣಿಕ ಪ್ರಗತಿ ಕುಂಠಿತವಾಗುತ್ತಿದೆ ಎಂದು ತರಳಬಾಳು ಜಗದ್ಗುರು ಡಾ| ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಆತಂಕ ವ್ಯಕ್ತಪಡಿಸಿದರು.

Advertisement

ಇಲ್ಲಿನ ಶ್ರೀ ಗುರುಶಾಂತೇಶ್ವರ ದಾಸೋಹಮಂಟಪದಲ್ಲಿ ನಡೆದ ತರಳಬಾಳು ಜಗದ್ಗುರು ವಿದ್ಯಾಸಂಸ್ಥೆಯ ವಾರ್ಷಿಕ ಮಹಾಸಭೆಯ ಸಾನ್ನಿಧ್ಯ ವಹಿಸಿ ಶ್ರೀಗಳು ಮಾತನಾಡಿದರು.

ಶಿಕ್ಷಕರ ನೇಮಕಾತಿ ವಿಳಂಬದಿಂದ ಖಾಸಗಿ ಶಿಕ್ಷಣ ಸಂಸ್ಥೆಗಳಿಗೂ ತೊಂದರೆಯಾಗಿದೆ. ಆದ್ದರಿಂದ ಮಕ್ಕಳಿಗೆ ತೊಂದರೆಯಾಗದಂತೆ ನೆರೆಯ ಶಾಲೆಗಳ ಶಿಕ್ಷಕರನ್ನು ಎರವಲು ಸೇವೆಗೆ ಬಳಸಿಕೊಳ್ಳುವುದು ಇಲ್ಲವೇ ಸ್ಥಳೀಯವಾಗಿ ತಾತ್ಕಾಲೀನ ನೇಮಕಾತಿ ಮಾಡಿಕೊಳ್ಳುವುದರಿಂದ ಸಮಸ್ಯೆ ಸರಿಪಡಿಸಬಹುದು ಎಂದು ಸಲಹೆ ನೀಡಿದರು.

ಬೆಂಗಳೂರು ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿ ಡಾ| ಕೆ. ಸಿದ್ದಪ್ಪನವರ ಮಾರ್ಗದರ್ಶನದಲ್ಲಿ ಪ್ರೌಢಶಾಲಾ ಮಕ್ಕಳ ಬೌದ್ಧಿಕ ಬೆಳವಣಿಗೆಗೆ ರೂಪಿಸಿರುವ ಗಣಿತ ಮತ್ತು ವಿಜ್ಞಾನ ವಿಷಯಗಳ ಎಲೆಕ್ಟ್ರಾನಿಕ್‌ ಬೋಧನಾ ತಂತ್ರಾಂಶಗಳು ಪರಿಣಾಮಕಾರಿಯಾಗಿವೆ. ಅವುಗಳನ್ನು ಇ-ಟೀಚಿಂಗ್‌ ಬೋಧನಾ ರೂಪದಲ್ಲಿ ತರಳಬಾಳು ಸಂಸ್ಥೆಯ 91 ಪ್ರೌಢಶಾಲೆಗಳಲ್ಲಿ ಬಳಸಲಾಗುತ್ತಿದೆ. ಎಲ್ಲ ಪ್ರೌಢಶಾಲೆಗಳಿಗೆ ಕಂಪ್ಯೂಟರ್‌, ಯುಪಿಎಸ್‌ ಮತ್ತು ಪ್ರೊಜೆಕ್ಟರ್‌ಗಳನ್ನು ಒದಗಿಸಲಾಗಿದೆ. ಇವುಗಳನ್ನು ಬಳಸಿಕೊಂಡು ಶಿಕ್ಷಕರು ವಿದ್ಯಾರ್ಥಿಗಳಿಗೆ ಮಾರ್ಗದರ್ಶಕರಾಗಬೇಕು. ಶಿಕ್ಷಕರು ಕ್ರಿಯಾಶೀಲರಾಗಿ ಕೆಲಸ ನಿರ್ವಹಿಸದೇ ಇದ್ದಲ್ಲಿ ಯಾವ ಯೋಜನೆಗಳು ಪರಿಣಾಮಕಾರಿಯಾಗುವುದಿಲ್ಲ. ಶಿಕ್ಷಕರು ಆಸಕ್ತಿಯಿಂದ ಮಕ್ಕಳನ್ನು ಬೆಳೆಸುವ ಕಾರ್ಯಕ್ಕೆ ಮುಂದಾಗಬೇಕು ಎಂದರು. ಹಲವು ಇಲಾಖೆಗಳಲ್ಲಿ ಹೆಚ್ಚುವರಿಯಾಗಿದ್ದ ನೌಕರರನ್ನು ನಮ್ಮ ಸಂಸ್ಥೆಯ ಪ್ರೌಢಶಾಲೆಗಳಿಗೆ ಸರ್ಕಾರ ನಿಯೋಜಿಸಿದೆ. ಅವರಲ್ಲಿ ಬಹುತೇಕ ನೌಕರರಿಗೆ ಕಂಪ್ಯೂಟರ್‌ ಜ್ಞಾನವಿಲ್ಲ. ಲೆಕ್ಕಪತ್ರಗಳ ನಿರ್ವಹಣೆಯೂ ಗೊತ್ತಿಲ್ಲ. ಆಸಕ್ತಿಯಿಂದ ಕೆಲಸ ಕಲಿತುಕೊಳ್ಳುವಂತೆ ಅವರಿಗೆ ಸೂಚಿಸಲಾಗಿದೆ. ಕೆಲಸದಲ್ಲಿ ಆಸಕ್ತಿ ತೋರಿಸದೇ ಇದ್ದಲ್ಲಿ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದೆಂದು ತಿಳಿಸಿದರು.

ಪ್ರಾಥಮಿಕ ಶಿಕ್ಷಣಕ್ಕೆ ಒತ್ತು ನೀಡಬೇಕೆಂಬ ಆಶಯದಿಂದ ರಾಜ್ಯದ ಹಲವೆಡೆ ಸುಮಾರು 50 ಪ್ರಾಥಮಿಕ ಶಾಲೆಗಳನ್ನು ಆರಂಭಿಸಲಾಗಿದೆ. ಅವುಗಳಿಗೆ ನಿವೇಶನ, ಕಟ್ಟಡ, ಬಸ್‌ ಸೌಲಭ್ಯ ಒದಗಿಸಲು ಕೋಟ್ಯಂತರ ರೂ. ವ್ಯಯಿಸಲಾಗಿದೆ. ಬಹುತೇಕ ಶಾಲೆಗಳು ಗ್ರಾಮಾಂತರ ಪ್ರದೇಶಗಳಲ್ಲಿದ್ದು ಪೋಷಕರಿಂದ ಸಕಾಲದಲ್ಲಿ ಶುಲ್ಕ ಸಂಗ್ರಹವಾಗುತ್ತಿಲ್ಲ. ನೌಕರರಿಗೆ ವೇತನ ನೀಡಲೂ ಸಂಪನ್ಮೂಲ ಕಡಿಮೆ ಇದೆ. ಈ ಶಾಲೆಗಳಿಂದ ಸುಮಾರು ಎಂಟೂವರೆ ಕೋಟಿ ರೂ. ಶುಲ್ಕ ಸಂಗ್ರಹವಾಗಬೇಕಾಗಿದೆ. ಹೀಗಿದ್ದರೂ ಪ್ರಾಥಮಿಕ ಶಾಲೆಗಳ ಶಿಕ್ಷಕರಿಗೆ ಸಂಸ್ಥೆಯಿಂದಲೇ ವೇತನ ನೀಡಲಾಗುತ್ತಿದೆ ಎಂದರು.

Advertisement

ಸಂಸ್ಥೆಯ ಕಾರ್ಯಕಾರಿ ಮಂಡಳಿ ಸದಸ್ಯ, ವಿಶ್ರಾಂತ ಕುಲಪತಿ ಡಾ| ಕೆ. ಸಿದ್ದಪ್ಪ ಮಾತನಾಡಿ, ಪೈಪೋಟಿಗಿಳಿದಿರುವ ಕಾನ್ವೆಂಟ್‌ ಶಾಲೆಗಳಿಂದ ರಾಜ್ಯದಲ್ಲಿ ಕನ್ನಡ ಮಾಧ್ಯಮದ ಶಾಲೆಗಳು ನಿರ್ಲಕ್ಷ್ಯಕ್ಕೊಳಗಾಗಿವೆ. ಪೋಷಕರು ಇಂಗ್ಲಿಷ್‌ ಮಾಧ್ಯಮದ ಶಾಲೆಗಳತ್ತ ಆಕರ್ಷಿತರಾಗಿದ್ದಾರೆ. ಕನ್ನಡ ಮಾಧ್ಯಮದ ಶಾಲೆಗಳಲ್ಲೂ ಪ್ರತಿಭಾವಂತ ಶಿಕ್ಷಕರಿದ್ದು ಗುಣಮಟ್ಟದ ಶಿಕ್ಷಣ ಲಭ್ಯವಾಗುತ್ತಿದೆ ಎಂಬುದನ್ನು ಮರೆಯುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಡಾ| ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ಡಾ| ಎಸ್‌. ಸಿದ್ದಯ್ಯ, ಹನುಮಲಿ ಷಣ್ಮುಖಪ್ಪ, ಪ್ರೊ| ಸಿದ್ದಲಿಂಗಯ್ಯ, ಸಿ. ಸಿದ್ದಪ್ಪ, ಬಿ.ಟಿ. ಪುಟ್ಟಪ್ಪ, ಮಲ್ಲಿಕಾರ್ಜುನಪ್ಪ, ಎಚ್‌.ಜಿ. ರೇವಣ್ಣ ಉಪಸ್ಥಿತರಿದ್ದರು. ಸಂಸ್ಥೆಯ ಆಡಳಿತಾಧಿಕಾರಿ ಎಸ್‌.ಬಿ. ರಂಗನಾಥ್‌ ಸ್ವಾಗತಿಸಿದರು. ಶಿವಕುಮಾರ್‌ ಲೆಕ್ಕಪತ್ರ ಮಂಡಿಸಿದರು. ಅಧ್ಯಾಪಕ ರಾಜಶೇಖರ್‌ ನಿರೂಪಿಸಿದರು. ಡಾ| ಟಿ.ಎನ್‌. ದೇವರಾಜ್‌ ವಂದಿಸಿದರು.

ತರಳಬಾಳು ಜಗದ್ಗುರು ವಿದ್ಯಾಸಂಸ್ಥೆಯ ಶಾಲಾ-ಕಾಲೇಜುಗಳಲ್ಲಿ ಪ್ರಸ್ತುತ 51 ಸಾವಿರ ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಅವರ ಮಾಹಿತಿಯನ್ನು ಕ್ರೋಢೀಕರಿಸುವ ಉದ್ದೇಶದಿಂದ ತಂತ್ರಾಂಶವೊಂದನ್ನು ಸಿದ್ಧಪಡಿಸಲಾಗುತ್ತಿದೆ. ಈ ತಂತ್ರಾಂಶದಿಂದ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಯನ್ನು ಗಮನಿಸಬಹುದು. ಅಲ್ಲದೆ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಸಂಸ್ಥೆಯ ವತಿಯಿಂದ ಪ್ರೋತ್ಸಾಹಿಸಲು ಸಹಕಾರಿಯಾಗಲಿದೆ.
ಡಾ| ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ.

Advertisement

Udayavani is now on Telegram. Click here to join our channel and stay updated with the latest news.

Next