Advertisement

ಎಸ್.ಆರ್.ಪಾಟೀಲ್ ಭೇಟಿಯಾದ ಇಬ್ರಾಹಿಂ: ‘ಅಲಿಂಗ ಚಳವಳಿ’ವಿಜಯಪುರದಿಂದ ಆರಂಭ !

08:21 PM Jan 30, 2022 | Team Udayavani |

ಹುಬ್ಬಳ್ಳಿ: ಎಸ್.ಆರ್. ಪಾಟೀಲ ಮತ್ತು ನನ್ನ ನಡುವಿನ ಸಭೆ ಫಲಪ್ರದವಾಗಿದೆ. ಮುಂದೆ ಏನಾಗುತ್ತದೆ ಕಾದು ನೋಡಿ ಎಂದು ವಿಪ ಸದಸ್ಯ ಸಿ.ಎಂ. ಇಬ್ರಾಹಿಂ ತಿಳಿಸಿದರು.

Advertisement

ನಗರದ ಖಾಸಗಿ ಹೊಟೇಲ್ ನಲ್ಲಿ ಉಭಯ ನಾಯಕರು ಮಾತುಕತೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಬ್ಬರ ನಡುವಿನ ಸಭೆ ಯಶಸ್ವಿಯಾಗಿದೆ. ನನ್ನ ಜೊತೆಗೆ ಬಹಳಷ್ಟು ದೊಡ್ಡವರ ಬೆಂಬಲವಿದೆ. ಹೆಸರು ಹೇಳಲ್ಲ. ಕಾಂಗ್ರೆಸ್ ನವರು ನನ್ನ ಜೊತೆಗಿದ್ದಾರೆ. ಯಾವುದನ್ನು ಈಗಲೇ ಹೇಳಿಲ್ಲ. ಸಮಯಕ್ಕಾಗಿ ಕಾಯುತ್ತಿದ್ದೇನೆ. ಬಹಳಷ್ಟು ಪಕ್ಷಗಳ ನಾಯಕರು ನನ್ನನ್ನು ಕರೆಯುತ್ತಿದ್ದಾರೆ. ವಾರದೊಳಗೆ ಯಾವ ಪಕ್ಷ ಸೇರಬೇಕೆಂಬುದನ್ನು ನಿರ್ಧರಿಸುವೆ. ತಡ ಮಾಡುವುದಿಲ್ಲ ಎಂದರು.

ಅಲಿಂಗ ಚಳವಳಿ ವಿಜಯಪುರದಿಂದ ಆರಂಭ ಮಾಡುತ್ತೇವೆ. ಇದರಲ್ಲಿ ಎಸ್.ಆರ್. ಪಾಟೀಲ ಸಹ ಭಾಗಿ ಆಗುತ್ತಾರೆ. ಅವರು ಕಾಂಗ್ರೆಸ್ ಬಿಟ್ಟು ನನ್ನ ಜೊತೆ ಬರುತ್ತಾರಾ ಎಂದು ಕಾದುನೋಡಿ ಎಂದರು.

ನಿಮಗೆ ವಿಪಕ್ಷ ಸ್ಥಾನ ಸಿಗದ್ದಕ್ಕೆ ನನಗೆ ತುಂಬಾ ನೋವಾಗುತ್ತಿದೆ ಅಂತ ಪಾಟೀಲ ಸಹಾನುಭೂತಿ ವ್ಯಕ್ತಪಡಿಸಿದರು. ಅವರು ಪಕ್ಷದಲ್ಲಿ ಇರಬೇಕು ಅಂತ ಮನವಿ ಮಾಡಿದರು. ಆದರೆ ಅದು ಮುಗಿದ ಅಧ್ಯಾಯ. ಒಂದು ಸಲ ಡ್ಯಾಂ ಒಡೆದು ನೀರು ಹರಿದು ಹೋದರೆ ಮುಗಿಯಿತು ಎಂದರು.

ಇನ್ನು ಐದಾರು ದಿನಗಳಲ್ಲಿ ಕೊಪ್ಪಳ, ಕಲಬುರಗಿ, ಬಳ್ಳಾರಿ, ರಾಯಚೂರು ಮತ್ತು ಬೆಳಗಾವಿ ಪ್ರವಾಸ ಮಾಡುತ್ತೇನೆ. ನಾನು ನಿರೀಕ್ಷೆ ಮಾಡಿದಕ್ಕಿಂತ ಹೆಚ್ಚು ಬೆಂಬಲ ಸಿಗುತ್ತಿದೆ. ನನಗೆ ಸಿದ್ಧರಾಮಯ್ಯರಿಂದ ಯಾವುದೇ ಫೋನ್ ಕಾಲ್ ಬಂದಿಲ್ಲ. ಅದನ್ನು ನಾನು ನಿರೀಕ್ಷೆ ಸಹ ಮಾಡಲ್ಲ. ನನಗೆ ಜೆಡಿಎಸ್, ಮಮತಾ ಬ್ಯಾನರ್ಜಿ, ಅಖೀಲೇಶ್ ಯಾದವರ ಮೇಲೆ ಒಲವುಯಿದೆ. ಯಾವ ಪಕ್ಷ ಸೇರಿದರೆ ಒಳಿತು ಎಂದು ನೋಡೋಣ ಎಂದರು.

Advertisement

ಭಾವಕರಾಗಿ ಕಣ್ಣೀರು

ನನ್ನನ್ನು ನೀವು ಬೆಳೆಸಿದ್ದೀರಿ. ಇನ್ಮೇಲು ನೀವೇ ಕೈ ಹಿಡಿಯಬೇಕು ಎಂದು ಇಬ್ರಾಹಿಂ ಮಾಧ್ಯಮದವರ ಎದುರು ಭಾವಕರಾಗಿ ಕಣ್ಣೀರು ಹಾಕಿದರು.

ನಗರದ ಖಾಸಗಿ ಹೊಟೇಲ್ ನಲ್ಲಿ ನಿನ್ನೆಯಿಂದ ತಂಗಿದ್ದ ಅವರು, ಪಕ್ಷದಿಂದ ಹೊರ ಬಂದಿದ್ದೇನೆ. ವಾಪಸ್ಸು ಹೋಗುವ ಪ್ರಶ್ನೆಯೇ ಇಲ್ಲ. ಮುಂದಿನ ದಾರಿ ನೋಡೋಣ. ನನ್ನ ಶಾಪ ಭಾರಿ ಕೆಟ್ಟದ್ದು, ಇವಾಗ ತಟ್ಟುತ್ತಿದೆ. ನಾನು ವಿಷಕಂಠ ಇದ್ದಂತೆ. ಎಲ್ಲವೂ ನುಂಗಿಕೊಂಡು ಇದ್ದೆ. ನಂಗೆ ಎಂಎಲ್ ಸಿ ಮಾಡಿದ್ದೆ ಅಂತ ಸಿದ್ದರಾಮಯ್ಯ ಹೇಳುತ್ತಾರೆ. ನಾಳೆನೇ ರಾಜೀನಾಮೆ ಕೊಡುತ್ತೇನೆ . ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಸ್ಪರ್ಧೆ ಮಾಡಲಿ. ಯಾರು ಗೆಲ್ಲುತ್ತಾರೆ ನೋಡೋಣ ಎಂದು ಸವಾಲು ಹಾಕಿದರು.

ಡಿ.ಕೆ. ಶಿವಕುಮಾರ ಬಹಳ ದೊಡ್ಡವರು. ನಮ್ಮಂತವರನ್ನೆಲ್ಲಾ ಯಾಕೆ ಮಾತನಾಡಿಸುತ್ತಾರೆ. ಆರು ತಿಂಗಳ ಹಿಂದೆ ಎಲ್ಲವೂ ಸರಿ ಮಾಡುತ್ತೇನೆ ಅಂದಿದ್ದರು. ಆದರೆ ಏನು ಆಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ನಮ್ಮ ಜೊತೆ ಯಾರು ಬರುತ್ತಾರೋ ಅವರನ್ನು ಕರೆದುಕೊಂಡು ಹೋಗುತ್ತೇನೆ. ಇಲ್ಲಿ ಅಲಿಂಗ (ಅಲ್ಪಸಂಖ್ಯಾತ-ಲಿಂಗಾಯತರು) ಮಾಡುತ್ತೇನೆ. ಅಲ್ಲಿ ಅಗೌ (ಗೌಡ-ಅಲ್ಪಸಂಖ್ಯಾತರು) ಮಾಡುತ್ತೇನೆ. ಅವರು ಅಹಿಂದ ಮಾಡಿದ್ದಾರಲ್ಲ ಎಂದು ಶಿವಕುಮಾರ, ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು.

ಸೌಹಾರ್ದ ಭೇಟಿ

ಸಿ.ಎಂ. ಇಬ್ರಾಹಿಂ ಅವರ ಸೌಹಾರ್ದ ಭೇಟಿಗಾಗಿ ಬಂದಿದ್ದೇನೆ ನಾನು ಎಲ್ಲಿಯೂ ಪಕ್ಷ ಬಿಡುತ್ತೇನೆ ಅಂತ ಹೇಳಿಲ್ಲ. ನಾನು ವಿಪಕ್ಷ ನಾಯಕನಿದ್ದಾಗ ಇಬ್ರಾಹಿಂ ಸಾಕಷ್ಟು ಬೆಂಬಲ‌ ನೀಡಿದ್ದರು. ಅವರಿಗೆ ವಿಪಕ್ಷ ನಾಯಕ ಸ್ಥಾನ ಸೀಗಬೇಕಿತ್ತು. ಕೇವಲ ಅದು ಅವರಿಗೆ ಆದ ನಷ್ಟ ಅಲ್ಲ. ಆ ಸಮುದಾಯಕ್ಕೂ ನಷ್ಟ ಎಂದು ವಿಧಾನ ಪರಿಷತ್ ಮಾಜಿ ವಿಪಕ್ಷ ನಾಯಕ ಎಸ್.ಆರ್. ಪಾಟೀಲ ಹೇಳಿದರು.

ಇಬ್ರಾಹಿಂ ಕೂಡ ನೋವು ತೋಡಿಕೊಂಡಿದ್ದಾರೆ. ಪಕ್ಷದಲ್ಲೆ ಉಳಿಯುವಂತೆ ಮನವೊಲಿಕೆಗೆ ಪ್ರಯತ್ನ ಮಾಡುತ್ತೇನೆ ಎಂದರು.ಪಕ್ಷದಲ್ಲಿ ಹಿರಿಯರ ಕಡೆಗಣನೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಪಕ್ಷದಲ್ಲಿ ದ್ವಿತೀಯ ಹಂತದ ನಾಯಕರು ಬೆಳೆದರೇ ತಪ್ಪೇನು? ಇದು ಪಕ್ಷದ ಹೈಕಮಾಂಡ್ ನಿರ್ಧಾರ. ಅದಕ್ಕೆ ವೈಯಕ್ತಿಕವಾಗಿ ಬದ್ಧವಾಗಿದ್ದೇನೆ ಎಂದು ಭೇಟಿಗೂ ಮುನ್ನ ಹೇಳಿದ್ದರು.

ಕಾಂಗ್ರೆಸ್ ನಾಯಕರ ವಿರುದ್ಧ ತೀವ್ರ ಅಸಮಾಧಾನ ಹೊಂದಿರುವ ಇಬ್ರಾಹಿಂ ಈಗಾಗಲೇ ಕಾಂಗ್ರೆಸ್ ಬಿಟ್ಟಿರುವುದಾಗಿ ಹೇಳಿದ್ದಾರೆ. ಪರಿಷತ್ ಟಿಕೆಟ್ ಕೈ ತಪ್ಪಿದ್ದ ಹಿನ್ನೆಲೆಯಲ್ಲಿ ಒಳಗೊಳಗೆ ಅಸಮಾಧಾನ ಹೊಂದಿದ್ದ ಎಸ್.ಆರ್. ಪಾಟೀಲರ ನಡುವಿನ ಸಭೆ ಭಾರಿ ಚರ್ಚೆಗೆ ಗ್ರಾಸ ಒದಗಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next