Advertisement

ರೋಗಿ ರಕ್ಷಣಾ ಮಾರ್ಗಸೂಚಿ: ಎಚ್ಚರಿಕೆಯ ನಡೆ ಅಗತ್ಯ 

07:49 AM Sep 18, 2018 | Team Udayavani |

ಬಿಲ್‌ ವಸೂಲು ಮಾಡಲು ರೋಗಿಯನ್ನೇ ಒತ್ತೆಯಾಳಿನಂತೆ ಇಟ್ಟುಕೊಳ್ಳುವುದು ಮತ್ತು ಅಸುನೀಗಿದರೆ ಮೃತದೇಹ ಕೊಡಲು ನಿರಾಕರಿಸುವ ಆಸ್ಪತ್ರೆಗಳ ಅಮಾನವೀಯ ಕ್ರಮಗಳನ್ನು ತಡೆಯಲು ಕೇಂದ್ರ ಸರಕಾರ ಮುಂದಾಗಿದೆ. ಖಾಸಗಿ ಆಸ್ಪತ್ರೆಗಳಿಗೆ ಸಂಬಂಧಿಸಿ ಹೊರಡಿಸಿರುವ ರೋಗಿ ರಕ್ಷಣಾ ಮಾರ್ಗಸೂಚಿಯಲ್ಲಿ ಈ ಅಂಶವಿದೆ. ರಾಜ್ಯ ಸರಕಾರಗಳ ಮೂಲಕ ಈ ಮಾರ್ಗಸೂಚಿಯನ್ನು ಅನುಷ್ಠಾನಿಸಲು ಉದ್ದೇಶಿಸಲಾಗಿದೆ. ಈ ಸಂದರ್ಭದಲ್ಲಿ ಕರ್ನಾಟಕ ಸರಕಾರ ಜಾರಿಗೆ ತರಲುದ್ದೇಶಿಸಿದ್ದ ವೈದ್ಯಕೀಯ ಕಾಯಿದೆಯನ್ನೊಮ್ಮೆ ನೆನಪಿಸಿಕೊಳ್ಳುವುದು ಒಳ್ಳೆಯದು. ರಾಜ್ಯ ಸರಕಾರ ರಚಿಸಿದ ಕಾಯಿದೆಯಲ್ಲೂ ಈ ಮಾದರಿಯ ಹಲವು ಕಠಿಣ ನಿಯಮಗಳು ಇದ್ದವು. ಇದನ್ನು ವಿರೋಧಿಸಿ ಇಡೀ ವೈದ್ಯಕೀಯ ಸಮುದಾಯವೇ ವಾರಕ್ಕೂ ಹೆಚ್ಚು ದಿನ ಮುಷ್ಕರ ಹೂಡಿದ ಪರಿಣಾಮವಾಗಿ ವೈದ್ಯಕೀಯ ಸೇವೆಗಳು ಅಸ್ತವ್ಯಸ್ತಗೊಂಡು ಜನರು ಪರದಾಡಿದ ಸನ್ನಿವೇಶವಿನ್ನೂ ನೆನಪಿನಿಂದ ಮರೆಯಾಗಿಲ್ಲ. ಸ್ವತಃ ಭಾರತೀಯ ವೈದ್ಯಕೀಯ ಮಂಡಳಿಯೇ ಮಸೂದೆಯಲ್ಲಿದ್ದ ಕಠಿಣ ನಿಯಮಗಳಿಗೆ ಆಕ್ಷೇಪ ವ್ಯಕ್ತಪಡಿಸಿತ್ತು. ಇದಾದ ಬಳಿಕ ವೈದ್ಯರ ಒತ್ತಡಕ್ಕೆ ಮಣಿದು ಮಸೂದೆಯನ್ನು ಸಾಕಷ್ಟು ದುರ್ಬಲಗೊಳಿಸಿ ಹಲ್ಲಿಲ್ಲದ ಹಾವಿನಂತೆ ಮಾಡಿ ಜಾರಿಗೊಳಿಸಲಾಗಿದೆ. 

Advertisement

ವೈದ್ಯಕೀಯ ಕ್ಷೇತ್ರಕ್ಕೆ ಸಂಬಂಧಿಸಿ ತರುವ ಯಾವುದೇ ಕಾನೂನು ಬಹಳ ಸಂವೇದನಾಶೀಲ ಉಗುತ್ತದೆ. ಇದೊಂದು ರೀತಿಯಲ್ಲಿ ಎರಡು ಅಲಗಿನ ಕತ್ತಿಯ ಜತೆಗೆ ಆಟವಾಡಿದಂತೆ. ತುಸುವೇ ಹೆಚ್ಚುಕಮ್ಮಿಯಾದರೂ ಎರಡೂ ಕಡೆಗೂ ಹಾನಿಯಾಗುವ ಸಾಧ್ಯತೆ ಇರುತ್ತದೆ. ಹೀಗಾಗಿ ಪ್ರಸ್ತುತ ಕೇಂದ್ರ ಸರಕಾರ ಉದ್ದೇಶಿಸಿರುವ ನಿಯಮ ಜಾರಿಗೊಳಿಸುವಾಗಲೂ ಅದರ ಸಾಧಕಬಾಧಕಗಳನ್ನು ಕೂಲಂಕಷವಾಗಿ ಪರಿಶೀಲಿಸುವ ಅಗತ್ಯವಿದೆ. ಬಿಲ್‌ ಪಾವತಿಸಿಲ್ಲ ಎಂಬ ಕಾರಣಕ್ಕೆ ರೋಗಿಯನ್ನು ಬಿಡಲು ಒಪ್ಪದಿರುವುದು ಅಥವಾ ಮೃತಪಟ್ಟ ರೋಗಿಯ ಶವವನ್ನು ಬಂಧುಗಳಿಗೆ ಬಿಟ್ಟುಕೊಡಲು ಒಪ್ಪದಿರುವುದು ಅಮಾನವೀಯತೆಯೇ ಸರಿ. ಈ ಕಾರಣಕ್ಕಾಗಿಯೇ ರೋಗಿಗಳ ಬಂಧುಗಳು ರೊಚ್ಚಿಗೆದ್ದು ಆಸ್ಪತ್ರೆಯಲ್ಲಿ ದಾಂಧಲೆ ಎಸಗಿರುವ ಹಾಗೂ ವೈದ್ಯರ ಮೇಲೆ ಮಾಡಿರುವಂಥ ಅನಪೇಕ್ಷಿತ ಘಟನೆಗಳು ಸಂಭವಿಸಿವೆ. ಈ ಸಂದರ್ಭವೇ ಬಹಳ ಭಾವನಾತ್ಮಕ ವಾಗಿರುವುದರಿಂದ ಅಲ್ಲಿ ವ್ಯಕ್ತವಾಗುವ ಪ್ರತಿಕ್ರಿಯೆ ತೀಕ್ಷ್ಣವಾಗಿರುವುದು ಸಹಜವಾಗಿರುತ್ತದೆ. ಕಳೆದ ವರ್ಷ ಬಾಂಬೆ ಹೈಕೋರ್ಟ್‌ ಹಾಗೂ ಅದಕ್ಕೂ ಹಿಂದಿನ ವರ್ಷ ದಿಲ್ಲಿ ಹೈಕೋರ್ಟ್‌ ಈ ಮಾದರಿಯ ಪ್ರಕರಣದ ತೀರ್ಪಿನಲ್ಲಿ ಬಿಲ್‌ ಪಾವತಿಯಾಗದೆ ಮೃತದೇಹ ಬಿಟ್ಟುಕೊಡುವುದಿಲ್ಲ ಎಂದು ಆಸ್ಪತ್ರೆಗಳು ಪಟ್ಟು ಹಿಡಿಯುವುದು ಸರಿಯಲ್ಲ ಎಂದೇ ತೀರ್ಪಿತ್ತಿವೆ. ಆದರೆ ಈ ಸಂದರ್ಭದಲ್ಲಿ ಇತ್ತಂಡಗಳಿಗೂ ಸಮ್ಮತವಾಗುವಂಥ ಪರಿಹಾರ ಏನು ಎನ್ನುವುದನ್ನು ಯಾರೂ ಸೂಚಿಸಿಲ್ಲ. 

ದೊಡ್ಡ ಮೊತ್ತದ ಬಿಲ್‌ ಬಾಕಿಯಿರುವಾಗ ಹಣಕ್ಕಾಗಿ ತುಸು ಕಠಿಣವಾಗುವುದು ಆಸ್ಪತ್ರೆಗಳ ಪಾಲಿಗೆ ಅನಿವಾರ್ಯವಾಗುತ್ತದೆ. ಒಂದು ವೇಳೆ ಮಾನವೀಯತೆಯ ಅಂಶವನ್ನು ಪರಿಗಣಿಸಿದರೆ ಬಾಕಿ ಹಣವನ್ನು ನೀಡುವವರು ಯಾರು ಎಂಬ ಪ್ರಶ್ನೆಗೆ ಉತ್ತರ ಸಿಗುವುದಿಲ್ಲ. ರೋಗಿಗಳ ಕಡೆಯವರು ಹಣ ನೀಡಲಿ, ನೀಡದಿರಲಿ ಡಿಸ್‌ಚಾರ್ಜ್‌ ಮಾಡಲೇಬೇಕೆಂಬ ನಿಯಮವೇನಾದರೂ ಬಂದರೆ ಅದು ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆಯೂ ಇರುತ್ತದೆ. ಬಿಲ್‌ ಪಾವತಿಸಲು ಸಾಧ್ಯವಿಲ್ಲದಂಥ ರೋಗಿಗಳಿಗೆ ಚಿಕಿತ್ಸೆ ನೀಡಲು ಆಸ್ಪತ್ರೆಗಳು ನಿರಾಕರಿಸಬಹುದು. ಇಲ್ಲವೇ ಆರ್ಥಿಕ ಸಾಮರ್ಥ್ಯದಷ್ಟೇ ಚಿಕಿತ್ಸೆ ನೀಡಿ ಡಿಸ್‌ ಚಾರ್ಜ್‌ ಮಾಡುವ ಸಾಧ್ಯತೆಯೂ ಇದೆ. ಹೀಗಾಗದಂತೆ ಮಾಡಲು ಸರಕಾರವೇ ಮಧ್ಯಮ ಮಾರ್ಗವೊಂದನ್ನು ಕಂಡುಕೊಳ್ಳುವ ಅಗತ್ಯವಿದೆ. 

ಮಾನವೀಯತೆ ದೃಷ್ಟಿಯಲ್ಲಿ ಆಸ್ಪತ್ರೆಗಳು ರೋಗಿಯನ್ನು ಡಿಸ್‌ಚಾರ್ಜ್‌ ಮಾಡಿದರೆ ಅಥವಾ ಮೃತದೇಹವನ್ನು ಬಿಟ್ಟುಕೊಟ್ಟ ಸಂದರ್ಭದಲ್ಲಿ ಆಸ್ಪತ್ರೆಗಳಿಗೆ ಪರಿಹಾರ ಸಿಗುವ ಅಂಶವನ್ನೂ ನಿಯಮಕ್ಕೆ ಸೇರಿಸಿಕೊಳ್ಳುವ ಅಗತ್ಯವಿದೆ. ಚಿಕಿತ್ಸೆಗಾಗಿ ಆಗುವ ನ್ಯಾಯಯುತ ಮೊತ್ತವನ್ನು ಅಂದಾಜಿಸಿ ಆ ಹಣವನ್ನು ಆಸ್ಪತ್ರೆಗಳಿಗೆ ಪಾವತಿಸುವ ವ್ಯವಸ್ಥೆಯನ್ನು ತರುವಂಥ ಸಲಹೆಯನ್ನು ಪರಿಶೀಲಿಸಬಹುದು. ಇಲ್ಲವೇ ವಿಮೆಯ ಮೂಲಕ ಆಸ್ಪತ್ರೆಗಳಿಗಾಗುವ ನಷ್ಟವನ್ನು ತುಂಬಿಕೊಡುವ ವ್ಯವಸ್ಥೆಯನ್ನು ಮಾಡಬಹುದು. 

ಇದಕ್ಕೂ ಮಿಗಿಲಾಗಿ ನಮ್ಮ ಸರಕಾರಿ ಆಸ್ಪತ್ರೆಗಳ ಸ್ಥಿತಿಯನ್ನು ಸುಧಾರಿಸಲು ಸರಕಾರ ಇನ್ನಷ್ಟು ಕಾಳಜಿ ವಹಿಸಬೇಕಾದ ಅಗತ್ಯವಿದೆ. ಖಾಸಗಿ ಆಸ್ಪತ್ರೆಗಳಲ್ಲಿ ಸಿಗುವ ಎಲ್ಲ ಪ್ರಮುಖ ಚಿಕಿತ್ಸೆಗಳು ಸರಕಾರಿ ಆಸ್ಪತ್ರೆಗಳಲ್ಲಿ ಲಭ್ಯವಾದರೆ ಜನರು ಈ ಸಮಸ್ಯೆಗಳ ಸಿಲುಕುವ ಪ್ರಮೇಯವೇ ಬರುವುದಿಲ್ಲ. ಈಗಲೂ ನಮ್ಮ ಪ್ರಾಥಮಿಕ ಕೇಂದ್ರಗಳಿಂದ ಹಿಡಿದು ತಾಲೂಕು, ಜಿಲ್ಲಾ ಆಸ್ಪತ್ರೆಗಳು ಸಮರ್ಪಕ ಸೌಲಭ್ಯಗಳಿಲ್ಲದೆ ನರಳುತ್ತಿರುವುದು ಕಾಣಿಸುತ್ತಿದೆ. ಈ ಅವ್ಯವಸ್ಥೆಯನ್ನು ಸರಿಪಡಿಸುವ ಕೆಲಸ ಮೊದಲು ಆಗಲಿ. 

Advertisement
Advertisement

Udayavani is now on Telegram. Click here to join our channel and stay updated with the latest news.

Next