Advertisement

ತಾಳ್ಮೆ, ನಂಬಿಕೆಯೇ ಯಶಸ್ಸಿನ ಕೀಲಿ ಕೈಗಳು

10:08 PM Jul 14, 2019 | Sriram |

ರಾಜನ ಸೂಚನೆಯಂತೇ ಆ ತೋಟದ ಮಾಲಕನನ್ನು ಮಾತನಾಡಿಸಿ ಬಂದ ಮಂತ್ರಿ, “30 ವರ್ಷಗಳು ಬಿಟ್ಟು ತೋಟದಲ್ಲಿ ಉತ್ತಮ ಬೆಳೆ ಬರುತ್ತದೆ ಎನ್ನುತ್ತಿದ್ದಾನೆ ಆ ತೋಟದ ಮಾಲಕ. ಬಹುಶಃ ಆತನ ತಲೆ ಸರಿ ಇಲ್ಲ ಪ್ರಭುಗಳೇ’ ಎಂದು ದೂರಿದ. ಕೂಡಲೇ ರಾಜ ಆತನನ್ನು ಕರೆ ತರುವಂತೆ ಆದೇಶಿಸಿದ. ರಾಜನೇ ಖುದ್ದಾಗಿ ವಿಚಾರಿಸಿದಾಗಲೂ ಆ ಮಾಲಕನ ಉತ್ತರ ಅದೇ ಆಗಿತ್ತು.

Advertisement

ಮನುಷ್ಯನಿಗೆ ತಾಳ್ಮೆ ಮತ್ತು ನಂಬಿಕೆ ಮುಖ್ಯವಾಗಿ ಬೇಕು. ಇವೇ ಗೆಲುವಿನ ಗುಟ್ಟು. ಈ ದಾರಿ ಬಿಟ್ಟು ಗೆಲುವಿಗೆ ಮತ್ತಾವುದೇ ಅಡ್ಡ ದಾರಿಗಳು ಇಲ್ಲವೇ. ಇಲ್ಲ. ಅದಕ್ಕೇ ದೊಡ್ಡವರು ಹೇಳಿದ್ದು ತಾಳಿದವನು ಬಾಳಿಯಾನು ಎಂದು. ಯಾವ ವಿಜ್ಞಾನಿಯ ಪ್ರಯೋಗವೂ ಒಂದೇ ಬಾರಿಗೆ ಯಶಸ್ವಿಯಾಗಿಲ್ಲ. ಹತ್ತು ಹಲವು ಸೋಲುಗಳ ಬಳಿಕವೇ ಸಾಧಕರು ಯಶಸ್ಸು ಕಂಡಿದ್ದು.

ಒಂದೂರಿನಲ್ಲಿ ಒಬ್ಬ ರಾಜನಿದ್ದ. ಒಂದು ದಿನ ಆತ ಪ್ರವಾಸಕ್ಕೆ ಹೋಗಬೇಕೆಂದು ನಿರ್ಧರಿಸಿದ. ಹೊರ ರಾಜ್ಯಗಳಿಗೆ ಹೋಗುವ ಬದಲು ತನ್ನ ರಾಜ್ಯವನ್ನೇ ಒಮ್ಮೆ ಸುತ್ತಿದರೆ ಜನರ ಕಷ್ಟಗಳನ್ನು ಆಲಿಸುವ ಜತೆಗೆ ಪ್ರವಾಸವೂ ಆದಂತಾಗುತ್ತದೆ ಎಂದು ಆತ ನಿರ್ಧರಿಸಿದ. ಅಂತೆಯೇ ಮಂತ್ರಿಗಳ ಜತೆಗೂಡಿ ಪ್ರವಾಸವೂ ಆರಂಭವಾಯಿತು. ಹೀಗೆ ಹೋಗುವಾಗ ಅನೇಕ ದ್ರಾಕ್ಷಿ ತೋಟಗಳು ಸಿಗತೊಡಗಿದವು. ಅವುಗಳ ತೋಟದ ಮಾಲಕರು ಒಬ್ಬೊಬ್ಬರೇ ಆಗಿ ತಾವು ಬೆಳೆದ ಬೆಳೆಯಲ್ಲಿ ಒಂದೊಂದು ಬುಟ್ಟಿ ದ್ರಾಕ್ಷಿಯನ್ನು ರಾಜನಿಗೆ ಗೌರವರ್ಥವಾಗಿ ನೀಡಿ ವಂದಿಸಿ ತೆರಳುತ್ತಿದ್ದರು. ಹೀಗಿರುವಾಗ ಒಂದು ತೋಟದಲ್ಲಿ ದ್ರಾಕ್ಷಿ ಬಳ್ಳಿಗಳು ಹೇರಳವಾಗಿದ್ದರೂ ಒಂದೇ ಒಂದು ಗೊಂಚಲು ದ್ರಾಕ್ಷಿ ಬೆಳೆ ಇಲ್ಲದಿರುವುದನ್ನು ರಾಜ ಗಮನಿಸಿದ. ಕೂಡಲೇ ಮಂತ್ರಿಗೆ ಆ ತೋಟ ಯಾರದ್ದು ಮತ್ತು ಯಾಕೆ ಬೆಳೆ ಬಂದಿಲ್ಲ ಎಂದು ವಿಚಾರಿಸಲು ತಿಳಿಸಿದ.

ರಾಜನ ಸೂಚನೆಯಂತೇ ಆ ತೋಟದ ಮಾಲಕನನ್ನು ಮಾತನಾಡಿಸಿ ಬಂದ ಮಂತ್ರಿ, “30 ವರ್ಷಗಳು ಬಿಟ್ಟು ತೋಟದಲ್ಲಿ ಉತ್ತಮ ಬೆಳೆ ಬರುತ್ತದೆ ಎನ್ನುತ್ತಿದ್ದಾನೆ ಆ ತೋಟದ ಮಾಲಕ. ಬಹುಶಃ ಆತನ ತಲೆ ಸರಿ ಇಲ್ಲ ಪ್ರಭುಗಳೇ’ ಎಂದು ದೂರಿದ. ಕೂಡಲೇ ರಾಜ ಆತನನ್ನು ಕರೆ ತರುವಂತೆ ಆದೇಶಿಸಿದ. ರಾಜನೇ ಖುದ್ದಾಗಿ ವಿಚಾರಿಸಿದಾಗಲೂ ಆ ಮಾಲಕನ ಉತ್ತರ ಅದೇ ಆಗಿತ್ತು. ತುಸು ನಕ್ಕು ರಾಜ ಕೇಳಿದ “ಎಷ್ಟು ವರ್ಷಗಳಾದವು ಈ ಬಳ್ಳಿಗಳಿಗೆ’ ಎಂದು. “25 ವರ್ಷಗಳು ಕಳೆದಿವೆ ಪ್ರಭುಗಳೆ, ಇನ್ನೇನು 5 ವರ್ಷಗಳಲ್ಲಿ ಬಂಗಾರದ ಬೆಳೆ ಬರಲಿದೆ’ ಎಂದ. ಆಗ ಮರು ಮಾತನಾಡಿದ ರಾಜ ಹೇಳಿದ, “ಸರಿಯಪ್ಪ ಐದು ವರ್ಷಗಳ ಬಳಿಕವಾದರೂ ಬಂದ ನನಗೂ ನೀಡುತ್ತೀಯಲ್ಲ’ ಎಂದು ಪ್ರಶ್ನಿಸಿದ. ಇದಕ್ಕೆ ಮಾಲಕ ಖಂಡಿತ ಆಗಬಹುದು ಎಂದ.

ಘಟನೆ ನಡೆದು ಐದು ವರ್ಷಗಳ ಅನಂತರ ಆ ಮಾಲಕನ ತೋಟದಲ್ಲಿ ಅತ್ಯಂತ ದೊಡ್ಡ ಗಾತ್ರ, ಅಮೃತದ ರುಚಿಯ ದ್ರಾಕ್ಷಿಗಳು ಬೆಳೆದವು. ರಾಜನಿಗೆ ಕೊಟ್ಟ ಮಾತಿನಂತೆಯೇ ಮಾಲಕ ಒಂದು ಬುಟ್ಟಿ ದ್ರಾಕ್ಷಿಯೊಂದಿಗೆ ಅರಮನೆ ತಲುಪಿದ. ಈ ಹಣ್ಣುಗಳನ್ನು ತಿಂದವನೇ ರಾಜ ಖುಷಿ ಗೊಂಡ.

Advertisement

ಸಂತೋಷದಿಂದ ಬೆಲೆ
ಬಾಳುವ ಆಭರಣಗಳನ್ನು ಆತನಿಗೆ ನೀಡಿದ. ಆತ ವಾಸಿಸಿರುವ ಊರನ್ನೇ ಆತನ ಹೆಸರಿಗೆ ಬರೆದುಕೊಟ್ಟ. ಈ ಸುದ್ದಿ ಕೆಲವೇ ಸಮಯದಲ್ಲಿ ರಾಜ್ಯದಲ್ಲೆಲ್ಲ ಹಬ್ಬಿತು. ಎಲ್ಲ ರೈತೆರೂ ರಾಜ ಕೊಡುವ ಉಡುಗೊರೆ ಆಸೆಗಾಗಿ ಅರಮನೆ ಮುಂದೆ ಸಾಲು ನಿಂತರು. ಆದರೆ ರಾಜ ಅವರೆಲ್ಲರನ್ನೂ ಹಿಂದೆ ಕಳುಹಿಸಿದ. ಈ ವಿಷಯ ರಾಜ ಸಭೆಯಲ್ಲಿಯೂ ಪ್ರಸ್ತಾಪವಾಯಿತು. ಮುಗಳ್ನಕ್ಕು ರಾಜ ಹೇಳಿದ ಉತ್ತರಕ್ಕೆ ಪೂರ್ತಿ ಸಭೆಯೇ ಸ್ತಬ್ಧವಾಗಿ ಹೋಯಿತು. ತಾನು ಬಹುಮಾನ ಕೊಟ್ಟಿದ್ದು ಬೆಳೆಗಾಗಿ 30 ವರ್ಷಗಳು ಕಾದ ಆ ತೋಟದ ಮಾಲಕನ ತಾಳ್ಮೆಗೆ ಮತ್ತು ಅಷ್ಟು ಸಮಯದಲ್ಲಿ ಬೆಳೆ ಬಂದೇ ಬರುತ್ತದೆ ಎಂಬ ಆತನ ನಂಬಿಕೆಗೆ ಎಂಬುದು ರಾಜನ ಉತ್ತರವಾಗಿತ್ತು.

ತಾಳ್ಮೆ ಮತ್ತು ನಂಬಿಕೆ ಜೀವನದಲ್ಲಿ ಎಷ್ಟು ಮುಖ್ಯ ಎನ್ನಲು ಬಹುಶಃ ಈ ಕತೆಯ ನಿದರ್ಶನವೊಂದೇ ಸಾಕು. ಮಾಡುವ ಕೆಲಸದಲ್ಲಿಯೇ ಆಗಲಿ, ಸಂಬಂಧಗಳ ನಡುವೆಯೇ ಆಗಲಿ ತಾಳ್ಮೆ ಮತ್ತು ನಂಬಿಕೆಗಳು ಬೇಕೇ ಬೇಕು. ಇವಿಲ್ಲದೆ ಯಾರೂ ಸಾಧಿಸಿಲ್ಲ. ಸುಖವಾಗಿಯೂ ಬಾಳಿಲ್ಲ.

-ಪ್ರಸನ್ನ ಹೆಗಡೆ ಊರಕೇರಿ

Advertisement

Udayavani is now on Telegram. Click here to join our channel and stay updated with the latest news.

Next