Advertisement

ಅಧಿಕಾರಿಗಳ ಔದಾಸೀನ್ಯಕ್ಕೆ ತಿರುಗಿಬಿದ್ದ ಆಡಳಿತ ಮಂಡಳಿ

10:44 PM Mar 25, 2021 | Team Udayavani |

ಬೆಳ್ತಂಗಡಿ: ಆಡಳಿತ ವರ್ಗವಿಲ್ಲದೆ ದಿಕ್ಕು ದಿಸೆಯಿಲ್ಲದಂತಾಗಿದ್ದ ಪ.ಪಂ.ಗೆ ಮೂರು ತಿಂಗಳಿಂದ ಚುನಾ ಯಿತ ಸದಸ್ಯರು ನೇಮಕವಾದರೂ ಕಾಮಗಾರಿಯಲ್ಲಿ ವಿಳಂಬ ನೀತಿ, ಅಂಗೀಕಾರವಾಗದ ನಿರ್ಣಯಗಳು, ಟೆಂಡರ್‌ ಪ್ರಕ್ರಿಯೆ ಪೂರ್ಣಗೊಂಡರೂ ಆರಂಭವಾಗದ ಅಭಿವೃದ್ಧಿ ಕಾಮಗಾರಿ ಸಹಿತ ಆಡಳಿತ ಮಂಡಳಿ ಸದಸ್ಯರ ಮಾತಿಗೆ ಅಧಿಕಾರಿಗಳು ಕಿಮ್ಮತ್ತು ನೀಡುತ್ತಿಲ್ಲ ಎಂದು ಸ್ವತಃ ಆಡಳಿತ ವರ್ಗದ ಸದಸ್ಯರೇ ತಿರುಗಿಬಿದ್ದ ಘಟನೆ ನಡೆಯಿತು.

Advertisement

ಪ.ಪಂ. ಸ್ಥಾಯೀ ಸಮಿತಿ ಸಾಮಾನ್ಯ ಸಭೆಯು ಗುರುವಾರ ಪ.ಪಂ. ಅಧ್ಯಕ್ಷೆ ರಜನಿ ಕುಡ್ವ ಅವರ ಅಧ್ಯಕ್ಷತೆಯಲ್ಲಿ ಪ.ಪಂ. ಸಭಾಂಗಣದಲ್ಲಿ ನಡೆಯಿತು.

ಸಭೆ ಪ್ರಾರಂಭವಾಗುತ್ತಿದ್ದಂತೆ ಅಜೆಂಡಾಕ್ಕೂ ಮುನ್ನವೇ ಉಪಾಧ್ಯಕ್ಷ ಜಯಾನಂದ  ಗೌಡ 16 ಅಂಶಗಳನ್ನು ಅಧ್ಯಕ್ಷರ ಮುಂದಿಟ್ಟರು. ನಗರದಲ್ಲಿ ಸ್ವತ್ಛತೆಗೆ ನೀಡದ ಆದ್ಯತೆ, ಮಾಹಿತಿ ನೀಡದೆ ಸಭೆ ನಿರ್ಣಯ ಕೈಗೊಳ್ಳುತ್ತಿರುವುದು ಸೇರಿದಂತೆ ಟೆಂಡರ್‌ ಕರೆದರೂ ಕಾಮಗಾರಿ ಆರಂಭಿಸದ ಬಗ್ಗೆ, ಚರಂಡಿ ಸಮಸ್ಯೆ ಕುರಿತು ಮನವರಿಕೆ ಮಾಡಿದರೂ ಯಾವ ಕೆಲಸವೂ ಪ್ರಗತಿಯಲ್ಲಿಲ್ಲ. ನಮ್ಮನ್ನು ಆಯ್ಕೆ ಮಾಡಿದ ಜನತೆಗೆ ಉತ್ತರ ನೀಡಲು ಸಾಧ್ಯವಿಲ್ಲದಂತಾಗಿದೆ. ಒಂದು ತಿಂಗಳ ಒಳಗಾಗಿ ನನಗೆ ಈ ಕುರಿತು ಉತ್ತರ ನೀಡಬೇಕು ಎಂದು ಅಧ್ಯಕ್ಷರಲ್ಲಿ ವಿನಂತಿಸಿದರು.

ಸದಸ್ಯ ಜಗದೀಶ್‌ ಡಿ.ಮಾತನಾಡಿ, ಆಡಳಿತ ಪಕ್ಷದ ಒಳಗೆ ಒಗ್ಗಟ್ಟಿನ ಕೊರತೆ ಸರಿಪಡಿಸಿ ನಗರದ ಅಭಿವೃದ್ಧಿಗೆ ತೊಂದರೆಯಾಗದಂತೆ ಚಿಂತಿಸಬೇಕಿದೆ ಎಂದರು. ಸ್ಥಾಯೀ ಸಮಿತಿ ರಚನೆ ವರದಿಯಲ್ಲಿ ದೃಢೀಕರಣ ಮಾಡದ ಕುರಿತು ಜಗದೀಶ್‌ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಬಳಿಕ ಮುಖ್ಯಾಧಿಕಾರಿ ಸುಧಾಕರ್‌ ಮುಂದಿನ ಸಭೆಯೊಳಗೆ ಸರಿಪಡಿಸುವ ಭರವಸೆ ನೀಡಿದರು.

ಕೆರೆಗಳಿಲ್ಲದಿದ್ದರೂ ಅಭಿವೃದ್ಧಿಗಾಗಿ ಶುಲ್ಕ ವಸೂಲಿ :

Advertisement

ನಗರದಲ್ಲಿ ವಿನ್ಯಾಸ ಶುಲ್ಕ ಎಂದು 9,550 ರೂ. ಪಡೆಯುತ್ತಿದ್ದು ಇದನ್ನು ಕಡಿಮೆ ಮಾಡಬೇಕು. ಬಡವರಿಗೆ ಇದರಿಂದ ಹೊರೆಯಾಗುತ್ತಿದೆ ಎಂದು ಜಗದೀಶ್‌ ಡಿ. ಹೇಳಿದರು. ಇದಕ್ಕೆ ಮೂಡ ಅಧಿಕಾರಿ ಗುರುಪ್ರಸಾದ್‌ ಉತ್ತರಿಸಿ, ಇದು ಸರಕಾರ ನಿಗದಿಪಡಿಸಿದ ದರ ಇದನ್ನು ಬದಲಾಯಿಸಲು ಅಧಿಕಾರವಿಲ್ಲ ಎಂದು ಉತ್ತರಿಸಿದರು. ಹಾಗಾದಲ್ಲಿ ಕೆರೆ ಅಭಿವೃದ್ಧಿ ಶುಲ್ಕ ಎಂದು ಸಂಗ್ರಹ ಮಾಡುತ್ತಿದ್ದೀರಿ. ನಗರದಲ್ಲಿ ಎಷ್ಟು ಕೆರೆಗಳಿವೆ, ಎಷ್ಟು ಅಭಿವೃದ್ಧಿ ಆಗಿದೆ ಎನ್ನುವ ಮಾಹಿತಿ ನಿಡಬೇಕು ಎಂದು ಸದಸ್ಯರು ಒತ್ತಾಯಿಸಿದರು.

ತಾಂತ್ರಿಕ ಅಧಿಕಾರಿ ಮಹಾವೀರ ಆರಿಗ ಪ್ರತಿಕ್ರಿಯಿಸಿ, ಪಟ್ಟಣ ವ್ಯಾಪ್ತಿಯಲ್ಲಿ ಕಂದಾಯ ಇಲಾಖೆ ಮಾಹಿತಿಯಂತೆ 4 ಕೆರೆಗಳಿವೆ. ಕುತ್ಯಾರು ಬಳಿ ಸರ್ವೇ 143/2ರಲ್ಲಿ 10 ಸೆನ್ಸ್‌ನಲ್ಲಿ, ಸರ್ವೇ ನಂ.146/1ಸಿ ಅಗಸರಬೆಟ್ಟು ಎಂಬಲ್ಲಿ 6ಸೆನ್ಸ್‌ನಲ್ಲಿ, ಕೋರ್ದಂಡ ಎಂಬಲ್ಲಿ ಸ.ನಂ. 2/6ರಲ್ಲಿ 6ಸೆನ್ಸ್‌ನಲ್ಲಿ, ಗುಂಪಲಾಜೆ ಸ.ನಂ. 15/1ರಲ್ಲಿ 22ಸೆನ್ಸ್‌ನಲ್ಲಿ ಕೆರೆ ಇದ್ದು ಇದರಲ್ಲಿ 2 ಕೆರೆಗಳನ್ನು ಖಾಸಗಿಯವರು ಒತ್ತುವರಿ ಮಾಡಿದ್ದು ಒಂದು ಖಾಲಿ ಜಾಗವಿದೆ. ಒಂದರಲ್ಲಿ ರಸ್ತೆ ನಿರ್ಮಾಣ ಮಾಡಲಾಗಿದೆ ಎಂದು ಹೇಳಿದರು.

ಒತ್ತುವರಿ ಕೆರೆಯನ್ನು ಸ್ವಾಧೀನಪಡಿಸಿ ಅಭಿವೃದ್ಧಿಗೊಳಿಸಬೇಕು, ಸಂಗ್ರಹವಾದ ತೆರಿಗೆ ಹಣವನ್ನು ಬಳಸಿ ಸ್ಥಳೀಯರಿಗೆ ನೀರು ಒದಗಿಸಲು ಕ್ರಮ  ಕೈಗೊಳ್ಳಬೇಕು ಎಂದು ಸದಸ್ಯರು ಆಗ್ರಹಿಸಿದರು.

ಲೈಸನ್ಸ್ ನವೀಕರಣವಿಲ್ಲ :

ಕಟ್ಟಡ ಮಾಲಕರು ತೆರಿಗೆ ಕಟ್ಟದಿದ್ದಲ್ಲಿ ಅದರಲ್ಲಿ ವ್ಯಾಪಾರ ಮಾಡುತ್ತಿರುವ ಅಂಗಡಿ ಮಾಲಕರ ಲೈಸನ್ಸ್‌ ನವೀಕರಣ ಮಾಡುವುದಿಲ್ಲ ಎನ್ನುವ ಪ.ಪಂ. ನಿರ್ಣಯ ಸರಿಯಲ್ಲ. ಈ ಬಗ್ಗೆ ವಿನಾಯಿತಿ ನೀಡಬೇಕು ಎಂದು ಜಗದೀಶ್‌ ಡಿ.ಒತ್ತಾಯಿಸಿದರು. ಇದಕ್ಕೆ ಜಯಾನಂದ ಗೌಡ ಹಾಗೂ ಸುಧಾಕರ್‌ ಉತ್ತರಿಸಿ, ತೆರಿಗೆ ಕಟ್ಟದಿದ್ದರೆ ಗ್ರಾಮ ಪಂಚಾಯತ್‌ಗೆ ಆದಾಯದ ಕೊರತೆ ಎದುರಾಗುತ್ತದೆ. ಕಟ್ಟಡ ಮಾಲಕರು ಪಾವತಿಸಲು ವಿಳಂಬ ನೀತಿ ಅನುಸರಿಸುತ್ತಿದ್ದಾರೆ. ಅದಕ್ಕಾಗಿ ಬಾಡಿಗೆದಾರರು ಮಾಲಕರನ್ನು ಎಚ್ಚರಿಸಲು ಈ ರೀತಿ ಕ್ರಮ ಅನಿವಾರ್ಯ ಎಂದರು. ಇದಕ್ಕೆ ಪರ-ವಿರೋಧ ಅಭಿಪ್ರಾಯ ವ್ಯಕ್ತವಾಯಿತು.

11 ವಾರ್ಡ್‌ ಸದಸ್ಯರು, ಸ್ಥಾಯೀ ಸಮಿತಿ ಅಧ್ಯಕ್ಷೆ ತುಳಸಿ, ಮೂಡ ಅಧಿಕಾರಿಗಳಾದ ಗುರುಪ್ರಸಾದ್‌, ಮೋಕ್ಷಾ ಉಪಸ್ಥಿತರಿದ್ದರು.

ಮಾರುಕಟ್ಟೆ ಕಳಪೆ ಕಾಮಗಾರಿ :

ಸಂತೆಕಟ್ಟೆ ಮಾರುಕಟ್ಟೆಯೊಳಗೆ ಕೆಲವು ಕಟ್ಟಡಗಳ ಕಾಮಗಾರಿ ಕಳಪೆಯಾಗಿದೆ. ಕಾಮಗಾರಿ ಪೂರ್ಣಗೊಳಿಸದೆ ಏಲಂ ನಡೆಸಲಾಗಿದೆ ಎಂದು ಸದಸ್ಯರು ತರಾಟೆಗೆ ತೆಗೆದುಕೊಂಡರು. ತತ್‌ಕ್ಷಣ ಸರಿಪಡಿಸಲಾಗುವುದು ಎಂದು ತಾಂತ್ರಿಕ ಅಧಿಕಾರಿ ತಿಳಿಸಿದರು. ಜೂನಿಯರ್‌ ಕಾಲೇಜು ಬಳಿ ನೀರಿನ ಪೈಪ್‌ನಿಂದ ದುರ್ವಾಸನೆ ಬರುತ್ತಿದ್ದು ಟ್ಯಾಂಕ್‌ ಸ್ವಚ್ಛತೆಗೊಳಿಸಬೇಕು. ರಸ್ತೆ ಬದಿ ಇರುವ ಅಪಾಯಕಾರಿ ವಿದ್ಯುತ್‌ ಕಂಬಗಳ ಸ್ಥಳಾಂತರ, ದುಂದುವೆಚ್ಚಗಳಿಗೆ ಕಡಿವಾಣ ಹಾಕಬೇಕು, ಲೆಕ್ಕಪತ್ರ ಮತ್ತು ವರದಿಯಲ್ಲಿ ಪಾರದರ್ಶಕತೆ ಇರಬೇಕು, ಕಚೇರಿ ಸಮಯದಲ್ಲಿ ಸಾರ್ವ ಜನಿಕರಿಗೆ ಸಿಗುವ ಹಾಗೆ ಅಧಿ ಕಾರಿಗಳು  ಕಚೇರಿಯಲ್ಲಿ ಇರಬೇಕು, ತೆರಿಗೆ ವಸೂಲಿಗೆ ಸ್ಥಳೀಯರನ್ನೇ ನೇಮಕ ಮಾಡಬೇಕು. ಕೆಐಆರ್‌ಡಿಎಲ್‌ನಿಂದ ಮಂಜೂರಾದ ಕಾಮಗಾರಿಗಳನ್ನು ಪ್ರಾರಂಬಿಸಬೇಕು, ಪೌರಕಾರ್ಮಿಕರ ಕೊಠಡಿ ವ್ಯವಸ್ಥೆ ಸರಿಪಡಿಸುವಂತೆ ಆಗ್ರಹಿಸಲಾಯಿತು.

ಉದಯವಾಣಿ  ವರದಿ ಉಲ್ಲೇಖ :

ನಗರ ವ್ಯಾಪ್ತಿಯಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಲಾಗುತ್ತಿಲ್ಲ. ಮೂರು ಮಾರ್ಗದ ತೆರೆದ ಚರಂಡಿ ವಿಚಾರವಾಗಿ ಟೆಂಡರ್‌ ಕರೆದು 60 ದಿನಗಳಾಗಿವೆ. ಪತ್ರಿಕೆಯಲ್ಲಿ ವರದಿ ಪ್ರಕಟಗೊಂಡರೂ ಯಾವುದೇ ಕ್ರಮ ಕೈಗೊಂಡಿಲ್ಲ. ಈ ಕುರಿತು ಒಂದು ವಾರದೊಳಗೆ ಉತ್ತರ ನೀಡುವಂತೆ ಪ.ಪಂ. ಉಪಾಧ್ಯಕ್ಷ ಜಯಾನಂದ ಗೌಡ ವಿಚಾರ ಪ್ರಸ್ತಾಪಿಸಿದರು. ಮೇಲಂತಬೆಟ್ಟು ಬಳಿ ಎರಡು ಕುಟುಂ ಬಗಳು ಜೋಪಡಿಯಲ್ಲಿ ವಾಸಿಸುತ್ತಿದ್ದು ಅವರಿಗೆ ಕನಿಷ್ಠ 25,000 ರೂ. ಪರಿಹಾರ ನೀಡಬೇಕು ಎಂದರು.

 

Advertisement

Udayavani is now on Telegram. Click here to join our channel and stay updated with the latest news.

Next