Advertisement

ಉಚ್ಚಾಟನೆ ಪರ್ವ; ಮಧುಸೂದನ್‌, ಶಶಿಕಲಾ ಪರಸ್ಪರ ವಜಾ

03:45 AM Feb 11, 2017 | Team Udayavani |

ಚೆನ್ನೈ/ನವದೆಹಲಿ: ತಮಿಳುನಾಡಿನ ರಾಜಕೀಯದಲ್ಲಿ ಉಂಟಾಗಿರುವ ವಿಪ್ಲವ ಸತತ 4ನೇ ದಿನವೂ ಮುಂದುವರಿದಿದ್ದು, ಇದೀಗ ಉಚ್ಚಾಟನೆ ಪರ್ವ ಆರಂಭವಾಗಿದೆ.

Advertisement

ಪನ್ನೀರ್‌ ಸೆಲ್ವಂ ಗುಂಪಿನೊಂದಿಗೆ ಗುರುತಿಸಿಕೊಂಡ ಬೆನ್ನಲ್ಲೇ ಪಕ್ಷದ ಅಧ್ಯಕ್ಷ ಇ. ಮಧುಸೂದನ್‌ರನ್ನು ವಜಾ ಮಾಡಿ ಶಶಿಕಲಾ ಶುಕ್ರವಾರ ಮಧ್ಯಾಹ್ನ ಆದೇಶ ಹೊರಡಿಸಿದ್ದಾರೆ. ಜತೆಗೆ ಅವರ ಸ್ಥಾನಕ್ಕೆ ತಮ್ಮ ಆಪ್ತರಾದ ಕೆ ಎ ಸೆಂಗೊಟ್ಟಯ್ಯನ್‌ರನ್ನು ನೇಮಕ ಮಾಡಿದ್ದಾರೆ. ಇದಾದ ಕೆಲವೇ ಗಂಟೆಗಳಲ್ಲಿ ಅಧ್ಯಕ್ಷ ಮಧುಸೂದನ್‌ ಅವರು ಶಶಿಕಲಾರನ್ನು ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ಉಚ್ಚಾಟನೆ ಮಾಡಿದ್ದಾರೆ. ನನ್ನನ್ನು ಉಚ್ಚಾಟಿಸುವ ಮೊದಲೇ ನಾನು ಶಶಿಕಲಾರನ್ನು ತೆಗೆದುಹಾಕಿದ್ದೆ ಎಂದು ಮಧುಸೂದನ್‌ ಹೇಳಿದ್ದಾರೆ.

ಮತ್ತೂಂದೆಡೆ, ಗುರುವಾರ ಎರಡೂ ಬಣಗಳ ವಾದಗಳನ್ನು ಆಲಿಸಿರುವ ರಾಜ್ಯಪಾಲ ವಿದ್ಯಾಸಾಗರ್‌ ರಾವ್‌ ಸದ್ಯಕ್ಕೆ ಯಾವುದೇ ನಿರ್ಧಾರ ಕೈಗೊಳ್ಳದೆ ಕಾದು ನೋಡುವ ತಂತ್ರಕ್ಕೆ ಶರಣಾಗಿದ್ದಾರೆ.

ರಾಜ್ಯಪಾಲರ ಜತೆ ಸ್ಟಾಲಿನ್‌ ಭೇಟಿ:  ಶುಕ್ರವಾರ ರಾತ್ರಿ ಡಿಎಂಕೆ ನಾಯಕ ಎಂ ಕೆ ಸ್ಟಾಲಿನ್‌ ಅವರು ರಾಜ್ಯಪಾಲರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ರಾಜ್ಯದಲ್ಲಿ ಕೂಡಲೇ ಪ್ರಜಾಸತ್ತಾತ್ಮಕ ಸರ್ಕಾರ ಸ್ಥಾಪನೆಗೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ. 9 ತಿಂಗಳಿಂದ ಯಾವುದೇ ಆಡಳಿತಾತ್ಮಕ ಕೆಲಸಗಳು ನಡೆಯುತ್ತಿಲ್ಲ. ಇದರ ಜತೆಗೆ ಸ್ಥಳೀಯ ಸಂಸ್ಥೆಗಳ ಚುನಾವಣೆಗಳೂ ಕೂಡ ನಡೆಯಬೇಕಾಗಿದೆ. ಜಯಲಲಿತಾ ನಿಧನರಾದ ಬಳಿಕ ಪನ್ನೀರ್‌ಸೆಲ್ವಂ ಅಧಿಕಾರ ವಹಿಸಿಕೊಂಡ ಸಂದರ್ಭದಲ್ಲಿಯೇ ಜಲ್ಲಿಕಟ್ಟು ಬಿಕ್ಕಟ್ಟು ಉಂಟಾಯಿತು. ಅದರ ಜತೆಯಲ್ಲಿ ಆಡಳಿತಾರೂಢ ಪಕ್ಷದಲ್ಲಿನ ಭಿನ್ನಮತವೂ ಆರಂಭವಾಗಿದೆ ಎಂದು ಹೇಳಿದರು ಸ್ಟಾಲಿನ್‌. ಪನ್ನೀರ್‌ಸೆಲ್ವಂಗೆ ಡಿಎಂಕೆ ನೆರವು ನೀಡುತ್ತಿದೆ ಎಂಬ ಶಶಿಕಲಾ ನಟರಾಜನ್‌ ಆರೋಪಕ್ಕೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ.

ಇದೇ ವೇಳೆ, ಶಾಸಕರನ್ನು ಶಶಿಕಲಾ ಅವರು ಅಪಹರಿಸಿದ್ದಾರೆ ಎಂದು ಪನ್ನೀರ್‌ಸೆಲ್ವಂ ಬೆಂಬಲಿಗರು ಆರೋಪಿಸಿದ ಹಿನ್ನೆಲೆಯಲ್ಲಿ, ಈ ಕುರಿತು ವರದಿ ನೀಡುವಂತೆ ಚೆನ್ನೈ ಪೊಲೀಸ್‌ ಮುಖ್ಯಸ್ಥರಿಗೆ ರಾಜ್ಯಪಾಲ ವಿದ್ಯಾಸಾಗರ್‌ ರಾವ್‌ ಸೂಚಿಸಿದ್ದಾರೆ. ಶುಕ್ರವಾರ ಬೆಳಗ್ಗೆ ಪೊಲೀಸ್‌ ಮುಖ್ಯಸ್ಥ ಎಸ್‌ ಜಾರ್ಜ್‌ ಅವರು ರಾಜ್ಯಪಾಲರನ್ನು ಭೇಟಿಯಾದ ವೇಳೆ, ಈ ಸೂಚನೆ ನೀಡಲಾಗಿದೆ.

Advertisement

ಪಾಲಿಟಿಕ್ಸ್‌ಗೆ ರಜನಿ:
ತಮಿಳುನಾಡಿನ ರಾಜಕೀಯ ಡ್ರಾಮಾಗೆ ಹೊಸ ತಿರುವು ಎಂಬಂತೆ, ಸೂಪರ್‌ಸ್ಟಾರ್‌ ರಜನಿಕಾಂತ್‌ ಅವರು ರಾಜಕೀಯಕ್ಕೆ ಗ್ಯಾ†ಂಡ್‌ ಎಂಟ್ರಿ ಕೊಡುವ ಸುಳಿವು ಸಿಕ್ಕಿದೆ. 66 ವರ್ಷದ ನಟ ಶುಕ್ರವಾರ ಆರೆಸ್ಸೆಸ್‌ ನಾಯಕ ಎಸ್‌ ಗುರುಮೂರ್ತಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಅವರ ಸಲಹೆಯ ಮೇರೆಗೆ, ರಜನಿ ಹೊಸ ಪಕ್ಷ ಸ್ಥಾಪಿಸುವ ಸಾಧ್ಯತೆಯಿದೆ. ರಾಜ್ಯ ರಾಜಕೀಯವನ್ನು ಪ್ರವೇಶಿಸಲು ಬಿಜೆಪಿ ರೂಪಿಸಿದ ತಂತ್ರದ ಭಾಗವಿದು ಎಂದು ಹೇಳಲಾಗುತ್ತಿದೆ. ಆದರೆ, ಯಾವುದೇ ಕಾರಣಕ್ಕೂ ಸಕ್ರಿಯ ರಾಜಕಾರಣಕ್ಕೆ ಹೋಗಬೇಡಿ ಎಂದು ರಜನಿಗೆ ಮೆಗಾಸ್ಟಾರ್‌ ಅಮಿತಾಭ್‌ ಬಚ್ಚನ್‌ ಸಲಹೆ ನೀಡಿದ್ದಾರಂತೆ.

ವೈಫೈ ಇಲ್ಲ, ಪತ್ರಿಕೆ ಕೊಡಲ್ಲ, ಮೊಬೈಲ್‌ ಜಾಮ್‌!
ಮೊಬೈಲ್‌ ಜಾಮರ್‌ಗಳು, ವೈಫೈ, ಇಂಟರ್ನೆಟ್‌ ತಂತಿಗಳಿಗೆ ಕತ್ತರಿ, ಮಾಧ್ಯಮಗಳ ಪ್ರವೇಶಕ್ಕೆ ನಿರ್ಬಂಧ, ನ್ಯೂಸ್‌ಪೇಪರ್‌ ಇಲ್ಲವೇ ಇಲ್ಲ, 24 ಗಂಟೆಯೂ ಗಸ್ತು ತಿರುಗುತ್ತಿರುವ ಸಿಬ್ಬಂದಿ…

ತಮಿಳುನಾಡಿನಲ್ಲಿ ಹಂಗಾಮಿ ಸಿಎಂ ಪನ್ನೀರ್‌ಸೆಲ್ವಂ ಮತ್ತು ಪ್ರಧಾನ ಕಾರ್ಯದರ್ಶಿ ಶಶಿಕಲಾ ನಡುವೆ ಹಗ್ಗಜಗ್ಗಾಟ ಆರಂಭವಾದ ಬಳಿಕದ ರೆಸಾರ್ಟ್‌ ರಾಜಕೀಯದ ತುಣುಕುಗಳಿವು. ಶಶಿಕಲಾ ಅವರು 130 ಮಂದಿ ಶಾಸಕರನ್ನು ಬೇರೆ ಬೇರೆ ರೆಸಾರ್ಟ್‌ಗಳಲ್ಲಿ ಇರಿಸಿ, ಅವರು ತಮ್ಮ ಕೈತಪ್ಪಿ ಹೋಗದಂತೆ ನೋಡಿಕೊಳ್ಳುತ್ತಿದ್ದಾರೆ. ಈ ಪೈಕಿ ಗೋಲ್ಡನ್‌ ಬೇ ರೆಸಾರ್ಟ್‌ನಲ್ಲಿರುವ ಶಾಸಕರು, ಅವರ ಸ್ಥಿತಿಗತಿ ಬಗ್ಗೆ ಕೆಲವು ಮಾಧ್ಯಮಗಳು ವರದಿ ಮಾಡಿದ್ದು, ಹಲವು ಕುತೂಹಲಕಾರಿ ಅಂಶಗಳನ್ನು ಬಹಿರಂಗಪಡಿಸಿವೆ.

ರೆಸಾರ್ಟ್‌ನಲ್ಲಿ ಭದ್ರತಾ ಸಿಬ್ಬಂದಿಯ ಸ್ಥಾನವನ್ನು ಶಶಿಕಲಾ ಬೆಂಬಲಿಗರೇ ತುಂಬಿದ್ದಾರೆ. ರೆಸಾರ್ಟ್‌ ಆವರಣದಲ್ಲಿರಬೇಕಾದ ಸೆಕ್ಯೂರಿಟಿ ಗಾರ್ಡ್‌ಗಳನ್ನು ಒಳಗಿನ ಕೆಲಸಕ್ಕೆ ನೇಮಿಸಲಾಗಿದೆ. ಶಶಿಕಲಾ ಬೆಂಬಲಿಗರು ಗೇಟ್‌ಗಳನ್ನು ಕಾಯುತ್ತಿದ್ದು, ರೆಸಾರ್ಟ್‌ನಿಂದ ಯಾರೂ ಹೊರಗೆ ಹೋಗದಂತೆ ಹಾಗೂ ಹೊರಗಿಂದ ಯಾರೂ ಒಳಗೆ ಬರದಂತೆ ನೋಡಿಕೊಳ್ಳುತ್ತಿದ್ದಾರೆ. ಮೂಲೆ ಮೂಲೆಗಳನ್ನೂ ಭದ್ರತಾ ಸಿಬ್ಬಂದಿ ಕಾಯುತ್ತಿದ್ದು, ಒಳಗಿರುವ ಶಾಸಕರು ಗೋಡೆ ಹತ್ತಿ, ಎಸ್ಕೇಪ್‌ ಆಗದಂತೆ ನೋಡಿಕೊಳ್ಳಲಾಗುತ್ತಿದೆ. ಅಷ್ಟೇ ಅಲ್ಲ, ರೆಸಾರ್ಟ್‌ನಿಂದ 1 ಕಿ.ಮೀ. ದೂರದವರೆಗೂ ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು, ಅಷ್ಟು ದೂರದಿಂದಲೇ ಮಾಧ್ಯಮಗಳನ್ನು ತಡೆದು ನಿಲ್ಲಿಸಲಾಗುತ್ತಿದೆ.

ಯಾರೂ ದೂರವಾಣಿಗಳನ್ನು ಬಳಸದಂತೆ ಮೊಬೈಲ್‌ ಜಾಮರ್‌ಗಳನ್ನು ರೆಸಾರ್ಟ್‌ನಾದ್ಯಂತ ಅಳವಡಿಸಲಾಗಿದೆ. ವೈಫೈ ಆಫ್ ಮಾಡಲಾಗಿದೆ. ಇಂಟರ್ನೆಟ್‌ ವೈರ್‌ಗಳ ಸಂಪರ್ಕ ಕಡಿತಗೊಳಿಸಲಾಗಿದೆ. ಎಲ್ಲ ವ್ಯವಸ್ಥೆಯನ್ನೂ ಕೊಠಡಿಯೊಳಗೇ ಕಲ್ಪಿಸಲಾಗುತ್ತಿದೆ. ಶಾಸಕರಿಗೆ ಪತ್ರಿಕೆಗಳನ್ನು ಕೇಳಿದರೂ ಕೊಡುತ್ತಿಲ್ಲ. ಗುರುವಾರ ರಾತ್ರಿ ಮನರಂಜನೆಗೆಂದು ಜನಪದ ನೃತ್ಯ ಆಯೋಜಿಸಲಾಗಿತ್ತು. ತಮಿಳು ಹಿಟ್‌ ಸಿನಿಮಾಗಳನ್ನು ದೊಡ್ಡ ಪರದೆಯಲ್ಲಿ ತೋರಿಸಲಾಗಿತ್ತು. ಕೊಠಡಿಗಳ ಹೊರಗೆ ಬಿಗಿಭದ್ರತೆ ಏರ್ಪಡಿಸಲಾಗಿದ್ದು, ಕೆಲವು ಶಾಸಕರು ಭದ್ರತಾ ಸಿಬ್ಬಂದಿಯೊಡನೆ ಜಗಳವಾಡಿದ ಘಟನೆಗಳೂ ನಡೆದಿವೆ.

ಬಂಧಿಸಿಟ್ಟಿಲ್ಲ ಎಂದ ಶಾಸಕರು:
ಇನ್ನೊಂದೆಡೆ, ಶಶಿಕಲಾ ಅವರು ಎಐಎಡಿಎಂಕೆ ಶಾಸಕರನ್ನು ಕೂಡಿಹಾಕಿದ್ದಾರೆ ಎಂಬ ಮಾಧ್ಯಮಗಳ ವರದಿಯನ್ನು ಶಾಸಕರು ತಳ್ಳಿಹಾಕಿದ್ದಾರೆ. ಶಶಿಕಲಾ ಬೆಂಬಲಿಗ ಶಾಸಕರು ಶುಕ್ರವಾರ ಮಾತನಾಡಿದ್ದು, “”ನಾವು ಮುಕ್ತರಾಗಿದ್ದೇವೆ. ಶಶಿಕಲಾಗೆ ಸರ್ಕಾರ ರಚನೆಗೆ ರಾಜ್ಯಪಾಲರು ಆಹ್ವಾನ ನೀಡಲಿ ಎಂದು ಕಾಯುತ್ತಿದ್ದೇವೆ. ಕೂಡಿಹಾಕಲು ಅಥವಾ ಅಪಹೃತರಾಗಲು ನಾವೇನೂ ಪುಟ್ಟ ಮಕ್ಕಳಲ್ಲ,” ಎಂದಿದ್ದಾರೆ. ರಾಜ್ಯಪಾಲರು ಕರೆದರೆ ಒಟ್ಟಿಗೇ ಹೋಗೋಣ ಎಂಬ ಕಾರಣಕ್ಕಾಗಿ ಎಲ್ಲರೂ ಒಂದೇ ಕಡೆ ಸೇರಿದ್ದಾಗಿಯೂ ಅವರು ಹೇಳಿದ್ದಾರೆ.

ಪ್ರತಿಕ್ರಿಯೆ ಕೋರಿದ ಹೈಕೋರ್ಟ್‌
ಶಾಸಕರನ್ನು ಅಕ್ರಮವಾಗಿ ಕೂಡಿಹಾಕಲಾಗಿದೆ ಎಂಬ ಆರೋಪಕ್ಕೆ ಸಂಬಂಧಿಸಿ ಮದ್ರಾಸ್‌ ಹೈಕೋರ್ಟ್‌ ಶುಕ್ರವಾರ ತಮಿಳುನಾಡು ಸರ್ಕಾರದ ಪ್ರತಿಕ್ರಿಯೆ ಕೋರಿದೆ. ಅಕ್ರಮವಾಗಿ ಬಂಧಿಸಿಟ್ಟಿದ್ದನ್ನು ಖಂಡಿಸಿ 20 ಮಂದಿ ಶಾಸಕರು ಉಪವಾಸ ಕುಳಿತಿದ್ದಾರೆ ಎಂದು ಆರೋಪಿಸಿ ಪಿಐಎಲ್‌ವೊಂದು ಸಲ್ಲಿಕೆಯಾಗಿತ್ತು.

ತ್ವರಿತ ವಿಚಾರಣೆಗೆ ಸುಪ್ರೀಂ ನಕಾರ:
ಶಶಿಕಲಾ ಅವರ ಪ್ರಮಾಣ ಸ್ವೀಕಾರಕ್ಕೆ ತಡೆಯಾಜ್ಞೆ ತರುವಂತೆ ಕೋರಲಾದ ಅರ್ಜಿಯ ತ್ವರಿತ ವಿಚಾರಣೆಗೆ ಸುಪ್ರೀಂ ಕೋರ್ಟ್‌ ನಿರಾಕರಿಸಿದೆ. “ಕ್ಷಮಿಸಿ, ನಿಮ್ಮ ಕೋರಿಕೆ ಪುರಸ್ಕರಿಸಲಾಗದು’ ಎಂದು ಅರ್ಜಿದಾರ ಸೆಂಥಿಲ್‌ ಕುಮಾರ್‌ಗೆ ಸಿಜೆಐ ಜೆ ಎಸ್‌ ಖೇಹರ್‌ ನೇತೃತ್ವದ ಪೀಠ ಹೇಳಿದೆ.

ಕೇಂದ್ರಕ್ಕೆ ರಾಜ್ಯಪಾಲರ ವರದಿ
ತಮಿಳುನಾಡು ರಾಜ್ಯಪಾಲ ವಿದ್ಯಾಸಾಗರ ರಾವ್‌ ಅವರು ಕೇಂದ್ರ ಸರ್ಕಾರಕ್ಕೆ ಮೂರು ಪುಟಗಳ ವರದಿ ಸಲ್ಲಿಸಿದ್ದಾರೆ. ಅದರಲ್ಲಿ ವಿವಿಧ ರಾಜಕೀಯ ಪಕ್ಷಗಳ ಅಭಿಪ್ರಾಯ, ಶಶಿಕಲಾ ನಟರಾಜನ್‌, ಹಂಗಾಮಿ ಮುಖ್ಯಮಂತ್ರಿ ಓ.ಪನೀರ್‌ಸೆಲ್ವಂ ಜತೆಗಿನ ಚರ್ಚೆಯ ವಿವರಗಳನ್ನು  ಒಳಗೊಂಡಿದೆ. ಕಾನೂನು ಮತ್ತು ಸುವ್ಯವಸ್ಥೆಯ ಸಮಗ್ರ ಮಾಹಿತಿಯನ್ನು ರಾಜ್ಯಪಾಲರು ಕೇಂದ್ರ ಗೃಹಖಾತೆಗೆ ಕಳುಹಿಸಿಕೊಟ್ಟಿದ್ದಾರೆ. ಇದಕ್ಕೂ ಮುನ್ನ ಶುಕ್ರವಾರ ಸಂಜೆಯ ವೇಳೆಗೆ ಪೊಲೀಸ್‌ ಮಹಾನಿರ್ದೇಶಕ ಟಿ.ಕೆ.ರಾಜೇಂದ್ರನ್‌, ಚೆನ್ನೈ ಪೊಲೀಸ್‌ ಆಯುಕ್ತ ಎಸ್‌.ಜಾರ್ಜ್‌, ಮುಖ್ಯ ಕಾರ್ಯದರ್ಶಿ ಗಿರಿಜಾ ವೈದ್ಯನಾಥನ್‌ ರಾಜ್ಯಪಾಲರಿಗೆ ತಮಿಳುನಾಡಿನ ಪರಿಸ್ಥಿತಿ ವಿವರಿಸಿದ್ದರು.

ಎಐಎಡಿಎಂಕೆಯ ಎಲ್ಲ ಸದಸ್ಯರ ನೆರವಿನಿಂದ ಮುಂದಿನ ಹಾದಿ ಇನ್ನಷ್ಟು ಸುಂದರವಾಗಿರಲಿದೆ. ರಾಜ್ಯಪಾಲರು ಸಂವಿಧಾನ ಮತ್ತು ಪ್ರಜಾಪ್ರಭುತ್ವವನ್ನು ಎತ್ತಿ ಹಿಡಿಯುತ್ತಾರೆ ಎಂಬ ವಿಶ್ವಾಸವಿದೆ. ಅಲ್ಲಿವರೆಗೆ ಕಾದು ನೋಡುತ್ತೇವೆ.
– ಶಶಿಕಲಾ, ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ

ಅಮ್ಮಾ ಕಟ್ಟಿದ ಪಕ್ಷವನ್ನು ಯಾರೂ ಹೈಜಾಕ್‌ ಮಾಡಲು ಸಾಧ್ಯವಿಲ್ಲ. ಇದು ಎಐಎಡಿಎಂಕೆ ಕೇಡರ್‌ಗಳೇ ಕಟ್ಟಿದ ಪಕ್ಷ. ಯಾವುದೋ ಒಂದು ಕುಟುಂಬಕ್ಕೆ ಕೊಟ್ಟು ನಾವು ಸುಮ್ಮನೆ ಕುಳಿತುಕೊಳ್ಳುವುದಿಲ್ಲ.
– ಪನ್ನೀರ್‌ಸೆಲ್ವಂ, ಹಂಗಾಮಿ ಮುಖ್ಯಮಂತ್ರಿ

ಶಶಿಕಲಾ ಅವರು ತಮಗೆ ಶಾಸಕರ ಬೆಂಬಲವಿದೆ ಎಂದಾಕ್ಷಣ ಅವರನ್ನು ರಾಜ್ಯಪಾಲರು ಸರ್ಕಾರ ರಚನೆಗೆ ಆಹ್ವಾನಿಸಬೇಕೆಂದೇನೂ ಇಲ್ಲ. ಕೇಂದ್ರದಿಂದ ಯಾವ ಸಲಹೆ ಬರುತ್ತದೆಯೋ, ಅದರ ಆಧಾರದಲ್ಲಿ ರಾಜ್ಯಪಾಲರು ನಿರ್ಧಾರ ಕೈಗೊಳ್ಳುತ್ತಾರೆ.
– ಕೆ ರೋಸಯ್ಯ, ತಮಿಳುನಾಡು ಮಾಜಿ ರಾಜ್ಯಪಾಲ

ನಾನು ಪನ್ನೀರ್‌ಸೆಲ್ವಂ ವಿರೋಧಿ ಎಂಬ ಕಾರಣಕ್ಕಾಗಿ ನನಗೆ ಜೀವ ಬೆದರಿಕೆಗಳು ಬರುತ್ತಿವೆ. ಬೆದರಿಕೆಗಳ ಕುರಿತ ಸಾಕ್ಷ್ಯಗಳೂ ನನ್ನಲ್ಲಿವೆ. ಈ ವಿಚಾರ ಕುರಿತು ಸೈಬರ್‌ ಘಟಕಕ್ಕೆ ದೂರು ನೀಡಿದ್ದೇನೆ. ನಾವು ಸ್ವಇಚ್ಛೆಯಿಂದ ಶಶಿಕಲಾಗೆ ಬೆಂಬಲ ನೀಡುತ್ತಿದ್ದೇವೆ.
– ಸಿ ಆರ್‌ ಸರಸ್ವತಿ, ಶಾಸಕಿ

ಯಾವ ಶಾಸಕರೂ ಉಪವಾಸ ಕುಳಿತಿಲ್ಲ. ಇದೆಲ್ಲ ಕೇವಲ ವದಂತಿಯಷ್ಟೆ. ಯಾರನ್ನೂ ಯಾರೂ ಕೂಡಿಹಾಕಿಲ್ಲ. ನಾನು ಆರಾಮವಾಗಿ ರೆಸಾರ್ಟ್‌ನಿಂದ ಹೊರಗೂ, ಒಳಗೂ ಹೋಗುತ್ತಿದ್ದೇನೆ.
– ರಾಮಾ ಜಯಲಿಂಗಮ್‌, ಎಐಎಡಿಎಂಕೆ ಶಾಸಕ

Advertisement

Udayavani is now on Telegram. Click here to join our channel and stay updated with the latest news.

Next