Advertisement

ಭಾಗವತ ಬಲಿಪರ ಮುಡಿಗೆ ಪಾರ್ತಿಸುಬ್ಬ ಪ್ರಶಸ್ತಿ 

06:00 AM Sep 28, 2018 | |

ತೆಂಕುತಿಟ್ಟಿನ ಸುಪ್ರಸಿದ್ಧ ಭಾಗವತರಾದ ಬಲಿಪ ನಾರಾಯಣ ಭಾಗವತರು ಕರ್ನಾಟಕ ಯಕ್ಷಗಾನ ಅಕಾಡೆಮಿಯ ಪ್ರತಿಷ್ಠಿತ ಪಾರ್ತಿಸುಬ್ಬ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಯಕ್ಷಗಾನಕ್ಕೆ ನೀಡಲ್ಪಡುವ ಅತ್ಯುನ್ನತ ಸರಕಾರಿ ಪ್ರಶಸ್ತಿಯಾದ ಪಾರ್ತಿಸುಬ್ಬ ಪ್ರಶಸ್ತಿ ಒಂದು ಲಕ್ಷ ರೂ. ನಗದು ಹೊಂದಿದೆ . ಇದರೊಂದಿಗೆ ಬಲಿಪ ನಾರಾಯಣ ಭಾಗವತರು ರಚಿಸಿದ, ಕಳೆದ ವರ್ಷ ಯಕ್ಷಧ್ರುವ ಪಟ್ಲ ಪ್ರತಿಷ್ಠಾನ ಪ್ರಕಟಿಸಿದ ಡಾ| ನಾಗವೇಣಿ ಮಂಚಿಯವರ ಸಂಪಾದಕತ್ವದ ಪ್ರಸಂಗಗಳ ಸಂಕಲನ “ಜಯಲಕ್ಷ್ಮೀಗೆ ರೂ. 25,000 ನಗದಿನೊಂದಿಗೆ ಪುಸ್ತಕ ಪ್ರಶಸ್ತಿ ಲಭಿಸಿದೆ. 

Advertisement

 ಬಲಿಪರು ತೆಂಕುತಿಟ್ಟು ಯಕ್ಷಗಾನದ ಒಳ – ಹೊರಗು ತಿಳಿದ ಭಾಗವತರು. 60 ವರ್ಷಗಳ ಸುದೀರ್ಘ‌ ಕಾಲ ಭಾಗವತಿಕೆ ಮಾಡಿದ ಅನುಭವಿ.ಸುಮಾರು 400 ವರ್ಷಗಳ ಹಿಂದೆ ಯಕ್ಷಗಾನ ಪಿತಾಮಹ ಎನಿಸಿದ ಕುಂಬ್ಳೆ ಪಾರ್ತಿಸುಬ್ಬರಿಂದ ರಚಿಸಲ್ಪಟ್ಟ ಯಕ್ಷಗಾನದ ಪೂರ್ವರಂಗ ಸಂಗೀತವನ್ನು ಇದಮಿತ್ಥಂ ಎಂದು ನಿಖರವಾಗಿ ಹೇಳುವ ಸಾಮರ್ಥ್ಯವಿರುವ ಭಾಗವತರಿಗೆ ಪಾರ್ತಿಸುಬ್ಬರ ಹೆಸರಿನ ಮಹೋನ್ನತ ಪ್ರಶಸ್ತಿ ನೀಡಿರುವುದು ಸೂಕ್ತವೂ ಹೌದು. 

ಇವರ ಅಜ್ಜ ದಿ .ಬಲಿಪ ನಾರಾಯಣ ಭಾಗವತರು ( ಅಂದಿನ ಹಿರಿಯ ಬಲಿಪರು ) ಯಕ್ಷರಂಗದಲ್ಲಿ ಮೆರೆದ ದೊಡ್ಡ ಹೆಸರು .ಅಜ್ಜ ಹಾಗೂ ತಂದೆಯವರಲ್ಲಿ ಭಾಗವತಿಕೆ ಕಲಿತ ಬಾಲಕ ನಾರಾಯಣ ಮುಂದೆ ಅಜ್ಜನ ಹೆಸರನ್ನು ಚಿರಸ್ಥಾಯಿಯಾಗಿ ಉಳಿಯುವಂತೆ ಮಾಡಿದರು . ಕಪ್ಪು ಮೂರು ಅಥವಾ ಬಿಳಿ ನಾಲ್ಕರ ( ಕೆಲವೊಮ್ಮೆ ಬಿಳಿ ಐದು ) ಏರು ಶ್ರುತಿಯಲ್ಲಿ ಹಾಡುವ ಬಲಿಪರು ಯುವ ಭಾಗವತರೂ ನಾಚುವಂತೆ ಅಥವಾ ಅನುಕರಿಸುವಂತೆ ಹಾಡಬಲ್ಲವರು . ರಂಗಸ್ಥಳದಲ್ಲೇ ಪದ್ಯ ರಚಿಸಬಲ್ಲ ಆಶುಕವಿಗಳೂ ಹೌದು . ಎಲ್ಲಾ ಪ್ರಸಂಗಗಳ ನಡೆ ತಿಳಿದಿದ್ದು ,ರಂಗದಲ್ಲೇ ನಿರ್ದೇಶನ ನೀಡಬಲ್ಲ ಅಸಾಮಾನ್ಯ ನಿರ್ದೇಶಕರು.

ಬಲಿಪರು ಸುಮಾರು 50 ಪ್ರಸಂಗ ರಚಿಸಿದ್ದು, ಈ ಪೈಕಿ ಹೆಚ್ಚಿನ ಪ್ರಸಂಗಗಳು ಇಂದಿಗೂ ಯಕ್ಷರಂಗದಲ್ಲಿ ಪ್ರದರ್ಶನಗೊಳ್ಳುತ್ತಿವೆ. 5ದಿನ ಕಾಲ ಆಡಬಲ್ಲ ಶ್ರೀ ದೇವಿಮಹಾತ್ಮೆ ಬಲಿಪರ ಶ್ರೇಷ್ಠ ಹಾಗೂ ಅಪರೂಪದ ಕೃತಿಯಾಗಿದೆ . ದುಃಶಾಸನ ವಧೆ , ಕುಮಾರ ವಿಜಯದಂಥಹ ಅಪರೂಪದ ಹಾಗೂ ಕ್ಲಿಷ್ಟವಾದ ಪ್ರಸಂಗಗಳನ್ನು ಬಲಿಪರೇ ಹಾಡಬೇಕು ಎಂಬುದು ಇಂದಿಗೂ ಯಕ್ಷಗಾನ ಅಭಿಮಾನಿಗಳ ಅಭಿಮತ . ಯಕ್ಷಗಾನದ ಕೆಲವು ವಿಶಿಷ್ಠ ತಾಳಗಳು , ರಾಗಗಳು ಬಲಿಪರಿಗೆ ಮಾತ್ರ ಸೀಮಿತವೋ ಎಂಬಂಥಹ ಅಪೂರ್ವ ಸಾಧಕರು . ವೃತ್ತಿನಿರತ ಭಾಗವತರಾಗಿ ಆರು ದಶಕಗಳ ಕಾಲ ಮೂಲ್ಕಿ , ಕೂಡ್ಲು , ಕುಂಡಾವು ಹಾಗೂ ಕಟೀಲು ಮೇಳಗಳಲ್ಲಿ ತಿರುಗಾಟ ನಡೆಸಿ¨ªಾರೆ . ಮೇಳದ ಯಜಮಾನರಾಗಿಯೂ ಅನುಭವ ಪಡೆದವರು .ನೂರಾರು ಸಿ.ಡಿ.ಹಾಗೂ ಕ್ಯಾಸೆಟ್‌ ಗಳಲ್ಲಿ ತಮ್ಮ ಕಂಠಸಿರಿಯನ್ನು ರಸಿಕರಿಗೆ ಉಣಬಡಿಸಿದ ಬಲಿಪರ ಹಾಡುಗಳು , ಸಾವಿರಾರು ಅಭಿಮಾನಿಗಳ ಮೊಬೈಲ್‌ ಪೋನ್‌ ಗಳಲ್ಲಿ ರಿಂಗ್‌ ಟೋನ್‌ ಆಗಿ ನಿತ್ಯ ಅನುರುಣಿಸುತ್ತಿವೆ. 

ಬಲಿಪರ ಸಾಧನೆಯನ್ನು ಪರಿಗಣಿಸಿ ಅಭಿಮಾನಿಗಳು ಸಾವಿರಾರು ಕಡೆಗಳಲ್ಲಿ ಸಂಮಾನಿಸಿದ್ದಾರೆ . ಈ ಸಮ್ಮಾನ ಪತ್ರಗಳೆಲ್ಲಾ ಇತ್ತೀಚೆಗೆ ಬಲಿಪರಿಗೆ 75 ಸಂವತ್ಸರ ಪೂರ್ತಿಯಾದ ಸಂದರ್ಭದಲ್ಲಿ ಅವರ ಅಭಿಮಾನಿಗಳು ಬಲಿಪರ ಸ್ವಗೃಹದ ಬಳಿ ನಿರ್ಮಿಸಿದ ಬಲಿಪ ಭವನದಲ್ಲಿವೆ. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಸಾಮಗ ಪ್ರಶಸ್ತಿ , ಶೇಣಿ ಪ್ರಶಸ್ತಿ , ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿಯ ಜ್ಞಾನ ಪ್ರಶಸ್ತಿ , ಮುದ್ದಣ ಪುರಸ್ಕಾರ, ಕರ್ನಾಟಕ ಶ್ರೀ ಪ್ರಶಸ್ತಿ , ದುಬೈಯ ಸಮ್ಮಾನ , ಅಗರಿ ಪ್ರಶಸ್ತಿ , ಯಕ್ಷಸಂಗಮ – ಮೂಡಬಿದಿರೆ ಪ್ರಶಸ್ತಿ ಯಂಥಹ ನೂರಾರು ಪ್ರತಿಷ್ಠಿತ ಪ್ರಶಸ್ತಿ , ಪಟ್ಲ ಪ್ರಶಸ್ತಿ ಸೇರಿದಂತೆ ನೂರಾರು ಪ್ರಶಸ್ತಿಗಳಿಂದ ಸಿಂಗಾರಗೊಂಡಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next