Advertisement

ಸಂಸದೀಯ ಪರಂಪರೆ ಬಡವಾಗದಿರಲಿ, “ನಾಯಿ’ಜಗಳದಿಂದ ಘನತೆ ಹಾಳು

03:45 AM Feb 18, 2017 | Harsha Rao |

ವಿನೋದ, ಸರಸ, ಸೌಹಾರ್ದ ಇಂದಿನ ನಮ್ಮ ರಾಜಕಾರಣಿಗಳಲ್ಲಿ ಕಾಣೆಯಾಗುತ್ತಿದೆ. ಸದಾ ಒಂದಿಲ್ಲೊಂದು ಕಡೆ ಚುನಾವಣೆ ಇದ್ದೇ ಇರುವುದರಿಂದ ಯಾವಾಗಲೂ ರಾಜಕೀಯ ಕೆಸರೆರಚಾಟ. ಆರೋಪ ಪ್ರತ್ಯಾರೋಪಗಳ ಕಹಿ, ಸಂಸತ್ತಿನ ಕಾರ್ಯಕ್ಕೆ ಅಡ್ಡಿಪಡಿಸುವಂತಹ ನಡೆ-ನುಡಿ ನಮ್ಮ ಪ್ರಜಾಪ್ರಭುತ್ವದ ಪಾವಿತ್ರ್ಯವನ್ನು ಹಾಳು ಮಾಡುತ್ತಿದೆ.

Advertisement

“ಮಾತು ಆಡಿದರೆ ಹೋಯ್ತು, ಮುತ್ತು ಒಡೆದರೆ ಹೋಯ್ತು’ ಎನ್ನುತ್ತಾರೆ ಬಲ್ಲವರು. ಕೆಲವೊಮ್ಮೆ ಮಾತು ಚಾಟಿಯೇಟಿಗಿಂತ ಹೆಚ್ಚು ನೋವನ್ನು ನೀಡುತ್ತದೆ. ಶಾರೀರಿಕ ನೋವು ಬಹು ಬೇಗನೇ ಮಾಸಿಹೋಗಿ ಬಿಡುತ್ತದೆ, ಆದರೆ ಕೆಟ್ಟ ಮಾತು ಕೊಟ್ಟ ನೋವು ಅಷ್ಟು ಸುಲಭದಲ್ಲಿ ಶಮನವಾಗುವುದಿಲ್ಲ. “ಜಾಣನಿಗೆ ಮಾತಿನ ಪೆಟ್ಟು, ಕೋಣನಿಗೆ ದೊಣ್ಣೆಯ ಪೆಟ್ಟು’ ಎನ್ನುವ ಗಾದೆ ಮಾತೇ ಇದೆಯಲ್ಲ. ಸಾರ್ವಜನಿಕ ಜೀವನದಲ್ಲಿರುವವರು ಮಾತನಾಡುವಾಗ ಬಹಳ ಎಚ್ಚರಿಕೆಯಿಂದಿರಬೇಕಾಗುತ್ತದೆ ಎನ್ನುವುದು ಸುಳ್ಳಲ್ಲ. ಅಭಿವ್ಯಕ್ತಿ ಸ್ವಾತಂತ್ರ್ಯ ಇದೆ ನಿಜ. ಅದು ಮೂಲಭೂತ ಹಕ್ಕು ಕೂಡ ಹೌದು. ಹಾಗೆಂದು ಬಾಯಿಗೆ ಬಂದದ್ದನ್ನೆಲ್ಲ ಬಹಿರಂಗವಾಗಿ ಆಡಿಬಿಡುವುದು ಕೆಲಸವನ್ನೂ ಕೆಡಿಸುತ್ತದೆ, ಘನತೆಯನ್ನೂ ಹಾಳು ಮಾಡುತ್ತದೆ. ಬೆಂಕಿಗೆ ತುಪ್ಪ ಸುರಿಯುವಂತೆ ಎಲ್ಲದಕ್ಕೂ ಭೂತಗನ್ನಡಿ ಹಿಡಿದು ಹುಡುಕುವ ಮಾಧ್ಯಮಗಳಿವೆ.

ಕೆಲವೊಮ್ಮೆ ಆಡಿದ ಮಾತು ವಿಪರೀತಾರ್ಥ ಪಡೆದುಕೊಂಡು ತನ್ನ ದಿಕ್ಕನ್ನೇ ಬದಲಿಸಿ, ಸಾಕಷ್ಟು ತಿರುವು-ಮುರುವುಗಳನ್ನು ಪಡೆದುಕೊಂಡು ಮಾಧ್ಯಮಗಳಲ್ಲಿ ಭಾರೀ ಚರ್ಚೆಗೆ ಗ್ರಾಸವಾಗುತ್ತದೆ. ಕೇವಲ ತಾವಾಡಿದ ಒಂದೇ ಒಂದು ಮಾತಿನಿಂದಾಗಿ ಹಲವಾರು ವರ್ಷಗಳಿಂದ ಸ್ಥಾಪನೆಯಾಗಿದ್ದ ತಮ್ಮ ವರ್ಚಸ್ಸನ್ನು ತಾವೇ ಕಳೆದುಕೊಂಡ ಹಲವಾರು ಪ್ರಭೃತಿಗಳ ಜೀವಂತ ಉದಾಹರಣೆಗಳು ನಮ್ಮ ಮುಂದೆ ಇವೆ.

ಸಂಸತ್ತಿನಲ್ಲಿ “ನಾಯಿ’ ಕಾಳಗ
ಕಳೆದ ಲೋಕಸಭಾ ಚುನಾವಣೆಯ ಸಮಯದಲ್ಲಿ ನರೇಂದ್ರ ಮೋದಿಯವರನ್ನು ಚಹಾ ಮಾರುವ ಹುಡುಗನಿಗೆ ಹೋಲಿಸಿ ಹೀಯಾಳಿಸಿದ ದಿಗ್ಗಜರು ಕೊನೆಗೆ ತಾವಾಡಿದ ಮಾತುಗಳಿಗೆ ಪಶ್ಚಾತ್ತಾಪ ಪಡುವಂತಾಯಿತು. ಮೋದಿಯವರು ಗುಜರಾತ್‌ ಗಲಭೆಯಲ್ಲಿ ಅಲ್ಪಸಂಖ್ಯಾಕರ ಮೇಲೆ ದೌರ್ಜನ್ಯ ಎಸಗಿದರೆಂದು ಅವರನ್ನು “ಸಾವಿನ ಸರದಾರ’ ಎಂದು ಕರೆದದ್ದು ಹಾಗೆ ಕರೆದವರಿಗೇ ಮುಳುವಾಯಿತು. ಇನ್ನು 2014ರ ಚುನಾವಣೆಯ ಅನಂತರ ದೇಶದ ಜನತೆಯ ಭಾರೀ ಬೆಂಬಲದೊಂದಿಗೆ ಪ್ರಧಾನ ಮಂತ್ರಿಯಾಗಿ ಚುನಾಯಿತರಾದ ವ್ಯಕ್ತಿಯನ್ನು ನೆರೆಯ ಶತ್ರು ರಾಷ್ಟ್ರವಾದ ಪಾಕಿಸ್ಥಾನದ ನೆಲದಲ್ಲಿ ನಿಂತು ಮನಬಂದಂತೆ ಜರೆಯಲಾಯಿತು. ಅಷ್ಟೇ ಅಲ್ಲ, ಮೋದಿಯವರನ್ನು ಅಧಿಕಾರದಿಂದ ಕೆಳಗಿಳಿಸಲು ಪಾಕಿಸ್ಥಾನದ ಸಹಕಾರ ಕೋರಲಾಯಿತು! ಆಗ ದೇಶದ ಘನತೆಗೆ ಚ್ಯುತಿ ತಂದವರ ವಿರುದ್ಧ ಯಾವುದೇ ತಕರಾರು ಏಳಲಿಲ್ಲ. 

ಮೋದಿಯವರನ್ನೇ ಗಮನದಲ್ಲಿಟ್ಟುಕೊಂಡು “ಬಿಜೆಪಿಯ ಒಂದು ನಾಯಿ ಕೂಡ ದೇಶಕ್ಕಾಗಿ ಬಲಿದಾನ ಮಾಡಲಿಲ್ಲ’ ಎಂದು ಸಂಸತ್ತಿನಲ್ಲಿ ಪ್ರತಿಪಕ್ಷ ನಾಯಕರು ಹೇಳಿದರು. ಇದಕ್ಕೆ ಮೊದಲು ಮೋದಿಯವರದು ಸೂಟು-ಬೂಟು ಸರಕಾರ ಎಂದು ಜರೆಯಲಾಯಿತು. ವಿರೋಧಿಗಳ ಬಗ್ಗೆ ಟೀಕೆ ಮಾಡುವಾಗ ವಿಚಾರ ನಿಷ್ಠವಾಗಿ, ವಸ್ತುನಿಷ್ಠವಾಗಿ ಸೈದ್ಧಾತಿಕ ಪ್ರಶ್ನೆಗಳನ್ನೆತ್ತುವ, ವಿಷಯಾಧಾರಿತ ಚರ್ಚೆ ನಡೆಸುವ ರಾಜಕೀಯ ಪರಂಪರೆ ನಮ್ಮಲ್ಲಿ ಎಂದೋ ಮುಗಿದು ಹೋಗಿದೆ. ಪ್ರತಿಪಕ್ಷಗಳ ಇಷ್ಟೆಲ್ಲ ಆರೋಪಗಳನ್ನು, ನಿಂದೆಗಳನ್ನು ಕೇಳಿಯೂ ಪ್ರಧಾನಿ ಮೋದಿಯವರು ಹೇಗೆ ತಾನೇ ಸುಮ್ಮನಿರಲು ಸಾಧ್ಯ? ಅದಕ್ಕೆ ಸರಿಯಾದ ಜವಾಬನ್ನೇ ಅವರು ನೀಡಿದರು. ಸಾಲು ಸಾಲು ಹಗರಣ ಮಾಡಿ ಸಂಪುಟದಲ್ಲಿದ್ದ ಸಂಗಡಿಗರು ಮುಖಕ್ಕೆ ಕಪ್ಪು ಮಸಿ ಮೆತ್ತಿಕೊಂಡಿದ್ದರೂ ಕ್ಯಾಬಿನೆಟ್‌ನ ನೇತೃತ್ವ ವಹಿಸಿದ್ದ ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌ ಅವರು ಇಂದಿಗೂ ತಮ್ಮ ಶುದ್ಧ ವರ್ಚಸ್ಸನ್ನು ಕಾಪಾಡಿಕೊಂಡಿ¨ªಾರೆ! ಅದನ್ನೇ ಗುರಿಯಾಗಿಟ್ಟುಕೊಂಡ ಪ್ರಧಾನಿ ಮೋದಿ “ನಮ್ಮ ವಿದ್ವಾಂಸ ವರ್ಚಸ್ಸಿನ ಮಾಜಿ ಪ್ರಧಾನಿಯವರಿಗೆ ರೇನ್‌ಕೋಟ್‌ ಹಾಕಿಕೊಂಡು ಒದ್ದೆಯಾಗದಂತೆ ಸ್ನಾನ ಮಾಡಲು ಬರುತ್ತದೆ’ ಎಂದದ್ದು. ಇದಕ್ಕೆ ಪ್ರತಿಯಾಗಿ ವಿಪಕ್ಷ ನಾಯಕರು ಮೋದಿ ಅವರು ಇನ್ನೊಬ್ಬರ ಬಚ್ಚಲು ಮನೆಗೆ ಇಣುಕುವ ಚಾಳಿ ಹೊಂದಿದ್ದಾರೆ ಎಂಬುದಾಗಿ ಮೂದಲಿಸಿದರು. ಈಗಿನ ಕಾಲದ ರಾಜಕಾರಣಿಗಳು ಪ್ರಾಥಮಿಕ ಶಾಲೆಯ ಮಕ್ಕಳ ಹಾಗೆ ಕ್ಷುಲ್ಲಕ ವಿಚಾರಗಳಲ್ಲಿ ಮಾತಿಗೆ ಮಾತು ಕೂಡಿಸುತ್ತ ಜಗಳ ತೆಗೆಯುವುದರಲ್ಲಿ ಹೇಗೆ ನಿಸ್ಸೀಮರು ಎಂಬುದಕ್ಕೆ ಇದು ಸಾಕ್ಷಿಯಂತಿದೆ. ಪ್ರಧಾನಿ ಮೋದಿಯವರ ಹೋಲಿಕೆ, ಹೇಳಿಕೆ ಸರಿಯೋ ತಪ್ಪೋ ಒತ್ತಟ್ಟಿಗಿರಲಿ; ಅಂತೂ ಹೊಸ “ನಾಯಿ’ ಜಗಳವೊಂದು ಪ್ರಾರಂಭವಾಗಿದೆ.

Advertisement

ರಾಜಕಾರಣದಲ್ಲಿ ಮರೆಯಾಗುತ್ತಿದೆ ಹಾಸ್ಯಪ್ರಜ್ಞೆ
ತನ್ನ ಒಡೆಯನನ್ನು ನಿಷ್ಠೆಯಿಂದ ಕಾಯುವ ನಾಯಿಯ ನಿಷ್ಠೆ ಈ ದೇಶದ ಕುರಿತು ನಮ್ಮ ರಾಜಕಾರಣಿಗಳಲ್ಲಿದ್ದರೆ ಒಳಿತಿತ್ತು. “ನಾಯಿ’ ನಿಷ್ಠೆಯ ಸಂಕೇತವಾದರೂ ಅದರ ಸ್ಥಾನ ಮನೆಯ ಹೊರಗೆ ಮತ್ತು ಕಾಲ ಬಳಿಯೇ ಎನ್ನುವ ಮನೋಭಾವ ನಮ್ಮಲ್ಲಿದೆ ಎನ್ನುವುದನ್ನು ಮರೆಯಬಾರದು. ಸಭ್ಯರು ಇಂದಿಗೂ “ನಾಯಿ ಪಾಡು ತಮಗೆ ಬಾರದಿರಲಿ’ ಎಂದು ಹಾರೈಸುತ್ತಿರುತ್ತಾರೆ. ನಮ್ಮ ಶಿಕ್ಷಕರೊಬ್ಬರು ತಮಗೆ ತರಗತಿಯಲ್ಲಿ ತುಂಬಾ ಸಿಟ್ಟು ಬಂದಾಗ ಉಪಯೋಗಿಸುತ್ತಿದ್ದ ಅತಿ ದೊಡ್ಡ ಬೈಗುಳ ಎಂದರೆ “ನಾಯಿ ಜಾತಿಯವ’ ಎನ್ನುವುದು! ಹಿಂದಿ ಭಾಷಿಕ ಪ್ರದೇಶಗಳಲ್ಲಿ ಕೂಡ “ಕುತ್ತೆ ಕೀ ಮೌತ್‌ ಮರೇಗಾ’ ಎನ್ನುವುದು ಬಹಳ ದೊಡ್ಡ ಒಂದು ಅಪಶಬ್ದ. “ರೇನ್‌ ಕೋಟ್‌ ಸ್ನಾನ’ ಎನ್ನುವ ಹೋಲಿಕೆಗೆ ನೊಂದವರು ದೇಶದ ದೊಡ್ಡ ರಾಜಕೀಯ ಪಕ್ಷವೊಂದಕ್ಕೆ “ನಾಯಿ’ ಶಬ್ದ ಬಳಕೆ ಮಾಡಿದ್ದು ಸರಿಯೋ ತಪ್ಪೋ ಎನ್ನುವುದು ಚಿಂತನಾರ್ಹ. 

ಹಿಂದೊಮ್ಮೆ ಚುನಾವಣಾ ಸಮಯದಲ್ಲಿಯೇ ಅಟಲ್‌ ಬಿಹಾರಿ ವಾಜಪೇಯಿ ಅವರ ಕೈಗೆ ಗಾಯವಾಗಿತ್ತು, ಬ್ಯಾಂಡೇಜ್‌ ಸುತ್ತಲಾಗಿತ್ತು. ಪತ್ರಕರ್ತರು ವಾಜಪೇಯಿ ಅವರನ್ನು ಹೇಗೆ ಗಾಯವಾಯಿತು ಎಂದು ಕೇಳಿದರೆ, “ಇದು ಕೈಗೂ (ಕಾಂಗ್ರೆಸ್‌ ಚಿಹ್ನೆ) ಬಾಯಿಗೂ ಜಗಳ’ ಎಂದು ವಿನೋದವಾಗಿ ಉತ್ತರಿಸಿದ್ದರು. ಆ ಮಟ್ಟದ ವಿನೋದ, ಸರಸ, ಸೌಹಾರ್ದ ಇಂದಿನ ನಮ್ಮ ರಾಜಕಾರಣಿಗಳಲ್ಲಿ ಕಾಣೆಯಾಗುತ್ತಿದೆ ಎನ್ನುವುದು ವಿಷಾದನೀಯ. ವಾಜಪೇಯಿ, ಆಡ್ವಾಣಿಯವರಂತೆ ಸರ್ವಪಕ್ಷಗಳಿಂದಲೂ ಮನ್ನಿಸಲ್ಪಡುವ ರಾಜಕಾರಣಿಗಳ ಪೀಳಿಗೆಯೂ ಕಾಣೆಯಾಗಿದೆ ಅಥವಾ ಒಳ್ಳೆಯದನ್ನು ಗುರುತಿಸಿ ಒಪ್ಪಿಕೊಳ್ಳುವ ಮನಃಸ್ಥಿತಿ ಈಗಿನ ರಾಜಕಾರಣಿಗಳಿಗಿಲ್ಲ. ಚುನಾವಣಾ ಕಾಲದ ಆರೋಪ ಪ್ರತ್ಯಾರೋಪಗಳ ಕಹಿ, ಬಿರು ನುಡಿ, ಸಂಸತ್ತಿನ ಕಾರ್ಯಕ್ಕೆ ಅಡ್ಡಿಪಡಿಸುವಂತಹ ನಡೆ-ನುಡಿ ನಮ್ಮ ಪ್ರಜಾಪ್ರಭುತ್ವದ ಪಾವಿತ್ರ್ಯವನ್ನು ಹಾಳು ಮಾಡುತ್ತಿದೆ. ಕಳೆದ ಹಲವು ದಶಕಗಳಿಂದ ಸಂಸತ್‌ ಕಲಾಪಗಳಲ್ಲಿ ವಿಷಯಾಧಾರಿತವಾದ, ಅಂಕಿಅಂಶಗಳನ್ನು ಒಳಗೊಂಡ ಘನವಾದ ಚರ್ಚೆಯ ಬದಲು ಗದ್ದಲ, ಮಾರಾಮಾರಿ, ಕೀಳು ನುಡಿಗಳೇ ತುಂಬಿಹೋಗಿವೆ. ಪರಿಣಾಮವಾಗಿ ಕಲಾಪದ ಅವಧಿ ವ್ಯರ್ಥ, ಅಧಿವೇಶನಕ್ಕೆ ವಿನಿಯೋಗವಾಗುವ ಜನರ ತೆರಿಗೆಯ ಹಣ ವೃಥಾ ಪೋಲು. 

ಸದಾ ಕಾಡುತ್ತಿರುವ ಚುನಾವಣಾ ಜ್ವರ
ಅಧಿಕಾರ ಕೈ ತಪ್ಪಿ ಹೋಗಿರುವುದನ್ನು ಇನ್ನೂ ಅರಗಿಸಿಕೊಳ್ಳಲಾಗದ ಮನಸ್ಥಿತಿಯಲ್ಲಿ ಪ್ರತಿಪಕ್ಷಗಳು ಇದ್ದಂತಿವೆ. ಒಮ್ಮೆ ಅಸಹಿಷ್ಣುತೆಯ ಅಪಪ್ರಚಾರ, ಇನ್ನೊಮ್ಮೆ ಬಡವರಿಗೆ ಕಷ್ಟವಾಗುತ್ತಿದೆ ಎನ್ನುವ ಅಗ್ಗದ ಪ್ರಚಾರ ತಂತ್ರಗಳ ಸರಣಿಯ ಇನ್ನೊಂದು ಭಾಗವಾಗಿ ದೇಶದ ಪ್ರಧಾನಿ ತಮ್ಮ ಹುದ್ದೆಯ ಘನತೆಗೆ ಶೋಭೆಯಲ್ಲದ ಮಾತನಾಡುತ್ತಿ¨ªಾರೆ ಎನ್ನುವ ಗೌಜಿಯಷ್ಟೇ. ದೇಶದಲ್ಲಿ ಒಂದಲ್ಲ ಒಂದು ರಾಜ್ಯಗಳಲ್ಲಿ ಯಾವಾಗಲೂ ನಡೆಯುತ್ತಿರುವ ಚುನಾವಣೆಯ ಪರ್ವ ಕಾಲವೇ ಇಂತಹ ಅಪಪ್ರಚಾರ ಹೆಣೆಯಲು ಒಂದು ಕಾರಣವಿರಬಹುದು. ಚುನಾವಣೆಯ ಜ್ವರ ತಲೆಗೇರಿ ಮತಿಗೆಟ್ಟವರಂತೆ ಮಾತನಾಡುವುದೇ ಎಲ್ಲ ರಾಜಕಾರಣಿಗಳ ಚಾಳಿ. ಮಹಿಳೆಯರ ಬಗ್ಗೆ ಅಶ್ಲೀಲ ಇಂಗಿತದ ಮಾತುಗಳನ್ನು ಆಡುವ ಧೈರ್ಯವನ್ನೂ ನಮ್ಮ ರಾಜಕಾರಣಿಗಳು ಪ್ರದರ್ಶಿಸಿದ್ದಾರೆ. 

ಹಾಗಾದರೆ ಸರಕಾರ ಮತ್ತು ಪ್ರತಿಪಕ್ಷಗಳು ಚುನಾವಣಾ ಜ್ವರಮುಕ್ತವಾಗಿ ಕೆಲಸ ಮಾಡುವುದು ಯಾವಾಗ? ಆ ದೃಷ್ಟಿಯಿಂದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಹೇಳಿದಂತೆ ಏಕ ಕಾಲದಲ್ಲಿ ಕೇಂದ್ರ ಮತ್ತು ರಾಜ್ಯ ವಿಧಾನ ಸಭೆಗಳಿಗೆ ಚುನಾವಣೆ ನಡೆಸುವುದರ ಕುರಿತು ಪಕ್ಷಗಳು ಯೋಚಿಸಬೇಕಾಗಿದೆ. ವರ್ಷವಿಡೀ ಚುನಾವಣೆ ನಡೆಯುತ್ತಲೇ ಇರುವುದನ್ನು ತಡೆಯಬೇಕಾಗಿದೆ. ಚುನಾವಣಾ ಆಯೋಗ ಕೂಡ ಈ ನಿಟ್ಟಿನಲ್ಲಿ ಚಿಂತಿಸಬೇಕಿದೆ. 

ಚುನಾವಣೆಯ ರಾಜಕೀಯ ಚುನಾವಣೆಗೆ ಮಾತ್ರ ಸೀಮಿತವಾಗಿರಬೇಕು. ಅಷ್ಟೇ ಅಲ್ಲ; ಅದು ಮೌಲ್ಯಯುತ ರಾಜಕೀಯವಾಗಿರಬೇಕು. ಅದು ಸಂಸತ್ತಿನೊಳಗೂ ವ್ಯಾಪಿಸುವುದು ಬೇಡ.     ಸದಾ ಒಂದಿÇÉೊಂದು ಚುನಾವಣೆ, ನೀತಿ ಸಂಹಿತೆಗಳು, ಗದ್ದಲವೆಬ್ಬಿಸುವ ವಿಪಕ್ಷ- ವಿತಂಡ ವಾದಗಳಿಂದ ನಮ್ಮ ಸಂಸದೀಯ ಪರಂಪರೆ ಬಡವಾಗದಿರಲಿ. ಭಾರತದಂತಹ ವಿಶಾಲ ಒಕ್ಕೂಟ ವ್ಯವಸ್ಥೆಯಲ್ಲಿ ಅಭಿವೃದ್ಧಿಗೆ ಸೂಕ್ತ ವಾತಾವರಣದ ನಿರ್ಮಾಣ, ಭ್ರಷ್ಟಾಚಾರ ಮುಕ್ತ ಶೀಘ್ರ ನಿರ್ಣಯ ತೆಗೆದುಕೊಳ್ಳುವ ಪ್ರಾಮಾಣಿಕ ಜವಾಬ್ದಾರಿ ಸರಕಾರದ¨ªಾದರೆ, ಅಭಿವೃದ್ಧಿಪರ ಕಾರ್ಯಗಳಿಗೆ ಸರಕಾರವನ್ನು ಬೆಂಬಲಿಸುವ ವಿಶೇಷ ಜವಾಬ್ದಾರಿ ಪ್ರತಿಪಕ್ಷಗಳ ಮೇಲೆ ಇದೆ. ಅಂತೆಯೇ ಸರಕಾರ ದಾರಿ ತಪ್ಪಿದಾಗ ಎಚ್ಚರಿಸಿ ಟೀಕಿಸಿ ಅದು ಸರಿಯಾದ ಮಾರ್ಗದಲ್ಲಿ ನಡೆಯುವಂತೆ ಮಾಡುವುದು ವಿಪಕ್ಷಗಳ ಹೊಣೆಗಾರಿಕೆಯೇ ಹೊರತು ವಿರೋಧಕ್ಕಾಗಿ ವಿರೋಧ, ಮಾಡಿದ್ದಕ್ಕೆಲ್ಲ ಗದ್ದಲ ಎಬ್ಬಿಸುವುದಲ್ಲ. ಉಭಯ ಪಕ್ಷಗಳು ಟೀಕೆ ಟಿಪ್ಪಣಿಗಳಿಗೆ ಕೆರಳದೇ ಸಂಯಮದಿಂದ ಸ್ವೀಕರಿಸಿ, ಜನಸ್ನೇಹಿ ವರ್ತನೆಯಿಂದ ಜನ ಮನ ಗೆಲ್ಲಲಿ. ಜನತೆ ಎಲ್ಲವನ್ನೂ ಗಮನಿಸುತ್ತಾರೆ ಎಂಬ ಸಾಮಾನ್ಯ ತಿಳುವಳಿಕೆ ಇರಲಿ. ಸರಕಾರದ ಕೆಲಸವೇ ಸಾಧನೆಯನ್ನು ಹೇಳುವಂತಿರಲಿ. ತಮಗೇನೂ ಜವಾಬ್ದಾರಿ ಇಲ್ಲವೆಂಬ ವಿಪಕ್ಷಗಳ ಭಾವನೆಯೂ ಸರಿಯಲ್ಲ. ಅನಗತ್ಯ ಕಹಿ ವಾತಾವರಣ ಸೃಷ್ಟಿಸುವುದು ಸಲ್ಲ.

– ಬೈಂದೂರು ಚಂದ್ರಶೇಖರ ನಾವಡ

Advertisement

Udayavani is now on Telegram. Click here to join our channel and stay updated with the latest news.

Next