Advertisement

ಅಂಕೆ ತಪ್ಪಿದ ವಾಹನ ಸಂಖ್ಯೆ: ಮಹಾನಗರ ಇನ್ನು ಕಿಷ್ಕಿಂಧೆ !

10:19 PM Jan 10, 2021 | Team Udayavani |

ಮಹಾನಗರದಲ್ಲಿ ವಾಹನ ನಿಲುಗಡೆಯ ಸಮಸ್ಯೆ ದಿನೇ ದಿನೆ ಹೆಚ್ಚುತ್ತಿದೆ. ಬಹುಅಂತಸ್ತಿನ ವಾಹನ ನಿಲುಗಡೆ ವ್ಯವಸ್ಥೆಯೂ ಸೇರಿದಂತೆ ಹತ್ತಾರು ಉಪಾಯಗಳು ಆಡಳಿತದ ತಲೆಯಲ್ಲಿವೆ.  ಆದರೆ ಇನ್ನೂ ಕಾರ್ಯಗತಗೊಳ್ಳುತ್ತಿಲ್ಲ. ಆದ ಕಾರಣ, ಮಹಾನಗರದ ಪ್ರಮುಖ ಬೀದಿಗಳಲ್ಲಿ ನಿತ್ಯವೂ ಟ್ರಾಫಿಕ್‌ ಜಾಮ್‌ ತಪ್ಪುತ್ತಿಲ್ಲ. ಹಲವು ಬಾರಿ ಸಮಸ್ಯೆಗೆ ತಾತ್ಕಾಲಿಕ ಪರಿಹಾರ ಹುಡುಕುತ್ತೇವೆಯೇ ಹೊರತು ಶಾಶ್ವತ ಪರಿಹಾರಗಳನ್ನಲ್ಲ. ಇದು ಸ್ಮಾರ್ಟ್‌ ಸಿಟಿ ಎಂದು ಕರೆಸಿಕೊಳ್ಳಲು ಸಿದ್ಧವಾಗುತ್ತಿರುವ ಮಂಗಳೂರನ್ನು ಅವ್ಯವಸ್ಥಿತ ನಗರವಾಗಿ ಬಿಂಬಿಸುತ್ತಿದೆ ಎನ್ನುವುದು ಸ್ಪಷ್ಟ. ಸಮಸ್ಯೆಯ ಗಂಭೀರತೆಯನ್ನು ಅರ್ಥೈಸುವುದು ಹಾಗೂ ಮಹಾನಗರಪಾಲಿಕೆಯನ್ನು, ಜನಪ್ರತಿನಿಧಿಗಳನ್ನು ಎಚ್ಚರಿಸುವ ಉದ್ದೇಶದ ಸುದಿನ ಜನಪರ ಅಭಿಯಾನ “ಪಾರ್ಕಿಂಗ್‌: ಪರದಾಟ’ ಸರಣಿ ಇಂದು ಆರಂಭ.  ಸೂಕ್ತ ಪಾರ್ಕಿಂಗ್‌ ವ್ಯವಸ್ಥೆ ಇಲ್ಲದೆ ಜನರು ಎದುರಿಸುತ್ತಿರುವ ಸಮಸ್ಯೆ, ಸಂಚಾರ ಪೊಲೀಸರ ಟೋಯಿಂಗ್‌ ವ್ಯವಸ್ಥೆಯ ಇನ್ನೊಂದು ಮುಖ, ಮಹಾನಗರ ಪಾಲಿಕೆ ಹಾಗೂ ಸಂಚಾರ  ಪೊಲೀಸರು ಜಂಟಿಯಾಗಿ ಕೈಗೊಳ್ಳಬೇಕಾದ ಕ್ರಮಗಳ ಕುರಿತ ವರದಿಗಳು ಪ್ರಕಟವಾಗಲಿದೆ.

Advertisement

ಮಹಾನಗರ: ವಾಣಿಜ್ಯ, ಆರೋಗ್ಯ, ಶಿಕ್ಷಣ ಸೇರಿದಂತೆ ವ್ಯವಹಾರಿಕವಾಗಿ ರಾಜ್ಯದ 2ನೇ ಅತಿದೊಡ್ಡ ನಗರವಾಗಿ ಬೆಳೆಯುತ್ತಿರುವ ನಗರ ಮಂಗಳೂರು. ಜನಸಂಖ್ಯೆ ಇದೀಗ ಸುಮಾರು ಐದೂವರೆ ಲಕ್ಷ ದಾಟಿದೆ. ಆದರೆ ಇಂಥ ಮಹಾನಗರದಲ್ಲಿ ಇನ್ನೂ ವಾಹನ ನಿಲುಗಡೆಗೆ ಹರಸಾಹಸ ಮಾಡಬೇಕು. ವಾಹನಗಳಿಗೆ ಸೂಕ್ತ ಪಾರ್ಕಿಂಗ್‌ ವ್ಯವಸ್ಥೆ ಇಲ್ಲ. ಹಾಗಾಗಿ ರಸ್ತೆ ಬದಿ ನಿಲ್ಲಿಸುವುದೇ ಪರಮ ಉಪಾಯ!.

ಗಮನಾರ್ಹವೆಂದರೆ, ರಾಜ್ಯದಲ್ಲಿಯೇ ಜಲ, ವಾಯು ಹಾಗೂ ಭೂಸಾರಿಗೆ ಸಂಪರ್ಕವನ್ನು ಅತ್ಯಂತ ಕಡಿಮೆ ಅಂತರದಲ್ಲಿ ಹೊಂದಿ ರುವ ನಗರ ಮಂಗಳೂರು. ವಾಣಿಜ್ಯದ ಜತೆಗೆ ಪ್ರವಾಸೋದ್ಯಮದ ದೃಷ್ಟಿಯಿಂದಲೂ ಅತಿಹೆಚ್ಚು ಚಟುವಟಿಕೆಗಳ ನಗರ. ಆದರೆ ನಗರಕ್ಕೆ ನಿತ್ಯವೂ ಬಂದು ಹೋಗುವ ಅಥವಾ ಇಲ್ಲಿನ ನಿವಾಸಿಗಳ ವಾಹನಗಳ ಓಡಾಟಕ್ಕೆ ಹಾಗೂ ಅವುಗಳ ಸುವ್ಯಸ್ಥಿತ ಪಾರ್ಕಿಂಗ್‌ಗೆ ಸೂಕ್ತ ಸ್ಥಳಾವಕಾಶವೇ ಇಲ್ಲ. ಈ ಕುರಿತು ಆಡಳಿತ (ಮಹಾನಗರ ಪಾಲಿಕೆ ಹಾಗೂ ಸಂಚಾರ ಪೊಲೀಸ್‌) ಗಂಭೀರ ಚಿಂತನೆ ನಡೆಸಿಲ್ಲ. ಇದರ ಪರಿಣಾಮ ಜನರು ಎಲ್ಲೆಂದರಲ್ಲಿ ವಾಹನಗಳನ್ನು ನಿಲ್ಲಿಸುವಂತಾಗಿದೆ.

ನಗರದ ಹೃದಯ ಭಾಗವನ್ನು ಗಮನಿಸಿ ದರೆ, ಇದರ ವಿಸ್ತೀರ್ಣವೂ ತುಂಬಾ ಚಿಕ್ಕದು. ಜ್ಯೋತಿ, ಹಂಪನಕಟ್ಟೆ, ಸ್ಟೇಟ್‌ಬ್ಯಾಂಕ್‌, ಬಂಟ್ಸ್‌ ಹಾಸ್ಟೆಲ್‌, ಪಿವಿಎಸ್‌ನಂಥ ಆಯಕಟ್ಟಿನ ಸ್ಥಳ ಗಳನ್ನು ತೆಗೆದುಕೊಂಡಾಗ ನಗರದ ವ್ಯಾಪ್ತಿಯು ಪಶ್ಚಿಮ ದಿಕ್ಕು ಹೊರತುಪಡಿಸಿದಂತೆ ಉಳಿದ ಮೂರು ದಿಕ್ಕಿನಲ್ಲಿಯೂ ಕೊಟ್ಟಾರ ಚೌಕಿ, ಕೆಪಿಟಿ, ಕುಲಶೇಖರ, ಪಡೀಲ್‌, ಜಪ್ಪಿನಮೊಗರುವರೆಗಿನ ಅತ್ಯಂತ ಸೀಮಿತ ವ್ಯಾಪ್ತಿಯನ್ನು ಹೊಂದಿದೆ.

ಮಂಗಳೂರು ಜಿಲ್ಲಾ ಕೇಂದ್ರ, ತಾಲೂಕು ಕೇಂದ್ರ, ಮತ್ತು ಪಾಲಿಕೆಯ ಕೇಂದ್ರ ಸ್ಥಳ :  

Advertisement

ಆರೋಗ್ಯಕ್ಷೇತ್ರ, ಶಿಕ್ಷಣದ ತಾಣವಾಗಿ ರಾಜ್ಯ, ರಾಷ್ಟ್ರಮಟ್ಟದಲ್ಲಿ  ಗುರುತಿಸಿಕೊಂಡಿದೆ. ಪ್ರಸಿದ್ಧ ಧಾರ್ಮಿಕ ಕೇಂದ್ರಗಳು, ಪ್ರವಾಸಿ ತಾಣಗಳು ಹೆಚ್ಚಿರುವುದರಿಂದ ಹೊರ ಪ್ರದೇಶಗಳ ಜನರು ಹೆಚ್ಚು ಆಗಮಿಸುತ್ತಾರೆ. ಅಂಕಿ-ಅಂಶವೊಂದರ ಪ್ರಕಾರ ಸುಮಾರು ಒಂದು ಲಕ್ಷಕ್ಕೂ ಅಧಿಕ ಮಂದಿ ದಿನವೊಂದಕ್ಕೆ ಮಂಗಳೂರಿಗೆ  ಆಗಮಿಸಿ ನಿರ್ಗಮಿಸುತ್ತಾರೆ.

ಪಾರ್ಕಿಂಗ್‌ ಕಡೆ ಗಮನವಿಲ್ಲ :

ಈ ನಗರ ಬೆಳೆಯುತ್ತಿರುವ ಗತಿಗೆ ಪೂರಕವಾಗಿ ಪಾರ್ಕಿಂಗ್‌ ಸೌಲಭ್ಯ ಕಲ್ಪಿಸದಿರುವುದು ಸ್ಪಷ್ಟ. ಇದಕ್ಕಾಗಿ ಪಾಲಿಕೆ ರೂಪಿಸಿದ ಯೋಜನೆಗಳು ದಶಕಗಳಿಂದ ಕಡತ ಅಥವಾ ಪ್ರಸ್ತಾವನೆಯ ಹಂತದಲ್ಲೇ ಇವೆ. ದಿನನಿತ್ಯ ನಗರದಲ್ಲಿ ಓಡಾಡುವ ಜನರು ಸಂಚಾರ ಪೊಲೀಸರ ನೋ-ಪಾರ್ಕಿಂಗ್‌ ದಂಡಕ್ಕೆ ಹೆದರಿ ಸುರಕ್ಷಿತ ಪಾರ್ಕಿಂಗ್‌  ಜಾಗಕ್ಕಾಗಿ ರಸ್ತೆಯಿಂದ ರಸ್ತೆಗೆ ಪರದಾಡುತ್ತಾರೆ. ಕೊನೆಗೆ ಎಲ್ಲಿಯಾದರೂ ಒಂದು ಕಡೆ ಜಾಗ ಸಿಕ್ಕಿದೆ ಎಂದು ವಾಹನ ನಿಲ್ಲಿಸಿ ಹೋದರೆ, ಅದು ಅನಧಿಕೃತ ಪಾರ್ಕಿಂಗ್‌ ನೆಲೆಯಲ್ಲಿ ಸಂಚಾರ ಪೊಲೀಸರು ಆ ವಾಹನವನ್ನು ಹೊತ್ತೂಯ್ದು ದುಬಾರಿ ದಂಡ ಹಾಕುತ್ತಾರೆ.

ಪಾರ್ಕಿಂಗ್‌ ವ್ಯವಸ್ಥೆ ಬೇಕು :

ನಗರದ ಬೆಳವಣಿಗೆ ಕೆಲವು ಪ್ರದೇಶಗಳಿಗೆ ಮಾತ್ರ ಸೀಮಿತಗೊಂಡಿದೆ. ಪಂಪ್‌ವೆಲ್‌, ನಂತೂರು,  ಕುಳೂರು, ಬಿಜೈ, ಕೆಪಿಟಿ ಸರ್ಕಲ್‌, ಕುಂಟಿಕಾನ, ಪಾಂಡೇಶ್ವರ, ಕಂಕನಾಡಿ, ವೆಲೆನ್ಸಿಯಾ, ಬಂದರು ವರ್ತುಲದೊಳಗೆ ಬಹುತೇಕ ಚಟುವಟಿಕೆಗಳು ಕೇಂದ್ರೀಕೃತವಾಗಿವೆ. ಶೇ.90ರಷ್ಟು  ಸರಕಾರಿ ಕಚೇರಿಗಳು ಹಂಪನಕಟ್ಟೆ, ಸ್ಟೇಟ್‌ಬ್ಯಾಂಕ್‌ ಪರಿಸರದಲ್ಲೇ ಇದೆ. ಕೆಎಸ್‌ಆರ್‌ಟಿಸಿ, ಖಾಸಗಿ ಸರ್ವೀಸ್‌, ಸಿಟಿಬಸ್‌ ನಿಲ್ದಾಣಗಳು, ಸೆಂಟ್ರಲ್‌ ರೈಲ್ವೆ ನಿಲ್ದಾಣ, ಶಿಕ್ಷಣ ಸಂಸ್ಥೆಗಳು, ಕೇಂದ್ರ ಮಾರುಕಟ್ಟೆ, ಮಾಲ್‌ಗ‌ಳು, ಚಿತ್ರಮಂದಿರಗಳು, ಕ್ರೀಡಾಂಗಣಗಳು ಇರುವುದೇ ಇಲ್ಲಿ. ಪರಿಣಾಮ ವಾಣಿಜ್ಯ, ಸರಕಾರಿ ಕಚೇರಿ ಚಟುವಟಿಕೆಗಳು ಸಂಪೂರ್ಣ ಈ ಪ್ರದೇಶದಲ್ಲೇ ಕೇಂದ್ರೀಕೃತ. ಮಂಗಳೂರು  ಜಿಲ್ಲಾ ಕೇಂದ್ರವೂ ಆಗಿರುವುದರಿಂದ ಚಟುವಟಿಕೆ ಹೆಚ್ಚು. ಇಷ್ಟೊಂದು ಜನದಟ್ಟನೆ, ವಾಹನಗಳು ಓಡಾಡುವ ಈ ಪ್ರದೇಶಗಳಲ್ಲಿ ಸೂಕ್ತ ಪಾರ್ಕಿಂಗ್‌ ವ್ಯವಸ್ಥೆಯೇ ಇದುವರೆಗೆ ಇಲ್ಲ.

ಸ್ಥಳೀಯ  ಆಡಳಿತದ ಹೊಣೆ :

ಮಹಾನಗರದ ವಾಹನ ಸಮಸ್ಯೆಯನ್ನು ಮೂರ್‍ನಾಲ್ಕು ವಾಕ್ಯಗಳಲ್ಲಿ ಹೇಳುವುದಾದರೆ, ದ್ವಿಚಕ್ರ ವಾಹನಗಳನ್ನು ನಿಲ್ಲಿಸಲು ಸೂಕ್ತ ಜಾಗವಿಲ್ಲ. ಜತೆಗೆ ಸಂಚಾರಿ ಪೊಲೀಸರು ದಂಡ ವಿಧಿಸುತ್ತಾರೆ. ಏಕಾಏಕಿ ಟೋಯಿಂಗ್‌ ಕಾರ್ಯಾಚರಣೆಯನ್ನು ನಡೆಸಲಾಗುತ್ತಿದೆ. ನೋ ಪಾರ್ಕಿಂಗ್‌ ವಲಯದಲ್ಲಿ ವಾಹನ ನಿಲ್ಲಿಸಿದವರಿಗೆ ದಂಡ ವಿಧಿಸುವುದರಲ್ಲಿ ಆಕ್ಷೇಪವಿಲ್ಲ. ಅದಕ್ಕಿಂತ ಮೊದಲು ವಾಹನ ನಿಲುಗಡೆಗೆ ಆಯಾ ಪ್ರದೇಶದ ಅಗತ್ಯಕ್ಕೆ ತಕ್ಕಂತೆ ಒಂದಿಷ್ಟು ಸಾರ್ವಜನಿಕ ಪಾರ್ಕಿಂಗ್‌ ಸ್ಥಳಗಳನ್ನು ಗುರುತಿಸಿ ಘೋಷಿಸಬೇಕು.ಈ ಕನಿಷ್ಠ ಸೌಲಭ್ಯವನ್ನೂ ಕಲ್ಪಿಸದೇ ದಂಡ ವಿಧಿಸುವುದು ಸೂಕ್ತವಾದ ಕ್ರಮವಲ್ಲ. ಟೋಯಿಂಗ್‌ ಕಾರ್ಯಾಚರಣೆಯಂಥ ಉಪಕ್ರಮವು ಕೇವಲ ಪೊಲೀಸರು ಹಾಗೂ ಸಾರ್ವಜನಿಕರ ನಡುವೆ ವಾಗ್ವಾದಕ್ಕೆ ಕಾರಣವಾಗುತ್ತದೆಯೇ ಹೊರತು ಸಮಸ್ಯೆ ಬಗೆಹರಿಯದು ಎಂಬುದು  ಜನರ ಅಭಿಪ್ರಾಯ.

Advertisement

Udayavani is now on Telegram. Click here to join our channel and stay updated with the latest news.

Next