Advertisement

ಬಸ್‌ ನಿಲ್ದಾಣದಲ್ಲಿ ವಾಹನ ನಿಲುಗಡೆ: ದಂಡ

04:06 PM Dec 31, 2017 | Team Udayavani |

ಉಪ್ಪಿನಂಗಡಿ: ಪಟ್ಟಣದ ಹೊಸ ಬಸ್ಸು ನಿಲ್ದಾಣದಲ್ಲಿ ಅನಧಿಕೃತವಾಗಿ ನಿಲುಗಡೆಗೊಳ್ಳುವ ದ್ವಿಚಕ್ರ ಹಾಗೂ ಲಘು ವಾಹನಗಳ ಮಾಲಕರಿಗೆ ದಿಢೀರ್‌ ಕಾರ್ಯಾಚರಣೆ ಮೂಲಕ ಸ್ಥಳೀಯ ಗ್ರಾಮ ಪಂಚಾಯತ್‌ ಬಿಸಿ ಮುಟ್ಟಿಸಿದೆ.

Advertisement

ಬಸ್‌ಗಳಿಗಿಂತಲೂ ಹೆಚ್ಚು ಸಂಖ್ಯೆಯಲ್ಲಿ ದ್ವಿಚಕ್ರ, ಇತರ ಖಾಸಗಿ ವಾಹನಗಳೇ ನಿಲ್ದಾಣದಲ್ಲಿ ಕಾಣುತ್ತಿದ್ದವು. ಹಲವು ವರ್ಷಗಳಿಂದ ಈ ಸಮಸ್ಯೆಗೆ ಪರಿಹಾರವೇ ಒದಗಿರಲಿಲ್ಲ. ಬಸ್‌ ಚಾಲಕರು ಇದರಿಂದ ಸಾಕಷ್ಟು ಕಿರಿಕಿರಿ ಅನುಭವಿಸುತ್ತಿದ್ದು, ಪಂಚಾಯತ್‌ಗೂ ಸಾಕಷ್ಟು ದೂರುಗಳು ಬಂದಿದ್ದವು. ಆದರೆ, ಸ್ಥಳೀಯ ಬಸ್‌ ನಿಲ್ದಾಣ ಪಂಚಾಯತ್‌ ಅಧೀನದಲ್ಲಿದ್ದು, ದ್ವಿ ಚಕ್ರ ಹಾಗೂ ಕಾರು ಮಾಲೀಕರು ಮುಂಜಾನೆಯಿಂದ ರಾತ್ರಿವರೆಗೂ ವಾಹನಗಳನ್ನು ಅಲ್ಲಲ್ಲಿ ನಿಲ್ಲಿಸಿ ತಮ್ಮ ಪಾಡಿಗೆ ತಾವು ತೆರಳುತ್ತಿದ್ದರು. ಈ ತನಕ ಪಂಚಾಯತ್‌ ಕೂಡ ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ.

ಶುಕ್ರವಾರ ಪಂಚಾಯತ್‌ ಅಧ್ಯಕ್ಷ ಅಬ್ದುಲ್‌ ರಹಿಮಾನ್‌, ಸದಸ್ಯರಾದ ಸುರೇಶ್‌ ಅತ್ರಮಜಾಲು, ರಮೇಶ್‌ ಭಂಡಾರಿ ಹಾಗೂ ಪಂಚಾಯತ್‌ ಸಿಬಂದಿಯಿದ್ದ ತಂಡ ಕಾರ್ಯಾಚರಣೆ ಆರಂಭಿಸಿ, ಎಲ್ಲ ವಾಹನಗಳಿಗೆ ಲಾಕ್‌ ಮಾಡುವ ಮೂಲಕ, ಮಾಲಕರಿಗೆ ಎಚ್ಚರಿಕೆ ನೀಡಿತು. ಬೈಕ್‌ಗೆ 100 ರೂ.. ಕಾರಿಗೆ 200 ರೂ. ದಂಡ ವಿಧಿಸುವ ಮೂಲಕ ಸಮಸ್ಯೆ ನಿವಾರಿಸುವಲ್ಲಿ ಯಶಸ್ವಿಯಾಯಿತು. ಪಂಚಾಯತ್‌ನ ಈ ಕಾರ್ಯಾಚರಣೆಯಿಂದಾಗಿ ಬಸ್‌ ಚಾಲಕರು, ಪಾದಚಾರಿಗಳು ಹಾಗೂ ಅಂಗಡಿ ಮಾಲೀಕರು ನಿಟ್ಟುಸಿರು ಬಿಟ್ಟಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next