ಗಂಗಾವತಿ: ವಾಣಿಜ್ಯ, ಶೈಕ್ಷಣಿಕ ಹಾಗೂ ಭೌಗೋಳಿಕವಾಗಿ ಗಂಗಾವತಿಯನ್ನು ನೂತನ ಜಿಲ್ಲೆಯನ್ನಾಗಿ ಸರಕಾರ ಘೋಷಣೆ ಮಾಡಲು ಸಂಘಟಿತ ಹೋರಾಟ ಅಗತ್ಯವಾಗಿದೆ ಎಂದು ಮಾಜಿ ಶಾಸಕ ಪರಣ್ಣ ಮುನವಳ್ಳಿ ಹೇಳಿದರು.
ಅವರು ನಗರದ ಕನ್ನಡ ಸಾಹಿತ್ಯ ಭವನದಲ್ಲಿ ನೂತನ ಜಿಲ್ಲಾ ಹೋರಾಟ ಸಮಿತಿ ಹಮ್ಮಿಕೊಂಡಿದ್ದ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು.
ಕೊಪ್ಪಳಕ್ಕಿಂತಲೂ ಗಂಗಾವತಿ ಜಿಲ್ಲಾ ಕೇಂದ್ರವಾಗುವ ಎಲ್ಲಾ ಅರ್ಹತೆ ಇದ್ದರೂ ಗಂಗಾವತಿಯ ಮುಖಂಡರು, ಸಾರ್ವಜನಿಕರು, ಸಂಘ ಸಂಸ್ಥೆಗಳ ಒತ್ತಡ ಇಲ್ಲದ ಕಾರಣ ಅಂದು ಕೊಪ್ಪಳ ಜಿಲ್ಲೆಯಾಗಿ ಘೋಷಣೆಯಾಗಿದೆ. ಇದೀಗ ಕಿಷ್ಕಿಂಧಾ ಅಂಜನಾದ್ರಿ ವಿಶ್ವವಿಖ್ಯಾತವಾಗಿದ್ದು ಇದರ ಹೆಸೆರಿನಲ್ಲಿ ಗಂಗಾವತಿಯನ್ನು ಜಿಲ್ಲಾ ಕೇಂದ್ರ ಮಾಡಬೇಕು. ಇದಕ್ಕಾಗಿ ಗಂಗಾವತಿ, ಕಂಪ್ಲಿ, ಕಾರಟಗಿ, ಕನಕಗಿರಿ, ತಾವರಗೇರಾ, ಸಿಂಧನೂರು ತಾಲೂಕುಗಳ ಜನರು, ಜನಪ್ರತಿನಿಧಿಗಳು, ಸಂಘ ಸಂಸ್ಥೆಯವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮಾಜಿ ಸಂಸದ ಎಚ್.ಜಿ.ರಾಮುಲು ಹಾಗೂ ಮಠಾಧೀಶರ ನೇತೃತ್ವದಲ್ಲಿ ಜಿಲ್ಲಾ ಹೋರಾಟ ಸಮಿತಿ ರಚನೆ ಮಾಡಿ ನಿರಂತರ ಹೋರಾಟದ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಬೇಕೆಂದರು.
ಮಾಜಿ ಎಂಎಲ್ಸಿ ಎಚ್.ಆರ್.ಶ್ರೀನಾಥ, ರಾಜವಂಶಸ್ಥರಾದ ಲಲಿತಾರಾಣಿ, ಮುಖಂಡರಾದ ನೆಕ್ಕಂಟಿ ಸೂರಿಬಾಬು, ಅಶೋಕಸ್ವಾಮಿ, ಶೈಲಜಾ ಹಿರೇಮಠ, ಸೋಮನಾಥಪಟ್ಟಣಶೆಟ್ಟಿ, ರಾಜೇಶ ರೆಡ್ಡಿ, ಜೋಗದ ನಾರಾಯಣಪ್ಪ, ಡಾ|ಶರಣಬಸಪ್ಪ ಕೋಲ್ಕಾರ ಸೇರಿ ವರ್ತಕರು, ಸಂಘ ಸಂಸ್ಥೆಗಳ ಮುಖಂಡರು, ಕನ್ನಡ, ದಲಿತ ಮತ್ತು ರೈತಪರ ಹೋರಾಟಗಾರರು ಮಾತನಾಡಿದರು.