Advertisement

ಪಪಂ ಅಧ್ಯಕ್ಷ-ಮುಖ್ಯಾಧಿಕಾರಿ ವಾಕ್ಸಮರ

04:39 PM Dec 14, 2018 | Team Udayavani |

ಮೊಳಕಾಲ್ಮೂರು: ಪಟ್ಟಣದಲ್ಲಿ ಭೂ ಪರಿವರ್ತನೆ ಸೇರಿದಂತೆ ಇನ್ನಿತರ ಅಭಿವೃದ್ಧಿ ಕಾಮಗಾರಿಗಳಿಗೆ ಅನುಮೋದನೆ ನೀಡಲು ಪಟ್ಟಣ ಪಂಚಾಯತ್‌ನಲ್ಲಿ ಗುರುವಾರ ಕರೆಯಲಾಗಿದ್ದ ಸಾಮಾನ್ಯ ಸಭೆಯಲ್ಲಿ ಪಪಂ ಅಧ್ಯಕ್ಷ ಜಿ. ಪ್ರಕಾಶ್‌ ಹಾಗೂ ಮುಖ್ಯಾಧಿಕಾರಿ ಎಸ್‌. ರುಕ್ಮಿಣಿ ಮಧ್ಯೆ ವಾಗ್ವಾದ ನಡೆಯಿತು. ಪಪಂ ಅಧ್ಯಕ್ಷ ಜಿ. ಪ್ರಕಾಶ್‌ ಮಾತನಾಡಿ, ಪಟ್ಟಣದಲ್ಲಿ ಭೂ ಪರಿವರ್ತನೆ ಮಾಡಲು ಪಪಂ ಆಡಳಿತ ಮಂಡಳಿ ಗಮನಕ್ಕೆ ತಾರದೆ ತಾರದೆ ಜಿಲ್ಲಾಧಿಕಾರಿಗಳ ಅನುಮೋದನೆಗೆ ಕಳುಹಿಸಿರುವುದು ಸರಿಯಲ್ಲ. ಅನುಮತಿ ಪಡೆಯದೆ ಭೂ ಪರಿವರ್ತನೆದಾರರಿಂದ ಸುಮಾರು 2.82 ಲಕ್ಷ ರೂ. ಪಾವತಿಸಿಕೊಂಡಿರುವುದರಿಂದ ಸರ್ಕಾರಕ್ಕೆ ನಷ್ಟವಾಗುತ್ತದೆ. ಈ ಹಣವನ್ನು ಯಾರು ಪಾವತಿಸಿಕೊಂಡಿದ್ದಾರೆಂಬ ಬಗ್ಗೆ ತನಿಖೆ ನಡೆಯಬೇಕು ಎಂದು ಮುಖ್ಯಾಧಿಕಾರಿಯನ್ನು ತರಾಟೆಗೆ ತೆಗದುಕೊಂಡರು.

Advertisement

ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯಾಧಿಕಾರಿ ಎಸ್‌. ರುಕ್ಮಿಣಿ ಮಾತನಾಡಿ, ಪಟ್ಟಣ ಪಂಚಾಯತ್‌ಗೆ ಭೂ ಪರಿವರ್ತನೆದಾರರಿಂದ ಹಣ ಪಾವತಿಯಾಗಿದೆ. ಸರ್ಕಾರಕ್ಕೆ ನಷ್ಟವಾದರೆ ಮತ್ತೂಮ್ಮೆ ಹಣವನ್ನು ಪಾವತಿಸಿಕೊಳ್ಳಲು ಅವಕಾಶವಿದೆ ಎಂದರು. ಮಧ್ಯಪ್ರವೇಶಿಸಿದ ಪಪಂ ಸದಸ್ಯ ರಾಜಶೇಖರ ಗಾಯಕವಾಡ್‌, ಸದಸ್ಯರ ಗಮನಕ್ಕೆ ತಾರದೆ ಹಣ ಪಾವತಿ ಮಾಡಿರುವುದು ಸಮಂಜಸವಲ್ಲ ಎಂದು ಆಕ್ಷೇಪಿಸಿದರು.

ಹಾನಗಲ್‌ ರಸ್ತೆಯ ಪಕ್ಕದಲ್ಲಿ ನೀರು ಶುದ್ಧೀಕರಣ ಘಟಕದ ನಿಷ್ಕ್ರಿಯವಾಗಿರುವ ಮೋಟಾರ್‌ ಮತ್ತು ಇತರೆ ಸಾಮಗ್ರಿಗಳ ಖರೀದಿಗಾಗಿ ಸ್ವೀಕೃತಿಗೊಂಡ ಟೆಂಡರ್‌ಗಳ ಪೈಕಿ ಅರ್ಹ ಟೆಂಡರ್‌ದಾರರಿಗೆ ಅನುಮೋದನೆ ನೀಡುವ ಬಗ್ಗೆ ಸಭೆಯಲ್ಲಿ ಪ್ರಸ್ತಾಪಿಸಲಾಯಿತು. 

ಪಪಂ ಅಧ್ಯಕ್ಷ ಜಿ. ಪ್ರಕಾಶ್‌ ಮಾತನಾಡಿ, ಕುಡಿಯುವ ನೀರಿನ ಕಾಮಗಾರಿಯನ್ನು ತುರ್ತಾಗಿ ಕೈಗೊಳ್ಳಬೇಕಿದೆ. ಈ ಬಗ್ಗೆ ಯಾರೂ ತಕರಾರು ಮಾಡಬಾರದು. ಕುಡಿಯುವ ನೀರಿಗಾಗಿ ಸಾರ್ವಜನಿಕರು ಪ್ರತಿಭಟನೆ ನಡೆಸಿದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳು ಒಎಂ ನೀಡಿದ್ದಾರೆ. 21.93 ಲಕ್ಷ ರೂ.ಗಳ ಕಾಮಗಾರಿಯನ್ನು ಇಂಜಿನಿಯರ್‌ ಕೇವಲ 10.50 ಲಕ್ಷ ರೂ.ಗಳಿಗೆ ಪೂರ್ಣಗೊಳಿಸಿದ್ದಾರೆ ಎಂದು ತಿಳಿಸಿದರು.

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸದಸ್ಯ ಅಬ್ದುಲ್‌ ರಶೀದ್‌, ಸದಸ್ಯರ ಗಮನಕ್ಕೆ ತಾರದೆ ಮಾಡಿಕೊಂಡಿರುವುದು ಸರಿಯಲ್ಲ. ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸದಸ್ಯರ ಗಮನಕ್ಕೆ ತಾರದೆ ಕುಡಿಯುವ ನೀರಿನ ಕಾಮಗಾರಿ ಕೈಗೊಂಡಿದ್ದಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

Advertisement

ವಾರದ ಸಂತೆಗಾಗಿ ಜಾಗ ಗುರುತಿಸಲು ಚರ್ಚಿಸುವ ಸಂದರ್ಭದಲ್ಲಿ ಅಧ್ಯಕ್ಷ ಜಿ. ಪ್ರಕಾಶ್‌ ಮಾತನಾಡಿ, ಪಟ್ಟಣ ವ್ಯಾಪ್ತಿಯ ಶೆಟ್ರಾ ಕುಂಟೆ ಜಮೀನಿನ ಎರಡು ಎಕರೆ ಜಾಗವನ್ನು ಸಂತೆಗಾಗಿ ಮೀಸಲಿರಿಸಲಾಗಿದೆ. ಮತ್ತೂಮ್ಮೆ ದಾಖಲೆ ಪರಿಶೀಲಿಸಬೇಕೆಂದು ಸೂಚಿಸಿದರು. ಕಚೇರಿ ಕೆಲಸಕ್ಕೆ ಲ್ಯಾಪ್‌ಟಾಪ್‌ ಮತ್ತು ಜಿಲ್ಲಾ ಕಚೇರಿಯ ಸಭೆಗಳಿಗೆ ಹೋಗಲು ವಾಹನ ಸೌಲಭ್ಯ ಒದಗಿಸುವಂತೆ ಪಪಂ ಮುಖ್ಯಾಧಿಕಾರಿ ಎಸ್‌. ರುಕ್ಮಿಣಿ ಕೋರಿದರು. ಲ್ಯಾಪ್‌ಟಾಪ್‌ ಮಂಜೂರಾತಿಗೆ ಸದಸ್ಯರೆಲ್ಲರ ಒಪ್ಪಿಗೆ ಬೇಕು. ಪಪಂಗೆ ಆದಾಯದ ಕೊರತೆ ಇರುವುದರಿಂದ ವಾಹನ ಸೌಲಭ್ಯ ನೀಡಲು ಸಾಧ್ಯವಿಲ್ಲ ಎಂದು ಅಧ್ಯಕ್ಷರು ತಿಳಿಸಿದರು. ಇದಕ್ಕೆ ಸದಸ್ಯ ರಾಜಶೇಖರ ಗಾಯಕವಾಡ್‌ ಧ್ವನಿಗೂಡಿಸಿದರು.

ಸ್ವತ್ಛ ಭಾರತ್‌ ನಿಯಮವನ್ನು ಉಲ್ಲಂಘಿಸಿ ಸುಳ್ಳು ಛಾಯಾಚಿತ್ರಗಳನ್ನು ನೀಡಿ ದುರುಪಯೋಗ ಪಡಿಸಿಕೊಂಡಿರುವುದು ಕಂಡು ಬಂದಿದೆ. ಈ ಬಗ್ಗೆ ತನಿಖೆ ನಡೆಸಿ ಅರ್ಹರಿಗೆ ಶೌಚಾಲಯ ಸೌಲಭ್ಯ ಕಲ್ಪಿಸಬೇಕೆಂದು ಅಧ್ಯಕ್ಷರು ಸೂಚಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಸದಸ್ಯ ಎಂ.ಎಸ್‌. ರಘು, ಶೌಚಾಲಯ ಅಗತ್ಯವಿರುವುದರಿಂದ ಈ ಸೌಲಭ್ಯವನ್ನು ನೀಡಬೇಕು ಎಂದು ಸೂಚಿಸಿದರು.

ಸಭೆಯಲ್ಲಿ ಪ.ಪಂ.ನ ಉಪಾಧ್ಯಕ್ಷ ಬಸವರಾಜ್‌, ಸದಸ್ಯರಾದ ಮಹಮದ್‌ ಮೆಹಬೂಬ್‌, ಪಾಪಕ್ಕ, ಉಲ ತ್‌ ಉನ್ನೀಸ, ಎಂ.ಎಸ್‌. ರಘು , ಸಿಬ್ಬಂದಿಗಳಾದ ಬಸಣ್ಣ, ಪೆನ್ನೋಬಳಿ, ಅಕ್ರಂ, ಪವನ್‌ , ಇಂಜಿನಿಯರ್‌ ಲೋಕೇಶ್‌ ಮೊದಲಾದವರು ಭಾಗವಹಿಸಿದ್ದರು. 

ಬಗೆಹರಿಯದ ಗುತ್ತಿಗೆ ಪೌರಕಾರ್ಮಿಕರ ಸಮಸ್ಯೆ ಪಟ್ಟಣದಲ್ಲಿ ಸ್ವತ್ಛತಾ ಕೆಲಸ ಮಾಡುವ ಗುತ್ತಿಗೆ ಪೌರ ಕಾರ್ಮಿಕರಿಗೆ ಬಾಕಿ ಇರುವ 14 ತಿಂಗಳ ವೇತನ ಪಾವತಿಸಿ
ಖಾಲಿ ಹುದ್ದೆಗಳಿಗೆ ನೇಮಕ ಮಾಡಿಕೊಳ್ಳುವಂತೆ ಹಲವಾರು ಸದಸ್ಯರು ಒತ್ತಾಯಿಸಿದರು. ಆದರೆ ಸರ್ಕಾರದ ಆದೇಶ ತೋರಿಸಿದ ಮುಖ್ಯಾಧಿಕಾರಿ, ಗುತ್ತಿಗೆ ಪೌರಕಾರ್ಮಿಕರ ಸಮಸ್ಯೆ ಬಗೆಹರಿಸುವ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ.

ಸಭಾ ನಿರ್ಣಯಗಳಿವು ಎಲ್‌ಎಲ್‌ಬಿ ಪದವಿ ಪಡೆದಿರುವ ವೃತ್ತಿನಿರತ ವಕೀಲರಿಗೆ ಪಪಂ ನಿಧಿಯ 25 ಸಾವಿರ ರೂ. ಅನುದಾನದಲ್ಲಿ ಕಾನೂನು ಪುಸ್ತಕಗಳ ವಿತರಣೆ. 
 2017-18ನೇ ಸಾಲಿನ ಎಸ್‌ಎಫ್‌ಸಿ ಅನುದಾನದಲ್ಲಿ 1,56,617 ರೂ.ಗಳಲ್ಲಿ ಎಂಬಿಬಿಎಸ್‌ ಮತ್ತು ಬಿಇ ವ್ಯಾಸಂಗ ಮಾಡುವ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್‌ ನೀಡಿಕೆ.
  ರಾಜ್ಯ ಹಣಕಾಸು ಯೋಜನೆಯ ಶೇ. 3 ರ ನಿಧಿಯಲ್ಲಿ ಅರ್ಹ ವಿಕಲಚೇತನರಿಗೆ ತ್ರಿಚಕ್ರ ವಾಹನ ನೀಡುವುದು.

Advertisement

Udayavani is now on Telegram. Click here to join our channel and stay updated with the latest news.

Next