Advertisement

ನೆನೆವುದೆನ್ನ ಮನಂ ಪಂಜೆ ಗೀತಂ

07:16 AM Jul 28, 2017 | |

“ನಾಗರ ಹಾವೆ ಹಾವೊಳು ಹೂವೆ’ ಶಿಶುಗೀತೆಯನ್ನು ರಚಿಸಿದ ಪಂಜೆ ಮಂಗೇಶ ರಾಯರನ್ನು ನಾಗರಪಂಚಮಿಯ ಸಂದರ್ಭ ಸ್ಮರಿಸುವುದು ಅಗತ್ಯ. 

Advertisement

“ನಾಗರ ಹಾವೆ ಹಾವೊಳು ಹೂವೆ’ ಹಾಡನ್ನು ಯಾರಾದರೂ ಹಾಡಿದ್ದು ಕಿವಿಗೆ ಕೇಳಿದರೆ ಮತ್ತೆ ಮುಂದಕ್ಕೆ ನಾವೇ ಹಾಡುತ್ತೇವೆಂಬಷ್ಟು ಹತ್ತಿರದ ಸಂಬಂಧ ಸ್ಪುರಿಸುತ್ತದೆ. ಆದರೂ ಈ ಹಾಡು ಪಂಜೆ ಮಂಗೇಶ ರಾವ್‌ (1874-1937) ಅವರದ್ದು ಎಂಬುದು ಹಾಡಿನ ಪರಿಚಯವಿದ್ದವರಿಗೆಲ್ಲ ಇದೆ ಎಂದು ಖಚಿತವಾಗಿ ಹೇಳುವಂತಿಲ್ಲ. ಹಿಂದೆ ಕಾವ್ಯಕ್ಕೆ ಇದ್ದಷ್ಟು ಮಹತ್ವವನ್ನು ಕವಿಗೆ ಕೊಡುತ್ತಿರಲಿಲ್ಲವಂತೆ. ಸ್ವತಃ ಕವಿಗಳೇ ಕವನಕ್ಕೆ ಹೆಚ್ಚು ಆದ್ಯತೆ ಕೊಡುತ್ತಿದ್ದರಂತೆ. ಆದ್ದರಿಂದ ಕವಿಗಿಂತ ಕವನ/ಗೀತೆ ಹೆಚ್ಚು ಪ್ರಸಿದ್ಧವಾಗಿರಬಹುದು. ಈಗ ಕಾಲ ಬದಲಾಗಿ ಕವನ, ಗೀತೆಗಿಂತ ಕವಿಗಳೇ ರಾರಾಜಿಸುತ್ತಾರೆ. 

ಪಂಜೆಯವರು ಪ್ರಸಿದ್ಧ ಶಿಶು ಸಾಹಿತಿ, “ನಾಗರಹಾವೆ’ ಹಾಡೂ ಪ್ರಸಿದ್ಧ ಶಿಶುಗೀತೆ. ನಾಗರಪಂಚಮಿ ಶುಭವಸರದಲ್ಲಿ ನೆನೆಯಬೇಕಾದ ಹಾಡಿದು. ಒಂದು ಬಾರಿ ಕಲಿತರೆ ಎಂದೆಂದೂ ನೆನಪಿನಲ್ಲಿ ಉಳಿಯುವ ಗೀತೆಯಾದ್ದರಿಂದಲೇ ಇಂದಿಗೂ ಹಲವರ ಬಾಯಲ್ಲಿ ಉಳಿದಿದೆ. ಇದನ್ನು ರಚಿಸಿದ್ದು ಸ್ವಾತಂತ್ರ್ಯಪೂರ್ವದಲ್ಲಿಯಾದ ಕಾರಣ ಪಂಜೆಯವರ ಮೇಲೆ ಸ್ವಾತಂತ್ರ್ಯ ಹೋರಾಟದ ಪ್ರಭಾವ ಇತ್ತು. ಆದ್ದರಿಂದಲೇ ಆಂಗ್ಲರನ್ನು ಪ್ರತಿಮಾರೂಪದಿಂದ ಉದ್ದೇಶಿಸಿ ಬರೆದ ಗೀತೆ ಇದಾಗಿದೆ ಎಂದು ವಿಮರ್ಶಕರು ಹೇಳುತ್ತಾರೆ. ಅವರು ಕಾಸರಗೋಡಿನಲ್ಲಿ ಶಾಲಾ ಇನ್ಸ್‌ಪೆಕ್ಟರ್‌ ಆಗಿದ್ದಾಗ ತಮ್ಮ ಮಕ್ಕಳನ್ನು ರಂಜಿಸಲು ಬರೆದರು ಎಂದು ಜೀವನ ಚರಿತ್ರೆಯಲ್ಲಿದೆ. ಎರಡೂ ಉದ್ದೇಶಗಳಿರಬಹುದು. 

ಆದರ್ಶ ಜೀವನ
“ಕವಿಶಿಷ್ಯ’ ಕಾವ್ಯನಾಮದಿಂದ ಇವರು ಪ್ರಸಿದ್ಧರಾಗಿದ್ದರು. ದ.ಕ. ಜಿಲ್ಲೆಯ ಪಂಜದವರು. ಅಲ್ಲಿಂದ ಬಂಟ್ವಾಳಕ್ಕೆ ಬಂದು ನೆಲೆಸಿದರು. ಮಂಗೇಶರಾಯರು ಬಂಟ್ವಾಳದಲ್ಲಿ ಪ್ರಾಥಮಿಕ ಶಿಕ್ಷಣ, ಪ್ರೌಢಶಿಕ್ಷಣವನ್ನು ಮಂಗಳೂರಿನಲ್ಲಿ ಪಡೆದರು. ಕಡುಬಡತನದ ಬದುಕು ಅವರ ಪಾಲಿಗಿತ್ತು. ಬಿಎ ಪದವಿ ಮತ್ತು ಶಿಕ್ಷಕರ ಡಿಪ್ಲೊಮಾ ಪೂರ್ಣಗೊಳಿಸಿದಾಗ ಅವರು ಶಾಲಾ ಇನ್ಸ್‌ಪೆಕ್ಟರ್‌ ಆಗಿ ನೇಮಕಗೊಂಡರು. ಕಡಿಮೆ ಸಂಬಳದಲ್ಲಿಯೂ ಅವರು ಅಭಿವೃದ್ಧಿ ಯೊಜನೆಗಳನ್ನು ಸ್ವತಃ ಪ್ರಾರಂಭಿಸಿದರು. ಶಿಕ್ಷಕರಲ್ಲಿ ಕಲಿಕೆಯ ಪ್ರಿತಿಯನ್ನು ತುಂಬಿ ಹೊಸ ಬೋಧನಾ ತಂತ್ರಗಳನ್ನು ಪರಿಚಯಿಸಿದರು. ತಮ್ಮ ಕ್ರತುಶಕ್ತಿಯಿಂದ ದೊಡ್ಡ ಸಂಖ್ಯೆಯಲ್ಲಿ ಅಭಿಮಾನಿಗಳನ್ನು ಸಂಪಾದಿಸಿದರು. ಅವರನ್ನು ಬಲ್ಲ ಹಿರಿಯ ಸಾಹಿತಿ ವೀ.ಸೀತಾರಾಮಯ್ಯನವರು ಪಂಜೆಯವರ ಜೀವನದ ಕುರಿತು ಬಹಳ ಗೌರವದಿಂದ ಮಾತನಾಡಿದ್ದಾರೆ. ಪಂಜೆಯವರಿಗೆ ಎಷ್ಟು ಗೌರವ ಸಿಗಬೇಕೋ ಅಷ್ಟು ಸಿಗಲಿಲ್ಲ. ಆ ಕಾಲದಲ್ಲಿ ಕನ್ನಡ ಮಾತನಾಡುವ ಜನಗಳು ನಾಲ್ಕೈದು ಪ್ರಾಂತ್ಯಗಳಲ್ಲಿ ಹರಿದು ಹಂಚಿ ಹೋದದ್ದು ಇದಕ್ಕೆ ಕಾರಣ ಎಂದು ವೀಸೀಯವರು ಬರೆಯುತ್ತಾರೆ. ಕೊನೆಗಾಲದಲ್ಲಿ ತಂದೆಯವರು “ಪಾಪವನ್ನು ಮುಟ್ಟಬೇಡ, ಶುಚಿಯಾಗಿರು, ಮೈ ಶುದ್ಧವಾಗಿರಲಿ. ಕಷ್ಟ ಎಷ್ಟೇ ಬರಲಿ, ತಮ್ಮಂದಿರನ್ನು, ತಂಗಿಯರನ್ನು ನೋಡಿಕೊ’ ಎಂದು ಹೇಳಿದಂತೆ ಪಂಜೆಯವರು ನಡೆದುಕೊಂಡರು. 

ಕೊಡಗಿನ ನಾಡಗೀತೆ
ಶಿಶು ಸಾಹಿತ್ಯದಲ್ಲಿ ಅವರ ಸೇವೆ ಅಜರಾಮರ. ಕನ್ನಡದ ಆಚಾರ್ಯಪುರುಷರಲ್ಲಿ ಪಂಜೆಯವರು ಅಗ್ರಗಣ್ಯರು. ಸೂಕ್ಷ್ಮ ಸಂವೇದನೆಯ, ರಸಭಾವದ ಕವಿ, ವಿಮರ್ಶಕ, ಸಾಹಿತಿ ಇವರು. ಕತೆ, ಕವನ, ಹರಟೆ, ಪತ್ತೇದಾರಿ ಕಾದಂಬರಿ, ಐತಿಹಾಸಿಕ ಕಥೆ, ಸಂಶೋಧನೆ, ವೈಚಾರಿಕ ಲೇಖನ… ಇತ್ಯಾದಿ ಸಾಹಿತ್ಯ ಪ್ರಕಾರಗಳಲ್ಲಿ ಸಾಹಿತ್ಯ ಕೃಷಿ ಮಾಡಿರುವ ಮಂಗೇಶರಾಯರು ಶಿಶು ಸಾಹಿತ್ಯದಲ್ಲಿ ತಮ್ಮದೇ ಆದ ವಿಶೇಷತೆಗಳಿಂದ ಜನಾನುರಾಗಿಯಾದರು. ಕನ್ನಡ ಪಾಠಗಳಿಗೆ ಪದ್ಯಗಳು ಬೇಕಾದ ಆ ಕಾಲದಲ್ಲಿ ಪ್ರಥಮವಾಗಿ ಪದ್ಯಗಳನ್ನು ಸಂಪಾದಿಸಿದರು. ತಾನೊಬ್ಬ ಕವಿಯ ಶಿಷ್ಯನಷ್ಟೆ ಎಂಬ ವಿನಯ ಅವರದಾಗಿತ್ತು. ಹಾಗಾಗಿ ತಮ್ಮ ಕಾವ್ಯನಾಮವನ್ನು “ಕವಿಶಿಷ್ಯ’ ಎಂದು ಇಟ್ಟುಕೊಂಡಿದ್ದರು. “ಹರಟೆಮಲ್ಲ’, “ರಾ.ಮ.ಪಂ’ (ಹೆಸರನ್ನು ತಿರುವು ಮಾಡಲಾಗಿದೆ) ಎಂಬ ಗುಪ್ತನಾಮಗಳಿಂದಲೂ ಸಾಹಿತ್ಯ ಕೃಷಿ ಮಾಡಿ¨ªಾರೆ. ಕೊಡಗಿನಲ್ಲಿ ಮುಖ್ಯೋಪಾಧ್ಯಾಯರಾಗಿದ್ದಾಗ ರಚಿಸಿದ “ಹುತ್ತರಿ ಹಾಡು’ ಕೊಡಗಿನ ಜನರ ನಾಡಗೀತೆಯಾಯಿತು.  

Advertisement

ಕೊಡುಗೆಗಳ ಜೀವಂತಿಕೆ
ಮನೆಮಾತು ಕೊಂಕಣಿ. ಪ್ರಾದೇಶಿಕ ಭಾಷೆ ತುಳು, ಶಾಲೆಯಲ್ಲಿ ಕಲಿತದ್ದು ಕನ್ನಡ, ಉನ್ನತ ವ್ಯಾಸಂಗಗಳಲ್ಲಿ ಇಂಗ್ಲಿಷ್‌. ಹಲವಾರು ಭಾಷೆಗಳ ಪ್ರಭಾವ-ಪರಿಣತಿಗಳು ಅವರ ಸಾಹಿತ್ಯ ಸೃಷ್ಟಿಯಲ್ಲಿ ಪರಿಣಾಮವನ್ನು ಬೀರಿವೆ. ಕೊಡಗಿನಲ್ಲಿ ಮೇಲಧಿಕಾರಿ ನಡೆದುಕೊಂಡ ರೀತಿಗೆ ಬೇಸರಪಟ್ಟು ಕೆಲಸಕ್ಕೆ ರಾಜೀನಾಮೆ ನೀಡಿ ಮಂಗಳೂರಿಗೆ ಬಂದ ಪಂಜೆಯವರು 1902ರಲ್ಲಿ ಭಾವಮೈದುನ ಬೆನಗಲ್‌ ರಾಮರಾವ್‌ ನಡೆಸುತ್ತಿದ್ದ “ಸುವಾಸಿನಿ’ ಪತ್ರಿಕೆಗೆ ಜೀವಾಳವಾದರು. ಅವರ ಶಿಶುಗೀತೆಗಳನ್ನು ವಿಶ್ವದೆಲ್ಲೆಡೆ ಇರುವ ಕನ್ನಡಿಗರ ಸಂಘಟನೆಗಳು ಸಾಂದರ್ಭಿಕವಾಗಿ ಹಾಡಿ ಗೀತೆ, ಕವಿಗೆ ಪರೋಕ್ಷವಾಗಿ ನಮನ ಸಲ್ಲಿಸುತ್ತಾರೆ. 63ನೆಯ ವಯಸ್ಸಿನಲ್ಲಿ (1937) ಮೃತಪಟ್ಟರೂ ಕೊಡುಗೆಗಳಿಂದಾಗಿ ಪಂಜೆಯವರು ಇನ್ನೂ ಕನ್ನಡಿಗರ ಸ್ಮರಣೆಯಲ್ಲಿದ್ದಾರೆ. ಇಂತಹ ಶಿಶುಗೀತೆಗಳು ಮಕ್ಕಳ ಮನದಲ್ಲಿ ಮೂಡಿದರೆ ಇಹಲೋಕ ತ್ಯಜಿಸುವವರೆಗೂ ಮನದಲ್ಲಿ ಉಳಿದೀತು, ಅವರ ಹೆಸರೂ ಉಳಿಯುತ್ತದೆ.

ಪಂಜೆ ಹಾಡಿಗೆ ಖೊಕ್‌ ಕೊಟ್ಟ ಶಿಕ್ಷಣತಜ್ಞರು!
ಇಂದಿನ ಮಕ್ಕಳಿಗೆ “ನಾಗರ ಹಾವೆ’ ರೀತಿಯ ಲಾಲಿತ್ಯದ ಸಾಹಿತ್ಯ, ಹಾಡು ಸಿಗುವುದು ಬಹಳ ವಿರಳ. ಈ ಮಾತಿಗೆ ಪೂರಕವೆಂಬಂತೆ ಈ ಹಾಡನ್ನು ನಮ್ಮ “ಬುದ್ಧಿವಂತ ಶಿಕ್ಷಣ ತಜ್ಞರು’ ತೆಗೆದುಹಾಕಿ ದಶಕಗಳೇ ಸಂದಿವೆ. ಕಾರಣವನ್ನು ಹೀಗೆ ಊಹಿಸಬಹುದು: ಹಿಂದೆ ಹಿಂದೆ ಹೋದಂತೆ ಕವಿಗಿಂತ ಕವನ ಮಹತ್ವದ್ದಾಗಿತ್ತು. ಕವನದ ಮಹತ್ತಿಕೆಯಿಂದ ಕವಿಗೆ ಮಾನ್ಯತೆ ದೊರಕುತ್ತಿತ್ತು. ಆ ಕಾರಣದಿಂದ ಹಾಡು ಪಠ್ಯಪುಸ್ತಕದಲ್ಲಿ ಅಸ್ತಿತ್ವ ಪಡೆಯಿತು. ಈಗ ಕವನಕ್ಕಿಂತ ಕವಿ, ಆತನ ಲಾಬಿಯೇ ಬಲಾಡ್ಯ. ಪಂಜೆಯವರು ಹೇಗಿದ್ದರೂ ಕಾಲವಾಗಿ ದಶಕಗಳೇ ಕಳೆದಿವೆ. ಅವರ ಪರವಾಗಿ ಲಾಬಿ ಮಾಡುವವರೂ ಇಲ್ಲ. ಅವರ ಕವನದ ಸ್ಥಾನದಲ್ಲಿ ತಮ್ಮ ಕವನಗಳನ್ನು ಸೇರಿಸಲು ಅದೆಷ್ಟೋ ಲಾಬಿಗಳು ಕೆಲಸ ಮಾಡಿರಬಹುದು. ಹೀಗೆ ಎಷ್ಟು ಪ್ರತಿಭಾನ್ವಿತರ ಹಾಡುಗಳಿಗೆ ಖೊಕ್‌ ಸಿಕ್ಕಿದೆಯೋ ಯಾರಿಗೆ ಗೊತ್ತು?

ಸ್ವಾತಂತ್ರ್ಯ ಪೂರ್ವದ ಕರೆ ಸ್ವಾತಂತ್ರ್ಯೋತ್ತರದ ಬರೆ!
ಮದ್ರಾಸ್‌ ಪ್ರಾಂತ್ಯಕ್ಕೆ ಕರಾವಳಿ ಕರ್ನಾಟಕ, ಮೈಸೂರು ಪ್ರಾಂತ್ಯ, ಮುಂಬೈ ಪ್ರಾಂತ್ಯ, ಹೈದರಾಬಾದ್‌ ಪ್ರಾಂತ್ಯ ಅಸ್ತಿತ್ವದಲ್ಲಿದ್ದು ಕನ್ನಡಿಗರಲ್ಲಿ ಪ್ರಾದೇಶಿಕ ಏಕತೆ ಇಲ್ಲದಾಗ ಹೈದರಾಬಾದ್‌ ನಿಜಾಮ… ಆಡಳಿತದಲ್ಲಿದ್ದ ರಾಯಚೂರಿನಲ್ಲಿ 1934ರಲ್ಲಿ ನಡೆದ ಅಖೀಲ ಭಾರತ ಕನ್ನಡ ಸಮ್ಮೇಳನದ ಅಧ್ಯಕ್ಷರಾಗಿ ಕರಾವಳಿಯ ಪಂಜೆ ಮಂಗೇಶರಾಯರು ಆಯ್ಕೆಯಾದದ್ದು ಕೇವಲ ಸ್ವಸಾಮರ್ಥ್ಯದಿಂದ. ಒತ್ತಾಯಿಸಿ ಅವರನ್ನು ಒಪ್ಪಿಸಬೇಕಾಯಿತು. ಈಗ ಇಂತಹ ಹುದ್ದೆಗಳಿಗೆ ಜಿದ್ದಾಜಿದ್ದಿ ನಡೆಸುವವರಿಗೆ ಪಂಜೆ ನಡೆ ಕಣ್ಣು ತೆರೆಸಬೇಕು. ಆಗ ಪ್ರತಿ ಶಾಲೆಯ ವಿದ್ಯಾರ್ಥಿಗಳನ್ನೂ ಶಿಕ್ಷಕರನ್ನೂ ಹೇಗೆ ಸಾಹಿತ್ಯ ಕೃಷಿಗೆ ಬಳಸಬಹುದು ಎಂಬುದನ್ನು ಸಮ್ಮೇಳನಾಧ್ಯಕ್ಷ ಭಾಷಣ ದಲ್ಲಿ ಗಹನವಾಗಿ ಪ್ರತಿಪಾದಿಸಿದ್ದರು. ಈಗ ಶಾಲೆಗಳನ್ನು ಆಳುಗರು ನಿಧಾನವಾಗಿ ದಮನಿಸುವಾಗ ಶಿಕ್ಷಕರು ಆಗಿನ ಅಧ್ಯಕ್ಷೀಯ ಭಾಷಣದ ಪ್ರತಿಗಳನ್ನು ಮೆಲುಕು ಹಾಕಿ, ತಾವೂ ಅದಕ್ಕೆ ತಕ್ಕುದಾಗಿ ಬದುಕಿ, ಅದರ ಪ್ರತಿ ಮಾಡಿಸಿ ಸರಕಾರದ ಗಮನಕ್ಕೆ ತರಬೇಕಾದ ಅಗತ್ಯವಿದೆ. 

ಆಗ ಪಂಜೆಯವರು ವ್ಯಕ್ತಪಡಿಸಿದ ಅಭಿಪ್ರಾಯಗಳು ಇಂತಿವೆ: “ನಮ್ಮ ಹಳ್ಳಿಯ ಶಾಲೆಗಳನ್ನೂ ಹಳ್ಳಿಯ ಉಪಾಧ್ಯಾಯರನ್ನೂ ನಾವು ಸಾಹಿತ್ಯ ಸಮ್ಮೇಳನದ ಕಾರ್ಯಸಾಧನೆಗಾಗಿ ಎಳೆದುಕೊಳ್ಳಲೇಬೇಕು. ಸಾಹಿತ್ಯ ರಚನೆ, ಭಾಷಾಭಿವೃದ್ಧಿ, ಗ್ರಾಮಾರೋಗ್ಯ, ದೇಶಾಭ್ಯುದಯದ ಯಾವ ಸತ್ಕಾರ್ಯವಾದರೂ ಈ ಅಧ್ಯಾಪಕರ ಕೈಯಲ್ಲಿದೆ. ಸಮ್ಮೇಳನದ ಉದ್ದೇಶಗಳನ್ನು ಹಳ್ಳಿಯ ಉಪಾಧ್ಯಾಯರಿಗೆ ಮೊಟ್ಟಮೊದಲು ತಿಳಿಯಹೇಳಿ, ಅವರು ಸದಸ್ಯತ್ವಕ್ಕೆ ತೆರಬೇಕಾದ ಚಂದಾ ತಗ್ಗಿಸಿ ಅವರನ್ನು ಸದಸ್ಯರನ್ನಾಗಿ ಮಾಡಿಕೊಳ್ಳಬೇಕು. ಅಧ್ಯಾಪಕರು ತಮ್ಮ ಕೈದೀವಟಿಗೆಗಳನ್ನು ಸಾಹಿತ್ಯಾಗ್ನಿಯಿಂದ ಹೊತ್ತಿಸಿಬಿಟ್ಟರೆ, ಪ್ರತಿಯೊಂದು ಗ್ರಾಮಶಾಲೆ ಒಂದು ಪರಿಷನ್ಮಂದಿರ, ಅಲ್ಲಿಯ ಮಕ್ಕಳ ಕೂಟ ಚಿಕ್ಕ ಸಾಹಿತ್ಯ ಸಭೆ, ಶಾಲಾ ಕೈಬರೆಹದ ಕನ್ನಡ ಪತ್ರಿಕೆ ಚಿಕ್ಕದೊಂದು ಪರಿಷತ್ಪತ್ರಿಕೆ ಆಗುವುದರಲ್ಲಿ ಸಂಶಯವಿಲ್ಲ. ಕನ್ನಡ ಭಾಷೆಯ ವ್ಯಾಪನೆಗೂ ಜನಜೀವನದ ಸಂಸ್ಕಾರಕ್ಕೂ ಸಾಹಿತ್ಯ ರಚನೆಗೂ ಹಳ್ಳಿಯ ಶಿಕ್ಷಣವೇ ಸ್ಥಿರವಾದ ತಳಹದಿ. ಈ ತಳಹದಿಯನ್ನು ಕಟ್ಟತಕ್ಕ ಶಿಲ್ಪಿಗಳು ನನ್ನ ಗೆಳೆಯರಾದ ಹಳ್ಳಿಯ ಯುವ ಉಪಾಧ್ಯಾಯರು’. ಸ್ವಾತಂತ್ರ್ಯ ಪೂರ್ವದಲ್ಲಿ ಅವರು ಕಂಡ ಕನಸು, ಸ್ವಾತಂತ್ರ್ಯೋತ್ತರದಲ್ಲಿ ಮತ್ತು ಈಗ ಏನಾಗಿದೆ ಎಂದು ತುಲನೆ ಮಾಡಬೇಕು. 

ಮುದ್ದಣನಿಗೆ ಪಂಜೆ ಪತ್ರ
ಮಂಗಳೂರಿನ ಸರಕಾರಿ ಕಾಲೇಜಿನಲ್ಲಿ ಜೂನಿಯರ್‌ ಕನ್ನಡ ಪಂಡಿತ ಹುದ್ದೆಗೆ ಪಂಜೆ ಮಂಗೇಶ ರಾವ್‌ ಮತ್ತು ಮುದ್ದಣ ಇಬ್ಬರೂ ಅರ್ಜಿ ಸಲ್ಲಿಸಿದ್ದರು. ಪಂಜೆಯವರಿಗೆ ಇಂಗ್ಲಿಷ್‌ ಜ್ಞಾನವಿದೆ ಎಂಬ ಕಾರಣಕ್ಕೆ ಪಂಜೆಯವರು ಆಯ್ಕೆಯಾದರು. ಬಳಿಕ ಪಂಜೆಯವರು ಮುದ್ದಣನಿಗೆ ಬರೆದ ಪತ್ರ ಇಂತಿದೆ: “ಭತ್ತದ ಸಿಪ್ಪೆಯನ್ನು ಕುಟ್ಟತಕ್ಕ ಒನಕೆಯನ್ನು ಕನ್ನಡದ ಬರೆಹ ಬರೆಯುವುದಕ್ಕೆ ತಂದರು. ಚಿತ್ರ ಬಿಡಿಸುವ ಬಣ್ಣದ ಗರಿಯನ್ನು ಕಿವಿಯ ತುರಿಕೆಗೆ ಹುಗ್ಗೆಯ ಕಡ್ಡಿಯನ್ನಾಗಿ ಮಾಡಿದರು.’ ಇದು ಪಂಜೆಯವರ ವ್ಯಕ್ತಿತ್ವವನ್ನು ತೋರಿಸುತ್ತದೆ. ಪಂಜೆಯವರು ಶಾಲಾ ಇನ್ಸ್‌ಪೆಕ್ಟರ್‌ ಆಗುವ ಹಿಂದೆ ನಡೆದ ಘಟನೆ ಇದು.

ಮಟಪಾಡಿ ಕುಮಾರಸ್ವಾಮಿ

Advertisement

Udayavani is now on Telegram. Click here to join our channel and stay updated with the latest news.

Next