Advertisement

ದುನಿಯಾ ವಿಜಯ್‌ ವಿರುದ್ಧ ಪಾನಿಪುರಿ ಕಿಟ್ಟಿ ದೂರು

11:13 AM Sep 25, 2018 | Team Udayavani |

ಅಪಹರಣ ಹಾಗೂ ದೈಹಿಕ ಹಲ್ಲೆಗೆ ಸಂಬಂಧಿಸಿದಂತೆ ನಟ “ದುನಿಯಾ’ ವಿಜಯ್‌ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಕೃಷ್ಣಮೂರ್ತಿ (ಕಿಟ್ಟಿ) ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಸೋಮವಾರ ಲಿಖೀತ ದೂರು ನೀಡಿದ್ದಾರೆ.ಆ ದೂರಿನಲ್ಲಿ ವಿವರಿಸಿರುವ ಪಾನಿಪುರಿ ಕಿಟ್ಟಿ, “ನಾನು ಅಂತಾರಾಷ್ಟ್ರೀಯ ದೇಹದಾರ್ಢ್ಯ ಪಟುವಾಗಿದ್ದು, ಚಿತ್ರರಂಗದಲ್ಲಿ ಪಾನಿಪುರಿ ಕಿಟ್ಟಿ ಎಂದೇ ಚಿರಪರಿಚಿತನಾಗಿರುತ್ತೇನೆ.

Advertisement

ನಾನು ನಿಮ್ಮಲ್ಲಿ ವಿನಂತಿಸಿಕೊಳ್ಳುವುದೇನೆಂದರೆ, ನಾನು ಸುಮಾರು 20 ವರ್ಷಗಳಿಂದ “ಮಜಲ್‌ ಪ್ಲಾನೆಟ್‌’ ಎಂಬ ಜಿಮ್‌ ನಡೆಸುತ್ತಿದ್ದು, ನನ್ನ ಜಿಮ್‌ನಲ್ಲಿ ಚಿತ್ರರಂಗದ ಹಲವು ಕಲಾವಿದರು, ಸಾರ್ವಜನಿಕರು ಉತ್ತಮ ತರಬೇತಿ ಹೊಂದುವ ಮೂಲಕ ಜಿಮ್‌ ಪರಿಚಯಗೊಂಡಿದೆ. ನನ್ನ ಜಿಮ್‌ ಸಂಸ್ಥೆಯ ಬಗ್ಗೆ ಹಲವು ಕಲಾವಿದರು ಮತ್ತು ಚಿತ್ರರಂಗದವರ ಉತ್ತಮ ಅಭಿಪ್ರಾಯವಿದೆ. ನಾನು ನಡೆಸುತ್ತಿರುವ ಜಿಮ್‌ ಸಂಸ್ಥೆಗೆ ಇದುವರೆಗೂ ಯಾವುದೇ ರೀತಿಯ ಕಪ್ಪು ಚುಕ್ಕೆ ಕಂಡು ಬಂದಿಲ್ಲ.

ಆದರೆ, ನಟ ದುನಿಯಾ ವಿಜಯ್‌ ಅವರು ನನ್ನ ಅಣ್ಣನ ಮಗನನ್ನು ಅಪಹಿರಸಿ, ಅವರ ಮೇಲೆ ದೈಹಿಕ ಹಲ್ಲಿ ನಡೆಸಿದ್ದಾರೆ. ಇದರಿಂದ ನನ್ನ ಅಣ್ಣನ ಮಗ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿದಾಖಲಾಗಿದ್ದಾರೆ. ಈ ಪ್ರಕರಣದಿಂದ ನನ್ನ ಜೀವನದಲ್ಲಿ ಕಪ್ಪು ಚುಕ್ಕೆ ಉಂಟಾಗಿ ನನ್ನ ವೃತ್ತಿ ಜೀವನದ ಮೇಲೆ ಪರಿಣಾಮ ಬೀರುವುದರಿಂದ  ನನ್ನ ಬಳಿ ತರಬೇತಿಗೆ ಬರುವ ಉದಯೋನ್ಮುಖ ಕಲಾವಿದರು, ನನ್ನ ಬಗ್ಗೆ ಯೋಚಿಸುವಂತಾಗಿದೆ. ಇದೇ ರೀತಿ ಈ ಹಿಂದೆಯೂ ದುನಿಯಾ ವಿಜಯ್‌ ಅವರು ಹಲವು ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ.

ಈ ಪ್ರಕರಣದಲ್ಲಿ ನಾನು ಅಮಾಯಕನಾಗಿದ್ದು, ನನ್ನ ಮೇಲೆ ಯಾವುದೇ ತಪ್ಪು ಕಂಡುಬಂದಲ್ಲಿ, ನನ್ನ ಮೇಲೂ ತಾವು ಕ್ರಮ ಜರುಗಿಸಬಹುದು. ಆದ್ದರಿಂದ ವಾಣಿಜ್ಯ ಮಂಡಳಿಯು ನಟ ದುನಿಯಾ ವಿಜಯ್‌ ಅವರ ಮೇಲೆ ಶಿಸ್ತಿನ ಕ್ರಮ ಜರುಗಿಸಬೇಕು’ ಎಂದು ಮನವಿ ಮಾಡಿದ್ದಾರೆ. ಈ ಸಂಬಂಧ ವಾಣಿಜ್ಯ ಮಂಡಳಿಯಲ್ಲಿ ಸಭೆ ನಡೆಸಿ, ಮುಂದಿನ ದಿನಗಳಲ್ಲಿ “ದುನಿಯಾ’ ವಿಜಯ್‌ ಅವರನ್ನು ಮಂಡಳಿಗೆ ಕರೆಸಿಕೊಂಡು ಮಾತುಕತೆ ನಡೆಸುವುದಾಗಿ ಮಂಡಳಿಯ ಕಾರ್ಯದರ್ಶಿ ಭಾ.ಮ.ಹರೀಶ್‌ “ಉದಯವಾಣಿ’ಗೆ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next