Advertisement

ಸಂಗೀತದ ಭೀಮನಿಗೆ ನೂರು ಸಂವತ್ಸರ

01:20 PM Feb 04, 2022 | Team Udayavani |

ಹುಡುಗನೊಬ್ಬ ಶಾಲೆಯಿಂದ ಮನೆಗೆ ಮರಳುವಾಗ ಗ್ರಾಮಾಫೋನ್‌ ಅಂಗಡಿಯೊಂದರ ಧ್ವನಿ ತಟ್ಟೆಯಲ್ಲಿ ಹೊರಹೊಮ್ಮುತ್ತಿದ್ದ ಶಾಸ್ತ್ರೀಯ ಸಂಗೀತ ಕೇಳಿ ಮೈಮರೆತ. ಬಹಳಷ್ಟು ಹೊತ್ತು ತನ್ಮಯನಾಗಿ ನಿಂತು ಆ ಸಂಗೀತ ವನ್ನು ಆಲಿಸಿದ. “ಇಲ್ಲಿ ಹಾಡುತ್ತಿರುವ ಗಾಯಕರ ಹೆಸರೇನು? ಎಂದು ಅಂಗಡಿಯಾತನಲ್ಲಿ ಕೇಳಿದ. ಉಸ್ತಾದ್‌ ಅಬ್ದುಲ್‌ ಕರೀಂಖಾನ್‌ ಎಂದ ಅಂಗಡಿಯಾತ. “ತಾನೂ ಕೂಡ ಸಂಗೀತ ಕಲಿಯಬೇಕು, ಬಹಳ ದೊಡ್ಡ ಸಂಗೀತಗಾರನಾಗಬೇಕು. ಸಾಧ್ಯವಾದರೆ ಇದೇ ಗುರುಗಳ ಬಳಿ ಕಲಿಯಬೇಕು’ ಎಂಬ ಛಲ ಆತನ ಮನಸ್ಸಿನೊಳಗೆ ಹೊಕ್ಕಿತು. “ಇನ್ನು ಮನೆಗೆ ಹೋದರೆ ನಾಳೆ ಮತ್ತೆ ಶಾಲೆಗೆ ಕಳುಹಿಸುತ್ತಾರೆ. ಮನೆಯಲ್ಲಿದ್ದರೆ ನಾನು ಸಂಗೀತ ಕಲಿಯಲಾಗದು’ ಎಂದುಕೊಂಡ ಆ ಹತ್ತು ವರ್ಷ ವಯಸ್ಸಿನ ಹುಡುಗ ತನ್ನ ಹೆಗಲ ಮೇಲಿದ್ದ ಪುಸ್ತಕದ ಚೀಲವನ್ನು ಅಲ್ಲೇ ಬಿಟ್ಟು ಓಡಿದ. ತನಗೆ ಸಂಗೀತ ಕಲಿಸುವ ಗುರುವನ್ನರಸಿ ಮುಂಬಯಿಗೆ!  ಸ್ವಲ್ಪ ಸಮಯ ಗುರುವಿಗಾಗಿ ಅಲೆದಾಡಿದ.

Advertisement

ಮಗನ ಇರುವು ತಂದೆಗೆ ತಿಳಿಯಿತು. ಓಡೋಡಿ ಬಂದು ಕರೆದುಕೊಂಡು ಹೋದರು. ಆದರೆ ಸಂಗೀತ ಕಲಿಯಬೇಕೆಂಬ ಭಾವ ತೀವ್ರತೆ ಆಂತ ರ್ಯದಲ್ಲಿ ಹೆಚ್ಚಾಗುತ್ತಲೇ ಇತ್ತು. ಹುಡುಗ ಮತ್ತೂಮ್ಮೆ ಮನೆ ಬಿಟ್ಟು ಓಡಿದ. ಫ‌ುಟ್‌ಪಾತ್‌ನಲ್ಲಿ ಮಲಗಿದ, ಯಾರೋ ಊಟ ಕೊಟ್ಟರು. ಹಾಡಿದ್ದಕ್ಕಾಗಿ ಕೆಲವರು ಕೊಟ್ಟ ಚಿಲ್ಲರೆ ಕಾಸನ್ನು ತನ್ನ ಪುಟ್ಟ ಜೇಬಿನಲ್ಲಿರಿಸಿಕೊಂಡು ಗ್ವಾಲಿಯರ್‌, ಲಕ್ನೋ ಮುಂತಾದ ಊರುಗಳಲ್ಲಿ ಗುರುವಿಗಾಗಿ ಹುಡುಕಾಟ ನಡೆ ಸಿದ. ಆ ಹುಡುಕಾಟದಲ್ಲಿ ಗುರುವಾಗಿ ಒದಗಿ ಬಂದವರು ಖ್ಯಾತ ಸರೋದ್‌ ವಾದಕ ಅಮ್ಜದ್‌ ಆಲೀ ಖಾನ್‌ ಅವರ ತಂದೆ ಹಫೀಜ್‌ ಅಲೀ ಖಾನ್‌. ಅಲ್ಲಿಂದ ಪ್ರಾರಂಭವಾದ ಆತನ ಸಂಗೀತ ಲೋಕದ ಪಯಣ ಮುಂದೆ ಕೇಶವ ಮುಕುಂದ ಲುಖೆ, ಮಂಗತ್‌ ರಾವ್‌ ಮುಂತಾದ ಸಂಗೀತ ದಿಗ್ಗಜರಲ್ಲಿಯೂ ಶಿಷ್ಯತ್ವ ಪಡೆದರು. ಅನಂತರ ತನ್ನ ಮೂಲ ಪ್ರೇರಣಾ ಸ್ರೋತರಾದ ಉಸ್ತಾದ್‌ ಕರೀಂ ಖಾನ್‌ ಅವರ ನೇರ ಶಿಷ್ಯರಾದ ಸವಾಯಿ ಗಂಧರ್ವರ ಬಳಿ ಶಿಷ್ಯನಾಗಿ ಒಂದೊಂದೇ ರಾಗಗಳ ಆಳ ಅಗಲಗಳನ್ನು ಹುಡು ಕುತ್ತಾ ಹೊರಟರು. ಗುರುಗಳ ಸೇವೆ ಮಾಡುತ್ತಾ ಸಂಗೀತ ಶಾರದೆ ಯನ್ನು ಒಲಿಸಿಕೊಳ್ಳತೊಡಗಿದರು. ದಿನಕ್ಕೆ 16 ಗಂಟೆಗಳ ರಿಯಾಜ್‌. ಬೇರೆ ಬೇರೆ ರಾಗಗಳ ಮೇಲೆ ತನ್ನದೇ ಹೊಸ ಪ್ರಯೋಗಗಳನ್ನು ಮಾಡುತ್ತಾ ತನ್ನ ಮೂಲ ಕಿರಾಣಾ ಘರಾಣಾ ಶೈಲಿಯನ್ನ ಬಿಡದೆ ಹೊಸ ಹೊಸ ಆವಿಷ್ಕಾರಗಳನ್ನು ಪ್ರಾರಂಭಿಸಿದರು.

ಮುಂದೊಂದು ದಿನ ಅವರ ಹೊಸತನ ಸಂಗೀತ ಪ್ರಿಯರ ಮನಸ್ಸನ್ನು ಆಕರ್ಷಿಸಿದವು. ಸಹಸ್ರಾರು ಸಹೃದಯರ ಮನೋಸಾಮ್ರಾಜ್ಯದ ಸಿಂಹಾಸನಾಧೀಶರಾದರು. ಭಾರತ ಸರಕಾರದಿಂದ ಪದ್ಮಶ್ರೀ, ಪದ್ಮಭೂಷಣ, ಪದ್ಮವಿ ಭೂಷಣ ಕೊನೆಗೆ ಅತ್ಯುನ್ನತ ರಾಷ್ಟ್ರ ಪುರಸ್ಕಾರ ಭಾರತ ರತ್ನವಾಗಿ ಕಂಗೊಳಿಸಿದ ಆ ಮಹಾನ್‌ ಸಾಧಕ, ಸಂಗೀತ ಸಮ್ರಾಟ ಪಂಡಿತ್‌ ಭೀಮಸೇನ ಜೋಶಿ. ಸರ್‌| ಎಂ. ವಿಶ್ವೇಶ್ವರಯ್ಯ ಅವರ ಅನಂತರ ಈ ಶ್ರೇಷ್ಠ ಗೌರವಕ್ಕೆ ಪಾತ್ರರಾದ ಕನ್ನಡಿಗರಲ್ಲಿ ಅದರಲ್ಲೂ ಸಂಗೀತ ಕ್ಷೇತ್ರದಲ್ಲಿ ಪಂ| ಭೀಮಸೇನ ಜೋಶಿ ಮೊದಲಿಗರು.

ಕರ್ನಾಟಕ ಸಂಗೀತದ ಪ್ರಭಾವದ ಮಧ್ಯದಲ್ಲಿಯೂ ಹಿಂದೂಸ್ಥಾನಿ ಸಂಗೀತದ ಅಲೆ ಎಬ್ಬಿಸಿದ ಖ್ಯಾತನಾಮರಲ್ಲಿ ಭೀಮಸೇನ ಜೋಶಿ ಪ್ರಮುಖರು. ಬಹುತೇಕ ಕರ್ನಾಟಕ ಜನತೆಗೆ ಎಂ.ಎಸ್‌.ಸುಬ್ಬುಲಕ್ಷ್ಮೀ ಅವರ ಸುಪ್ರಭಾತ ಹಾಗೂ ಪಂ| ಭೀಮಸೇನ ಜೋಶಿ ಅವರ ಭಾಗ್ಯದ ಲಕ್ಷ್ಮೀ ಗೀತೆಯಿಂದಲೇ ಬೆಳಗಾಗುವುದು ಎನ್ನುವಷ್ಟರ ಮಟ್ಟಿಗೆ ಪುರಂದರ ದಾಸರ ಆ ಕೀರ್ತನೆಯನ್ನು ಎಲ್ಲರ ಮನೆ ಮನ ತಲುಪಿಸಿದವರು ಭೀಮ ಸೇನ ಜೋಶಿ. ತಮ್ಮದೇ ಆದ ವಿಶಿಷ್ಠ ಶೈಲಿಯಲ್ಲಿ ಖಯಾಲ್‌ ಶೈಲಿಯನ್ನು ಮತ್ತಷ್ಟು ಸಮೃದ್ಧಗೊಳಿಸಿದರು.  1988ರಲ್ಲಿ ಬಿಡುಗಡೆಯಾದ ಅವರ “ಮೀಲೆ ಸುರ್‌ ಮೇರಾ ತುಮ್ಹಾರಾ’ ಎಂಬ ಹಾಡು ಪ್ರತಿಯೊಬ್ಬ  ಭಾರತೀಯನನ್ನು ಇವತ್ತಿಗೂ ಮಧುರವಾಗಿ ಕಾಡುತ್ತಿದೆ.

“ಸುರ್‌ ಕಾ ಬಾದ್‌ಶಹಾ” ಎಂದೇ ಖ್ಯಾತರಾದ ಪಂಡಿತ್‌ ಬಸವರಾಜ ರಾಜಗುರು ಅವರಿಗೆ ಭೀಮಸೇನ ಜೋಶಿ ಅವರ ಕಂಠದ ಬಗ್ಗೆ ಅಪಾರ ವಾದ ಗೌರವ. ಭೀಮಸೇನರಿಗಿಂತ ವಯಸ್ಸಿನಲ್ಲಿ 5 ವರ್ಷ ಹಿರಿಯರಾದ ರಾಜಗುರು ಅವರು ಕಛೇರಿಗಳಿಗೆ ಹೋಗುವಾಗ ಎಂದೂ ಹೊರಗಡೆ ತಿಂಡಿ, ನೀರನ್ನು ಸೇವಿಸುವವರಲ್ಲ. ತನ್ನ ಜತೆ ಬಿಸಿ ನೀರಿನ ಬಾಟಲಿಯೊಂದನ್ನು ಯಾವಾಗಲೂ ಕೊಂಡು ಹೋಗುತ್ತಿದ್ದರು. “ಎಲ್ಲಿಯಾದರೂ ತನ್ನ ಕಂಠಕ್ಕೆ ತೊಂದರೆಯಾದರೆ’ ಎಂಬ ಭಯ. ಒಮ್ಮೆ ಆತ್ಮೀಯರೊಬ್ಬರು ಕೇಳಿಯೇ ಬಿಟ್ಟರು, ಆ ಭೀಮಸೇನ ತನ್ನ ಕಂಠದ ಬಗ್ಗೆ ಸ್ವಲ್ಪವೂ ಚಿಂತಿಸದೆ ಸಿಕ್ಕಸಿಕ್ಕಲೆಲ್ಲ ಬಜ್ಜಿ, ಬೋಂಡಾ ತಿನ್ನುತ್ತಿದ್ದರೆ ನೀವು ನಿಮ್ಮ ಕಂಠದ ಕುರಿತಾಗಿ ವಿಪರೀತ ಯೋಚಿಸುವಿರಲ್ಲ ಎಂದಾಗ ರಾಜಗುರು ಅವರು ಹೇಳುವ ಮಾತು ಬಹಳ ತೂಕದ್ದು. “ನನ್ನ ಕಂಠ ಅದು ನನ್ನ ಅಭ್ಯಾಸದ ಕಾರಣದಿಂದ ನಿರ್ಮಾಣವಾಗಿರುವುದು. ಅದಕ್ಕೆ ಆಯಸ್ಸು ಕಡಿಮೆ. ಆದರೆ ಆ ಭೀಮಸೇನನ ಕಂಠದಲ್ಲಿ ಸಾಕ್ಷಾತ್‌ ಸರಸ್ವತಿಯೇ ನೆಲೆಸಿದ್ದಾಳೆ, ಹಾಗಾಗಿ ಆತ ಏನೇ ತಿಂದರೂ ಅವನ ಧ್ವನಿಗೆ ಏನೂ ಆಗದು’ ಎನ್ನುತ್ತಾರೆ. ಇಲ್ಲಿ ರಾಜಗುರು ಅವರ ಸ್ವಲ್ಪವೂ ಮಾತ್ಸರ್ಯವಿಲ್ಲದ ಅಪರಂಜಿಯಂತಹ ಗುಣ ಹಾಗೂ ಜೋಶಿ ಅವರ ಧ್ವನಿಯ ತಾಕತ್ತು ಎರಡೂ ಅನಾವರಣಗೊಳ್ಳುತ್ತದೆ.

Advertisement

ಭೀಮಸೇನ ಜೋಶಿ ಅವರು ತಮ್ಮ ಜೀವಮಾನದಲ್ಲಿ ನೀಡಿದ ಒಟ್ಟು ಕಾರ್ಯಕ್ರಮಗಳ ಸಂಖ್ಯೆ ಸುಮಾರು 12 ಸಾವಿರ. ಭಾರತದಲ್ಲಿ ಅವರು ಪ್ರಸಿದ್ಧರಾದಷ್ಟೇ ವಿದೇಶಗಳಲ್ಲೂ ಪ್ರಸಿದ್ಧರು. 23 ದೇಶಗಳ 67 ನಗರಗಳಲ್ಲಿ ಭೀಮಸೇನರ ಕಾರ್ಯಕ್ರಮಗಳು ನಡೆದಿವೆ. ಇವರು ಯಾವಾಗಲೂ ಹವಾಯಿಯಲ್ಲೇ (ವಿಮಾನ)ತಿರುಗುವುದನ್ನು ನೋಡಿ ಅವರ ಸಹಚರರು  ಗುರು ಸವಾಯಿ ಗಂಧರ್ವರು, ಶಿಷ್ಯ ಹವಾಯಿ ಗಂಧರ್ವ ಎನ್ನುತ್ತಿದ್ದರಂತೆ.

ಅಫ್ಘಾನಿಸ್ಥಾನದ ದೊರೆ ಜಹೀರ್‌ ಶಾನ ಮಗಳಿಗೆ ಆಕಸ್ಮಿಕವಾಗಿ ಜೋಶಿ ಅವರ ಸಂಗೀತದ ಕ್ಯಾಸೆಟ್‌ ಒಂದು ಸಿಕ್ಕಿತು. ಕೇಳಿ ಪ್ರಭಾವಿತಳಾದ ಆಕೆ ಅರಮನೆಯಲ್ಲಿ ಸಂಗೀತ ಕಛೇರಿ ನಡೆಸುವಂತೆ ತಂದೆಯ ಬಳಿ ತನ್ನ ಇಚ್ಛೆಯನ್ನು ತೋಡಿಕೊಂಡಳು. ಜಹೀರ್‌ ಶಾ ಒಪ್ಪಿ ಭಾರತ ಸರಕಾರಕ್ಕೆ ತನ್ನ ವಿನಂತಿಯನ್ನು ಕಳುಹಿಸಿದ. ಸರಕಾರ ಒಪ್ಪಿತು. ಅಫ್ಘಾನಿಸ್ಥಾನದ ರಾಜ ದರ್ಬಾರಿನಲ್ಲಿ ನಡೆದ ಭೀಮಸೇನರ ಕಛೇರಿ ಎಲ್ಲರನ್ನೂ ಮಂತ್ರ ಮುಗ್ಧರನ್ನಾಗಿಸಿತು.

ಸರೋದ್‌ ಮಾಂತ್ರಿಕ ಪಂ| ರಾಜೀವ ತಾರಾನಾಥ್‌ ಅವರು ಜೋಶಿ ಅವರನ್ನು ಭೇಟಿಯಾಗಲೆಂದು ಆಟೋ ಹತ್ತಿ ಬಂದರು. ಆಟೋದವನಿಗೆ ದುಡ್ಡು ಕೊಡಲು ಹೋದಾಗ ಆ ಆಟೋ ಚಾಲಕರು ನಿಮ್ಮನ್ನು ನಾನು ಕರೆದುಕೊಂಡು ಬಂದಿದ್ದು ಭೀಮಸೇನರ ಮನೆಗೆ. ಅವರು ನಮ್ಮ ಪುಣೆಗೆ ಕಳಶಪ್ರಾಯರು. ಅವರ ಮನೆಗೆ ಬಂದ ಅತಿಥಿಗಳಿಂದ ನಾನು ದುಡ್ಡು ತೆಗೆದುಕೊಳ್ಳಲಾರೆ ಎಂದಿದ್ದು ಭೀಮಸೇನ ಜೋಶಿಯವರು ಜನಸಾಮಾನ್ಯರ ಮನಸ್ಸಿನಲ್ಲೂ ನೆಲೆಯಾಗಿದ್ದರೆಂಬುದಕ್ಕೆ ಸಾಕ್ಷಿ. ಭೀಮಸೇನರ ತೋಡಿ ರಾಗದಿಂದ ಪ್ರಭಾವಿತರಾದ  ಡೆನ್ಮಾರ್ಕಿನ ಚಿತ್ರ ನಿರ್ಮಾಪಕ ಲೂಯಿವ್ಯಾನ್‌ ಗಸ್ಟ್ರಿನ್‌ ಹಾಗೂ ಡಚ್‌ ಚಿತ್ರ ನಿರ್ಮಾಪಕರಾದ ಎಂ. ಲೂಯಿಸ್‌ ಪುಣೆಗೆ ಬಂದು ಜೋಶಿ ಅವರ ತೋಡಿ ರಾಗ ಆಧಾರಿತವಾಗಿ ಇಬ್ಬರೂ ಪ್ರತ್ಯೇಕವಾಗಿ ಎರಡು ಸಾಕ್ಷ್ಯಚಿತ್ರಗಳನ್ನು ನಿರ್ಮಿಸಿದರೆ ಕೆನಡಾದ ಜೇಮ್ಸ್ ಬೆವರಿಜ್‌ ಭೀಮಸೇನ ಜೋಶಿಯವರ 20 ನಿಮಿಷಗಳ ಸಾಕ್ಷ್ಯ ಚಿತ್ರ ನಿರ್ಮಾಣ ಮಾಡಿ ಅದಕ್ಕೆ “ಮಿಯಾ ಮಲ್ಹಾರ್‌’ ಎಂದು ಹೆಸರಿಟ್ಟಿದ್ದಾರೆ. ಪಂ| ಭೀಮಸೇನ ಜೋಶಿಯವರ ಅಪರೂಪದ ಸ್ವರ ಮಾಧುರ್ಯ ಸೂರ್ಯ ಚಂದ್ರರಿರುವ ವರೆಗೆ ಜೀವಂತಿಕೆಯಿಂದ ಇರುವಂಥದ್ದು. ಆ ಗಾನ ಗಾರುಡಿಗನನ್ನು ತಾಯಿ ಸರಸ್ವತಿ ಈ ಭೂಮಿಗೆ ಕಳುಹಿಸಿ ಶುಕ್ರವಾರಕ್ಕೆ ನೂರು ಸಂವತ್ಸರಗಳು ಪೂರ್ಣಗೊಂಡಿವೆ.

-ಪ್ರಕಾಶ್‌ ಮಲ್ಪೆ

Advertisement

Udayavani is now on Telegram. Click here to join our channel and stay updated with the latest news.

Next