Advertisement

Pandeshwar: ಟ್ಯಾಂಕರ್‌ನಲ್ಲಿ ತಂದ ಕೊಳಚೆ ನೀರು ಪಾಲಿಕೆ ಚರಂಡಿಗೆ

02:58 PM Sep 03, 2024 | Team Udayavani |

ಪಾಂಡೇಶ್ವರ: ಮಂಗಳೂರು ನಗರದಲ್ಲಿ ಒಳಚರಂಡಿ ತ್ಯಾಜ್ಯ ನೀರಿನ ಸಮಸ್ಯೆ ದಿನಕ್ಕೊಂದು ಬಗೆಯಲ್ಲಿ ವಿವಿಧ ಕಡೆಗಳಲ್ಲಿ ಕಾಡುತ್ತಿದೆ; ಇಂತಹುದರಲ್ಲಿ ಇದೀಗ ನಗರ ಹೊರವಲಯದ ಒಳಚರಂಡಿ ತ್ಯಾಜ್ಯ ನೀರು ಕೂಡ ನಗರದ ಜನರಿಗೆ ಸಂಕಷ್ಟ ಸೃಷ್ಟಿಸಿದೆ. ಗ್ರಾಮಾಂತರ ಭಾಗದ ಖಾಸಗಿ ಟ್ಯಾಂಕರ್‌ನಲ್ಲಿ ನಗರಕ್ಕೆ ತರುವ ಒಳಚರಂಡಿ ತ್ಯಾಜ್ಯ ನೀರನ್ನು ವೆಟ್‌ವೆಲ್‌, ಚರಂಡಿಗಳಿಗೆ ಬೇಕಾಬಿಟ್ಟಿ ಬಿಡುತ್ತಿರುವುದು ಒಂದೆಡೆಯಾದರೆ, ಅನಧಿಕೃತವಾಗಿಯೂ ಹರಿಸಲಾಗುತ್ತಿದೆ ಎಂಬುದು ವಿವಾದ ಸೃಷ್ಟಿಸಿದೆ. ಅದರಲ್ಲಿಯೂ ಪಾಂಡೇಶ್ವರ ಭಾಗದಲ್ಲಿ ಇದು ಸ್ಥಳೀಯರ ಆಕ್ರೋಶಕ್ಕೂ ಕಾರಣವಾಗಿದೆ.

Advertisement

ಪಾಂಡೇಶ್ವರ, ಕುದ್ರೋಳಿ, ಪಡೀಲ್‌, ಎಕ್ಕೂರು, ಕೊಟ್ಟಾರಚೌಕಿ ಸಹಿತ ಮಂಗಳೂ ರಿನ ಒಟ್ಟು 22 ಕಡೆಗಳಲ್ಲಿ ವೆಟ್‌ವೆಲ್‌ ನಿರ್ಮಿಸಲಾಗಿದೆ. ಅಂದರೆ ಶೌಚಾಲಯ, ಪಾತ್ರೆ ತೊಳೆಯುವ ನೀರು ಒಳಚರಂಡಿಯ ಮೂಲಕ ಮ್ಯಾನ್‌ಹೋಲ್‌ (ಒಟ್ಟು 25 ಸಾವಿರಕ್ಕೂ ಅಧಿಕ) ದಾಟಿ ವೆಟ್‌ವೆಲ್‌ಗೆ ಹರಿಯುತ್ತದೆ. ಅಲ್ಲಿಂದ ಮಂಗಳೂರಿನ ನಾಲ್ಕು ಕಡೆಗಳಲ್ಲಿ ಪಾಲಿಕೆ ವತಿಯಿಂದ ನಿರ್ಮಿಸಿರುವ ಎಸ್‌ಟಿಪಿಗೆ (ಸಂಸ್ಕರಣ ಘಟಕ) ಬರುತ್ತದೆ.

ಏನಿದು ವೆಟ್‌ವೆಲ್‌ ʼರಗಳೆʼ!
ನಗರದಲ್ಲಿ ಒಳಚರಂಡಿ ನೀರು ಸರಾಗವಾಗಿ ಹರಿಯಲು ಪೈಪ್‌ಲೈನ್‌ ವ್ಯವಸ್ಥೆ ಇದೆ. ಆದರೂ ಕೆಲವು ಕಡೆಗಳಲ್ಲಿ ಇದು ಸಶಕ್ತವಾಗಿ ಇಲ್ಲ. ಜತೆಗೆ ಡ್ರೈನೇಜ್‌ ಬ್ಲಾಕ್‌ ಆಗಿ ಕೆಲವು ಕಡೆಗಳಲ್ಲಿ ಸಮಸ್ಯೆಗಳೂ ಆಗುತ್ತದೆ. ಇಂತಹ ಸಂದರ್ಭ ಟ್ಯಾಂಕರ್‌ನಲ್ಲಿ ಒಳಚರಂಡಿ ತ್ಯಾಜ್ಯವನ್ನು ತುಂಬಿಸಿ ನಗರದ ಪಾಂಡೇಶ್ವರ, ಕುದ್ರೋಳಿ ಸಹಿತ ಕೆಲವು ವೆಟ್‌ವೆಲ್‌ಗೆ ಪಾಲಿಕೆ ಟ್ಯಾಂಕರ್‌ನಲ್ಲಿ ತರುತ್ತಾರೆ. ಇದರ ಜತೆಗೆ ದೇರಳಕಟ್ಟೆ, ಉಳ್ಳಾಲ, ಬಜಪೆ ಸಹಿತ ನಗರದ ಹೊರಭಾಗದ ಕೆಲವರು ಒಳಚರಂಡಿ ತ್ಯಾಜ್ಯವನ್ನು ನಗರದ ಎಲ್ಲೆಲ್ಲೋ ಚರಂಡಿ-ರಾಜಕಾಲುವೆಗೆ ತಂದು ಬಿಡುತ್ತಿದ್ದಾರೆ ಎಂಬ ದೂರಿನ ಕಾರಣದಿಂದ ಕೆಲವು ವೆಟ್‌ವೆಲ್‌ಗ‌ಳಲ್ಲಿ ಹರಿಸಲು ಪಾಲಿಕೆ ಹಿಂದೆ ಅನುಮತಿ ನೀಡಿತ್ತು ಎಂಬುದು ಸದ್ಯದ ಮಾಹಿತಿ. ಆದರೆ “ಅನುಮತಿ ಇಧ್ದೋ-ಇಲ್ಲದೆಯೋ’ ಈಗಂತು ನಿತ್ಯ ಹಲವಾರು ಟ್ಯಾಂಕರ್‌ಗಳು ವೆಟ್‌ವೆಲ್‌ಗ‌ಳ ಪಕ್ಕದಲ್ಲಿ ಸಾಲು ನಿಂತು ಸಮಸ್ಯೆ ಸೃಷ್ಟಿಯಾಗಿದೆ. ಎಲ್ಲೆಲ್ಲೂ ತ್ಯಾಜ್ಯ ನೀರಿನದ್ದೇ ಗೋಳು ಎಂಬಂತಾಗಿದೆ. ಸ್ಥಳೀಯವಾಗಿ ಆಕ್ರೋಶಕ್ಕೂ ಕಾರಣವಾಗಿದೆ.

ಕೆಲವು ವೆಟ್‌ವೆಲ್‌ಗ‌ಳ ನಿರ್ವಹಣೆ ಮಾಡುವ ಸಂದರ್ಭ ಒಳಚರಂಡಿ ತ್ಯಾಜ್ಯ ನೀರನ್ನು ಕೆಲವು ಟ್ಯಾಂಕರ್‌ನವರು ನೇರವಾಗಿ ತೋಡಿಗೆ ಬಿಡುತ್ತಿದ್ದಾರೆ ಎಂಬುದು ದೂರು. ಪಾಂಡೇಶ್ವರ ವೆಟ್‌ವೆಲ್‌ನಲ್ಲಿ ನಡೆದ ಈ ಘಟನೆ ಸ್ಥಳೀಯವಾಗಿ ಭಾರೀ ವಿರೋಧಕ್ಕೂ ಕಾರಣವಾಗಿದೆ. ವೆಟ್‌ವೆಲ್‌ ನಿರ್ವಹಣೆ ಕಾರಣಕ್ಕೆ ಬಂದ್‌ ಆಗಿದ್ದಾಗ ಖಾಸಗಿಯವರು ತರುವ ಟ್ಯಾಂಕರ್‌ಗಳ ನೀರನ್ನು ನೇರವಾಗಿ ತೋಡಿಗೆ ಹರಿಸಿ ಸ್ಥಳೀಯವಾಗಿ ದುರ್ನಾತ ಹಬ್ಬಿ ಪ್ರತಿಭಟನೆಗೂ ಕಾರಣವಾಗಿದೆ.

ಪರಿಸರವೆಲ್ಲ ವಾಸನೆ!
ಖಾಸಗಿ ಟ್ಯಾಂಕರ್‌ನವರು ಪಾಲಿಕೆಗೆ ಹಣ ಪಾವತಿ ಮಾಡಲು ಇದೆ. ಜತೆಗೆ ವಾಹನಗಳ ನಿಗದಿ ಕೂಡ ಇದೆ. ಆದರೆ ಪಾಂಡೇಶ್ವರಕ್ಕೆ ಬರುವ ಬಹುತೇಕ ಟ್ಯಾಂಕರ್‌ಗಳವರು ಹಣ ನೀಡುತ್ತಿಲ್ಲ, ಜತೆಗೆ ವಾಹನ ಎಷ್ಟು ಬರುತ್ತಿದೆ? ಎಂಬುದಕ್ಕೆ ಲೆಕ್ಕವೇ ಇಲ್ಲ ಎಂಬುದು ಸ್ಥಳೀಯರ ದೂರು. ಸ್ಥಳೀಯವಾಗಿ ವಾಸನೆ ವ್ಯಾಪಿಸಿ ವಾಸಿಸಲು ಆಗದಂತಹ ಪರಿಸ್ಥಿತಿ ಇದೆ. ವಾಹನಗಳು ಸಾಲುಗಟ್ಟಿ ನಿಲ್ಲುತ್ತಿವೆ. ನಡೆದಾಡಲು ಆಗದಂತಹ ಪರಿಸ್ಥಿತಿ ಇದೆ. ಸುಭಾಷ್‌ನಗರ, ಪಟೇಲ್‌ ಕಾಂಪೌಂಡ್‌, ಹೊಗೆಬಜಾರ್‌ ಮ್ಯಾನ್‌ಹೋಲ್‌ ಉಕ್ಕಿ ಹರಿಯುತ್ತಿದೆ ಎಂಬುದು ಸ್ಥಳೀಯರ ದೂರು.

Advertisement

“ವೆಟ್‌ವೆಲ್‌ಗೆ ಬೇಡ-ಎಸ್‌ಟಿಪಿಗೆ ತರಲಿ’
ಗ್ರಾಮಾಂತರ ಭಾಗದಿಂದ ಒಳಚರಂಡಿ ನೀರನ್ನು ಟ್ಯಾಂಕರ್‌ ಮೂಲಕ ನಗರಕ್ಕೆ ತಂದು ಸರಾಗವಾಗಿ ಪಾಂಡೇಶ್ವರ ವೆಟ್‌ವೆಲ್‌ನಲ್ಲಿ ಯಾವುದೇ ಲೆಕ್ಕಾಚಾರವಿಲ್ಲದೆ ನಿರ್ವಹಣೆ ಮಾಡುತ್ತಿರುವ ಬಗ್ಗೆ ಹಾಗೂ ಕೆಲವು ಸಮಯ ನೇರವಾಗಿ ಚರಂಡಿಗೆ ನೀರು ಹರಿಸಿದ ವಿಚಾರ ಗಮನಕ್ಕೆ ಬಂದಿದೆ. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದೇನೆ. ತತ್‌ಕ್ಷಣ ನಿಲ್ಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಆದರೆ ಈಗ ಕುದ್ರೋಳಿ ವೆಟ್‌ವೆಲ್‌ಗೆ ಒಳಚರಂಡಿ ನೀರನ್ನು ಟ್ಯಾಂಕರ್‌ನಲ್ಲಿ ತರಿಸಲಾಗುತ್ತಿದೆ. ಬಜಾಲ್‌, ಸುರತ್ಕಲ್‌, ಕಾವೂರು, ಪಚ್ಚನಾಡಿ ಎಸ್‌ಟಿಪಿಗೆ ಒಳಚರಂಡಿ ನೀರನ್ನು ಟ್ಯಾಂಕರ್‌ ಮೂಲಕ ತರಬೇಕೇ ವಿನಾ ಅದನ್ನು ವೆಟ್‌ವೆಲ್‌ಗೆ ಬಿಡುವುದು ಸರಿಯಲ್ಲ ಎಂಬ ಬಗ್ಗೆ ಆಯುಕ್ತರಿಗೆ ಟಿಪ್ಪಣಿ ಬರೆಯಲಾಗಿದೆ.
-ಸುಧೀರ್‌ ಶೆಟ್ಟಿ ಕಣ್ಣೂರು ಮೇಯರ್‌, ಮಂಗಳೂರು

ಪಾಲಿಕೆ ನಿಗಾ ಯಾಕಿಲ್ಲ?
ವೆಟ್‌ವೆಲ್‌ ರಿಪೇರಿ ಸಂದರ್ಭ ಖಾಸಗಿ ಲಾರಿಯಲ್ಲಿ ತಂದ ಹೊರವಲಯದ ಒಳಚರಂಡಿ ನೀರನ್ನು ಪಾಂಡೇಶ್ವರ ವೆಟ್‌ವೆಲ್‌ನ ಪಕ್ಕದ ತೋಡಿಗೆ ಇತ್ತೀಚೆಗೆ ಬಿಡಲಾಗಿತ್ತು. ಸ್ಥಳೀಯರ ವಿರೋಧದ ಹಿನ್ನೆಲೆಯಲ್ಲಿ ಸದ್ಯಕ್ಕೆ ಇದು ನಿಂತಿದೆ. ಆದರೆ, ನಿಗದಿಗಿಂತ ಅಧಿಕ ಪ್ರಮಾಣದಲ್ಲಿ ಇಲ್ಲಿಗೆ ಲಾರಿ ಬರುತ್ತಿದೆ. ಇದರ ಬಗ್ಗೆ ನಿಗಾ ವಹಿಸುವವರು ಯಾರು? ಪ್ರತೀ ವಾಹನದವರು ನಿಗದಿತ ಹಣ ಕಟ್ಟಬೇಕು ಎಂಬ ನಿಯಮವಿದ್ದರೂ ಕೆಲವರು ಇನ್ನೂ ಲಕ್ಷಾಂತರ ರೂ. ಹಣ ಪಾಲಿಕೆಗೆ ಪಾವತಿ ಮಾಡಿಲ್ಲ. ಇದರ ಬಗ್ಗೆ ಪಾಲಿಕೆ ಅಧಿಕಾರಿಗಳು ಯಾಕೆ ನಿಗಾ ವಹಿಸುತ್ತಿಲ್ಲ? ಎಂಬುದು ಪ್ರಶ್ನೆ.
-ದಿವಾಕರ್‌ ಪಾಂಡೇಶ್ವರ ಕಾರ್ಪೋರೆಟರ್‌

ಅಧಿಕಾರಿಗಳ ಮೌನ ಯಾಕೆ?
ಉಳ್ಳಾಲ, ದೇರಳಕಟ್ಟೆ ಇನ್ನಿತರ ಗ್ರಾಮಾಂತರ ಭಾಗದಿಂದ ಟ್ಯಾಂಕರ್‌ನಲ್ಲಿ ಒಳಚರಂಡಿ ನೀರನ್ನು ತಂದು ಪಾಂಡೇಶ್ವರ ಭಾಗದಲ್ಲಿ ಬೃಹತ್‌ ಚರಂಡಿಗೆ ನೇರವಾಗಿ ಬಿಡಲಾಗುತ್ತಿದೆ. ಮೊನ್ನೆ ಸ್ಥಳೀಯರು ವಿರೋಧ ಮಾಡಿದ ಕಾರಣದಿಂದ ಕೊಂಚ ಲಾರಿಗಳ ಆಗಮನ ಕಡಿಮೆ ಆಗಿದೆ. ಆದರೆ ವಾಹನಗಳು ಈಗಲೂ ವೆಟ್‌ವೆಲ್‌ ಕಡೆಗೆ ಬರುತ್ತಿದೆ. ಪಾಲಿಕೆ ಅಧಿಕಾರಿಗಳು ಇದರ ಬಗ್ಗೆ ಗಮನ ಹರಿಸುತ್ತಿಲ್ಲ. ಪಾಲಿಕೆಯ ವೆಟ್‌ವೆಲ್‌ ಪಂಪ್‌ಹೌಸ್‌ನಲ್ಲಿ ಖಾಸಗಿ ಸಂಸ್ಥೆಯವರು ಟ್ಯಾಂಕರ್‌ ಮುಖಾಂತರ ಒಳಚರಂಡಿ ನೀರು ಚರಂಡಿಗೆ ಬಿಡಲು ಅನುಮತಿ ನೀಡಿದ್ದು ಯಾರು?.
-ಅಬ್ದುಲ್‌ ಲತೀಫ್‌ ಕಾರ್ಪೋರೆಟರ್‌

-ದಿನೇಶ್‌ ಇರಾ

Advertisement

Udayavani is now on Telegram. Click here to join our channel and stay updated with the latest news.

Next