Advertisement

ದುರ್ಗಾಂಬಾ ಮಹಿಳಾ ಯಕ್ಷಗಾನ ಮಂಡಳಿಯ ಪಂಚಮ ಸಪ್ತಾಹ

09:08 PM Aug 15, 2019 | mahesh |

ಸುರತ್ಕಲ್ಲಿನ ಶ್ರೀ ದುರ್ಗಾಂಬಾ ಮಹಿಳಾ ಯಕ್ಷಗಾನ ತಾಳಮದ್ದಲೆ ಸಪ್ತಾಹ ಪ್ರಸಿದ್ಧ ಮಹಿಳಾ ಯಕ್ಷಗಾನ ಮಂಡಳಿಗಳ ಆಯ್ದ ಮಹಿಳಾ ಕಲಾವಿದರ ಸಹಯೋಗದೊಂದಿಗೆ ಯಶಸ್ವಿಯಾಗಿ ನಡೆಯಿತು.

Advertisement

ಮೊದಲನೆ ದಿನ ಕಾರ್ಕಳದ ಶ್ರೀ ಅನಂತಶಯನ ಬಂಟ ಮಹಿಳಾ ಯಕ್ಷಕಲಾ ಮಂಡಳಿಯ ಸದಸ್ಯರು ಅಧ್ಯಕ್ಷೆ ಜ್ಯೋತಿ ಸುನಿಲ್‌ ಕುಮಾರ್‌ ಶೆಟ್ಟಿ ಇವರ ನೇತೃತ್ವದಲ್ಲಿ ತುಳುನಾಡ ಬಲಿಯೇಂದ್ರೆ ತುಳು ತಾಳಮದ್ದಲೆಯನ್ನು ಪ್ರದರ್ಶಿಸಿದರು. ಪ್ರಸಂಗಕರ್ತ ಹರೀಶ್‌ ಶೆಟ್ಟಿ ಸೂಡ ಸುಶ್ರಾವ್ಯ ಭಾಗವತಿಕೆಯಿಂದ ರಂಜಿಸಿದರು. ಕಥಾನಾಯಕ ಬಲಿ ಚಕ್ರವರ್ತಿಯಾಗಿ ಜ್ಯೋತಿ ಶೆಟ್ಟಿ ಗಾಂಭೀರ್ಯಯುತವಾಗಿ ನಿರರ್ಗಳವಾದ ಪ್ರಸ್ತುತಿಯೊಂದಿಗೆ ನಿರ್ವಹಿಸಿದರೆ ಇತರ ಸದಸ್ಯರು ಜಯಶ್ರೀ ಕೆ.ಎ. ಶೆಟ್ಟಿ, ವನಿತಾ ಅಮರೇಶ್‌ ಹೆಗಡೆ, ಶಾಲಿನಿ ಡಿ. ಆಳ್ವ ಹಾಗೂ ವೃಂದಾ ಹರಿಪ್ರಕಾಶ ಶೆಟ್ಟಿ ಇವರೆಲ್ಲರೂ ಪುರಾಣ ಪ್ರಸಂಗ ವಿಷಯಕ್ಕೆ ತಕ್ಕುದಾದ ಪ್ರೌಢ ತುಳು ಭಾಷಾ ಶೈಲಿಯೊಂದಿಗೆ ಒಂದು ಅತ್ಯುತ್ತಮ ತುಳು ಪ್ರಸಂಗದ ಪ್ರಸ್ತುತಿಯನ್ನು ನೀಡಿದರು. ಪೆರ್ಲ ಗಣಪತಿ ಭಟ್‌ ಹಾಗೂ ಶಿವಪ್ರಸಾದ ಪುನರೂರು ಹಿಮ್ಮೇಳದಲ್ಲಿ ಸಹಕರಿಸಿದ್ದರು.

ಎರಡನೇ ದಿನದಿಂದ ಬಲಿಪ ಪ್ರಸಾದ ಭಟ್‌, ಪ್ರಥಮಾರ್ಧದ ಭಾಗವತಿಕೆಯನ್ನು ಮಾಡಿದರು. ಎರಡನೇ ದಿನ ದುರ್ಗಾಂಬಾ ಮಂಡಳಿಯ ಎರಡನೇ ತಂಡ ಅಶೋಕನಗರದ ಶ್ರೀ ಭಾಮರೀ ಕಲಾವೃಂದದ ಸದಸ್ಯರುಗಳು, ನಳಿನಿ ಮೋಹನ್‌ ನೇತೃತ್ವದಲ್ಲಿ ಪಾಂಚಜನ್ಯೋತ್ಪತ್ತಿ ಪ್ರಸಂಗವನ್ನು ಪ್ರದರ್ಶಿಸಿದರು. ಎರಡನೇ ಪ್ರಯೋಗವಾಗಿದ್ದರೂ ಪ್ರತಿಯೊಬ್ಬರು ಅನುಭವಿಗಳಂತೆ ಯಕ್ಷಗಾನದ ನಡೆಯನ್ನು ಚೆನ್ನಾಗಿ ಅರಿತು ನಿರ್ವಹಿಸಿದರು. ಶ್ರೀ ಕೃಷ್ಣನಾಗಿ ಮಂಜುಳಾ ಪ್ರಭಾಕರ್‌, ಬಲರಾಮನಾಗಿ ಉಮಾ ದಿವಾಕರ್‌, ಸಾಂದೀಪನಿಯಾಗಿ ಆಕೃತಿ ಭಟ್‌ ಸದ್ಮೊದಿನಿಯಾಗಿ ಸುಮತಿ ಕೆ. ಎನ್‌., ವರುಣನಾಗಿ ವೀಣಾ ಕೃಷ್ಣಮೂರ್ತಿ, ಯಮನಾಗಿ ಜ್ಯೇಷ್ಠ ಲಕ್ಷ್ಮೀ ಬೋಳೂರು ಹಾಗೂ ಖಳನಾಯಕನಾಗಿ ನಳಿನಿ ಮೋಹನ್‌ ಸೈ ಅನಿಸಿಕೊಂಡರು. ಭಾಗವತರಾಗಿ ಶಾಲಿನಿ ಹೆಬ್ಟಾರ್‌, ಹಿಮ್ಮೇಳದಲ್ಲಿ ಪುನರೂರು ಹಾಗೂ ಮಾ| ವರುಣ್‌ ಹೆಬ್ಟಾರ್‌ ಸಹಕರಿಸಿದರು.

ಮೂರನೇ ದಿನ ಶ್ರೀ ರಾಮ ದರ್ಶನ ಪ್ರಸಂಗ. ಭಾಗವತಿಕೆಯಲ್ಲಿ ಸತೀಶ ಭಟ್‌ ಹಿಮ್ಮೇಳದಲ್ಲಿ ಪುನರೂರು ಹಾಗೂ ರಾಮ ಹೊಳ್ಳ ವಿಶೇಷ ಸಹಕರಿಸಿದರು. ದುರ್ಗಾಂಬಾ ಮಂಡಳಿಯ ಅಧ್ಯಕ್ಷೆ ಸುಲೋಚನಾ ವಿರಾವ್‌ ಬಲರಾಮನಾಗಿ ಸ್ವರ ಗಾಂಭೀರ್ಯ, ಭಾವಪೂರ್ಣ ಸಂಭಾಷಣೆಯೊಂದಿಗೆ, ಹಿತಮಿತವಾದ ಪಾತ್ರೋಚಿತ ಅಭಿನಯವೂ ಸೇರಿದಂತೆ ರಸವತ್ತಾಗಿ ನಿರ್ವಹಿಸಿದರೆ, ಜಾಂಬವನಾಗಿ ಆರೋ ಎನ್ನಯ ಗುಹೆಯ ಪ್ರವೇಶಿಸಿದವ ಎಂದು ಸಿಡಿಲ ಧ್ವನಿಯಲ್ಲಿ ಅಬ್ಬರಿಸುತ್ತಾ ಜಯಂತಿ ಹೊಳ್ಳ ಕಾಣಿಸಿಕೊಂಡರು. ಶ್ರೀಕೃಷ್ಣನಾಗಿ ಲಲಿತ ಭಟ್‌, ನಾರದನಾಗಿ ಮಲ್ಲಿಕಾ ಅಜಿತ್‌, ಜಾಂಬವತಿಯಾಗಿ ಮಂಗಳಾ ಕಾಣಿಸಿಕೊಂಡರು.

ನಾಲ್ಕನೇ ದಿನ ಶ್ರೀ ರಾಮನಿರ್ಯಾಣದಲ್ಲಿ ಭವ್ಯಶ್ರೀ ಹರೀಶ್‌ ಭಾವಗರ್ಭಿತ ಹಾಡುಗಾರಿಕೆಯಿಂದ ಮನಸೆಳೆದರು. ಗಣೇಶ್‌ ಭಟ್‌ ಬೆಳಾಲು ಹಾಗೂ ಪುನರೂರು ಚಂಡೆ ಮದ್ದಳೆಯಲ್ಲಿ ಮಿಂಚಿದರು. ಪುತ್ತೂರಿನ ಶ್ರೀ ಆಂಜನೇಯ ಮಹಿಳಾ ಯಕ್ಷ ಕಲಾಮಂಡಳಿ ಸದಸ್ಯರಾದ ಶುಭಾ ಜೆ.ಸಿ. ಅಡಿಗ ಶ್ರೀರಾಮನಾಗಿ, ಕಿಶೋರಿ ದುಗ್ಗಪ್ಪ ಲಕ್ಷ್ಮಣನಾಗಿ ತಮ್ಮ ಮನೋಜ್ಞವಾದ ಅಭಿನಯದಿಂದ ಮಂತ್ರಮುಗ್ಧರನ್ನಾಗಿಸಿದರು. ಕಾಲ ಪುರಷನಾಗಿ ಶುಭಾ ಗಣೇಶ ಹಿತಮಿತವಾಗಿ ಪಾತ್ರೋಚಿತವಾಗಿ ಮಾತನಾಡಿ ಕಾಮನ ಸೆಳೆದರು. ಲಲಿತಾ ಭಟ್‌ ದೂರ್ವಾಸನಾಗಿ, ಜಯಂತಿ ಹೊಳ್ಳ, ಊರ್ಮಿಳೆಯಾಗಿ, ಶರಣ ಹನುಮಂತನಾಗಿ ಕು| ವೃಂದಾ ಕೊನ್ನಾರ್‌ ಪಾತ್ರೋಚಿತ ಮಾತುಗಳಿಂದ ಗಮನ ಸೆಳೆದರು.

Advertisement

ಐದನೇ ದಿನದ ಸುದರ್ಶನ ವಿಜಯ ಪ್ರಸಂಗವು ಕಲಾವಿದರ ಶ್ರೇಷ್ಠ ಮಟ್ಟದ ನಿರ್ವಹಣೆಯೊಂದಿಗೆ ಪರಿಣಾಮಕಾರಿಯಾಗಿ ಮೂಡಿಬಂತು.
ಕು| ಕಾವ್ಯಾಶ್ರೀ ಮಾಧುರ್ಯಭರಿತ ಕಂಠದಿಂದ ಸುಶ್ರಾವ್ಯವಾಗಿ ಹಾಡಿದರೆ, ಹಿಮ್ಮೇಳದಲ್ಲಿ ಅಜೇರು ಶ್ರೀಪತಿ ನಾಯಕ್‌ ಹಾಗೂ ಗಣೇಶ್‌ ಭಟ್‌ ಸಹಕಾರ ಇತ್ತರು. ವಿಷ್ಣುವಾಗಿ ಸುಲೋಚನಾ ವಿ.ರಾವ್‌, ಲಕ್ಷ್ಮೀಯಾಗಿ ದೀಪ್ತಿ ಬಾಲಕೃಷ್ಣ ಭಟ್‌, ಸುದರ್ಶನನಾಗಿ ಕು| ವೃಂದಾ, ಶತ್ರು ಪ್ರಸೂದನನಾಗಿ ಮಂಗಳೂರಿನ ಪೂರ್ಣಿಮಾ ಶಾಸ್ತ್ರಿ, ರೇವತಿ ನವೀನ್‌ ಹಾಸ್ಯದ ಪಾತ್ರದಲ್ಲಿ, ದೇವೇಂದ್ರನಾಗಿ ಕಲಾವತಿ ಉತ್ತಮ ಪಾತ್ರ ಪೋಷಣೆಗೈದರು.

ಆರನೇ ದಿನ ಹಿಮ್ಮೇಳಕ್ಕೆ ಅರ್ಜುನ್‌ ಕೊರ್ಡೆಲ್‌ ಭಾಗವತರಾಗಿ, ಅವಿನಾಶ್‌ ಬೈಪಾಡಿತ್ತಾಯ ಮದ್ದಳೆಯಲ್ಲಿ ವೇಣುಗೋಪಾಲ ಮಾಂಬಾಡಿ ಚೆಂಡೆಯಲ್ಲಿ ಜೊತೆಗೆ ಹರಿ ನಾರಾಯಣ ಬೈಪಾಡಿತ್ತಾಯ ಉತ್ತಮ ಮಟ್ಟದ ಹಿಮ್ಮೇಳ ಒದಗಿಸಿದರು. ಮುಮ್ಮೇಳದಲ್ಲಿ ಶ್ರೀ ಕೃಷ್ಣ ರಾಯಭಾರ ಪ್ರಸಂಗದಲ್ಲಿ ಪುತ್ತೂರಿನ ಧೀಶಕ್ತಿ ಬಳಗದ ಪದ್ಮಾ ಆಚಾರ್‌ ಶ್ರೀ ಕೃಷ್ಣನಾಗಿ, ಜಯಲಕ್ಷ್ಮೀ ಭಟ್‌ ಕೌರವನಾಗಿ, ವೀಣಾ ನಾಗೇಶ ತಂತ್ರಿ ವಿಧುರನಾಗಿ, ಧರ್ಮರಾಯನಾಗಿ ಕೆ. ಕಲಾವತಿ, ದ್ರೌಪದಿಯಾಗಿ ಮಂಗಳಾ ಸಹಕಾರವಿತ್ತರು.

ಏಳನೇ ದಿನ ಬೆಂಗಳೂರಿನ ತಂಡ ಉತ್ತಮ ಹಿಮ್ಮೇಳವನ್ನೊಗಿಸಿತು. ಅಗ್ರಪೂಜೆ ಪ್ರಸಂಗದಲ್ಲಿ ಶ್ರೀ ಕೃಷ್ಣನಾಗಿ ಸುಲೋಚನಾ ರಾವ್‌, ಜಯಂತಿ ಹೊಳ್ಳ ಶಿಶುಪಾಲನಾಗಿ, ದೀಪ್ತಿ ಭಟ್‌ ದಂತವಕ್ರನಾಗಿ , ಭೀಷ್ಮನಾಗಿ ಆಕೃತಿ ಭಟ್‌, ಧರ್ಮರಾಯನಾಗಿ ಕಲಾವತಿ, ಭೀಮನಾಗಿ ನಳಿನಿಮೋಹನ್‌, ಪಾತ್ರೋಚಿತವಾಗಿ ಮಾತನಾಡಿದರು.

ಯಕ್ಷಪ್ರಿಯ

Advertisement

Udayavani is now on Telegram. Click here to join our channel and stay updated with the latest news.

Next