Advertisement

ಪಾಂಬೂರು: ಮನೆಗೆ ಸಿಡಿಲು ಬಡಿದು ಬೆಂಕಿ; ಅಪಾರ ಹಾನಿ

12:09 PM May 30, 2018 | Team Udayavani |

ಶಿರ್ವ: ಮೂಡುಬೆಳ್ಳೆ ಗ್ರಾ.ಪಂ. ವ್ಯಾಪ್ತಿಯ ಪಾಂಬೂರು ಕೆಥೋಲಿಕ್‌ ಹಿ.ಪ್ರಾ. ಶಾಲೆಯ ಬಳಿಯ ನಿವಾಸಿ ಜಾರ್ಜ್‌ ಸಲ್ದಾನ ಅವರ ಮನೆಗೆ ಮಂಗಳವಾರ ಮಧ್ಯಾಹ್ನ ಸಿಡಿಲು ಬಡಿದು ಬೆಂಕಿ ತಗಲಿ ಅಪಾರ ಹಾನಿಯಾಗಿ ಸುಮಾರು 10 ಲ. ರೂ. ನಷ್ಟ ಸಂಭವಿಸಿದೆ.

Advertisement

ಸಿಡಿಲಿನ ರಭಸಕ್ಕೆ ಆರ್‌ಸಿಸಿ ಮನೆಗೆ ಬೆಂಕಿ ತಗಲಿದ್ದು, ಮನೆಯಲ್ಲಿದ್ದ ಎಲ್ಲ ವಸ್ತುಗಳು ಸುಟ್ಟು ಕರಕಲಾಗಿವೆ. ಮೇಲ್ಛಾವಣಿ ಒಡೆದು ಮಳೆಗೆ ಸೋರಲಾರಂಭಿಸಿದೆ. ಮನೆಯ ಹಾಲ್‌ನಲ್ಲಿದ್ದ ಪೀಠೊಪಕರಣಗಳು, ಟಿವಿ, 2 ಲ್ಯಾಪ್‌ಟಾಪ್‌, ಇನ್‌ವರ್ಟರ್‌, ವಿದ್ಯುತ್‌ ವಯರಿಂಗ್‌ ಸಂಪೂರ್ಣಸುಟ್ಟು ಹೋಗಿವೆ. ವಿದ್ಯುತ್‌ ಉಪಕರಣಗಳು ಸುಟ್ಟು ಕರಕಲಾಗಿದ್ದು ಮನೆಯಲ್ಲಿದ್ದ ಬಟ್ಟೆಬರೆಗಳು, ದಾಖಲೆಪತ್ರಗಳು ನಾಶವಾಗಿವೆ. ಕಿಟಿಕಿಯ ಬಾಗಿಲಿನ ಗ್ಲಾಸುಗಳು ಪುಡಿಯಾಗಿದ್ದು ಮನೆಯ ಗೋಡೆ ಕಪ್ಪು ಬಣ್ಣಕ್ಕೆ ತಿರುಗಿದೆ.

ತಪ್ಪಿದ ದುರಂತ
ಮನೆಯಲ್ಲಿ ಪತಿ, ಪತ್ನಿ, ಮಗ ವಾಸವಿದ್ದು, ಘಟನೆಯ ವೇಳೆ ಕಾರ್ಯನಿಮಿತ್ತ ಶಂಕರಪುರಕ್ಕೆ ತೆರಳಿದ್ದರು. ಮಧ್ಯಾಹ್ನದ ವೇಳೆ ಮನೆಗೆ ವಾಪಾಸು ಬರುವಷ್ಟರಲ್ಲಿ ಮನೆಗೆ ಸಿಡಿಲು ಬಡಿದು ಬೆಂಕಿ ಆವರಿಸಿತ್ತು. ತತ್‌ಕ್ಷಣ ನೆರೆಕರೆಯವರೊಂದಿಗೆ ಸೇರಿ ಬೆಂಕಿ ನಂದಿಸಿದ್ದರು. ಘಟನೆ ನಡೆದ ಸಮಯದಲ್ಲಿ ಮನೆಯಲ್ಲಿ ಯಾರೂ ಇರದ ಕಾರಣ ಭಾರೀ ದುರಂತವೊಂದು ತಪ್ಪಿದೆ.

ಕಾಪು ತಹಶೀಲ್ದಾರ್‌ ಜಾನ್‌ ಪ್ರಕಾಶ್‌ ರೊಡ್ರಿಗಸ್‌, ಕಾಪು ಕಂದಾಯ ನಿರೀಕ್ಷಕ ರವಿಶಂಕರ್‌,ಬೆಳ್ಳೆ ಗ್ರಾ.ಪಂ. ಪಿಡಿಒ ದಯಾನಂದ ಬೆಣ್ಣೂರ್‌, ಬೆಳ್ಳೆ ಗ್ರಾಮ ಕರಣಿಕ ಪ್ರದೀಪ್‌ ಮನೆಗೆ ತೆರಳಿ ಪರಿಶೀಲನೆ ನಡೆಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next