Advertisement

ಪಳ್ಳತ್ತೂರು ಸೇತುವೆ ಇನ್ನು ‘ಮುಳುಗು’ವುದಿಲ್ಲ!

03:12 PM May 21, 2018 | Team Udayavani |

ಈಶ್ವರಮಂಗಲ : ಕೇರಳ – ಕರ್ನಾಟಕ ಗಡಿಭಾಗದಲ್ಲಿರುವ ಪಳ್ಳತ್ತೂರು ಮುಳುಗು ಸೇತುವೆ ಈ ಬಾರಿ ಮುಳುಗುವುದಿಲ್ಲ. ಏಕೆಂದರೆ, ಸೇತುವೆ ಕಾಮಗಾರಿ ವೇಗ ಪಡೆದುಕೊಂಡಿದ್ದು 2019ರ ಮೇ ತಿಂಗಳ ಅಂತ್ಯದಲ್ಲಿ ಪೂರ್ಣಗೊಳ್ಳಲಿದೆ.

Advertisement

ಈ ಅವಧಿಯಲ್ಲಿ ಸಂಚಾರವನ್ನು ನಿಬಂಧಿಸಿದ್ದು, ಪರ್ಯಾಯ ರಸ್ತೆಯಾಗಿ ಪಳ್ಳತ್ತೂರು, ಪಂಚೋಡಿಯ ಮೂಲಕ ಕೇರಳ ರಾಜ್ಯವನ್ನು ಸಂಪರ್ಕಿಸಬಹುದಾಗಿದೆ. ಸೇತುವೆ ನಿರ್ಮಾಣ ಮತ್ತು ಪಳ್ಳತ್ತೂರುನಿಂದ ಕೊಟ್ಯಾಡಿ ವರೆಗಿನ ಸಂಪರ್ಕ ರಸ್ತೆಯ ನಿರ್ಮಾಣಕ್ಕಾಗಿ ಕಾಸರಗೋಡು ಲೋಕೋಪಯೋಗಿ ಇಲಾಖೆ 7.5 ಕೋಟಿ ರೂ. ಬಿಡುಗಡೆಗೊಳಿಸಿದ ಹಿನ್ನೆಲೆಯಲ್ಲಿ ಹರಾಜು ಪ್ರಕ್ರಿಯೆ ಬಳಿಕ ತ್ವರಿತ ಕಾಮಗಾರಿ ನಡೆಯುತ್ತಿದೆ.

ಬಹುಕಾಲದ ಬೇಡಿಕೆಯ ಸರ್ವಋತು ಸೇತುವೆಯ ಕಾಮಗಾರಿ ಎರಡು ರಾಜ್ಯಗಳ ಜನರಿಗೆ ಸಂತಸ ತಂದಿದೆ. ಸೇತುವೆ ಕೇರಳದ ರಾಜ್ಯದ ಕಾಸರಗೋಡು ಜಿಲ್ಲೆಯ ದೇಲಂಪಾಡಿ ಗ್ರಾಮಕ್ಕೆ ಸೇರಿದರೂ ರಾಜ್ಯದ ಜನರಿಗೆ ಹೆಚ್ಚು ಪ್ರಯೋಜನ. ಹಲವು ವರ್ಷಗಳಿಂದ ಸೇತುವೆ ನಿರ್ಮಾಣ ಮರೀಚಿಕೆಯಾಗಿತ್ತು. ಈಗ ಅಡಚಣೆಗಳೆಲ್ಲ ದೂರವಾಗಿ, ಕಾಮಗಾರಿ ತ್ವರಿತ ಗತಿಯಲ್ಲಿ ನಡೆಯುತ್ತಿದೆ.

ಈಶ್ವರಮಂಗಲದಿಂದ 6 ಕಿ.ಮೀ. ದೂರದಲ್ಲಿ ಪಳ್ಳತ್ತೂರು ಮುಳುಗು ಸೇತುವೆ ಇದೆ. ದೇಲಂಪಾಡಿ ಗ್ರಾ.ಪಂ. ವತಿಯಿಂದ ಇದನ್ನು 1997ರಲ್ಲಿ ನಿರ್ಮಿಸಲಾಗಿತ್ತು. ಸೇತುವೆಯ ಇಕ್ಕೆಲಗಳಲ್ಲಿ ಯಾವುದೇ ಆಧಾರಗಳು, ರಕ್ಷಣೆ ಇಲ್ಲದಿದ್ದರೂ ಸಾರ್ವಜನಿಕರು, ವಾಹನಗಳ ಸಂಚಾರ ಆಘುತ್ತಿತ್ತು. ಜೋರು ಮಳೆ ಬಂದರೆ ಮಳೆಗಾಲದ ಅವಧಿಯಲ್ಲಿ 4-5 ಸಲ ಸೇತುವೆ ಮೇಲೆ ಮಳೆ ನೀರು ಹರಿದು, ಸಂಚಾರ ಅಸ್ತವ್ಯಸ್ತಗೊಳ್ಳುತ್ತಿತ್ತು. ಆಗೆಲ್ಲ ಸಾರ್ವಜನಿಕರಿಗೆ, ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿತ್ತು. ಇಂತಹ ಸಂದರ್ಭ ದಾಟಲು ಪ್ರಯತ್ನಿಸಿದ ಕುಂಬಳೆ ಎಎಸ್‌ಐ ನಾರಾಯಣ ನಾಯ್ಕ ಬೈಕ್‌ ಸಮೇತ ನೀರು ಪಾಲಾದ ಘಟನೆ ಇನ್ನೂ ಜನಮಾನಸದಲ್ಲಿ ಉಳಿದಿದೆ. ಆ ಬಳಿಕ ಜನರ ಒತ್ತಾಯ, ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಸತತ ಪ್ರಯತ್ನದಿಂದ ಸೇತುವೆ ಸಾಕಾರಗೊಳ್ಳುತ್ತಿದೆ.

ತ್ವರಿತಗತಿಯಲ್ಲಿ ಕಾಮಗಾರಿ
ಪಳ್ಳತ್ತೂರು ಹಳ್ಳದಲ್ಲಿ ಬೇಸಗೆಯಲ್ಲಿ ನೀರು ಇರುವುದಿಲ್ಲ. ಮಳೆಗಾಲದಲ್ಲಿ ನೀರು ಸಾಕಷ್ಟು ಪ್ರಮಾಣದಲ್ಲಿ ಹರಿಯುವುದರಿಂದ ಅದಕ್ಕೂ ಮುಂಚೆ ಪಿಲ್ಲರ್‌ ಹಾಕಿದರೆ ಕೆಲಸ ಸುಲಭವಾಗುತ್ತದೆ.

Advertisement

ಈ ನಿಟ್ಟಿನಲ್ಲಿ ಹಳ್ಳದಲ್ಲಿ ಸೇತುವೆಯ ಒಂದು ಬದಿಯಲ್ಲಿ ಪಿಲ್ಲರ್‌ ಅಳವಡಿಸುವ ಕಾರ್ಯ ಪೂರ್ತಿ ಗೊಂಡಿದೆ. ಇನ್ನು ಕಾಮಗಾರಿ ಮುಂದುವರೆಸಲು ಮಳೆಗಾಲದಲ್ಲೂ ಸಮಸ್ಯೆ ಇಲ್ಲ. ಹಳ್ಳದ ಮೇಲಿನ ಭಾಗದಲ್ಲಿ ಪಿಲ್ಲರ್‌ ಹಾಕುವ ಕಾರ್ಯ ನಡೆಯುತ್ತಿದೆ. ಕಾಮಗಾರಿಗಳನ್ನು ಹಳ್ಳದ ಎರಡೂ ಕಡೆಗಳಲ್ಲಿ ರಾಶಿ ಹಾಕಿದ್ದಾರೆ.

ಎರಡು ರಾಜ್ಯಗಳಿಗೆ ಸಂಪರ್ಕ ರಸ್ತೆ 
ಇದು ಕೊಟ್ಯಾಡಿ, ಅಡೂರು, ಮುಳ್ಳೇರಿಯಾ, ಕಾಸರಗೋಡು ಮುಂತಾದ ಕಡೆಗಳಿಗೆ ಹತ್ತಿರದ ರಸ್ತೆಯಾಗಿದೆ. ಕೇರಳ ರಾಜ್ಯದ ಜನರಿಗೆ ಈಶ್ವರಮಂಗಲ, ಪುತ್ತೂರು, ಮಂಗಳೂರು ಕಡೆಗಳಿಗೆ ಸಂಪರ್ಕ ಇದೆ. ಸರಕಾರಿ, ಖಾಸಗಿ, ಇತರ ವಾಹನಗಳು ನಿತ್ಯವೂ ಓಡಾಟ ನಡೆಸುತ್ತಿವೆ. ಕರ್ನಾಟಕ ಪ್ರದೇಶದ ರಸ್ತೆ ಪುತ್ತೂರಿನ ಆಗಿನ ಶಾಸಕಿ ಶಕುಂತಳಾ ಶೆಟ್ಟಿ ಅವರ ಮುತುರ್ವಜಿಯಿಂದ ಡಾಮರು ಕಂಡಿದೆ. ನೆಟ್ಟಣಿಗೆಮುಟ್ನೂರು ಗ್ರಾ.ಪಂ. ವತಿಯಿಂದ ಸ್ವಲ್ಪ ಭಾಗ ಕಾಂಕ್ರೀಟ್‌ ಆಗಿದೆ. ಆದರೆ ಕೇರಳಕ್ಕೆ ಸೇರಿದ ರಸ್ತೆಯ ಭಾಗ ನಾದುರಸ್ತಿಯಲ್ಲಿದೆ.

ಸಂಚಾರ ಬದಲಾವಣೆ 
ಸೇತುವೆ ಕಾಮಗಾರಿ ತ್ವರಿತಗತಿಯಲ್ಲಿ ನಡೆಯುತ್ತಿರುವುದರಿಂದ ಈಶ್ವರ ಮಂಗಲ-ಪಂಚೋಡಿ-ಕರ್ನೂರು – ಗಾಳಿಮುಖವಾಗಿ ಕೊಟ್ಯಾಡಿ, ಆಡೂರಿಗೆ ಸಂಚರಿಸಬಹುದಾಗಿದೆ. ಕಾಲ್ನಡಿಗೆಯಲ್ಲಿ ಹೋಗುವವರು ಸೇತುವೆ ಸಮೀಪದ ತೋಟವನ್ನು ಬಳಸುತ್ತಿದ್ದಾರೆ. ಒಂದು ವರ್ಷ ಸಂಚಾರಕ್ಕೆ ಸಮಸ್ಯೆ ಎದುರಾದರೂ ಮುಂದೆ ಇಲ್ಲಿ ಸರ್ವಋತು ಸೇತುವೆ ಆಗುತ್ತಿರುವುದು ಸ್ಥಳೀಯರಿಗೆ ಸಂತಸ ಮೂಡಿಸಿದೆ. 

ಮಾಧವ ನಾಯಕ್‌.ಕೆ

Advertisement

Udayavani is now on Telegram. Click here to join our channel and stay updated with the latest news.

Next