Advertisement

ಸದನದ ಗೌರವಕ್ಕೆ ಧಕ್ಕೆ ಪಳನಿ ವಿಶ್ವಾಸಕ್ಕೆ ಜಯ

07:33 AM Feb 19, 2017 | |

ಚೆನ್ನೈ: ಗದ್ದಲ, ಗಲಾಟೆ, ಘೋಷಣೆ, ದುರ್ವರ್ತನೆ, ಅಸಹಾಯಕತೆ, ಪ್ರತಿಭಟನೆ, ಗೆಲುವು, ಅಧಿಕಾರ… 29 ವರ್ಷಗಳ ಬಳಿಕ ಮರುಕಳಿಸಿದ ಇಂಥ ದ್ದೊಂದು ಪ್ರಕ್ಷುಬ್ಧ ವಾತಾವರಣದ ನಡುವೆಯೇ ತಮಿಳುನಾಡು ವಿಧಾನಸಭೆಯಲ್ಲಿ ವಿಶ್ವಾಸಮತ ಸಾಬೀತುಪಡಿಸುವಲ್ಲಿ ಮುಖ್ಯಮಂತ್ರಿ ಎಡಪ್ಪಾಡಿ ಪಳನಿಸ್ವಾಮಿ ಶನಿವಾರ ಯಶಸ್ವಿಯಾದರು. ಇದರ ಜತೆಗೆ, ಜನಪ್ರತಿನಿಧಿಗಳು ಸದನದೊಳಗೆ ನಡೆದುಕೊಂಡ ರೀತಿಯು ಇಡೀ ದೇಶವನ್ನು ದಿಗ್ಭ್ರಮೆ ಹಾಗೂ ಆಘಾತಕ್ಕೆ ನೂಕಿತು.

Advertisement

ಬಹುಮತದ ಸಮರದಲ್ಲಿ ಪಳನಿಸ್ವಾಮಿ ಜಯಭೇರಿ ಬಾರಿಸುತ್ತಿದ್ದಂತೆಯೇ ತಮಿಳುನಾಡಿನ ರಾಜಕೀಯ ಬಿಕ್ಕಟ್ಟು ಶಮನವಾಯಿತು ಎಂದು ಜನರು ಭಾವಿಸಿದ್ದರಾದರೂ ಅದು ನಿಜವಾಗಲಿಲ್ಲ. ವಿಧಾನಸಭೆಯಲ್ಲಾದ ಘಟನೆಗಳ ಕುರಿತು ಒಂದೆಡೆ ಡಿಎಂಕೆ ನಾಯಕರು ರಾಜ್ಯಪಾಲರಿಗೆ ದೂರು ನೀಡಿದರೆ, ಮತ್ತೂಂದೆಡೆ, ತಮ್ಮ ಬಟ್ಟೆ ಹರಿಯಲಾಗಿದೆ ಎಂದು ಆರೋಪಿಸಿ ಡಿಎಂಕೆ ನಾಯಕ ಸ್ಟಾಲಿನ್‌ ಮರೀನಾ ಬೀಚ್‌ನಲ್ಲಿ ನಿರಶನ ಕುಳಿತರು. ಅಲ್ಲಿಗೆ ತೆರಳಿದ ಪೊಲೀಸರು, ಸ್ಟಾಲಿನ್‌ರನ್ನು ವಶಕ್ಕೆ ಪಡೆದುಕೊಂಡರು.

ಜಯ ಗಳಿಸಿದ ಖುಷಿಯಲ್ಲಿದ್ದ ಪಳನಿಸ್ವಾಮಿ ನೇರವಾಗಿ ಜಯಾ ಸಮಾಧಿಗೆ ತೆರಳಿ, ನಮನ ಸಲ್ಲಿಸಿ ಕಣ್ಣೀರಿಟ್ಟರು. ಜತೆಗೆ, “ಪಕ್ಷದ ಪ್ರಧಾನ ಕಾರ್ಯದರ್ಶಿ ಶಶಿಕಲಾ ಮಾಡಿದ್ದ ಮೂರು ಶಪಥಗಳಲ್ಲಿ ಮೊದಲನೆಯದ್ದು ಈಡೇರಿತು’ ಎಂದು ಘೋಷಿಸಿದರು. ಪ್ರಧಾನಿ ಮೋದಿ ಅವರೂ ಪಳನಿಸ್ವಾಮಿಗೆ ಕರೆ ಮಾಡಿ ಅಭಿನಂದನೆ ಸಲ್ಲಿಸಿದರು. ಮತ್ತೂಂದೆಡೆ, ಪನ್ನೀರ್‌ ಸೆಲ್ವಂ ಬಣ, “ಕಾಳಗ ಮುಗಿದಿರಬಹುದು. ಆದರೆ, ಯುದ್ಧ ಈಗ ಆರಂಭವಾಗಿದೆ,’ ಎನ್ನುವ ಮೂಲಕ ಭವಿಷ್ಯದ ಮೇಲಾಟಗಳಿಗೆ ಮುನ್ನುಡಿ ಬರೆಯಿತು.

ಇಬ್ಬರಿಗೂ ನಿರ್ಣಾಯಕವಾಗಿದ್ದ ಶನಿವಾರ: ಪ್ರಮಾಣ ಸ್ವೀಕಾರದ ಬಳಿಕ 15 ದಿನಗಳೊಳಗೆ ಬಹುಮತ ಸಾಬೀತುಪಡಿಸುವಂತೆ ರಾಜ್ಯಪಾಲ ವಿದ್ಯಾಸಾಗರ್‌ ರಾವ್‌ ಸೂಚಿಸಿದ್ದ ಹಿನ್ನೆಲೆಯಲ್ಲಿ ಶನಿವಾರ ವಿಶೇಷ ಅಧಿವೇಶನ ಕರೆಯಲಾಗಿತ್ತು. ಮಾಜಿ ಸಿಎಂ ಪನ್ನೀರ್‌ ಸೆಲ್ವಂ ಮತ್ತು ಹಾಲಿ ಸಿಎಂ ಪಳನಿಸ್ವಾಮಿಗೆ ಇದು ಅತ್ಯಂತ ನಿರ್ಣಾಯಕ ದಿನವಾಗಿತ್ತು.

ಶುಕ್ರವಾರ ರಾತ್ರಿಯವರೆಗೂ ಪಳನಿ ಬೆಂಬಲಕ್ಕೆ 123  ಶಾಸಕರು ನಿಂತಿದ್ದರು. ಶನಿವಾರ ಸೂರ್ಯ ಉದಯಿಸುತ್ತಿದ್ದಂತೆಯೇ ಅರುಣ್‌ ಕುಮಾರ್‌ ಎಂಬ ಶಾಸಕ ನಿಷ್ಠೆ ಬದಲಿಸಿ, ತಾನು ಮತದಾನದಿಂದ ದೂರವಿರುವುದಾಗಿ ಘೋಷಿಸಿದರು. ಹೀಗಾಗಿ, ಪಳನಿ ಬಲ 122ಕ್ಕೆ ಕುಸಿಯಿತು. ವಿಶ್ವಾಸಮತದ ವೇಳೆ ಯಾರು ಬೇಕಿದ್ದರೂ ಮನಸ್ಸು ಬದಲಿಸುವ ಸಾಧ್ಯತೆಯಿದ್ದದ್ದರಿಂದ ಪಳನಿ ಹಾಗೂ ಪನ್ನೀರ್‌ ಇಬ್ಬರೂ ಉಸಿರು ಬಿಗಿ ಹಿಡಿದುಕೊಂಡಿದ್ದರು.

Advertisement

122ರ ವೀರ ಪಳನಿ: 3 ಗಂಟೆಗೆ ಕಲಾಪ ಸೇರುವ ಮೊದಲೇ ಡಿಎಂಕೆಯ ಎಲ್ಲ ಶಾಸಕರನ್ನೂ ಬಲವಂತವಾಗಿ ಹೊರಗೆ ಕಳುಹಿಸಲಾಯಿತು. ಅನಂತರ ಸಿಎಂಗೆ ವಿಶ್ವಾಸಮತ ಯಾಚನೆಗೆ ಅವಕಾಶ ಕಲ್ಪಿಸಲಾಯಿತು. ಗೊಂದಲ, ಗಲಾಟೆಗಳ ನಡುವೆ ನಡೆದ ಅಗ್ನಿಪರೀಕ್ಷೆಯಲ್ಲಿ ಪಳನಿಸ್ವಾಮಿ ಅವರು ಬರೋಬ್ಬರಿ 122 ಶಾಸಕರ ಬೆಂಬಲದೊಂದಿಗೆ ಗೆದ್ದರು. ಪನ್ನೀರ್‌ ಸೆಲ್ವಂ ಪರವಾಗಿದ್ದ 11 ಶಾಸಕರು ಸರಕಾರದ ವಿರುದ್ಧ ಮತ ಚಲಾಯಿಸಿದರು. ಪಳನಿ ಬಣ ಯುದ್ಧ ಗೆದ್ದ ಸಂತಸದಲ್ಲಿ ಬೀಗುತ್ತಾ ಹೊರಬಂದರೆ, ಪನ್ನೀರ್‌ ಬಣದಲ್ಲಿ ದುಃಖ ಮಡುಗಟ್ಟಿತ್ತು. ಇದೇ ವೇಳೆ, ಅಸೆಂಬ್ಲಿಯೊಳಗಿನ ಘಟನೆ ಬಗ್ಗೆ ಪ್ರಶ್ನಿಸಿದಾಗ ಸ್ಪೀಕರ್‌ ಧನ್‌ಪಾಲ್‌, “ನನ್ನ ಅಂಗಿಯನ್ನು ಎಳೆದು, ಹರಿಯಲಾಯಿತು. ನನ್ನ ಮೇಲಾದ ಹಲ್ಲೆ ಬಗ್ಗೆ ಹೇಳಿಕೊಳ್ಳಲು ನಾನೆಲ್ಲಿಗೆ ಹೋಗಬೇಕು? ಹೋಗಿ, ನನಗಾದ ಅವಮಾನದ ಬಗ್ಗೆ ಜನರಿಗೆ ತಿಳಿಸಿ’ ಎಂದು ಗುಡುಗಿದ್ದೂ ಕಂಡುಬಂತು.

ಸ್ಪೀಕರ್‌ ಬಟ್ಟೆ  ಹರಿದರು
ಕಲಾಪ ಆರಂಭವಾಗುತ್ತಿದ್ದಂತೆಯೇ, ಪನ್ನೀರ್‌ ಸೆಲ್ವಂ ಪರ ಘೋಷಣೆ ಕೂಗಲು ಶುರು ಮಾಡಿದ ಡಿಎಂಕೆ ಮತ್ತು ಕಾಂಗ್ರೆಸ್‌ ಶಾಸಕರು, ಮತದಾನವನ್ನು ಮುಂದೂಡುವಂತೆ ಒತ್ತಾಯಿಸಿದರು. ಇದಕ್ಕೆ ಸ್ಪೀಕರ್‌ ಧನಪಾಲ್‌ ಒಪ್ಪಿಗೆ ನೀಡಲಿಲ್ಲ. ಕೊನೆಗೆ, ರಹಸ್ಯ ಮತದಾನಕ್ಕೆ ಅವಕಾಶ ನೀಡುವಂತೆ ಮಾಡಿದ ಕೋರಿಕೆಯೂ ತಿರಸ್ಕರಿಸಲ್ಪಟ್ಟಿತು. ಅಷ್ಟರಲ್ಲೇ ಆಕ್ರೋಶಗೊಂಡ ಡಿಎಂಕೆ ಶಾಸಕರು ಸದನ ದಲ್ಲಿ ಕೋಲಾಹಲ ಎಬ್ಬಿಸಿದರು. ಕಲಾಪ ವನ್ನು 1 ಗಂಟೆಗೆ ಮುಂದೂಡಿ, ಅನಂತರ ಕಲಾಪ ಆರಂಭವಾದಾಗಲೂ ಇದೇ ಪರಿಸ್ಥಿತಿ ಮರುಕಳಿಸಿತು. ಒಂದು ಹಂತದಲ್ಲಿ ಸದನ ದಲ್ಲಿದ್ದ ಕುರ್ಚಿ, ಮೇಜುಗಳನ್ನು ಬಿಸಾಕಿ, ಕಾಗದಪತ್ರ ಹರಿದ ಶಾಸಕರು, ಸ್ಪೀಕರ್‌ಗೆ ಮುತ್ತಿಗೆ ಹಾಕಿದರು. ಸ್ಪೀಕರ್‌ ಧನಪಾಲ್‌ಅವರ ಬಟ್ಟೆ ಎಳೆದು, ಮೇಜನ್ನು ಮುರಿದು, ಮೈಕ್‌ ಅನ್ನು ಕಿತ್ತು ಬಿಸಾಕಿದರು. ಡಿಎಂಕೆಯ ಇಬ್ಬರು ಶಾಸಕರು, ಸ್ಪೀಕರ್‌ ಕುರ್ಚಿ ಯಲ್ಲಿ ಕುಳಿತು, ಗಹಗಹಿಸಿ ನಕ್ಕು ಸದನದ ಘನತೆಯನ್ನೇ ಅಣಕವಾಡಿದರು.

ಪನ್ನೀರ್‌ ಸೆಲ್ವಂ ಮುಂದೇನು?
ಸೋತರೂ ಜನರ ಅನುಕಂಪದ ಅಲೆ ಇವರತ್ತ ಬೀಸುತ್ತಿದ್ದು, ಪನ್ನೀರ್‌ ನೇಪಥ್ಯಕ್ಕೆ ಸರಿಯುವ ಸಾಧ್ಯತೆಯಿಲ್ಲ
ಸದ್ಯಕ್ಕೆ ಶಾಸಕರು ಪಳನಿಸ್ವಾಮಿ ಬೆನ್ನಿಗೆ ನಿಂತಿದ್ದರೂ ಮುಂದಿನ ದಿನಗಳಲ್ಲಿ ಈ ಚಿತ್ರಣ ಬದಲಾಗಬಹುದು
ನಾನು ಜನರ ಬಳಿ ಹೋಗುತ್ತೇನೆ. ಅಮ್ಮನ ಸರಕಾರವನ್ನು ಅಧಿಕಾರಕ್ಕೆ ತರುತ್ತೇನೆ ಎಂದಿರುವುದು ಸೆಲ್ವಂರ ಹೊಸ ಲೆಕ್ಕಾಚಾರದ ಸುಳಿವು ನೀಡಿದೆ
ಇದು ಅವರಿಂದ ಸಾಧ್ಯವಾಗದೇ ಇದ್ದರೆ, ಅವರು ಬೇರೆ ಪಕ್ಷದಲ್ಲಿ ಆಶ್ರಯ ಪಡೆಯಬಹುದು

ಪಳನಿಸ್ವಾಮಿ  ಕಥೆಯೇನು ?
ಶಶಿಕಲಾ ಪರಿಸ್ಥಿತಿಗೆ ಕಟ್ಟುಬಿದ್ದು ಪಳನಿಯನ್ನು ಆಯ್ಕೆ ಮಾಡಿರುವ ಕಾರಣ ಸರಕಾರ ಹೀಗೇ ಉಳಿಯುತ್ತದೆ ಎನ್ನಲಾಗದು
ಪಕ್ಷದಲ್ಲಿ ಪ್ರಮುಖ ಸ್ಥಾನ ಪಡೆದಿರುವ ಶಶಿಕಲಾ ಸಂಬಂಧಿಗಳು ಮುಂದೊಮ್ಮೆ ಪಳನಿಗೆ ಮುಳ್ಳಾಗಬಹುದು
ಗೌಂಡರ್‌ ಮತ್ತು ತೇವಾರ್‌ ಸಮು ದಾಯ ರಾಜಕೀಯವೂ ಪಳನಿಸ್ವಾಮಿಗೆ ತೊಂದರೆ ಉಂಟುಮಾಡಬಹುದು
ಶಶಿಕಲಾರ ಸೂಚನೆಯಂತೆ ಪಳನಿ ಕಾರ್ಯನಿರ್ವಹಿಸಬೇಕು. ಇಲ್ಲದಿದ್ದರೆ, ಅಧಿಕಾರ ಕಳೆದುಕೊಳ್ಳ‌ಬಹುದು.

Advertisement

Udayavani is now on Telegram. Click here to join our channel and stay updated with the latest news.

Next