Advertisement

Politics: 10 ವರ್ಷಗಳಲ್ಲಿ ಪಾಕಿಸ್ಥಾನ ಕೂಡ ಭಾರತದ ಭಾಗವಾಗಲಿದೆ: ಯತ್ನಾಳ್‌

09:56 PM Jan 14, 2024 | Team Udayavani |

ವಿಜಯಪುರ: ಪಾಕ್‌ ಆಕ್ರಮಿತ ಕಾಶ್ಮೀರವನ್ನು ಲೋಕಸಭೆ ಚುನಾವಣೆಗೂ ಮುನ್ನವೇ ಪಡೆದುಕೊಳ್ಳುತ್ತೇವೆ. ಮುಂದಿನ ಹತ್ತು ವರ್ಷಗಳಲ್ಲಿ ಪಾಕಿಸ್ಥಾನ ಕೂಡ ಭಾರತದ ಭಾಗವಾಗಲಿದೆ ಎಂದು ನಗರ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಹೇಳಿದರು.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‌ಗೆ ಹಸ್ತದ ಗುರುತು ನೀಡಿದವರೇ ಜೈನ ಮುನಿಗಳು. ದೇಶದಲ್ಲಿ ಗೋ ಹತ್ಯೆ ನಿಷೇಧಿಸುವುದಾಗಿ ಜೈನ ಮುನಿಗಳಿಗೆ ಇಂದಿರಾ ಗಾಂಧಿ ಆಶ್ವಾಸನೆ ಕೊಟ್ಟಿದ್ದರು. ಆದರೆ ಅದನ್ನು ಈಡೇರಿಸಲಿಲ್ಲ. ಗೋ ಹತ್ಯೆ ನಿಷೇಧಕ್ಕಾಗಿ ಜೈನ ಮುನಿಗಳು ದಿಲ್ಲಿಯಲ್ಲಿ ಆಮರಣ ಉಪವಾಸ ಸತ್ಯಾಗ್ರಹ ನಡೆಸಿದರು. ಆಗ ಅವರ ಮೇಲೆ ಗೋಲಿಬಾರ್‌ ನಡೆಸಲಾಯಿತು. ಅವರು ಉಪವಾಸ ಮಾಡಿ ಪ್ರಾಣ ಅರ್ಪಿಸಿದರು. ಅವರ ಶಾಪ ಆ ಕುಟುಂಬಕ್ಕೆ ತಟ್ಟಿದೆ. ಹೀಗಾಗಿ ಕಾಂಗ್ರೆಸ್‌ ನಾಶ ಖಚಿತ ಎಂದರು.

ವಿಜಯಪುರದಲ್ಲೂ ದೇಗುಲ ನಾಶ ಮಾಡಿ ಮಸೀದಿ
ವಿಜಯಪುರ ಜಿಲ್ಲೆಯಲ್ಲೂ ಹಿಂದೂ ದೇವಾಲಯಗಳನ್ನು ನಾಶ ಮಾಡಿ ಮಸೀದಿಗಳನ್ನು ನಿರ್ಮಿಸಿದ್ದಾರೆ. ಈ ಕುರಿತು ಪುರಾತತ್ವ ಇಲಾಖೆಗೆ ಪತ್ರ ಬರೆಯಲಾಗಿದೆ. ಕ್ರಮ ಕೈಗೊಳ್ಳದಿದ್ದರೆ ನ್ಯಾಯಾಲಯದ ಮೊರೆ ಹೋಗಲಾಗುವುದು ಎಂದು ಯತ್ನಾಳ್‌ ಹೇಳಿದರು. ಕುತುಬ್‌ ಮಿನಾರ್‌ ಮಾದರಿಯಲ್ಲಿ ಸರ್ವೇ ಕಾರ್ಯ ಹಾಗೂ ಉತ್ಖನನ ನಡೆಯಬೇಕು. ಇವೆಲ್ಲ ಹಿಂದೂ ದೇವಸ್ಥಾನಗಳಾಗಿದ್ದವು ಎನ್ನುವ ಹಲವಾರು ಗುರುತುಗಳಿವೆ. ಪುರಾತತ್ವ ಇಲಾಖೆ ಗಮನ ಹರಿಸದೇ ಇದ್ದರೆ ನ್ಯಾಯಾಲಯದ ಮೊರೆ ಹೋಗುತ್ತೇವೆ. ಮುಂದಿನ ಕೆಲವೇ ದಿನಗಳಲ್ಲಿ ಪ್ರಧಾನಿ ಮೋದಿ ಅಬುದಾಬಿಯಲ್ಲಿ ಲಕ್ಷ್ಮೀ ನಾರಾಯಣ ದೇವಸ್ಥಾನ ಉದ್ಘಾಟನೆ ಮಾಡಲಿದ್ದಾರೆ. ಹೀಗಾಗಿ ಹಿಂದೂತ್ವ ಇಡೀ ಜಗತ್ತನ್ನೇ ಆಳುವ ಕಾಲ ದೂರವಿಲ್ಲ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next