Advertisement

ಪಾಕ್‌ “ಮಾನವೀಯ’ಆಟ: ಪೆಟ್ಟು ಕೊಟ್ಟೇ ಪಾಠ ಕಲಿಸಬೇಕು

11:56 AM Dec 27, 2017 | Team Udayavani |

ಪಾಕಿಸ್ತಾನದಲ್ಲಿ ಬೇಹುಗಾರಿಕೆ-ಉಗ್ರವಾದದ ಆರೋಪದಲ್ಲಿ ಗಲ್ಲು ಶಿಕ್ಷೆಗೆ ಗುರಿಯಾಗಿರುವ ಭಾರತೀಯ ನೌಕಾಪಡೆಯ ಮಾಜಿ ಅಧಿಕಾರಿ ಕುಲಭೂಷಣ್‌ ಜಾಧವ್‌ಗೆ ಕೊನೆಗೂ ಸೋಮವಾರ ತಮ್ಮ ತಾಯಿ ಮತ್ತು ಪತ್ನಿಯನ್ನು ಭೇಟಿ ಮಾಡುವ ಅವಕಾಶ ಸಿಕ್ಕಿತು. ಆದರೆ ಈ ಭೇಟಿ
ಪಾಕಿಸ್ತಾನ ತನ್ನ “ಮರ್ಯಾದೆ’ ಉಳಿಸಿಕೊಳ್ಳಲು ನಡೆಸಿದ ಕಸರತ್ತು ಎನ್ನುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ. ವಿದೇಶಾಂಗ ಕಚೇರಿಯಲ್ಲಿ ಏರ್ಪಾಟಾಗಿದ್ದ ಈ 40 ನಿಮಿಷದ ಭೇಟಿಗೆ ಪಾಕಿಸ್ತಾನ “ಮಾನವೀಯತೆಯ ಆಧಾರ’ ಎಂಬ ಆಯಾಮವನ್ನು ಕೊಟ್ಟಿದೆ. ಆದರೆ ಅದು “ಮಾನವೀಯತೆ’ ಮೆರೆಯಲು ಭಾರತ ಪದೇ ಪದೆ ಒತ್ತಡ ತರಬೇಕಾಯಿತು ಎನ್ನುವುದು ಬೇರೆ ಮಾತು. ಕೊನೆಗೂ ಜಾಧವ್‌ ತಮ್ಮ ಅಮ್ಮ ಮತ್ತು ಮಡದಿಯನ್ನು ಭೇಟಿಯಾಗಿದ್ದಾರೆ, ದುರಂತವೆಂದರೆ ಅವರ ನಡುವೆ ಗಾಜಿನ ಗೋಡೆ ಅಡ್ಡ ಕುಳಿತಿತ್ತು! ಇಂಟರ್‌ಕಾಮ್‌ ಮೂಲಕವೇ ಅವರೆಲ್ಲ ಪರಸ್ಪರ ಮಾತುಕತೆ ನಡೆಸುವಂತಾಯಿತು.

Advertisement

ಜಾಧವ್‌ ಬಳಿ ಕರೆದೊಯ್ಯುವ ಮುನ್ನ ಅವರ ತಾಯಿ ಮತ್ತು ಪತ್ನಿಯ ಸುರಕ್ಷಾ ತಲಾಷಿ ಮಾಡಲಾಗಿತ್ತು. ಮಾತುಕತೆ ನಡೆಯಲಿರುವ ಸ್ಥಳದಿಂದ ಹಿಡಿದು ವಿದೇಶಾಂಗ ಸಚಿವಾಲಯದ ಕಟ್ಟಡ ಹಾಗೂ ಹೊರಗಿನ ರಸ್ತೆಗಳವರೆಗೆ ಹೆಜ್ಜೆ ಹೆಜ್ಜೆಗೂ ಬಿಗಿ ಭದ್ರತಾ ವ್ಯವಸ್ಥೆಯನ್ನು ಏರ್ಪಡಿಸ 
ಲಾಗಿತ್ತು. ಹೀಗಿರುವಾಗ ಅವರ ನಡುವೆ ಗಾಜಿನ ಗೋಡೆಯೇಕೆ ಬೇಕಾಯಿತು? ಸ್ಥಳದಲ್ಲಿ ಭಾರತದ ಉಪ ಹೈಕಮಿಷನರ್‌ ಜೆ.ಪಿ. ಸಿಂಗ್‌ ಇದ್ದರು. ಇದ್ದನ್ನೇ ನೆಪವಾಗಿಟ್ಟುಕೊಂಡ ಪಾಕ್‌ “ಕುಲಭೂಷಣ್‌ ಜಾಧವ್‌ಗೆ ರಾಜತಾಂತ್ರಿಕ ಸಂಪರ್ಕ ಒದಗಿಸುವ ತನ್ನ ಆಶ್ವಾಸನೆಯನ್ನು ಈಡೇರಿಸಿದ್ದಾಗಿ’ ಮೊದಲು ಹೇಳಿತು. ತದನಂತರ ಛೀಮಾರಿ ಹಾಕಿಸಿಕೊಳ್ಳುವ ದಿಗಿಲಲ್ಲಿ ಇದನ್ನು “ಕುಟುಂಬದ ಭೇಟಿ’ ಎಂದು ಕರೆದಿದೆ.

ಸತ್ಯವೇನೆಂದರೆ, ಕುಲಭೂಷಣ್‌ ವಿಚಾರ ಪಾಕ್‌ಗೆ ಕಗ್ಗಂಟಾಗಿ ಪರಿಣಮಿಸಿ ಬಿಟ್ಟಿದೆ. ಭಾರತವನ್ನು ಆಟವಾಡಿಸಲು ಜಾಧವ್‌ರನ್ನು ಬಳಸಿಕೊಳ್ಳುವ ದುರಾಲೋಚನೆ ಪಾಕ್‌ಗೆ ಇತ್ತು. ಆದರೆ ಈ ವಿಷಯವನ್ನು ಅಂತಾರಾಷ್ಟ್ರೀಯ ನ್ಯಾಯಾಲಯಕ್ಕೊಯ್ಯುವ ಪ್ರತಿತಂತ್ರದ ಮೂಲಕ ಭಾರತ ಪಾಕ್‌ಗೆ ಕಪಾಳ ಮೋಕ್ಷ ಮಾಡಿತು. ಭಾರತದ ದೂತವಾಸ ಅಧಿಕಾರಿಗಳೊಂದಿಗೆ ಜಾಧವ್‌ಗೆ ಮಾತುಕತೆ ನಡೆಸಲು
ಬಿಡುತ್ತಿಲ್ಲ ಎಂಬ ಅಂಶವನ್ನೂ ಭಾರತ ಅಂತಾರಾಷ್ಟ್ರೀಯ ಕೋರ್ಟ್‌ನಲ್ಲಿ ಪಾಕ್‌ನ ಮುಖವಾಡ ಕಳಚಲು ಅಸ್ತ್ರವಾಗಿ ಬಳಸಿಕೊಂಡಿತ್ತು.

ಹೀಗಾಗಿ ಈಗ ಜಾಧವ್‌ ಕುಟುಂಬಕ್ಕೆ ಭೇಟಿಯ ಅವಕಾಶ ನೀಡಿ ತಾನು ನ್ಯಾಯಬದ್ಧ ವ್ಯವಹಾರ ನಡೆಸುತ್ತಿದ್ದೇನೆ ಎಂದು ತೋರಿಸಿಕೊಳ್ಳುತ್ತಿದೆ ಪಾಕ್‌. ಏನೇ ಆದರೂ ಜಾಧವ್‌ ಪ್ರಕರಣ ಪಾಕಿಸ್ತಾನದ ಸೇನೆ ಮತ್ತು ಆಡಳಿತಕ್ಕೆ ಅಂತಾರಾಷ್ಟ್ರೀಯ ಮಟ್ಟದಲ್ಲಷ್ಟೇ ಅಲ್ಲದೆ, ಆ ದೇಶದೊಳಗೂ
ಮುಜುಗರವುಂಟಾಗುವಂತೆ ಮಾಡಿಬಿಟ್ಟಿದೆ. ಹೀಗಾಗಿ ಮುಖಕೆಂಪು ಮಾಡಿಕೊಂಡು ಭುಸುಗುಡುತ್ತಿದೆ ಪಾಕಿಸ್ತಾನ. ಅದರ ಸ್ಥಿತಿ ಈಗ ಹೇಗಾಗಿದೆಯೆಂದರೆ ಅಂತಾರಾಷ್ಟ್ರೀಯ ಕೋರ್ಟ್‌ನ ಆದೇಶವನ್ನು ತಿರಸ್ಕರಿಸಿ, ಶಿಕ್ಷೆ ಜಾರಿಗೊಳಿಸುವ ಸಾಹಸವನ್ನಂತೂ ಮಾಡಲಾರದು.
ಇದೆಲ್ಲದರ ನಡುವೆ ಈ ವಿದ್ಯಮಾನ ಎರಡೂ ರಾಷ್ಟ್ರಗಳ ನಡುವೆ ಸೃಷ್ಟಿಯಾಗಿರುವ ರಾಜತಾಂತ್ರಿಕ ಮೌನವನ್ನು ಮುರಿದು ಮಾತುಕತೆಗೆ ದಾರಿ ಮಾಡಿಕೊಡುವುದೇ ಎಂಬ ಕುತೂಹಲವನ್ನು ಹುಟ್ಟುಹಾಕಿದೆ.

ಇಡೀ ಜಗತ್ತು ಭಾರತ ಮತ್ತು ಪಾಕಿಸ್ತಾನ ಮಾತುಕತೆಯಲ್ಲಿ ತೊಡಗುವುದನ್ನು ನೋಡಲು ಬಯಸುತ್ತಿದೆ ಎನ್ನುವುದರಲ್ಲಿ ಸಂಶಯವಿಲ್ಲ. ಆದರೆ ಈ ರೀತಿಯ ಬದಲಾವಣೆ ಪಾಕಿಸ್ತಾನಕ್ಕೆ ನಿಜಕ್ಕೂ ಬೇಕೋ ಬೇಡವೋ ಎಂಬ ಅನುಮಾನ ಮೂಡುತ್ತದೆ. ಏಕೆಂದರೆ ಇತ್ತ ಮಾನವೀಯತೆಯ ಮಾತನಾಡುವ ಪಾಕಿಸ್ತಾನ ಕೆಲವೇ ದಿನಗಳ ಹಿಂದೆ ಮುಂಬೈ ದಾಳಿಯ ಸೂತ್ರಧಾರಿ ಹಾಫಿಜ್‌ ಸಯೀದ್‌ನನ್ನು ಬಂಧಮುಕ್ತಗೊಳಿಸಿದೆ. ಪಾಕ್‌
ಮಿಲಿಟರಿ ಆತನನ್ನು ದೇಶದ ರಾಜಕೀಯ ವೇದಿಕೆಯಲ್ಲಿ ಮುಂಚೂಣಿಗೆ ತರಲು ಪ್ರಯತ್ನಿಸುತ್ತಿದೆ. ಕಣಕಣದಲ್ಲೂ ಭಾರತ ದ್ವೇಷವನ್ನು ತುಂಬಿ ಕೊಂಡಿರುವ ಹಾಫಿಜ್‌ರಂಥವರನ್ನು ಬಹಿರಂಗವಾಗಿಯೇ ಬಾಹು ಬಂಧನದಲ್ಲಿ ಎಳೆದುಕೊಳ್ಳುತ್ತಿದೆ ಅಲ್ಲಿನ ಆಡಳಿತ(ಅರ್ಥಾತ್‌ ಮಿಲಿಟರಿ). ಗಡಿಭಾಗದಲ್ಲಿ ಪಾಕ್‌ ಸೇನೆ ಮತ್ತು ಅದರ ಕೃಪಾಪೋಷಿತ ಉಗ್ರರ ಹಾವಳಿಯೂ ನಿಲ್ಲುವ ಲಕ್ಷಣವಿಲ್ಲ. ಇದನ್ನೆಲ್ಲ ನೋಡಿದಾಗ ಪಾಕ್‌ ಜೊತೆಗೆ ಮಾತುಕತೆ ನಡೆಸುವುದರಲ್ಲಿ ಪ್ರಯೋಜನವಿಲ್ಲ, ಅದಕ್ಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪೆಟ್ಟು ಕೊಟ್ಟೇ ಪಾಠ ಕಲಿಸಬೇಕು ಎನ್ನುವುದು ನಿಚ್ಚಳವಾಗುತ್ತಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next