Advertisement

ರಾಷ್ಟ್ರಪತಿ ಕೋವಿಂದ್‌ಗೆ ಪಾಕ್‌ ವಾಯುಮಾರ್ಗ ಬಂದ್‌!

10:15 AM Sep 08, 2019 | Team Udayavani |

ಹೊಸದಿಲ್ಲಿ: ಭಾರತದ ನಾಗರಿಕ ವಿಮಾನಗಳಿಗೆ ತನ್ನ ವಾಯುಮಾರ್ಗವನ್ನು ಬಂದ್‌ ಮಾಡಿರುವ ಪಾಕಿಸ್ಥಾನ ಈಗ ರಾಷ್ಟ್ರಪತಿ ರಾಮನಾಥ ಕೋವಿಂದ್‌ ಅವರ ವಿಮಾನಕ್ಕೂ ಹಾರಾಟದ ಅನುಮತಿ ನಿರಾಕರಿಸಿದೆ.

Advertisement

ಕೋವಿಂದ್‌ ಅವರು ಐಸ್‌ಲೆಂಡ್‌ ಪ್ರವಾಸಕ್ಕೆ ತೆರಳಬೇಕಿದ್ದು, ಇದಕ್ಕಾಗಿ ಪಾಕಿಸ್ಥಾನ ವಾಯುಮಾರ್ಗ ಬಳಸಲು ಅನುಮತಿ ಕೇಳಲಾಗಿತ್ತು. ಆದರೆ ಇದಕ್ಕೆ ಪಾಕಿಸ್ಥಾನ ನಿರಾಕರಿಸಿದೆ. ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ ರದ್ದುಮಾಡಿದ ಬಳಿಕ ಕುದಿಯುತ್ತಿದ್ದ ಪಾಕಿಸ್ಥಾನ ಸದ್ಯ ಈ ಕ್ರಮ ಕೈಗೊಂಡಿದೆ. ಇದಕ್ಕೂ ಮೊದಲು ಪ್ರಧಾನಿ ನರೇಂದ್ರ ಮೋದಿಯವರಿಗೆ ಅದು ವಾಯುಮಾರ್ಗ ಬಳಸಲು ತಗಾದೆ ತೆಗೆದಿರಲಿಲ್ಲ. ಆದರೆ ಪ್ರಧಾನಿ ಮೋದಿ ಅವರಿಗೆ ಸಂಚರಿಸಲು ಬಿಟ್ಟದ್ದಕ್ಕೆ ಪಾಕ್‌ನಲ್ಲಿ ಆಕ್ಷೇಪ ವ್ಯಕ್ತವಾಗಿತ್ತು ಎನ್ನಲಾಗಿತ್ತು.

ಭಾರತದ ಇತ್ತೀಚಿನ ನಡವಳಿಕೆ ಕಾರಣ ಕೋವಿಂದ್‌ ಅವರಿಗೆ ವಾಯುಮಾರ್ಗಕ್ಕೆ ಅನುಮತಿಸಿಲ್ಲ ಎಂದು ಪಾಕ್‌ ವಿದೇಶಾಂಗ ಸಚಿವ ಶಾ ಮೊಹಮ್ಮದ್‌ ಖುರೇಶಿ ಹೇಳಿದ್ದಾಗಿ, ಮತ್ತು ಇದಕ್ಕೆ ಪ್ರಧಾನಿ ಇಮ್ರಾನ್‌ ಖಾನ್‌ ಸಹಿ ಹಾಕಿರುವುದಾಗಿ ಎಎಫ್ಪಿ ಹೇಳಿದೆ.

ಸೋಮವಾರದಿಂದ ಐಸ್‌ಲೆಂಡ್‌, ಸ್ಲೊವೇನಿಯಾ, ಸ್ವಿಜರ್ಲೆಂಡ್‌ ಪ್ರವಾಸಕ್ಕೆ ರಾಷ್ಟ್ರಪತಿಯವರು ತೆರಳುವವರಿದ್ದರು. ಸದ್ಯ ವಾಯುಮಾರ್ಗ ಬಂದ್‌ ಆಗಿರುವುದರಿಂದ ರಾಷ್ಟ್ರಪತಿಯವರು ತುಸು ಸುತ್ತು ಬಳಸಿ ಹೋಗಬೇಕಾಗಿದೆ. ಇದರಿಂದ ಸುಮಾರು 1 ತಾಸು ಹೆಚ್ಚು ಪ್ರಯಾಣ ಮಾಡಬೇಕಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next