Advertisement

ಬದಲಾವಣೆ ತರಲಿದೆಯೇ ಸರಕು ಮತ್ತು ಸೇವಾ ತೆರಿಗೆ ಕಾಯ್ದೆ?

05:48 AM Apr 13, 2017 | |

ಸರಕು ಮತ್ತು ಸೇವಾ ತೆರಿಗೆ ಕಾಯ್ದೆಯಿಂದಾಗಿ ಭಾರತ ಪೂರ್ತಿ ಒಂದು ಮಾರುಕಟ್ಟೆಯಾಗಲಿದೆ ಎಂಬುದೊಂದು ಧನಾತ್ಮಕ ವಿಷಯ. ಆದರೆ ಈ ಕಾಯ್ದೆ ನಿಜವಾಗಿಯೂ ತೆರಿಗೆ ಸಂಗ್ರಹಣೆಯಲ್ಲಿ ಕ್ರಾಂತಿಕಾರಿ ಬದಲಾವಣೆಗಳನ್ನು ತರುವಂತೆ ರೂಪಿತವಾಗಿದೆಯೇ?

Advertisement

ಸರಕು ಮತ್ತು ಸೇವಾ ತೆರಿಗೆ ಕಾಯ್ದೆಯನ್ನು ತೆರಿಗೆ ಕ್ಷೇತ್ರದಲ್ಲಿ ಮಹತ್ತರ ಸುಧಾರಣೆ ಎಂದು ಬಿಂಬಿಸಲಾಗುತ್ತಿದೆ. ದೇಶದ ಆರ್ಥಿಕ ಮಂತ್ರಿ ಜೇಟ್ಲಿ ಯವರ ಪ್ರಕಾರ ಸರಕು ಸಾಗಣೆಯಲ್ಲಿ ಉಳಿತಾಯ, ಉದ್ಯೋಗದಲ್ಲಿ ಅಭಿವೃದ್ಧಿ, ಹಲವು ಸರಕುಗಳ ಬೆಲೆ ಇಳಿತ, ಆಯ್ದ ವಸ್ತುಗಳಲ್ಲಿ ಮಾತ್ರ ಬೆಲೆ ಏರಿಕೆ, ನಿರ್ಯಾತದಲ್ಲಿ ಸ್ಪರ್ಧಾತ್ಮಕ ವಾತಾವರಣ, ಸಮಷ್ಟಿ  ಅಭಿವೃದ್ಧಿ ಸೂಚ್ಯಂಕದಲ್ಲಿ ಶೇ.2 ಏರಿಕೆ ಇತ್ಯಾದಿ ಇತ್ಯಾದಿ ಹಲವು ಅನುಕೂಲತೆಗಳನ್ನು ತರಲಿರುವ ಈ ಕಾಯ್ದೆ ನಿಜವಾಗಿಯೂ ಆ ತರಹ ರೂಪಿತವಾಗಿದೆಯೇ? ಇದುವರೆಗಿನ ಬೆಳವಣಿಗೆಗಳನ್ನು ಗಮನಿಸಿದರೆ, ನಿರ್ಯಾತ ಮತ್ತು ಕೃಷಿ ಕ್ಷೇತ್ರವನ್ನು ಬಿಟ್ಟರೆ, ಇನ್ಯಾವುದೇ ಕ್ಷೇತ್ರದಲ್ಲಿ ಇಂತಹ ಸಾಧನೆಯನ್ನು ಕೂಡಲೇ ಮಾಡಬಹುದಾದ ಯಾವುದೇ ಲಕ್ಷಣಗಳು ಕಾಣುತ್ತಿಲ್ಲ.

ಈ ಕಾಯ್ದೆ ಮೂಲತಃ ಒಂದು ತಿರೋಗಾಮಿ ಕಾಯ್ದೆ. ಇದರ ಜಾರಿಯಿಂದ ಬಡ ಮತ್ತು ಮಧ್ಯಮ ವರ್ಗಕ್ಕೆ ಆರಂಭದ ದಿನಗಳಲ್ಲಿ ಅತಿಯಾದ ಹೊಡೆತ ಬೀಳಲಿದೆ. ಆದರೆ, ರಾಜಕೀಯ ಕಾರಣಗಳಿಂದಲೋ ಇಲ್ಲ, ಪ್ರಾಮಾಣಿಕ ಕಾಳಜಿಯಿಂದಲೋ ಈ ಹೊಡೆತ ತಪ್ಪಿಸಲು ಹಲವಾರು ಕಸರತ್ತುಗಳನ್ನು ಮಾಡಲಾಗಿದೆ. ಪರಿಧಿಯಲ್ಲಿ ಬರುವ ವಸ್ತುಗಳನ್ನು ವಿಂಗಡಿಸಿ ನಾಲ್ಕು ಶ್ರೇಣಿಯಲ್ಲಿ ಇರಿಸಿ, ಅವಕ್ಕೆ ಶೇ.5, ಶೇ.12, ಶೇ.18 ಮತ್ತು ಶೇ.28 ತೆರಿಗೆ ವಿಧಿಸಲು ಆಯೋಜಿಸಲಾಗಿದೆ. ವಿಂಗಡಿಸುವ ಕಸರತ್ತು ಇನ್ನೂ ನಡೆಯುತ್ತಿದೆ. ತಂಬಾಕು, ಪಾನ್‌ ಮಸಾಲ, ಸಿಗರೇಟ್‌, ಕಲ್ಲಿದ್ದಲು, ತಂಪು ಪಾನೀಯ ಇತ್ಯಾದಿಗಳನ್ನು ಪ್ರತ್ಯೇಕಿಸಿ ಇದಕ್ಕೆ ಶೇ.43ರಿಂದ ಶೇ.350 ತೆರಿಗೆ ವಿಧಿಸಲು ನಿರ್ಧರಿಸಲಾಗಿದೆ. ಈ ಹೆಚ್ಚಿದ ತೆರಿಗೆಯಿಂದ ಬರುವ ಹಣವನ್ನು ಕಾಯ್ದೆ ಜಾರಿಯಿಂದ ಬರುವ ರಾಜ್ಯಗಳ ನಷ್ಟ ತುಂಬಿಸಲು ಉಪಯೋಗಿಸಲಾಗುತ್ತದೆ.

ಕೇಂದ್ರ ಸರಕಾರ ಈ ಕಾಯ್ದೆಯ ಬಗ್ಗೆ ಬರಬಹುದಾದ ಸಲಹೆ ಮತ್ತು ಆಕ್ಷೇಪಣೆಗಳನ್ನು ಆಹ್ವಾನಿಸಿ ಮಾದರಿ ಕಾಯ್ದೆ ಪಟ್ಟಿಯನ್ನು ಈಗಾಗಲೇ ತನ್ನ ಜಾಲತಾಣದಲ್ಲಿ ಪ್ರಕಟಿಸಿದೆ. ಇದೊಂದು 199 ಪುಟಗಳ ಬೃಹತ್‌ ಸಂಪುಟ. ಇದನ್ನು ಪೂರ್ತಿಯಾಗಿ ಓದುವ ವ್ಯವಧಾನ ಸಾಮಾನ್ಯ ನಾಗರಿಕನಿಗಂತೂ ಇರಲು ಸಾಧ್ಯವಿಲ್ಲ. ಆದರೆ, ಬಂದ ಸಲಹೆ ಮತ್ತು ಆಕ್ಷೇಪಣೆಗಳನ್ನು ಆಧರಿಸಿ, ಸಂಸತ್ತು ಈಗಾಗಲೇ ಹಣಕಾಸು ಮಸೂದೆಯ ರೂಪದಲ್ಲಿ ಕಾಯ್ದೆಯನ್ನು ಮಂಜೂರು ಮಾಡಿದೆ. 

ಮುಖ್ಯಾಂಶಗಳೇನು?
ಕಾಯ್ದೆಯನ್ನು ಓದಿದವರಿಗೆ ತಿಳಿದು ಬರುವ ಕೆಲವು ಮುಖ್ಯ ಅಂಶಗಳು ಇಂತಿವೆ:
1. ಕಾಯ್ದೆಯ ಬಹಳಷ್ಟು ಭಾಗವನ್ನು ಮೌಲ್ಯವರ್ಧಿತ ತೆರಿಗೆ ಕಾಯ್ದೆ ಮತ್ತು ಇತರ ಆರ್ಥಿಕ ತೆರಿಗೆ ಕಾಯ್ದೆಗಳಿಂದ ಆರಿಸಲಾಗಿದೆ.

Advertisement

ಪರಿಭಾಷೆಯನ್ನೂ ಅವುಗಳಿಂದಲೇ ಆರಿಸಲಾಗಿದೆ. ಕೆಲವು ಸಮಯಾನುಸಾರ ಮತ್ತು ಸಾಂದರ್ಭಿಕ ಮಾರ್ಪಾಟುಗಳನ್ನು ಮಾಡಲಾಗಿದೆ. ಇದರಿಂದಾಗಿ ಅವುಗಳಲ್ಲಿ ಇರುವ ನ್ಯೂನತೆಗಳೂ ಈ ಕಾಯ್ದೆಯಲ್ಲಿ ಸೇರಿಸಿಕೊಂಡಿವೆ. ಒಂದು ಸರಳ, ಸುಂದರ, ಜನಸಾಮಾನ್ಯನಿಗೂ ಅರ್ಥ ಮಾಡಿಕೊಳ್ಳಲು ಸಾಧ್ಯವಾಗುವಂತಹ ಕಾಯ್ದೆಯಾಗುವ ಅವಕಾಶವನ್ನು ಈ ಮೂಲಕ ಇದು ಕಳೆದುಕೊಂಡಿದೆ. ಒಬ್ಬ ಸುಶಿಕ್ಷಿತ ತೆರಿಗೆದಾರನೂ ಚಾರ್ಟೆಡ್‌ ಅಕೌಂಟೆಂಟ್‌ ಯಾ ತೆರಿಗೆ ಪಟ್ಟಿ ತಯಾರಕನ ಸಹಾಯವಿಲ್ಲದೆ ರಿಟರ್ನ್ ಯಾ ಪಟ್ಟಿಯನ್ನು ಸಲ್ಲಿಸಲು ಸಾಧ್ಯವಿಲ್ಲದಂತಾಗಿದೆ.

2. ಹಲವು ಶಬ್ದಗಳಿಗೆ, ಕಾರ್ಯಸೂಚಿಗಳಿಗೆ ಇನ್ನೂ ವಿವರಣೆಗಳು ಬಂದಿಲ್ಲ. ಇದರಿಂದಾಗಿ, ಮುಂದೆ ತಗಾದೆಗಳಲ್ಲಿ ಉಚ್ಚ ನ್ಯಾಯಾಲಯ, ಸರ್ವೋಚ್ಚ ನ್ಯಾಯಾಲಯ, ಮೇಲ್ಮನವಿ ಮಂಡಳಿಗಳು ಸಂದರ್ಭಾನುಸಾರ ಇದನ್ನು ವಿಶ್ಲೇಷಿಸಿದಾಗ ಮೂಲ ಕಾಯ್ದೆಯ ಉದ್ದೇಶಗಳೇ ಗೌಣವಾಗುವ ಸಾಧ್ಯತೆಯಿದೆ.

3. ಇತರ ರಾಷ್ಟ್ರಗಳಲ್ಲಿ ಇರುವಂತೆ ಸಮಾನ ತೆರಿಗೆ ದರ ಇಲ್ಲವಾದ್ದರಿಂದ ಕಾಯ್ದೆಯ ಅಗಾಧತೆ ಹೆಚ್ಚಿದೆ. ಇದರಿಂದ ಬಾಧಿತ ವರ್ಗಕ್ಕೆ ತೆರಿಗೆ ಮರುಪಾವತಿ ಹೆಚ್ಚು ಲಾಭಕರವಾಗುತ್ತಿತ್ತೇನೋ? ಈಗಾಗಲೇ ಹಲವು ರಾಜ್ಯಗಳಲ್ಲಿರುವ ಹಲವು ಭಾಗ್ಯಗಳ ವ್ಯಾಪ್ತಿಯನ್ನು ಹೆಚ್ಚಿಸುವುದರಿಂದಲೂ ಈ ನ್ಯೂನತೆಯನ್ನು ಸರಿಪಡಿಧಿಸಬಹುದಿತ್ತು. ಇತರ ರಾಷ್ಟ್ರಗಳಲ್ಲಿ ತೆರಿಗೆ ಪ್ರಮಾಣ ಶೇ.15ಕ್ಕಿಂತ ಜಾಸ್ತಿ ಇಲ್ಲ. ಕೆನಡಾದಲ್ಲಿ ಮರುಪಾವತಿ ಪದ್ಧತಿ ಜಾರಿಯಲ್ಲಿದೆ. 

4. ನಿಯಮ ಸಂಖ್ಯೆ 8 ಮತ್ತು ಹಲವು ನಿಯಮಗಳಲ್ಲಿ ತೆರಿಗೆ ಮತ್ತು ದಂಡದಲ್ಲಿ ಅಧಿಕಾರಿಗಳಿಗೆ ವಿವೇಚನಾತ್ಮಕ ಅಧಿಕಾರ ನೀಡಲಾಗಿದೆ. ಇದು ವ್ಯಾಪಕ ಕಿರುಕುಳ ಮತ್ತು ಭ್ರಷ್ಟಾಚಾರಕ್ಕೆ ದಾರಿ ಮಾಡಿಕೊಡುವ ಸಾಧ್ಯತೆ ಇದೆ.

5. ತೆರಿಗೆ ಜಾರಿಯಾಗುವ ದಿನದಂದು ಇರುವ ಸರಕು ದಾಸ್ತಾನನ್ನು ಮೌಲ್ಯಮಾಪನ ಮಾಡುವ ಮಾಪಕಗಳನ್ನು ಇನ್ನೂ ನಿರ್ಧರಿಸಿಲ್ಲ. ಇದನ್ನು ಖಚಿತಗೊಳಿಸುವುದು ಕೂಡ ಅಸಾಧ್ಯವಾದ ಮಾತು. ಅಂದರೆ, ತೆರಿಗೆ ಹೆಚ್ಚುವ ಸರಕುಗಳನ್ನು ಅಕ್ರಮ ದಾಸ್ತಾನು ಮಾಡಿ ಹೆಚ್ಚಿನ ಲಾಭಕ್ಕೆ ಅನಂತರ ಮಾರುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ.

6. ಇತರ ದೇಶಗಳಲ್ಲಿ ಇರುವಂತೆ ಆರ್ಥಿಕ ಸೇವೆ, ವಿದ್ಯಾಭ್ಯಾಸ, ವೈದ್ಯಕೀಯ ಸೇವೆ, ನಿರ್ಯಾತ, ಸಂಬಳ, ಕೃಷಿ, ಮಕ್ಕಳ ಪೋಷಣೆ ಇತ್ಯಾದಿ ಸೇವೆಗಳನ್ನು ಈಗ ತೆರಿಗೆಯ ವ್ಯಾಪ್ತಿಯಿಂದ ಹೊರಗಿಡಲಾಗಿದೆ. ಆದರೆ ಇದರಲ್ಲಿ ನಿರ್ಯಾತ ಮತ್ತು ಕೃಷಿಯನ್ನು ಬಿಟ್ಟು ಉಳಿದವುಗಳನ್ನು ಮುಂದೊಂದು ದಿನ ತೆರಿಗೆಯ ವ್ಯಾಪ್ತಿಗೆ ತರುವ ಆಲೋಚನೆ ಈಗಾಗಲೇ ನಡೆಯುತ್ತಿದೆ. ಅಲ್ಲದೆ, ತೆರಿಗೆಯ ಮೂಲ ರೂಪದಲ್ಲೇ ಅದು ಮುಂದೊಂದು ದಿನ ತನ್ನ ಕದಂಬ ಬಾಹುವನ್ನು ಚಾಚುವ ಲಕ್ಷಣಗಳು ಸ್ಪಷ್ಟವಾಗಿ ಕಾಣುತ್ತಿದೆ.

7. ತೆರಿಗೆಯಲ್ಲಿ ಆದಾನ ತೆರಿಗೆ ಜಮೆಯ ಪ್ರಯೋಜನವನ್ನು ಜನರಿಗೆ ತಲುಪಿಸುವ ಸ್ಪಷ್ಟ ಉಲ್ಲೇಖ ಇದ್ದರೂ ಇದಕ್ಕೆ ಪೂರಕವಾದ ಕ್ರಮಗಳನ್ನು ಸೂಚಿಸಿಲ್ಲ. ಅಂದರೆ, ಉದ್ದಿಮೆದಾರರು ಮತ್ತು ವ್ಯಾಪಾರಿಗಳು ಈಗ ಮೌಲ್ಯವರ್ಧಿತ ತೆರಿಗೆಯಲ್ಲಿ ಇರುವಂತೆ ಈ ಹಣವನ್ನು ತಮ್ಮ ಸ್ವಂತ ಜೇಬಿಗೆ ಹಾಕಿಕೊಳ್ಳುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ.

8. ಬಿ3ಬಿ ವ್ಯಾಪಾರದಲ್ಲಿ ನಗದು ವ್ಯವಹಾರ ನಿಷೇಧಿಸದಿದ್ದರೆ, ತೆರಿಗೆ ವಂಚನೆ ಅವ್ಯಾಹತವಾಗಿ ಸಾಗಲಿದೆ. 

9. ಕೃಷಿ ಪದಾರ್ಥಗಳನ್ನು ತೆರಿಗೆ ವ್ಯಾಪ್ತಿಯಿಂದ ಹೊರಗಿಟ್ಟಿದ್ದರೂ ಪ್ಯಾಕ್ಡ್ ಸಾಮಾಗ್ರಿಗಳ ಮೇಲೆ ತೆರಿಗೆ ಬೀಳುವುದರಿಂದ, ಈ ರಿಯಾಯಿತಿಯ ಪ್ರಯೋಜನ ಜನಸಾಮಾನ್ಯನಿಗೆ ತಲುಪುವುದಿಲ್ಲ. 

10. ಮುಂದೆ ನಿಮ್ಮ ಬಾಡಿಗೆ ಕಾರು, ಓಲ, ಉಬರ್‌ ಸೇವೆಗಳು, ಸೌರಶಕ್ತಿಯ ಮೇಲೆ ತೆರಿಗೆ ತೆರಬೇಕಾದ ಪರಿಸ್ಥಿತಿ ಖಂಡಿತ ಬರಲಿದೆ. 

11. ಡಿಫ‌ರ್‌ಡ್‌  ಪಾವತಿ ವಿಕ್ರಯಕ್ಕೆ ಪಾವತಿ ಮಾಡುವ ವಿಧಾನವನ್ನು ಕಾಯ್ದೆ ಸೂಚಿಸಿಲ್ಲ.

12. ತೆರಿಗೆಯ ಪ್ರಮಾಣ ಕಮ್ಮಿ ಮಾಡಲು ಕುಗ್ಗಿದ ಬೆಲೆಪಟ್ಟಿ ಮಾಡಿ ಲಾಭ ಗಳಿಸುವ ಸಾಧ್ಯತೆಗಳಿಗೆ ಪರಿಹಾರ ಕಾಣುತ್ತಿಲ್ಲ.

13. ಆದಾನ ತೆರಿಗೆ ಜಮೆಯನ್ನು ಮುಂದಿನ ತಿಂಗಳ ತೆರಿಗೆಯಲ್ಲಿ ಹೊಂದಿಸಿಕೊಳ್ಳಲು ಅವಕಾಶ ಇದ್ದರೂ, ಸಿಜಿಎಸ್‌ಟಿ, ಎಸ್‌ಜಿಎಸ್‌ಟಿ ಮತ್ತು ಐಜಿಎಸ್‌ಟಿಗಳ ನಡುವೆ ಈ ಹೊಂದಾಣಿಕೆ ಸಾಧ್ಯವಿಲ್ಲದಿದ್ದರಿಂದ, ಈ ಜಮೆಗಾಗಿ ಕೆಲವೊಮ್ಮೆ ಹಲವು ತಿಂಗಳು ಕಾಯಬೇಕಾಗಬಹುದು. ಇದರಿಂದಾಗಿ, ಗ್ರಾಹಕನಿಗೆ ಅದರ ಲಾಭ ದಾಟುವುದಿಲ್ಲ.

14. ಮೂಲ ಕಡಿತ ನಿಯಮಗಳಿಂದಾಗಿ, ತೆರಿಗೆದಾರನ ಕಡತ, ಕ್ರಮ, ಸಮಯಗಳು ಬಹಳಷ್ಟು ನಷ್ಟವಾಗಲಿದೆ.

15. ಇದಕ್ಕಾಗಿ ಉಪಯೋಗಿಸುತ್ತಿರುವ ಮೂರು ಮಾರು ಸರಕು ಈಗ ನೊಂದಾವಣೆ ಹಂತದಲ್ಲೇ ಕೈಕೊಡುತ್ತಿದೆ. ಇನ್ನೂ ಮೂರು ತಿಂಗಳಲ್ಲಿ ಇದನ್ನು ಸಮಗ್ರವಾಗಿ ಪರೀಕ್ಷೆಗೆ ಒಳಪಡಿಸದಿದ್ದರೆ ಇದು ಪೂರ್ತಿ ಒಂದು ಗೊಂದಲದ ಗೂಡಾಗಬಹುದು.

16. ಮಾದರಿ ಕಾಯ್ದೆಗೆ ಪ್ರತಿಕ್ರಿಯಿಸಿರುವ ಹೆಚ್ಚಿನ ವ್ಯಕ್ತಿಗಳು ಉದ್ದಿಮೆದಾರರು, ಆರ್ಥಿಕ ಸಲಹೆಗಾರರು, ವ್ಯಾಪಾರಿಗಳು ಮಾತ್ರ. ಇವರು ತಮ್ಮ ಹಿತಾಸಕ್ತಿಗೆ ಸರಿಯಾಗಿ ಸಲಹೆ ಮತ್ತು ಆಕ್ಷೇಪಣೆಗಳನ್ನು ನೀಡಿದ್ದಾರೆ. ಗ್ರಾಹಕರ ಹಂತದಲ್ಲಿ ಹೆಚ್ಚಾಗಿ ಯಾರೂ ಇದರ ಬಗ್ಗೆ ತಲೆಕೆಡಿಸಿಕೊಂಡಂತಿಲ್ಲ. ಗ್ರಾಹಕರೂ ಇದಕ್ಕೆ ಕೂಡಲೇ ಪ್ರತಿಕ್ರಿಯಿಸುವುದೊಳಿತು.

ಇದು ಕೆಲವು ಉದಾಹರಣೆಗಳು ಮಾತ್ರ. ಸರಕಾರ ಇಂತಹ ಎಲ್ಲ ನ್ಯೂನತೆಗಳನ್ನು ಮುಂದಿನ ದಿನಗಳಲ್ಲಿ ಸರಿಪಡಿಸಲೇಬೇಕಿದೆ. ಭಾರತ ಪೂರ್ತಿ ಒಂದು ಮಾರುಕಟ್ಟೆಯಾಗಲಿದೆ ಎಂಬುದೊಂದು ಧನಾತ್ಮಕ ವಿಷಯ. ಆದರೆ ಮಗನಿಗಾಗಿ ಮನೆ ನಿಯಮ ಸಡಿಲಿಸಿ ಮಗನೂ ಹಾಳಾದ, ನಿಯಮವೂ ಗಾಳಿ ಪಾಲಾಯಿತು ಎಂಬಂತೆ ಆಗದಿರುವಂತೆ ನೋಡಿಕೊಳ್ಳುವ ಜವಾಬ್ದಾರಿ ಈಗ ಸರಕಾರದ ಮೇಲಿದೆ.

– ಸತೀಶ ಸಗ್ರಿತ್ತಾಯ, ಆಲೆಟ್ಟಿ

Advertisement

Udayavani is now on Telegram. Click here to join our channel and stay updated with the latest news.

Next