Advertisement

ಬಲೂಚ್‌ ಕಿಚ್ಚಿಗೆ ಕಂಗೆಟ್ಟ ಪಾಕ್‌! ಖನಿಜ ಸಂಪದ್ಭರಿತ ಬಲೂಚಿಸ್ಥಾನ ಬಗ್ಗೆ ಪಾಕ್‌ ನಿರ್ಲಕ್ಷ್ಯ

11:17 PM Sep 12, 2024 | Team Udayavani |

ಪಾಕಿಸ್ಥಾನದ ಶೇ.40ರಷ್ಟು ಭೂಪ್ರದೇಶವನ್ನು ಹೊಂದಿರುವ ಬಲೂಚಿಸ್ಥಾನ ಪ್ರಾಂತದಲ್ಲಿ ಕೆಲವು ದಿನಗಳಿಂದ ಹೋರಾಟಗಳು, ಉಗ್ರ ದಾಳಿಗಳು ಹೆಚ್ಚಾಗಿವೆ. ಈ ದಾಳಿಯಿಂದಾಗಿ 73 ಮಂದಿ ನಾಗರಿಕರು, 15ಕ್ಕೂ ಹೆಚ್ಚು ಪಾಕಿಸ್ಥಾನ ಸೈನಿಕರು ಮತ್ತು 21 ಬಲೂಚಿ ಬಂಡುಕೋರರು ಮೃತಪಟ್ಟಿದ್ದಾರೆ. ದಿನೇ ದಿನೆ ಬಲೂಚಿಸ್ಥಾನದಲ್ಲಿ ಹೆಚ್ಚಾಗುತ್ತಿರುವ ದಾಳಿಯ ಹಿನ್ನೆಲೆಯಲ್ಲಿ ಇದಕ್ಕೆ ಕಾರಣವೇನು?, ಈ ದಾಳಿಗಳಿಂದ ಭಾರತದ ಮೇಲಾಗುವ ಪರಿಣಾಮವೇನು? ಎಂಬುದರ ಕುರಿತಾಗಿ ಒಂದಷ್ಟು ಮಾಹಿತಿ ಇಲ್ಲಿದೆ.

Advertisement

ಬಲೂಚಿಸ್ಥಾನ್‌ ಹೋರಾಟ ಏಕೆ?
ಬಲೂಚಿಸ್ಥಾನ್‌ ಎಂಬುದು ಇರಾನ್‌ ಪ್ರಸ್ತಭೂಮಿಯಲ್ಲಿರುವ ಒಂದು ಪ್ರದೇಶವಾಗಿದೆ. ಇದು ಪಾಕಿಸ್ಥಾನ, ಇರಾನ್‌ ಮತ್ತು ಅಫ್ಘಾನಿಸ್ಥಾನದ ನಡುವೆ ಹಂಚಿಹೋಗಿದೆ. ಪಾಕಿಸ್ಥಾನದಲ್ಲಿ ಇದನ್ನು ಬಲೂಚಿಸ್ಥಾನ್‌ ಎಂದೇ ಗುರುತಿಸಿದರೆ, ಇರಾನ್‌ನಲ್ಲಿ ಸಿಸ್ಥಾನ್‌ ಎಂದು ಗುರುತಿಸಲಾಗುತ್ತದೆ. ಈ ಪ್ರದೇಶ ತನ್ನದೇ ಆದ ಇತಿಹಾಸ ಮತ್ತು ಸಂಸ್ಕೃತಿಯಿಂದ ಶ್ರೀಮಂತವಾಗಿದೆ. ಆದರೆ ಇತ್ತೀಚಿನ ವರ್ಷಗಳಲ್ಲಿ ವಿವಿಧ ದೇಶಗಳ ದುರಾಳಿತಕ್ಕೆ ಸಿಲುಕಿ ಇಲ್ಲಿನ ಸಂಸ್ಕೃತಿ ಅವನತಿಯತ್ತ ಸಾಗುತ್ತಿದೆ. ಹೀಗಾಗಿಯೇ ಇಲ್ಲಿನ ಜನ ಪ್ರತ್ಯೇಕ ದೇಶಕ್ಕಾಗಿ ಹೋರಾಟ ನಡೆಸುತ್ತಲೇ ಇದ್ದಾರೆ. ಇರಾನ್‌, ಅಫ್ಘಾನಿಸ್ಥಾನ ಮತ್ತು ಪಾಕಿಸ್ಥಾನದಿಂದ ನಮ್ಮನ್ನು ಬೇರ್ಪಡಿಸಿ ಪ್ರತ್ಯೇಕ ರಾಷ್ಟ್ರದ ಸ್ಥಾನಮಾನ ನೀಡಿ ಎಂಬ ಕೂಗು ಶತಮಾನದಿಂದ ಕೇಳುತ್ತಲೇ ಇದೆ.

ಪಾಕ್‌ಗೆ ಬಲೂಚಿಸ್ಥಾನ್‌ ಮಗ್ಗುಲ ಮುಳ್ಳು

ಇರಾನ್‌, ಅಫ್ಘಾನಿಸ್ಥಾನದ ಗಡಿರೇಖೆಗಳನ್ನು ಹೊಂದಿಕೊಂಡಂತೆ ಇರುವ ಬಲೂಚಿಸ್ಥಾನ್‌ ಶತಮಾನಗಳಿಂದಲೂ ಪಾಕಿಸ್ಥಾನಕ್ಕೆ ಮಗ್ಗುಲ ಮುಳ್ಳಾಗಿಯೇ ಗುರುತಿಸಿಕೊಂಡಿದೆ. ಬಲೂಚಿಸ್ಥಾನ್‌ ಪಾಕಿಸ್ಥಾನದ ಬೃಹತ್‌ ಪ್ರಾಂತವಾಗಿದ್ದು, ಕಡಿಮೆ ಜನಸಂಖ್ಯೆಯನ್ನು ಹೊಂದಿದೆ. ಇಲ್ಲಿ ನೈಸರ್ಗಿಕ ಸಂಪನ್ಮೂಲಗಳ ಪ್ರಮಾಣ ಹೆಚ್ಚಿದ್ದರೂ ಪಾಕಿಸ್ಥಾನ ಈ ಪ್ರಾಂತವನ್ನು ಅವಗಣಿಸುತ್ತಲೇ ಇದೆ. ಇಲ್ಲಿ ಯಾವುದೇ ಸೌಲಭ್ಯವನ್ನೂ ಒದಗಿಸಲಾಗಿಲ್ಲ. ಇಲ್ಲಿರುವ ಬಹುತೇಕ ಗ್ರಾಮಗಳಿಗೂ ಇನ್ನೂ ರಸ್ತೆ ಸಂಪರ್ಕವನ್ನು ಕಲ್ಪಿಸಿಲ್ಲ. ಈ ಪ್ರದೇಶ ಬಡತನದ ಬೇಗೆಗೆ ಸಿಲುಕಿಕೊಂಡಿದೆ. ಹೀಗಾಗಿ ಇಲ್ಲಿ ರಕ್ತಪಾತ ನಡೆಯುತ್ತಲೇ ಇರುತ್ತದೆ. ಪಶ್ಚಿಮ ದಿಕ್ಕಿನಿಂದ ಇದು ಪಾಕಿಸ್ಥಾನಕ್ಕೆ ಸದಾ ಕಾಟ ನೀಡುತ್ತಲೇ ಇದೆ.

1666ರಿಂದಲೇ ಬಿಕ್ಕಟ್ಟು ಆರಂಭ
ಪ್ರತ್ಯೇಕ ಬಲೂಚಿಸ್ಥಾನ್‌ ಹೋರಾಟವನ್ನು ಹುಡುಕುತ್ತಾ ಹೋದರೆ, ಇದರ ಆರಂಭ 1666ರಲ್ಲಿ ಕಂಡುಬರುತ್ತದೆ. ಕಲಾಟ್‌ನಲ್ಲಿ ಖಾನ್‌ ಅಧಿಪತ್ಯಕ್ಕೆ ಮುನ್ನುಡಿ ಬೀಳುವುದರೊಂದಿಗೆ ಈ ಹೋರಾಟ ಆರಂಭ ಪಡೆದುಕೊಂಡಿತು. ಇದಾದ ಬಳಿಕ ಖಾನ್‌ ಅಧಿಪತ್ಯದಲ್ಲಿನ ನಾಲ್ವರು ಪ್ರಮುಖರು ಬ್ರಿಟಿಷರ ಜತೆ ಒಪ್ಪಂದ ಮಾಡಿಕೊಂಡು ಅಧಿಕಾರವನ್ನು ಬಿಟ್ಟುಕೊಟ್ಟಿದ್ದರು. ಬ್ರಿಟಿಷರ ನಿರ್ಗಮನವಾಗುತ್ತಿದ್ದಂತೆ ಬಲೂಚಿಸ್ಥಾನ್‌ನಲ್ಲಿ ಹೋರಾಟ ಮತ್ತೂಮ್ಮೆ ತೀವ್ರತೆ ಪಡೆದುಕೊಂಡಿತು. ಪಾಕಿಸ್ಥಾನ ಸರಕಾರ ಇವರನ್ನು ಉಗ್ರರು ಎಂದು ಕರೆದು ದಾಳಿಗಳನ್ನು ನಡೆಸಿ ಹತ್ತಿಕ್ಕಲು ಯತ್ನಿಸಿತು. ಇದು ಹೋರಾಟ ಹೆಚ್ಚಾಗಲು ಕಾರಣವಾಯಿತು.

1948ರಿಂದ ಹಿಂಸಾಚಾರ ಉಲ್ಬಣ
ಪಾಕಿಸ್ಥಾನ ಸ್ವಾತಂತ್ರ್ಯಗೊಂಡ ಬಳಿಕ ಬಲೂಚಿಸ್ಥಾನ್‌ನಲ್ಲಿರುವ ಬುಡಕಟ್ಟು ನಾಯಕರ ಜತೆ ಒಪ್ಪಂದ ಮಾಡಿಕೊಂಡು ಪಾಕಿಸ್ಥಾನಕ್ಕೆ ಈ ಪ್ರದೇಶವನ್ನು ಸೇರಿಸಿಕೊಂಡಿತು. 1948ರಲ್ಲಿ ಮಾಡಿಕೊಂಡ ಒಪ್ಪಂದ 6 ತಿಂಗಳಲ್ಲಿ ಮುರಿದುಬಿದ್ದು, ಮೊದಲ ದಾಳಿ ನಡೆಯಿತು. ಇದಾದ ಬಳಿಕ 1958, 1962, 1973, 1977, 2003ರಲ್ಲಿ ದೊಡ್ಡ ಮಟ್ಟದ ದಾಳಿಗಳು ನಡೆದು ಅಪಾರ ಜೀವಹಾನಿ ಉಂಟಾಯಿತು. ಇದಾದ ಬಳಿಕ 2022ರಲ್ಲಿ ಬಲೂಚಿಸ್ಥಾನ್‌ನ ಒಳಗಡೆ ಮತ್ತು ಹೊರಗಡೆಯಿಂದ 71 ದಾಳಿಗಳು ನಡೆದವು. ಮೂಲ ಬಲೂಚಿಸ್ಥಾನಿಗಳಷ್ಟೇ ಅಲ್ಲದೇ 2000ರಿಂದ ಈಚೆಗೆ ಹಲವು ಉಗ್ರ ಸಂಘಟನೆಗಳು ಇಲ್ಲಿ ಜನ್ಮ ತಾಳಿದವು. ಈ ಸಂಘಟನೆಗಳು ನಡೆಸಿದ ದಾಳಿಗೆ 2003ರಿಂದ 2012ರ ವರೆಗೆ 296 ಮಂದಿ ಹತರಾದರು. 2007 ಮತ್ತು 2010ರಲ್ಲಿ ನಡೆದ ಬಾಂಬ್‌ ದಾಳಿಗಳಿಗೆ ಕ್ರಮವಾಗಿ 18 ಮತ್ತು 27 ಮಂದಿ ಮೃತಪಟ್ಟರು.

ಪಾಕ್‌ ನಿರ್ಲಕ್ಷ್ಯ ದಾಳಿಗೆ ಕಾರಣ
ಬಲೂಚಿಸ್ಥಾನ ಪ್ರಾಂತವನ್ನು ಆರಂಭದಿಂದಲೂ ಪಾಕಿಸ್ಥಾನ ಸರಕಾರವು ನಿರ್ಲಕ್ಷಿಸುತ್ತಲೇ ಬಂದಿದೆ. ಈ ಪ್ರಾಂತದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳನ್ನು ಪಾಕಿಸ್ಥಾನ ಸರಕಾರವು ಕೈಗೊಂಡಿಲ್ಲ. ಇಲ್ಲಿನ ಜನರ ಇತಿಹಾಸ ಮತ್ತು ಸಂಸ್ಕೃತಿ ಪಾಕಿಸ್ಥಾನದ ಇತರ ಪ್ರಮುಖ ಪ್ರಾಂತಗಳಲ್ಲಿರುವ ಸಿಂಧಿ ಮತ್ತು ಪಂಜಾಬಿ ಜನರಿಗಿಂತ ಬಹಳ ವಿಭಿನ್ನವಾಗಿದೆ. ಅಲ್ಲದೇ ಧರ್ಮಾಧಾರಿತವಾಗಿ ನಿರ್ಮಾಣವಾಗಿರುವ ಪಾಕಿಸ್ಥಾನದಲ್ಲಿ ಪಂಜಾಬ್‌ ಪ್ರಾಂತದ ಜಮೀನುದಾರರು ಆಡಳಿತದಲ್ಲಿ ಹೆಚ್ಚಿನ ಪಾಲು ಹೊಂದಿದ್ದಾರೆ. ಹೀಗಾಗಿ ಬಲೂಚಿಗಳನ್ನು ಕೀಳಾಗಿಯೇ ಕಾಣಲಾಗುತ್ತಿದ್ದು, ಇವರನ್ನು ಎಲ್ಲ ಸೌಲಭ್ಯಗಳಿಂದ ಪಾಕ್‌ ಸರಕಾರ ವಂಚಿಸುತ್ತಲೇ ಇದೆ. ಈ ಸಂಗತಿಗಳು ಬಲೂಚಿಸ್ಥಾನದಲ್ಲಿ ದಾಳಿ ಹೆಚ್ಚಾಗಲು ಕಾರಣವಾಗಿದೆ.

Advertisement

ಭಾರತಕ್ಕೆ ಎಚ್ಚರಿಕೆಯ ಕರೆಗಂಟೆ
ಬಲೂಚಿಸ್ಥಾನದಲ್ಲಿ ಗಲಾಟೆಗಳು ಹೆಚ್ಚಾದಂತೆ ಭಾರತದ ಸೇನೆ ಹೆಚ್ಚಿನ ಎಚ್ಚರಿಕೆಯನ್ನು ವಹಿಸಬೇಕಾಗುತ್ತದೆ. ಬಲೂಚಿಸ್ಥಾನದಲ್ಲಿ ಪಾಕಿಸ್ಥಾನದ ಸೇನೆ ಹೇಗೆ ನಡೆದುಕೊಳ್ಳುತ್ತಿದೆ. ಪಾಕಿಸ್ಥಾನ ಸೇನೆಗೆ ಅಲ್ಲೇನೂ ನಷ್ಟವಾಗುತ್ತಿದೆ ಎಂಬುದರ ಮೇಲೆ ನಿರಂತರವಾಗಿ ಗಮನ ಹರಿಸಬೇಕಾಗುತ್ತದೆ. ಭಾರತ ಮತ್ತು ಪಾಕಿಸ್ಥಾನದ ನಡುವಿನ ಗಡಿ ಪ್ರದೇಶದಲ್ಲಿ ಭದ್ರತೆ ಹೆಚ್ಚಳಕ್ಕೆ ಕ್ರಮ ಕೈಗೊಳ್ಳಬೇಕಾಗುತ್ತದೆ. ಅಲ್ಲದೇ ಅಫ್ಘಾನಿಸ್ಥಾನ ತಾಲಿಬಾನ್‌ನ ವಶವಾದ ಬಳಿಕ ಪಾಕಿಸ್ಥಾನದ ಬಲೂಚಿಸ್ಥಾನ, ಖೈಬರ್‌ ಪಖು¤ಂಕ್ವಾ ಪ್ರದೇಶಗಳಲ್ಲಿ ಉಗ್ರರ ಉಪಟಳ ಹೆಚ್ಚಾಗಿದೆ. ಇದು ಕಾಶ್ಮೀರದಲ್ಲೂ ಪ್ರಭಾವ ಬೀರುವ ಸಾಧ್ಯತೆಗಳಿಗೆ ಹೀಗಾಗಿ ಭಾರತ ತನ್ನ ಭದ್ರತೆಗಾಗಿ ಭಾರೀ ಎಚ್ಚರಿಕೆ ವಹಿಸಬೇಕಾಗುತ್ತದೆ.

ಬಲೂಚಿಸ್ಥಾನ್‌ ದಾಳಿಗೆ ಭಾರತ ಕೈವಾಡ: ಪಾಕಿಸ್ಥಾನ ಆರೋಪ
ಬಲೂಚಿಸ್ಥಾನದಲ್ಲಿ ನಡೆಯುತ್ತಿರುವ ದಾಳಿಯಲ್ಲಿ ಭಾರತ ಮತ್ತು ಇರಾನ್‌ ದೇಶಗಳ ಕೈವಾಡವಿದೆ ಎಂದು ಪಾಕಿಸ್ಥಾನ ಸರಕಾರ ನಿರಂತರವಾಗಿ ಆರೋಪಿಸುತ್ತಲೇ ಇದೆ. ಇದೇ ಕೋಪದಿಂದಾಗಿ ಭಾರತದ ಗಡಿಯ ಬಳಿ ಪಾಕಿಸ್ಥಾನ ದಾಳಿಗಳನ್ನು ಕೈಗೊಳ್ಳುತ್ತಲೇ ಇದೆ. ಮಂಗಳವಾರ (ಸೆ.10) ತಡರಾತ್ರಿ ಗಡಿ ನಿಯಂತ್ರಣ ರೇಖೆಯ ಬಳಿಕ ಪಾಕಿಸ್ಥಾನ ಸೈನಿಕರು ನಡೆಸಿದ ಅಪ್ರಚೋದಿತ ದಾಳಿಯೂ ಇದರ ಭಾಗವೇ ಎಂದು ಅನುಮಾನಿಸಲಾಗಿದೆ. 2016ರ ಸ್ವಾತಂತ್ರೊéàತ್ಸವ ಭಾಷಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಬಲೂಚಿಸ್ಥಾನದಲ್ಲಿ ಪಾಕಿಸ್ಥಾನ ನಡೆಸುತ್ತಿರುವ ತಾರತಮ್ಯದ ಬಗ್ಗೆ ಮಾತನಾಡಿದ ಬಳಿಕ ಭಾರತದ ಮೇಲೆ ಪಾಕಿಸ್ಥಾನ ಮಾಡುತ್ತಿರುವ ಆರೋಪದ ಪ್ರಮಾಣ ಹೆಚ್ಚಾಗಿದೆ. ಬಲೂಚಿಸ್ಥಾನದ ಉಗ್ರರಿಗೆ ಇರಾನ್‌ನಂತೆ ಭಾರತವೂ ಸಹ ಆರ್ಥಿಕ ನೆರವು ನೀಡುತ್ತಿದೆ ಎಂದು ಪಾಕಿಸ್ಥಾನ ಸದಾ ಆರೋಪಿಸುತ್ತಲೇ ಇದೆ. ಭಾರತವೂ ಈ ಆರೋಪವನ್ನು ಎಲ್ಲ ವೇಳೆ ತಿರಸ್ಕರಿಸುತ್ತಾ ಬಂದಿದೆ.

ಬಲೂಚಿ ಸಂಘರ್ಷ ಹತ್ತಿಕ್ಕಲು ಪಾಕಿಸ್ಥಾನಕ್ಕೆ ಚೀನ ಬೆಂಬಲ
ಬಲೂಚಿಸ್ಥಾನದ ಹೋರಾಟವನ್ನು ಹತ್ತಿಕ್ಕಲು ಪಾಕಿಸ್ಥಾನಕ್ಕೆ ಚೀನ ಬೆಂಬಲ ನೀಡುತ್ತಲೇ ಬಂದಿದೆ. ಒನ್‌ ರೋಡ್‌ ಒನ್‌ ಬೆಲ್ಟ್ ಯೋಜನೆ ಘೋಷಣೆಯಾದ ಬಳಿಕ ಈ ಬೆಂಬಲ ಹೆಚ್ಚಾಗಿದೆ. ಅಲ್ಲದೇ ಬಲೂಚಿಸ್ಥಾನ ಪ್ರಾಂತದಲ್ಲಿ 81,000 ಕೋಟಿ ರೂ. ಮೌಲ್ಯದ ಕಲ್ಲಿದ್ದಲು ಪವರ್‌ ಪ್ಲಾಂಟನ್ನು ಚೀನ ಸ್ಥಾಪನೆ ಮಾಡಿದೆ. ಆದರೆ ಇದರ ನಿರ್ಮಾಣಕ್ಕೆ ಅಥವಾ ನಿರ್ವಹಣೆಗೆ ಬಲೂಚಿಸ್ಥಾನ ಪ್ರಾಂತದವರನ್ನು ಕೆಲಸಕ್ಕೆ ತೆಗೆದುಕೊಳ್ಳದೇ ಚೀನದವರು ಹಾಗೂ ಪಾಕಿಸ್ಥಾನದ ಇತರ ಪ್ರಾಂತಗಳ ಜನರನ್ನು ಸೇರಿಸಿಕೊಂಡಿದ್ದು ಬಲೂಚಿಗಳ ಸಿಟ್ಟನ್ನು ಹೆಚ್ಚು ಮಾಡಿದೆ. ಅಲ್ಲದೇ ಪ್ರತಿಬಾರಿ ದಂಗೆ ನಡೆದಾಗಲೂ ಅದನ್ನು ಹತ್ತಿಕ್ಕಲು ಪಾಕಿಸ್ಥಾನಕ್ಕೆ ಬೇಕಾದ ಶಸ್ತ್ರಾಸ್ತ್ರ ಮತ್ತು ಆರ್ಥಿಕ ನೆರವನ್ನು ಚೀನ ಒದಗಿಸುತ್ತಲೇ ಇದೆ.

-ಗಣೇಶ್‌ ಪ್ರಸಾದ್‌

Advertisement

Udayavani is now on Telegram. Click here to join our channel and stay updated with the latest news.

Next