Advertisement

ರಾಷ್ಟ್ರದಲ್ಲಿ ದೇವರನ್ನು ಕಾಣುತ್ತಿದ್ದ ಪೇಜಾವರ ಶ್ರೀ

05:22 PM Nov 25, 2021 | Team Udayavani |

ಹುಬ್ಬಳ್ಳಿ: ಉಡುಪಿಯ ಪೇಜಾವರಮಠದ ಶ್ರೀ ವಿಶ್ವೇಶತೀರ್ಥ ಶ್ರೀಪಾದಂಗಳು ದೇವರನ್ನು ರಾಷ್ಟ್ರದಲ್ಲಿ ಕಾಣುತ್ತಿದ್ದರು. ಹೀಗಾಗಿ ಅವರು ಹೋದಲ್ಲೆಲ್ಲ ರಾಷ್ಟ್ರ ದೇವೋಭವ ಎಂಬ ಉಪದೇಶ ಸಾರುತ್ತಿದ್ದರು ಎಂದು ಶ್ರೀ ಆದೋಕ್ಷಜ ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದಂಗಳು ಹೇಳಿದರು.

Advertisement

ಇಲ್ಲಿನ ದೇಶಪಾಂಡೆ ನಗರದ ಶ್ರೀಕೃಷ್ಣ ಮಂದಿರದಲ್ಲಿ ಅಖಿಲ ಭಾರತ ಮಾಧ್ವ ಮಹಾಮಂಡಳ ಹುಬ್ಬಳ್ಳಿ ಶಾಖೆ ಹಾಗೂ ದಕ್ಷಿಣ ದ್ರಾವಿಡ ಬ್ರಾಹ್ಮಣ ಸಮಾಜ ಆಶ್ರಯದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಪದ್ಮವಿಭೂಷಣ ಪುರಸ್ಕೃತ ಉಡುಪಿ ಪೇಜಾವರ ಮಠಾಧೀಶ ಶ್ರೀ ವಿಶ್ವೇಶತೀರ್ಥ ಶ್ರೀಪಾದಂಗಳವರಿಗೆ ಅಭಿನಂದನಾ ಸಮಾರಂಭದ ಸಾನ್ನಿಧ್ಯ ವಹಿಸಿ ಶ್ರೀಗಳು ಮಾತನಾಡಿದರು. ಶ್ರೀ ವಿಶ್ವೇಶತೀರ್ಥ ಶ್ರೀಪಾದಂಗಳಲ್ಲಿ ದೇವ ಭಕ್ತಿ ದೇಶ ಭಕ್ತಿ ಬೇರೆ ಆಗಿರಲಿಲ್ಲ. ಹೀಗಾಗಿ ಅವರು ರಾಷ್ಟ್ರ ದೇವೋಭವ ಎಂಬ ಘೋಷಣೆ ಮಾಡಿದ್ದರು ಎಂದು ಹೇಳಿದರು.

ನಮ್ಮ ಸೇವೆ ಕೇವಲ ಗುಡಿ-ಗುಂಡಾರಗಳಲ್ಲಿ ಪೂಜೆ ಮಾಡಿದರೆ ಸಾಲದು. ನಮ್ಮ ಸೇವೆ ಪರಿಪೂರ್ಣವಾಗಬೇಕಾದರೆ ಸಮಾಜದಲ್ಲಿ ತಿರುಗಾಡಬೇಕು. ಎಲ್ಲರಲ್ಲೂ ಭಗವಂತನನ್ನು ಆರಾಧನೆ ಮಾಡಬೇಕು.ಯಾರಿಗೂ ಕೂಡ ಹಿಂಸೆ ಆಗದಂತೆ ಸಮಾಜದಲ್ಲಿ ಬದುಕಬೇಕು. ಎಲ್ಲರೂ ಸಂತೋಷ, ಸುಖದಿಂದ ಇರಬೇಕು. ಅಂದಾಗ ಮಾತ್ರ ಅಂತಹ ಸಮಾಜದಲ್ಲಿ ಸುಖ-ಶಾಂತಿ ನೆಲೆಸಲು ಸಾಧ್ಯವೆಂದು ಶ್ರೀಗಳು ಸಮಾಜದ ಎಲ್ಲರೊಂದಿಗೆ ಬೆರೆತು ಅವರಲ್ಲಿ ಶ್ರೀಕೃಷ್ಣನನ್ನು ಕಂಡರು. ಜೀವನ ಸವೆದರು. ಅಂತಹ ಗುರುಗಳನ್ನು ಪಡೆದ ನಾವೇ ಧನ್ಯರು ಎಂದರು.

ನಮ್ಮಲ್ಲಿ ಮುಖ್ಯವಾಗಿ ಬೇಕಿದ್ದು ದೇಶ ಮತ್ತು ದೇವ ಭಕ್ತಿ. ಆದರೆ ಇಂದು ದೇವ ಮತ್ತು ದೇಶ ಭಕ್ತಿಯಿಲ್ಲ. ಕೇವಲ ದೇಹ ಭಕ್ತಿಯಿದ್ದು, ಎಲ್ಲವೂ ನನಗೆ ಬೇಕು ಎಂಬುದಾಗಿದೆ. ಶ್ರೀಗಳು ದೇಶದುದ್ದಗಲಕ್ಕೂ ಸಂಚರಿಸಿ ಸಂಘಟನೆ ಮಾಡಿ ಸಮಾಜಕ್ಕೆ ಜವಾಬ್ದಾರಿ ಕೊಟ್ಟು ನಿಭಾಯಿಸಿದರು. ಭಾರತ ಸರಕಾರ ಉಡುಪಿ ಪೇಜಾವರಮಠದ ಶ್ರೀ ವಿಶ್ವೇಶತೀರ್ಥ ಶ್ರೀಪಾದಂಗಳಿಗೆ ಅವರ ವ್ಯಕ್ತಿಗತ ಗುಣ ಗುರುತಿಸಿ ಪದ್ಮ ವಿಭೂಷಣ ಪ್ರಶಸ್ತಿ ಪ್ರದಾನ ಮಾಡಿದೆ ವಿನಃ ಯಾವುದೋ ಒಂದು ರಂಗದಲ್ಲಿ ಮಾಡಿದ ಸಾಧನೆಗಲ್ಲ ಎಂದರು.

ಶ್ರೀಕೃಷ್ಣ ಸಂಪಗಾಂವಕರ ಸ್ವಾಮೀಜಿ ಮಾತನಾಡಿ, ಶ್ರೀ ವಿಶ್ವೇಶತೀರ್ಥ ಶ್ರೀಪಾದಂಗಳು ಯತಿಗಳು ಸಮಾಜದಲ್ಲಿ ಹೇಗಿರಬೇಕೆಂಬುದನ್ನು ತಮ್ಮ ಕೃತಿಗಳ ಮೂಲಕ ಮಾಡಿ ತೋರಿಸಿದರು. ಶ್ರೀಗಳು ಎಂದೂ ತಮಗಾಗಿ ಬದುಕಲಿಲ್ಲ. ಸಮಾಜದ ಸೇವೆಯಲ್ಲೆ ತಮ್ಮ ಜೀವನ ಕಳೆದರು. ಮಾದರಿ ಸಂತರಾಗಿ ಬಾಳಿದರು ಎಂದರು.

Advertisement

ಧಾರವಾಡ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಪಿ. ಕೃಷ್ಣಕಾಂತ ಮಾತನಾಡಿ, ಶ್ರೀ ವಿಶ್ವೇಶತೀರ್ಥ ಶ್ರೀಪಾದಂಗಳು ತಮ್ಮ ಜೀವನ ಪೂರ್ತಿ ಧಾರ್ಮಿಕ, ಸಾಮಾಜಿಕ ಕಾರ್ಯ ಮಾಡಿದರು. ಬಡ ವಿದ್ಯಾರ್ಥಿಗಳಿಗೆ ವಿದ್ಯಾರ್ಜನೆ ನೀಡಿದರು ಎಂದರು. ರಾಘವೇಂದ್ರ ಎಡನೀರು ಮಾತನಾಡಿದರು.

ವಿಧಾನ ಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ, ಗೋವಿಂದ ಜೋಶಿ, ಶ್ರೀಕಾಂತ ಕೆಮೂ¤ರ, ಎ.ಸಿ. ಗೋಪಾಲ, ವಿನಾಯಕ ಆಕಳವಾಡಿ, ಗೋಪಾಲ ಜೋಶಿ, ಕೃಷ್ಣರಾಜ ಕೆಮೂ¤ರ, ಶ್ರೀಪಾದ ಸಿಂಗನಮಲ್ಲಿ, ಅನಂತಪದ್ಮನಾಭ ಐತಾಳ, ಗುರುರಾಜ ಬಾಗಲಕೋಟ, ಡಾ|ವಿ.ಜಿ. ನಾಡಗೌಡ, ಪಂ|ಸತ್ಯಮೂರ್ತಿ ಆಚಾರ, ವಸಂತ ನಾಡಜೋಶಿ, ಶಂಕರ ಪಾಟೀಲ, ರಾಘವೇಂದ್ರ ನಂಜನಗೂಡ, ಗೋಪಾಲ ಕುಲಕರ್ಣಿ, ಶ್ರೀಧರ ವಿ.ಎನ್‌., ಮನೋಹರ ಪರ್ವತಿ ಮೊದಲಾದವರಿದ್ದರು.

ಗೀತಾ ಸೋಮೇಶ್ವರ ಪ್ರಾರ್ಥಿಸಿದರು. ಪೂರ್ಣಪ್ರಜ್ಞ ವಿದ್ಯಾಪೀಠದ ಪ್ರಾಚಾರ್ಯ ಬದರಿ ಆಚಾರ್ಯ ನಿರೂಪಿಸಿದರು. ಅನಂತರಾಜ ಭಟ್‌ ವಂದಿಸಿದರು. ಸಮಾರಂಭಕ್ಕೂ ಮೊದಲು ದೇಶಪಾಂಡೆ ನಗರದ ಬಾಳಿಗಾ ಕ್ರಾಸ್‌ನಿಂದ ಶ್ರೀಕೃಷ್ಣ ಮಂದಿರವರೆಗೆ ಪದ್ಮ ವಿಭೂಷಣ ಪ್ರಶಸ್ತಿಯೊಂದಿಗೆ ಶೋಭಾಯಾತ್ರೆ ನಡೆಯಿತು.

Advertisement

Udayavani is now on Telegram. Click here to join our channel and stay updated with the latest news.

Next