Advertisement

ಚಿತ್ರದುರ್ಗದಲ್ಲಿ “ಪೈಲ್ವಾನ್‌’

09:15 AM Jul 11, 2019 | Lakshmi GovindaRaj |

ಸುದೀಪ್‌ ಅಭಿನಯದ ಬಹುನಿರೀಕ್ಷಿತ ಚಿತ್ರ “ಪೈಲ್ವಾನ್‌’ ಬಿಡುಗಡೆಗೆ ಸಜ್ಜಾಗಿದೆ. ಈಗ ಈ ಚಿತ್ರದ ಹೊಸ ಸುದ್ದಿಯೆಂದರೆ, ಕೋಟೆ ನಾಡು ಎಂದೇ ಪ್ರಸಿದ್ಧಿ ಪಡೆದಿರುವ ಚಿತ್ರದುರ್ಗದಲ್ಲಿ “ಪೈಲ್ವಾನ್‌’ ಚಿತ್ರದ ಆಡಿಯೋ ಸಿಡಿ ಬಿಡುಗಡೆ ಮಾಡಲು ಚಿತ್ರತಂಡ ತಯಾರು ನಡೆಸಿದೆ.

Advertisement

ಹೌದು, ಚಿತ್ರದುರ್ಗದಲ್ಲಿ “ಪೈಲ್ವಾನ್‌’ ಚಿತ್ರದ ಆಡಿಯೋ ಸಿಡಿ ಬಿಡುಗಡೆ ಸಮಾರಂಭ ಅದ್ಧೂರಿಯಾಗಿ ನಡೆಯಲಿದೆ. ಈಗಾಗಲೇ ಚಿತ್ರದ ಟೀಸರ್‌ ಮತ್ತು ಪೋಸ್ಟರ್‌ ಬಿಡುಗಡೆ ಮಾಡುವ ಮೂಲಕ ಎಲ್ಲರಲ್ಲೂ ಹೊಸದೊಂದು ಕುತೂಹಲ ಹುಟ್ಟುಹಾಕಿದ್ದ ಚಿತ್ರತಂಡ, ಈಗ ಆಡಿಯೋ ಬಿಡುಗಡೆ ಸಮಾರಂಭವನ್ನು ಚಿತ್ರದುರ್ಗದಲ್ಲಿ ನೆರವೇರಿಸುವ ಮೂಲಕ ಮತ್ತೊಂದು ಹೊಸ ನಿರೀಕ್ಷೆಯನ್ನು ಹುಟ್ಟುಹಾಕಿದೆ.

ಜುಲೈ 27 ರಂದು ಚಿತ್ರದುರ್ಗದಲ್ಲಿ “ಪೈಲ್ವಾನ್‌’ ಕಾಣಿಸಿಕೊಳ್ಳುತ್ತಿದ್ದು, ಅಲ್ಲಿ ನಡೆಯಲಿರುವ ವರ್ಣರಂಜಿತ ಕಾರ್ಯಕ್ರಮದಲ್ಲಿ ಹಾಡುಗಳು ಬಿಡುಗಡೆಯಾಗಲಿವೆ. ಇಷ್ಟು ದಿನ “ಪೈಲ್ವಾನ್‌’ ಚಿತ್ರದ ಹಾಡುಗಳು ಹೇಗಿರಲಿವೆ ಎಂಬ ಪ್ರಶ್ನೆಗೆ ಜುಲೈ 27 ರಂದು ಉತ್ತರ ಸಿಗಲಿದೆ. ಅಂದಹಾಗೆ, ಅಂದು ನಡೆಯಲಿರುವ ಕಲರ್‌ಫ‌ುಲ್‌ ಹಾಡುಗಳ ಬಿಡುಗಡೆ ಸಮಾರಂಭಕ್ಕೆ ಬಾಲಿವುಡ್‌ ನಟ ಸುನೀಲ್‌ಶೆಟ್ಟಿ ಕೂಡ ಆಗಮಿಸುತ್ತಿರುವುದು ವಿಶೇಷ.

ಇದೇ ಮೊದಲ ಬಾರಿಗೆ ಸುನೀಲ್‌ಶೆಟ್ಟಿ ಅವರು, “ಪೈಲ್ವಾನ್‌’ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟಿದ್ದಾರೆ. ಅಷ್ಟೇ ಅಲ್ಲ, ಹಾಡುಗಳ ಬಿಡುಗಡೆ ಕಾರ್ಯಕ್ರಮ ನಡೆಯಲಿರುವ ಕಲ್ಲಿನಕೋಟೆ ಚಿತ್ರದುರ್ಗಕ್ಕೂ ಮೊದಲ ಸಲ ಭೇಟಿ ನೀಡುತ್ತಿರುವುದು ವಿಶೇಷ. ಇನ್ನು, ಸುದೀಪ್‌ ಅಭಿಮಾನಿಗಳಂತೂ, “ಪೈಲ್ವಾನ್‌’ ಹಾಡುಗಳನ್ನು ಬರಮಾಡಿಕೊಳ್ಳಲು ಸಕಲ ಸಿದ್ಧತೆ ಮಾಡಿಕಕೊಳ್ಳುತ್ತಿದ್ದಾರೆ.

ಅಂದಹಾಗೆ, ಈ ಹಿಂದೆ ದಾವಣಗೆರೆಯಲ್ಲಿ ಸುದೀಪ್‌ ಅಭಿನಯದ “ಹೆಬ್ಬುಲಿ’ ಚಿತ್ರದ ಆಡಿಯೋ ಬಿಡುಗಡೆ ಮಾಡಲಾಗಿತ್ತು. ಈಗ “ಪೈಲ್ವಾನ್‌’ ಚಿತ್ರದ ಹಾಡುಗಳನ್ನು ಚಿತ್ರದುರ್ಗದಲ್ಲಿ ಮಾಡಲು ಚಿತ್ರತಂಡ ನಿರ್ಧರಿಸಿದೆ. ಚಿತ್ರದುರ್ಗಕ್ಕೂ ಸುದೀಪ್‌ ಅವರಿಗೂ ಅವಿನಾಭಾವ ಸಂಬಂಧ. ಕಾರಣ, ಚಿತ್ರದುರ್ಗದಲ್ಲೇ ಸುದೀಪ್‌ ಅವರ ಅತೀ ಹೆಚ್ಚು ಅಭಿಮಾನಿ ವರ್ಗ ತುಂಬಿಕೊಂಡಿದೆ.

Advertisement

ಅಷ್ಟೇ ಅಲ್ಲ, ಅವರು “ಗಂಡುಗಲಿ ವೀರಮದಕರಿ ನಾಯಕ’ ಸಿನಿಮಾ ಮಾಡುವುದಾಗಿ ನಿರ್ಧರಿಸಿದ್ದು ಕೂಡ ಇದೇ ಕಾರಣಕ್ಕೆ. ಆದರೆ, ಆ ಚಿತ್ರವನ್ನು ಸುದೀಪ್‌ ಅವರು ಕೆಲವು ಕಾರಣಗಳಿಂದ ಕೈಬಿಟ್ಟಿದ್ದಾರೆ. ಈಗ “ಪೈಲ್ವಾನ್‌’ ಸುದ್ದಿ ಜೋರಾಗಿದ್ದು, ಹಾಡುಗಳ ಬಿಡುಗಡೆ ಮೂಲಕ ಮತ್ತೊಂದು ಕುತೂಹಲಕ್ಕೆ ಚಿತ್ರ ಕಾರಣವಾಗಲಿದೆ. ಆಗಸ್ಟ್‌ ಕೊನೆಯ ವಾರದಲ್ಲಿ “ಪೈಲ್ವಾನ್‌’ ರಿಲೀಸ್‌ ಆಗಲಿದೆ ಎಂಬ ಸುದ್ದಿ ಇದೆ.

Advertisement

Udayavani is now on Telegram. Click here to join our channel and stay updated with the latest news.

Next