Advertisement

ನೇಪಥ್ಯಕ್ಕೆ ಸರಿದ ಪದಯಾನ ಪುರುಷ

12:04 AM Oct 13, 2021 | Team Udayavani |

ಪದ್ಯಾಣ ಎಂಬ ಊರಿನ ಹೆಸರನ್ನು ನೆನಪಿಸಿ ಕೊಂಡಾಗ ಫಕ್ಕನೆ ಹತ್ತು ಹದಿನೈದು ಕಲಾವಿದರ ಮೊಗಗಳ ಮೆರವಣಿಗೆ ಮನದಲ್ಲಿ ಹಾದು ಹೋಗುತ್ತದೆ. ತೆಂಕುತಿಟ್ಟಿನ ಯಕ್ಷಗಾನದ ಹಿಮ್ಮೇಳದ ಮಟ್ಟಿಗೆ ಅದೊಂದು ಘರಾನಾ. ಈ ಘರಾನಾದ ಬಹುದೊಡ್ಡ ಹೆಸರು ಪದ್ಯಾಣ ಗಣಪತಿ ಭಟ್ಟರು. ಇಂದು ನೇಪಥ್ಯ ಸೇರಿಬಿಟ್ಟರು. ಅರುವತ್ತೆ„ದರ ವಯಸ್ಸು ಮರಣದ್ದೇನೂ ಅಲ್ಲ. ಕಳೆದ ವರ್ಷ ರಂಗ ದಿಂದ ಕೆಳಗಿಳಿದಿದ್ದರು. ಈಗ ಲೋಕದಿಂದಲೇ ನಿರ್ಗಮಿ ಸುತ್ತಾರೆಂದು ಯಾರೂ ಯೋಚಿ ಸಿರಲಿಲ್ಲ. ರಂಗಸ್ಥಳವೇ ಇರಲಿ, ತಾಳಮದ್ದಲೆ, ಗಾನವೈಭವ -ಯಾವುದೇ ಇರಲಿ. ಅಲ್ಲಿ ಗಣ ಪಣ್ಣನ ಛಾಪು ಇದ್ದೇ ಇರುತ್ತಿತ್ತು. ಬಹುಕಾಲ ಗುನುಗುವಂತೆ ಮಾಡುತ್ತಿತ್ತು. ಅಂತರಂಗದ ಆಳದಿಂದ ಎದ್ದು ಬರುವ ಸ್ವರದ ನಾದ ಸುತ್ತೆಲ್ಲ ಆವರಿಸಿ ಕೇಳುಗನ ಮನವನ್ನು ಹೊಕ್ಕು ಅರಿವಿಲ್ಲದೆ ಚಪ್ಪಾಳೆಯಾಗಿ ಚಿಮ್ಮುತ್ತಿತ್ತು. ಅವರು ಎಲ್ಲರ ಪ್ರೀತಿಯ ಗಣಪಣ್ಣ.

Advertisement

ಮಗುವಾಗಿದ್ದಾಗ ಬದುಕಲಾರದ ಬಾಲಕನನ್ನು ಚಿಕ್ಕಮ್ಮ ಬದುಕಿಸಿದರಂತೆ. ಬೆಳೆದ ಕಿಶೋರ- ಏನೂ ಕಲಿಯಲಾಗದ ತಂಟೆಕೋರನನ್ನು ಧರ್ಮಸ್ಥಳದ ಯಕ್ಷಗಾನ ಕೇಂದ್ರವು ಭಾಗವತನನ್ನಾಗಿ ಬದಲಾಯಿ ಸಿತು. ಎಂದೋ ನಿಂತುಹೋಗುತ್ತಿದ್ದ ಸುಪ್ತಪ್ರತಿಭೆ, ಅವರ ಸ್ವರ ನಾಭಿಮೂಲದಿಂದೆದ್ದು ಬಂದಂತೆ ಹೊರಬಂದು ತೆಂಕಿನ ಅಗ್ರಮಾನ್ಯ ಕಲಾವಿದನನ್ನಾಗಿ ರೂಪಿಸಿದ ಕಥೆಯೇ ಬಹುರೋಚಕ.

ಗಣಪತಿ ಭಟ್ಟರು ಅರ್ಧ ಶತಮಾನದಷ್ಟು ಕಾಲ ಭಾಗವತರಾಗಿ ಅನುಭವ ಹೊಂದಿದ ಹಿರಿಯರು. ಚೌಡೇಶ್ವರಿ ಮೇಳದಿಂದ ತೊಡಗಿ ಅನೇಕ ಮೇಳಗಳ ತಿರುಗಾಟವಾದರೂ ಸುದೀರ್ಘ‌ ಅವಧಿಯ ಅವರ ಕಲಾಯಾನ ಸುರತ್ಕಲ್‌ ಮೇಳದಲ್ಲೇ ನಡೆದುದು ವಿಶೇಷ. ಅಗರಿ ಶ್ರೀನಿವಾಸ ಭಾಗವತರು, ಶೇಣಿ ಗೋಪಾಲಕೃಷ್ಣ ಭಟ್ಟರು, ತೆಕ್ಕಟ್ಟೆ ಆನಂದ ಮಾಸ್ತರರು, ಅಗರಿ ರಘುರಾಮ ಭಾಗವತರು ಮುಂತಾದ ಮಹಾನ್‌ ಕಲಾವಿದರೊಂದಿಗಿನ ಸುದೀರ್ಘ‌ವಾದ ಒಡನಾಟದ ಅದೃಷ್ಟವನ್ನು ಪಡೆದವರು ಗಣಪಣ್ಣ. ಮಾತಿನ ಮಲ್ಲರಾದ ಶೇಣಿಯವರಿಗೆ ಮಾತಿಗಿಂತ ಮೌನವನ್ನೇ ಇಷ್ಟಪಡುವ ಗಣಪತಿ ಭಟ್ಟರು ಬಲು ಪ್ರೀತಿಯ ಭಾಗವತ. ಕನ್ನಡ – ತುಳು ಭಾಷೆಗಳ ಪ್ರಸಂಗಗಳನ್ನು ಚೆನ್ನಾಗಿ ನಿರ್ವಹಿಸುತ್ತಿದ್ದ ಭಟ್ಟರು ತಾಳಮದ್ದಲೆಯಲ್ಲೂ ಬಹುಬೇಡಿಕೆಯ ಕಲಾವಿ ದರು. ಮಳೆಗಾಲದ ತಾಳಮದ್ದಲೆಗೆ ನಾಲ್ಕು ತಿಂಗಳು ಮೊದಲೇ ಕೇಳಿದರೂ ಅವರು ಲಭ್ಯರಾಗದಿದ್ದು ದುಂಟು. ಒಪ್ಪಿದ ಕಾರ್ಯಕ್ರಮವಾದರೆ ತಪ್ಪಿಸುವ ಮಾತಿಲ್ಲ. ನಮ್ಮ ಒಂದು ಕಾರ್ಯಕ್ರಮಕ್ಕೆ ಒಪ್ಪಿದ್ದ ಅವರಿಗೆ ಬೆಂಗಳೂರಿನಲ್ಲಿ ನಿರಂತರ ಕಾರ್ಯ ಕ್ರಮವಿತ್ತು. ನಮ್ಮಕಾರ್ಯಕ್ರಮಕ್ಕಾಗಿಯೇ ಬಂದು ಮರುದಿನ ಮರಳಿದ್ದರು. ಸುರತ್ಕಲ್‌ ಮೇಳ ನಿಂತ ಮೇಲೆ ಮುಂದೆ ಹೊಸನಗರ ಬದಲಾದ ಹೆಸರಿನ ಹನುಮಗಿರಿ ಮೇಳದ ಪ್ರಧಾನ ಭಾಗವತರಾಗಿ ಬಹುಮಂದಿ ಸುಪ್ರಸಿದ್ಧ ಕಲಾವಿದರ ಕಾಲಮಿತಿ ಯಕ್ಷಗಾನವನ್ನು ಅವರು ಸಂಯೋಜಿಸುತ್ತಿದ್ದ ರೀತಿ ಅನ್ಯಾದೃಶ.

ಇದನ್ನೂ ಓದಿ:ಐಟಿ ದಾಳಿಗೆ ಸಿದ್ದರಾಮಯ್ಯ ಕಾರಣ: ಎಚ್‌ಡಿಕೆ

ಒಂದೂವರೆ ತಾಸಿನಲ್ಲಿ ರುಕ್ಮಿಣೀ ಕಲ್ಯಾಣ, ಅಷ್ಟೇ ಅವಧಿಯಲ್ಲಿ ಕಾಲನೇಮಿ ಕಾಳಗದಂತಹ ಪ್ರಸಂಗಗಳನ್ನು ಅವರು ನಡೆಸಿದ ರೀತಿಯನ್ನು ನಾನು ನೋಡಿದ್ದೇನೆ. ಬಹುಶಃ ಹನುಮಗಿರಿ ಮೇಳದ ಸಂಯೋಜನೆಯ ಪ್ರಯೋಗ ಚಿಂತನೆ ಯಲ್ಲಿ ಭಾಗವತರ ಪಾತ್ರ ಬಹಳವಿತ್ತು. ಮೇಳ ವನ್ನು ಬಿಡುವಾಗಲೂ ಬೇಡಿಕೆ ಯುಳ್ಳ ಹಿರಿಯ ಭಾಗವತರಾ ಗಿಯೇ ಉಳಿದಿದ್ದರು. ಅವರ ಮನೆಯಲ್ಲಿ ನಿತ್ಯವೂ ಹಲವು ಶಿಷ್ಯರಿಗೆ ಕಲಿಸುತ್ತಿದ್ದರಂತೆ.

Advertisement

ಪದ್ಯಾಣವೆಂಬುದು ಅವರ ಮೂಲ ನೆಲೆಯ ಹೆಸರಾ ದರೂ ಅವರ ಹಿರಿಯರ ಕಾಲದಲ್ಲೇ ಕಲ್ಮಡ್ಕ ಸಮೀಪದ ಗೋಳ್ತಾಜೆಗೆ ವಾಸ್ತವ್ಯವನ್ನು ಬದಲಾಯಿಸಿದ್ದರು.

ಆಟ ಕೂಟಗಳಂತೆ ಇತ್ತೀಚೆಗೆ ಪ್ರಸಿದ್ಧವಾದ ಗಾನ ವೈಭವಗಳಲ್ಲೂ ಅತ್ಯಂತ ಪ್ರಸಿದ್ಧರಾಗಿದ್ದ ಗಣಪತಿ ಭಟ್ಟರ ನಿರ್ಗಮನದಿಂದ ತೆಂಕುತಿಟ್ಟಿನ ಯಕ್ಷಗಾನ ಕ್ಷೇತ್ರದ ಹಿರಿಮೆಯ ಗರಿಯೊಂದು ಕಳಚಿದಂತಾಯಿತು.

ಎಸ್‌ಪಿಬಿಯವರು ನಡೆಸುತ್ತಿದ್ದ “ಎದೆ ತುಂಬಿ ಹಾಡಿದೆನು…’ ಗಾನ ಸರಣಿಯಲ್ಲಿ  ನಿರ್ಣಾಯಕರಾಗಿ ಭಾಗವಹಿಸಿದ ಯಕ್ಷಗಾನದ ಭಾಗವತ ಗಣಪತಿ ಭಟ್ಟರು. ಮಾಂಬಾಡಿ ನಾರಾಯಣ ಭಾಗವತರ ಶಿಷ್ಯರಾಗಿ ಬೆಳೆದು ತನ್ನದೇ ಪರಂಪರೆಯನ್ನು ಸೃಷ್ಟಿಸಿದ ವಿಶಿಷ್ಟ ಭಾಗವತರು. ಅವರ ಶಿಷ್ಯ ರವಿಚಂದ್ರ ಕನ್ನಡಿಕಟ್ಟೆಯವರಲ್ಲಿ ಅವರದೇ ನಡೆಯನ್ನು ಕಾಣಬಹುದು. ತೆಂಕಿನಲ್ಲಿ ಈಗ ಪದ್ಯಾಣ ಶೈಲಿಯೂ ಪ್ರಸಿದ್ಧವಾಗಿದೆ.

ಮೃದು ಮಾತಿನ, ನಿರ್ಮಲ ಮನದ, ಅದ್ಭುತ ನಿರ್ದೇಶಕ, ರಂಗ ಪರಿಣತ, ಸಮಗ್ರ ಹಿಮ್ಮೇಳದ ಅರಿವಿರುವ ಹಿರಿಯ ಭಾಗವತರನ್ನು ಯಕ್ಷರಂಗ ಕಳೆದುಕೊಂಡಿದೆ.

2016ರಲ್ಲಿ ಗಣಪತಿ ಭಟ್ಟರಿಗೆ ಅರುವತ್ತು ವರ್ಷವಾದಾಗ ಯಕ್ಷಗಾನದ ಮಹಾಪೋಷಕ ಟಿ. ಶ್ಯಾಮ ಭಟ್ಟರ ಮುತುವರ್ಜಿಯಲ್ಲಿ ಬಹುದೊಡ್ಡ ಗೌರವವನ್ನೂ “ಪದಯಾನ’ ವೆಂಬ ಅಭಿನಂದನ ಗ್ರಂಥವನ್ನೂ ಅವರಿಗೆ ಸಮರ್ಪಿಸಲಾಗಿತ್ತು. ಪದ್ಯಾಣದ ಪದ ಈಗ ಯಾನವನ್ನೂ ನಿಲ್ಲಿಸಿದೆ.

ಪತ್ನಿ, ಇಬ್ಬರು ಪುತ್ರರು, ಅಪಾರ ಅಭಿಮಾನಿ ಗಳನ್ನು ಅಗಲಿದ ಮಹಾಚೇತನಕ್ಕೆ ಸದ್ಗತಿಯೊದಗಲಿ. ಅವರ ಅಗಲುವಿಕೆಯ ದುಃಖವನ್ನು  ಸಹಿಸುವ ಶಕ್ತಿಯನ್ನು ಭಗವಂತನು ಎಲ್ಲರಿಗೂ ನೀಡಲಿ.

– ಶ್ರೀಧರ ಡಿ.ಎಸ್‌., ತಾಳಿಪಾಡಿ

Advertisement

Udayavani is now on Telegram. Click here to join our channel and stay updated with the latest news.

Next