ಪಡುಬಿದ್ರಿ: ಚತುಃಷ್ಪಥ ಹೆದ್ದಾರಿ ಅಪೂರ್ಣ ಕಾಮಗಾರಿಯನ್ನು ತಿಂಗಳೊಳಗೆ ಪೂರ್ಣರ್ಗೊಳಿಸುವಂತೆ ಪಡುಬಿದ್ರಿ ಗ್ರಾಪಂ ಅಧ್ಯಕ್ಷ ರವಿ ಶೆಟ್ಟಿ ಪಾದೆಬೆಟ್ಟು ಅವರ ನೇತೃತ್ವದಲ್ಲಿ ನವಯುಗ ಶಾಖಾ ಕಚೇರಿಗೆ ಮುತ್ತಿಗೆ ಹಾಕಿದ ಸಂದರ್ಭದಲ್ಲಿ ಗ್ರಾ. ಪಂ. ಸದಸ್ಯರು ಆಗ್ರಹಿಸಿದ್ದಾರೆ.
ಕಚೇರಿಗೆ ಬೀಗ ಜಡಿಯಲು ನಿರ್ಧರಿಸಿದ ಗ್ರಾ. ಪಂ. ಸದಸ್ಯರು ನವಯುಗ ಯೋಜನಾ ಪ್ರಬಂಧಕ ಶ್ರೀನಿವಾಸ್ ಸ್ಥಳಕ್ಕೆ ಬರಬೇಕೆಂದು ಒತ್ತಾಯಿಸಿದರು. ಮೂರು ತಿಂಗಳಿನಿಂದ ಮನವಿ ಮಾಡಿಕೊಂಡರೂ ಕಂಪೆನಿ ಗ್ರಾ. ಪಂ ವಿನಂತಿಯನ್ನು ಕಡೆಗಣಿಸುತ್ತಿದೆ. ಹಾಗಾಗಿ ಅಧಿಕಾರಿ ಕಚೇರಿಗೆ ಬಾರದಿದ್ದಲ್ಲಿ ಕಚೇರಿಗೆ ಬೀಗ ಜಡಿಯುವುದು ಎಂಬುದಾಗಿ ಅಚಲ ನಿರ್ಧಾರವನ್ನು ಗ್ರಾ. ಪಂ. ಪ್ರಕಟಿಸಿದ ಬಳಿಕ ಯೋಜನಾ ಪ್ರಬಂಧಕ ಶ್ರೀನಿವಾಸ್ ಪಡುಬಿದ್ರಿ ಕಚೇರಿಗಾಗಮಿಸಿದರು.
ಇದನ್ನೂ ಓದಿ:ಗಂಡನಿಂದ ದೂರವಾಗಿ ರಸ್ತೆಬದಿ ಲಿಂಬೆ ಪಾನಕ ಮಾರುತ್ತಿದ್ದ ಯುವತಿ ಈಗ ಪೊಲೀಸ್ ಇನ್ಸ್ ಪೆಕ್ಟರ್
ತಕ್ಷಣ ಅವರನ್ನು ಅವೈಜ್ಞಾನಿಕ ಕಾಮಗಾರಿಗಳು ನಡೆದಿರುವ ಪಡುಬಿದ್ರಿಯ ವಿವಿದೆಡೆಗಳಿಗೆ ಕರೆದೊಯ್ಯಲಾಯಿತು. ಪರಿಸ್ಥಿತಿಯನ್ನು ಅಧ್ಯಕ್ಷ ರವಿ ಶೆಟ್ಟಿ ಮತ್ತಿತರರು ವಿವರಿಸಿದರು. ತಿಂಗಳೊಳಗೆ ಪರಿಹಾರವನ್ನು ನವಯುಗ ಕಾಮಗಾರಿಗಳಿಂದ ಕಂಡುಕೊಳ್ಳುವಂತಾಗಬೇಕು. ಇಲ್ಲದಿದ್ದಲ್ಲಿ ಉಗ್ರ ಪ್ರತಿಭಟನೆಯನ್ನು ಸಂಘಟಿಸಲಾಗುವುದೆಂದು ಗ್ರಾಪಂ. ಅಧ್ಯಕ್ಷ ರವಿ ಶೆಟ್ಟಿ ನವಯುಗ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ.
ಗ್ರಾ. ಪಂ. ಉಪಾಧ್ಯಕ್ಷೆ ಯಶೋದಾ, ತಾ. ಪಂ. ಮಾಜಿ ಸದಸ್ಯೆ ನೀತಾ ಗುರುರಾಜ್, ಗ್ರಾ.ಪಂ. ಸದಸ್ಯರಾದ ನವೀನ್ ಶೆಟ್ಟಿ, ಗಣೇಶ್ ಕೋಟ್ಯಾನ್ ಸಹಿತ ಎಲ್ಲಾ 32 ಸದಸ್ಯರು ಈ ಸಂದರ್ಭದಲ್ಲಿ ಹಾಜರಿದ್ದರು.