Advertisement

ಡಿ.16ರಿಂದ ಬೆಂಬಲ ಬೆಲೆಯಡಿ ಭತ್ತ ಖರೀದಿ

06:00 AM Nov 25, 2018 | |

ಬೆಂಗಳೂರು: ಭತ್ತ ಹಾಗೂ ಈರುಳ್ಳಿ ಬೆಳೆಗಾರರ ನೆರವಿಗೆ ಧಾವಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದ್ದು, ಡಿಸೆಂಬರ್‌ 16ರಿಂದ ಭತ್ತ ಖರೀದಿ ಕೇಂದ್ರ ಆರಂಭಿಸಲು ಎಲ್ಲ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.

Advertisement

ಶನಿವಾರ ನಡೆದ ಸಚಿವ ಸಂಪುಟ ಉಪ ಸಮಿತಿ ಸಭೆಯಲ್ಲಿ  ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದ್ದು, ಭತ್ತ ಬೆಂಬಲ ಬೆಲೆಯಡಿ ಖರೀದಿ ಮಾಡುವುದು. ಈರುಳ್ಳಿ ಬೆಳೆಗಾರರರಿಗೆ ಬೆಂಬಲ ಬೆಲೆ ಅಥವಾ  ಪ್ರೋತ್ಸಾಹ ಧನ ನೀಡಲು ನಿರ್ಧರಿಸಲಾಗಿದೆ.

ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಹಕಾರ ಸಚಿವ ಬಂಡೆಪ್ಪ ಕಾಶೆಂಪೂರ,  ರಾಜ್ಯದಲ್ಲಿ 10 ಲಕ್ಷ ಹೆಕ್ಟೇರ್‌ನಲ್ಲಿ ಭತ್ತ ಬಿತ್ತನೆ ಆಗಿದ್ದು, 45 ಲಕ್ಷ ಮೆಟ್ರಿಕ್‌ ಟನ್‌ ಉತ್ಪಾದನೆಯಾಗುವ ನಿರೀಕ್ಷೆ ಇದೆ “ಭತ್ತ ಖರೀದಿ ಮಾಡಬೇಕೆಂದು ರೈತರ ಬೇಡಿಕೆ ಇದು. ಕೇಂದ್ರ ಸರ್ಕಾರವು ಎಂಎಸ್‌ಪಿ ಅಡಿಯಲ್ಲಿ 2 ಲಕ್ಷ ಮೆಟ್ರಿಕ್‌ ಟನ್‌ ಖರೀದಿಸಲು ಅನುಮತಿ ನೀಡಿದೆ ಎಂದು ಹೇಳಿದರು.

“ಭತ್ತ ಖರೀದಿಸಲು ಕಾರ್ಯಪಡೆ ರಚಿಸುವಂತೆ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಈಗಾಗಲೆ ಸೂಚನೆ ನೀಡಲಾಗಿದೆ. ಹಾಗೆಯೇ ಖರೀದಿ ಕೇಂದ್ರದಲ್ಲಿ ಮಾರಾಟ ಮಾಡಲು ಇಚ್ಛಿಸುವ ರೈತರಿಗೆ ಡಿಸೆಂಬರ್‌ 5ರಿಂದ 15ರವರೆಗೆ ನೋಂದಣಿ ಮಾಡಿಕೊಳ್ಳಲು ಅವಕಾಶ ನೀಡಲಾಗುತ್ತದೆ. 16ರಿಂದ ಖರೀದಿ ಆರಂಭಿಸಲಾಗುತ್ತದೆ’ ಎಂದು ತಿಳಿಸಿದರು.

“ಸಾಮಾನ್ಯ ಭತ್ತ ಮಾರುಕಟ್ಟೆಯಲ್ಲಿ 1300 ರೂ.ನಿಂದ 1400 ರೂ. ವರೆಗೆ ಮಾರಾಟವಾಗುತ್ತಿದೆ. ಬೆಂಬಲ ಬೆಲೆಯಂತೆ 1750 ರೂ.ಗೆ ಖರೀದಿಸಲಾಗುತ್ತದೆ. ಇದೇ ಮೊದಲ ಬಾರಿಗೆ ಖರೀದಿ ಕೇಂದ್ರವನ್ನು ರೈಸ್‌ ಮಿಲ್‌ಗ‌ಳಲ್ಲೇ ಆರಂಭಿಸಲಾಗುತ್ತದೆ. ಅಲ್ಲಿಂದಲೇ ಅಕ್ಕಿ ಪಡಿತರ ವಿತರಣೆಗಾಗಿ ಗೋದಾಮಿಗೆ ರವಾನಿಸಲಾಗುತ್ತದೆ ಎಂದು ಹೇಳಿದರು.

Advertisement

“ಜನವರಿ ಒಂದರಿಂದ ಖರೀದಿ ಆರಂಭಿಸಬೇಕೆಂದು ಕೇಂದ್ರ ಸರ್ಕಾರ ಹೇಳಿತ್ತು. ಆದರೆ, ರಾಜ್ಯ ಸರ್ಕಾರ ರೈತರ ಹಿತದೃಷ್ಟಿಯಿಂದ ಮುಂಚಿತವಾಗಿಯೇ ಆರಂಭಿಸುತ್ತಿದೆ. ಪಡಿತರ ಅಕ್ಕಿ ವಿಚಾರವಾಗಿ ಆಹಾರ ಇಲಾಖೆ ಆಧಿಕಾರಿಗಳನ್ನು ಕರೆಸಿ ಚರ್ಚೆ ನಡೆಸಲಾಗಿದೆ ಎಂದರು.

ಈರುಳ್ಳಿಗೂ ನೆರವು
ಈರುಳ್ಳಿ ಬೆಲೆ ಕುಸಿತದಿಂದ ರೈತರು ಕಂಗಾಲಾಗಿದ್ದು, ಅವರ ನೆರವಿಗೆ ಬರಲು ಸರ್ಕಾರ ತೀರ್ಮಾನಿಸಿದೆ. ಪ್ರೋತ್ಸಾಹ ಧನ ನೀಡುವುದೋ ಅಥವಾ ಬೆಂಬಲ ಬೆಲೆಯಡಿ ಖರೀದಿ ಮಾಡುವುದೋ ಎಂಬುದು ಮುಖ್ಯಮಂತ್ರಿಯವರ ವಿವೇಚನೆಗೆ ಬಿಡಲಾಗಿದೆ ಎಂದು ಹೇಳಿದರು.

ಮಾವು ಬೆಲೆ ಕುಸಿದಾಗ ನೀಡಿದಂತೆ ಬೆಂಬಲ ನೀಡಬೇಕೋ ಅಥವಾ ಸ್ಲಾಬ್‌ ಮಾದರಿಯಲ್ಲಿ ಪರಿಹಾರ ಧನ ನೀಡಬೇಕೋ ಎಂಬ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಸಲಾಯಿತು ಎಂದು ತಿಳಿಸಿದರು.

ಮಾರುಕಟ್ಟೆಯಲ್ಲಿ ಒಳ್ಳೆಯ ಈರುಳ್ಳಿಗೆ ಬೆಲೆ ಇದೆ. ಉಳಿದಂತೆ ಕ್ವಿಂಟಾಲ್‌ಗೆ 700-800 ರೂ. ಮಾರಾಟವಾಗುತ್ತಿದೆ. ಕೆಲವೆಡೆ 300-400 ರೂ. ಮಾರಾಟವಾಗುತ್ತಿದೆ. ಸರ್ಕಾರ ಈರುಳ್ಳಿ ರೈತರ ನೆರವಿಗೆ ಬರಲಿದೆ ಎಂದು ತಿಳಿಸಿದರು.

ಕೇಂದ್ರ ಸರ್ಕಾರ ನಿಗದಿ ಮಾಡಿದ್ದ 28 ಸಾವಿರ ಮೆಟ್ರಿಕ್‌ ಟನ್‌ ಗೂ ಮೀರಿ ಬೆಂಬಲ ಬೆಲೆಯಲ್ಲಿ ಹೆಸರು ಖರೀದಿ ಮಾಡಲಾಗಿದೆ. ಇನ್ನೂ  ರೈತರ ಬಳಿ ಹೆಸರು ಬಾಕಿ ಉಳಿದಿದ್ದು, ಹೀಗಾಗಿ ಮತ್ತಷ್ಟು  ಪ್ರಮಾಣದಲ್ಲಿ ಖರೀದಿಸಲು ಅವಕಾಶ ಕೋರಿ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಲು ಸಭೆಯಲ್ಲಿ  ನಿರ್ಧರಿಸಲಾಯಿತು.

ಉದ್ದು ಮತ್ತು ಸೋಯಾ ಖರೀದಿಗೆ ಅವಕಾಶ ಇದ್ದರೂ ಹೆಚ್ಚು ನೋಂದಣಿ ಆಗಿಲ್ಲ. ಭಾನುವಾರದಿಂದ ಖರೀದಿ ಆರಂಭವಾಗುತ್ತಿದ್ದು, ನೋಂದಣಿ ಅವಕಾಶವನ್ನು ಇನ್ನೂ ಹತ್ತು ದಿನ ಮುಂದುವರಿಸಲು ತೀರ್ಮಾನಿಸಲಾಯಿತು.

ತೊಗರಿ ಬೆಳೆ ಡಿಸೆಂಬರ್‌ನಲ್ಲಿ ಬರುತ್ತದೆ, 15ಲಕ್ಷ ಹೆಕ್ಟೇರ್‌ನಲ್ಲಿ ಬಿತ್ತನೆಯಾಗಿದ್ದು, 11.34 ಲಕ್ಷ ಮೆಟ್ರಿಕ್‌ ಟನ್‌ ಇಳುವರಿ ನಿರೀಕ್ಷೆ ಇದೆ. ಮಾರುಕಟ್ಟೆಯಲ್ಲಿ ಕ್ವಿಂಟಾಲ್‌ಗೆ 4300 ರೂ. ಇದ್ದು, ಸರ್ಕಾರ 5675 ರೂ. ಬೆಂಬಲ ಬೆಲೆ ನೀಡಿ ಖರೀದಿಸಲು ನಿರ್ಧರಿಸಲಾಗಿದೆ. ಜೋಳ  ಕೆಎಂಎಫ್‌ ಖರೀದಿಸಲಿದೆ ಎಂದು ವಿವರಿಸಿದರು.

ಸಹಕಾರ ಇಲಾಖೆಯಲ್ಲಿ ಸಾಧನೆಯಾಗಿಲ್ಲ ಎಂದು ಯಡಿಯೂರಪ್ಪ ಟೀಕೆ ಮಾಡಿದ್ದಾರೆ. ನಮ್ಮದು ಉದರಿ ಸರ್ಕಾರವಲ್ಲ, ನಗದು ಸರ್ಕಾರ. ಇಲಾಖೆ ಸಾಧನೆ ಆಗಿಲ್ಲ ಎಂದರೆ ದಾಖಲೆ ತೋರಿಸಲಿ ಚರ್ಚೆಗೆ ನಾನು ಸಿದ್ಧ. ಯಡಿಯೂರಪ್ಪ ಹಿರಿಯರು. ಆವರ ಪಕ್ಷದಿಂದ ಕಿರಿಯರನ್ನೇ ಚರ್ಚೆಗೆ ಕಳುಹಿಸಲಿ.
– ಬಂಡೆಪ್ಪ ಕಾಶೆಂಪುರ

Advertisement

Udayavani is now on Telegram. Click here to join our channel and stay updated with the latest news.

Next