Advertisement

ಕುಂಟುತ್ತಾ ಸಾಗುತ್ತಿದೆ ಪಚ್ಚನಾಡಿ ರೈಲ್ವೇ ಮೇಲ್ಸೇತುವೆ ಕಾಮಗಾರಿ

10:21 PM Oct 30, 2020 | mahesh |

ಮಹಾನಗರ: ಪಚ್ಚನಾಡಿ ರೈಲ್ವೇ ಮೇಲ್ಸೇತುವೆ ಕಾಮಗಾರಿ ಎರಡು ವರ್ಷಗಳಿಂದ ಕುಂಟುತ್ತಾ ಸಾಗುತ್ತಿದ್ದು, ಇದರಿಂದಾಗಿ ಸಾರ್ವ ಜನಿಕರಿಗೆ ಪ್ರತೀ ದಿನ ಸಮಸ್ಯೆ ಉಂಟಾಗುತ್ತಿದೆ. ಈ ನಿಟ್ಟಿನಲ್ಲಿ ಕಾಮಗಾರಿಗೆ ವೇಗ ನೀಡಲು ಪ್ರೀ ಫ್ಯಾಬ್ರಿಕ್‌ ಕಾಂಕ್ರೀಟ್‌ ವ್ಯವಸ್ಥೆ ಅಳವಡಿಸಲು ರೈಲ್ವೇ ಇಲಾಖೆ ಮುಂದಾಗಿದೆ.

Advertisement

ಹೊಸತಾಗಿ ಕಾಂಕ್ರೀಟ್‌ ಅಳವಡಿಸುವುದಾದರೆ ಕಾಮಗಾರಿಗೆ ತುಂಬಾ ಸಮಯ ತಗಲುವುದು. ಈ ನಿಟ್ಟಿನಲ್ಲಿ ಕಾಂಕ್ರೀಟ್‌ ಬಾಕ್ಸ್‌ ಅಳವಡಿಸಲಾಗುತ್ತದೆ. ಅನಂತರ ಒಂದು ಲೇಯರ್‌ ಕಾಂಕ್ರೀಟ್‌ ಕಾಮಗಾರಿ ನಡೆಸಿದರೆ ಸಾಕು. ರೈಲ್ವೇ ಸೇತುವೆಯ ಕೆಳಗಿನ ಹಳಿಯಲ್ಲಿ ಪ್ರತೀ ದಿನ ಹತ್ತಾರು ರೈಲುಗಳು ಅತ್ತಿಂದಿತ್ತ ಸಂಚರಿಸುತ್ತವೆೆ. ಈ ಸಮಯ ಕಾಮಗಾರಿ ನಡೆಸಲು ಸಾಧ್ಯವಿಲ್ಲ. ಹಾಗಾಗಿ ರೈಲ್ವೇ ಪಥ ಬದಲಿಸುವ ನಿಟ್ಟಿನಲ್ಲಿ ರೈಲ್ವೇ ಇಲಾಖೆ ಮುಂದಾಗಿದೆ.

ಕಾಮಗಾರಿ ನಡೆಯುವ ರೈಲ್ವೇ ಮೇಲ್ಸೇತುವೆ ಪಕ್ಕದಲ್ಲಿಯೇ ಕಾಂಕ್ರೀಟ್‌ ರಸ್ತೆ ನಿರ್ಮಿಸಿ, ತಾತ್ಕಾಲಿಕ ಲೆವೆಲ್‌ ಕ್ರಾಸಿಂಗ್‌ ವ್ಯವಸ್ಥೆ ಮಾಡಿ ಗೇಟ್‌ ಅಳವಡಿಸಲಾಗಿದೆ. ಇದರಿಂದಾಗಿ ಸಾರ್ವಜನಿಕರಿಗೆ ದಿನಂಪ್ರತಿ ಸಮಸ್ಯೆ ಉಂಟಾಗುತ್ತಿದೆ. ಒಂದು ಬಾರಿ ಗೇಟ್‌ ಹಾಕಿದರೆ ಸಾಲುಗಟ್ಟಿ ವಾಹನಗಳು ನಿಂತಿರುತ್ತವೆ. ಕೊರೊನಾ ಪೂರ್ವದಲ್ಲಿ ಇದೇ ರೈಲು ಹಳಿಯಲ್ಲಿ ಗೂಡ್ಸ್‌ ರೈಲು ಸಹಿತ ಅರ್ಧ ಗಂಟೆಯಲ್ಲಿ ಸುಮಾರು 4-5 ರೈಲು ಸಂಚರಿಸುತ್ತಿತ್ತು. ಈ ವೇಳೆ ಒಂದು ಬಾರಿ ಮುಚ್ಚಿದ ರೈಲ್ವೇ ಗೇಟ್‌ ತೆರೆಯುವುದಕ್ಕೆ ಸುಮಾರು ಅರ್ಧ ಗಂಟೆ ತಗಲುತ್ತಿತ್ತು.

ರೈಲ್ವೇ ಗೇಟ್‌ ಸಮಸ್ಯೆ
“ಈ ರಸ್ತೆಯ ಮುಖೇನ ಪಿಲಿಕುಳ, ಕಟೀಲು, ಮೂಡುಬಿದಿರೆ, ಸುರತ್ಕಲ್‌, ಪಣಂಬೂರು, ವಾಮಂಜೂರು ಸಹಿತ ಅನೇಕ ಪ್ರದೇಶಗಳ ಸಂಪರ್ಕವಿದೆ. ಸ್ವಂತ ವಾಹನವಿಲ್ಲದ ಸಾರ್ವ ಜನಿಕರು ಬಸ್‌ಗಳನ್ನು ಅವಲಂಬಿಸಿದ್ದಾರೆ. ಸ್ಟೇಟ್‌ಬ್ಯಾಂಕ್‌, ಕಂಕನಾಡಿಯಿಂದ ಪಚ್ಚನಾಡಿ ಕಡೆಗೆ ಬಸ್‌ ವ್ಯವಸ್ಥೆ ಇದೆ. ಆದರೆ ರೈಲ್ವೇ ಗೇಟ್‌ ಸಮಸ್ಯೆಯಿಂದಾಗಿ ಪಚ್ಚನಾಡಿ ಕಡೆಗೆ ಬರುವ ಕೆಲವು ಬಸ್‌ಗಳು ಬರುತ್ತಿಲ್ಲ’ ಎನ್ನುತ್ತಾರೆ ಸಾಮಾಜಿಕ ಕಾರ್ಯಕರ್ತ ರಮೇಶ್‌ ಶೆಟ್ಟಿ.

ಫೆಬ್ರವರಿಯಲ್ಲಿ ಕಾಮಗಾರಿ ಪೂರ್ಣ
ಸ್ಥಳೀಯ ಕಾರ್ಪೊರೇಟರ್‌ ಸಂಗೀತ ನಾಯಕ್‌ ಈ ಬಗ್ಗೆ “ಉದಯವಾಣಿ ಸುದಿನ’ಕ್ಕೆ ಪ್ರತಿಕ್ರಿಯಿಸಿ “ಕೆಲವೊಂದು ತಾಂತ್ರಿಕ ಕಾರಣ, ಸಿಬಂದಿ ಕೊರತೆ, ಕೊರೊನಾ ಹಿನ್ನೆಲೆಯಲ್ಲಿ ಕಾಮಗಾರಿ ವಿಳಂಬವಾಗಿದೆ. ಈ ನಿಟ್ಟಿನಲ್ಲಿ ಕಾಮಗಾರಿ ತ್ವರಿತಗತಿಯಲ್ಲಿ ನಡೆಸಬೇಕು ಎಂದು ಈಗಾಗಲೇ ಸಂಸದ ನಳಿನ್‌ ಕುಮಾರ್‌ ಕಟೀಲು ಅವರಿಗೆ ಮನವಿ ನೀಡಿದ್ದೇವೆ. ಸಂಸದರು ರೈಲ್ವೇ ಇಲಾಖೆ ಅಧಿಕಾರಿಗಳ ಜತೆ ಚರ್ಚೆ ನಡೆಸಿದ್ದಾರೆ. 2021ರ ಫೆಬ್ರವರಿ ಅಂತ್ಯದೊಳಗೆ ಕಾಮಗಾರಿ ಪೂರ್ಣಗೊಳಿಸುತ್ತೇವೆ’ ಎಂದು ಭರವಸೆ ನೀಡಿದ್ದಾರೆ ಎನ್ನುತ್ತಾರೆ.

Advertisement

ಕಾಮಗಾರಿಗೆ ಎರಡು ವರ್ಷ
ಮಂಗಳೂರು ಜಂಕ್ಷನ್‌ನಿಂದ ತೋಕೂರು ವರೆಗಿನ ಹಳಿ ದ್ವಿಪಥ ಹಾಗೂ ವಿದ್ಯುದ್ದೀಕರಣ ಕಾಮಗಾರಿ ಉದ್ದೇಶದಿಂದಾಗಿ ಪಚ್ಚನಾಡಿಯಲ್ಲಿನ ಹಳೆ ಸೇತುವೆಯನ್ನು ಎರಡು ವರ್ಷಗಳ ಹಿಂದೆಯೇ ತೆರವುಗೊಳಿಸಲಾಗಿತ್ತು. ಹಳೆ ಸೇತುವೆಯ ಪಿಲ್ಲರ್‌ ಇದ್ದ ಸ್ಥಳದಲ್ಲೇ ರೈಲ್ವೇ ಹೊಸ ಹಳಿ ಸಾಗುವ ಹಿನ್ನೆಲೆ ಯಲ್ಲಿ ಸೇತುವೆಯನ್ನು ವಿಸ್ತರಿಸುವ ಜತೆಗೆ ಕೊಂಚ ಎತ್ತರಕ್ಕೆ ಏರಿಸಿ ನಿರ್ಮಾಣ ಮಾಡಲು ಈ ಹಿಂದೆ ಯೋಜನೆ ರೂಪಿಸಲಾಗಿತ್ತು. ಮೇಲ್ಸೇತುವೆ ಕಾಮಗಾರಿ 2018ರ ಜನವರಿ ತಿಂಗಳಿನಲ್ಲಿ ಆರಂಭಗೊಂಡಿತ್ತು.

ಕಾಮಗಾರಿಗೆ ವೇಗ
ಕಾಮಗಾರಿ ವಿಳಂಬದ ಕುರಿತು ಈಗಾಗಲೇ ಎಂಜಿನಿಯರ್‌ ಬಳಿ ಮಾತನಾಡಿದ್ದೇನೆ. ಕಾಮಗಾರಿಗೆ ವೇಗ ನೀಡುವಂತೆ ಸೂಚಿಸಿದ್ದೇನೆ. ಈ ನಿಟ್ಟಿನಲ್ಲಿ ಪ್ರೀ ಫ್ಯಾಬ್ರಿಕ್‌ ಕಾಂಕ್ರೀಟ್‌ ಅಳವಡಿಸಲಾಗುತ್ತದೆ. ಈ ಕುರಿತು ರೈಲ್ವೇ ಸುರಕ್ಷೆ ವಿಭಾಗದ ಆಯುಕ್ತರಿಗೆ ಪತ್ರ ಬರೆಯಲಾಗಿದೆ. ಸದ್ಯದಲ್ಲೇ ಕಾಮಗಾರಿ ಆರಂಭಗೊಳ್ಳಲಿದೆ.
-ಡಾ| ಭರತ್‌ ಶೆಟ್ಟಿ ವೈ., ಮಂಗಳೂರು ಉತ್ತರ ವಿಧಾನಸಭೆ ಕ್ಷೇತ್ರ ಶಾಸಕರು

Advertisement

Udayavani is now on Telegram. Click here to join our channel and stay updated with the latest news.

Next